Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

03 April 2009

ಪ್ರಬಂಧ ೦೬ - ಬಯಲು ಪ್ರವಾಸ

- ಅನುಪಮ ಪಿ.ಎಸ್

ನಮ್ಮ ಶಾಲೆಯ ಹಳೆವಿದ್ಯಾರ್ಥಿ, ಖ್ಯಾತ ಚಿತ್ರ ಕಲಾವಿದ ಪಿ.ಎಸ್. ಪುಣಿಂಚಿತ್ತಾಯರ ಮನೆಗೆ ಭೇಟಿ ಕೊಡುವ ಅಪೂರ್ವ ಅವಕಾಶ ಒಂದು ಬಾರಿ ನನಗೆ ದೊರೆತಿತ್ತು. ನಾನು‘ಪುಣಿಂಚಿತ್ತಾಯರು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದವರಲ್ಲವೆ? ಅವರ ಮನೆ ತುಂಬಾ ದೊಡ್ಡದಿರಬಹುದು. ಮನೆಯಲ್ಲಿ ತುಂಬಾ ಗೌಜಿ ಗದ್ದಲವಿರಬಹುದು. ಮನೆ ಸುತ್ತಲೂ ತುಂಬಾ ಜನರಿರಬಹುದು. ಅಂತಹ ಮಹಾನ್ ಕಲಾವಿದ ನಮ್ಮೊಂದಿಗೆ ಹೇಗೆ ವರ್ತಿಸಿದಾರು?’ ಎಂದೆಲ್ಲಾ ಆಲೋಚಿಸುತ್ತಿದ್ದೆ.

ನನ್ನ ಆಲೋಚನೆಗೆ ಪೂರ್ಣ ವಿರಾಮವಿತ್ತಂತೆ ಅವರ ಮನೆಯ ಗೇಟಿಗೆ ನಮ್ಮ ವಾಹನ ತಲುಪಿತು. ಅವರ ಮನೆಯ ಎದುರೇ ದೊಡ್ಡ ರಬ್ಬರ್ ತೋಟ. ಮನೆಗೆ ಮಾರ್ಗವೂ ಆ ತೋಟದ ನಡುವಿನಿಂದಲೇ ಬರುತ್ತಿತ್ತು. ಸರಿಯಾಗಿ ಹನ್ನೊಂದು ಗಂಟೆಗೆ ನಾವು ಅಲ್ಲಿಗೆ ತಲುಪಿದೆವು. ಮಾರ್ಗದಿಂದಲೇ ಅವರ ಮನೆ ಕಾಣಿಸುತ್ತಿತ್ತು. ಮನೆಯ ಹಿಂದೆ, ಮುಂದೆ ಎಲ್ಲ ಕಡೆಯೂ ಚಿತ್ರಗಳೇ ಕಾಣಿಸುತ್ತಿದ್ದವು. ಎಲ್ಲರೂ ಕಾರಿನಿಂದ ಇಳಿದೆವು. ಒಬ್ಬಾಕೆ ಮಹಿಳೆ ಮನೆಯಿಂದ ಹೊರ ಬಂದರು. ಅವರು ಪಿ.ಯಸ್ ಪುಣಿಂಚತ್ತಾಯರ ಪತ್ನಿಯೆಂದು ತಿಳಿಯಿತು.

ಆಗಲೇ ನಾವು ನಿರೀಕ್ಷಿಸುತ್ತಿದ್ದ ವ್ಯಕ್ತಿ ಹೊರಬಂದರು. ಸಂಪೂರ್ಣವಾಗಿ ಶಾಂತಚಿತ್ತದವರು. ನಗುಮುಖದವರು. ತಾನೊಬ್ಬ ದೊಡ್ಡ ಕಲಾವಿದ ಎಂಬ ಅಹಂ ಇಲ್ಲದವರು. ಮಕ್ಕಳೊಂದಿಗೆ ಮಗುವಿನಂತೆ ಬೆರೆಯುವವರು. ಭೇದಭಾವ ತೋರಿಸದವರು. ಹೀಗೆ ಹಲವು ಸದ್ಗುಣಗಳೇ ಹೊಂದಿದ ಅಪರೂಪದ ವ್ಯಕ್ತಿಯೇ ಆ ಮಹಾನ್ ಚೇತನ. ‘ಕಾಂಚನಗಂಗಾ’ ಎಂಬ ಹೆಸರಿನ ಅವರ ಮನೆ ಸುಂದರವಾಗಿತ್ತು. ಚಿತ್ರವಿರದ ಗೋಡೆಯಿರಲಿಲ್ಲ. ಪ್ರಶಸ್ತಿ ಇರದ ಶೆಲ್ಫ್ ಇರಲಿಲ್ಲ. ಒಂದೊಂದು ಚಿತ್ರವೂ ಸಾವಿರದಿಂದಾರಂಭಿಸಿ ಲಕ್ಷಗಟ್ಟಲೆ ರೂಪಾಯಿ ಬೆಲೆ ಬಾಳುವಂತಾದ್ದು. ನಾವೆಲ್ಲರೂ ಒಟ್ಟಿಗೆ ಕುಳಿತುಕೊಂಡೆವು. ಪುಣಿಂಚತ್ತಾಯರು ನಮ್ಮೆಲ್ಲರ ಪರಿಚಯ ಮಾಡಿಕೊಂಡರು.

ನಾನು ನೀರ್ಚಾಲು ಶಾಲೆಗೆ ಹೋಗುತ್ತಿರುವವಳು ಎಂದು ತಿಳಿದಾಗ ಅವರು ಕೂಡಾ ಅಲ್ಲಿನ ವಿದ್ಯಾರ್ಥಿಯೆಂದು ತಿಳಿಸಿದರು. ‘ಅದೊಂದು ಉತ್ತಮ ಶಾಲೆಯಾಗಿತ್ತು. ಮುಖ್ಯೋಪಾಧ್ಯಾಯರಾಗಿದ್ದ ಬಿ.ಎಂ ಸುಬ್ರಾಯ ಭಟ್ಟರು ಉತ್ತಮ ಅಧ್ಯಾಪಕರಾಗಿದ್ದರು’ ಎಂದು ಹೇಳಿದರು. ಇದರೊಂದಿಗೆ ತಮ್ಮ ಬಾಲ್ಯದ ಘಟನೆಗಳು, ಬಡತನದ ನಡುವೆಯೂ ತಾನು ಕಾಲೇಜು ಸೇರಿದ್ದು ಮುಂತಾದ ಹಲವು ಅನುಭವಗಳನ್ನು ನಮ್ಮೆಲ್ಲರ ಮುಂದೆ ಹರಡಿದರು.

ಸ್ವತಃ ತನ್ನ ಕೌಶಲ್ಯದಿಂದಲೇ ತಯಾರಿಸಿದಂತಹ ನೀರು ಬಿಸಿ ಮಾಡುವ ಉಪಕರಣವನ್ನು ತೋರಿಸಿ ವಿವರಿಸಿದರು. ಸೋಲಾರ್, ಗೋಬರ್ ಗೇಸ್, ರಬ್ಬರ್ ಶೀಟ್ ತಯಾರಿಸುವುದು ಹೇಗೆಂದು ಸವಿವರವಾಗಿ ಹೇಳಿದರು. ಗೋವನ್ನು ‘ಮಾತೆ’ಯೆಂದು ಪೂಜಿಸುವ ಅವರು ತಮ್ಮ ‘ಫೇನ್’ ಅಳವಡಿಸಿದ ಹಟ್ಟಿ, ದಿನಾಲೂ ದನಗಳಿಗೆ ಸ್ನಾನ ಮಾಡಿಸುತ್ತಿರುವ ಬಗ್ಗೆ ತಿಳಿಸಿ ತೋಟಕ್ಕೆ ಹಿಂಬಾಲಿಸಲು ಹೇಳಿದರು. ಕೇಳುತ್ತಿದ್ದ ಜುಳು ಜುಳು ನಾದದಿಂದ ಹತ್ತಿರದಲ್ಲೆಲ್ಲೋ ತೋಡೋ, ಹೊಳೆಯೋ ಇದ್ದೀತೆಂದು ಭಾವಿಸಿದೆ.

ತೋಟದಲ್ಲಿದ್ದ ಸ್ಲರಿ ಗೊಬ್ಬರ, ತುಂತುರು, ಹನಿ ನೀರಾವರಿ, ಸ್ಪ್ರಿಂಕ್ಲರ್, ವೆನಿಲ್ಲಾ ಗಿಡ ಮೊದಲಾದವುಗಳನ್ನು ತೋರಿಸಿ ವಿವರಿಸಿದರು. ಹತ್ತಿರವೇ ಒಂದು ಕೆರೆಯೂ ಇತ್ತು. ಅದರಿಂದಲೇ ತೋಟಕ್ಕೆ ನೀರು ಹಾಕುವುದೆಂದು ತಿಳಿಸಿದರು. ಒಂದು ಸರಿಗೆಗೆ ಒಂದು ಬಾಲ್ದಿ ಕಟ್ಟಲಾಗಿತ್ತು. ಅದರ ಮೇಲೆ ಮುಚ್ಚಳವಿತ್ತು. ಅದರ ಮಧ್ಯದಲ್ಲಿ ಒಂದು ಸಣ್ಣ ಬಟ್ಟಲಿನಂತೆ ಇತ್ತು. ಆ ಬಟ್ಟಲಿನೊಳಗೆ ಹಳದಿ ದ್ರವವಿದ್ದು, ಅದಕ್ಕೆ ಪಾರದರ್ಶಕವಾದ ಮುಚ್ಚಳವಿತ್ತು. ಬಾಲ್ದಿಯೊಳಗೆ ನೀರಿತ್ತು. ನೀರಿನಲ್ಲಿ ತೆಂಗಿಗೆ ರೋಗ ಬರಿಸುವಂತಹ ಕೂರ್ಬಾಯಿಗಳು ಬಿದ್ದಿದ್ದವು. ತೆಂಗಿನ ಮರವನ್ನು ರೋಗಗಳಿಂದ ರಕ್ಷಿಸಲು ಇದು ಸಹಾಯಕವಾಗುತ್ತದೆಯೆಂದೂ, ಕೂರ್ಬಾಯಿಗಳು ಆ ಬಟ್ಟಲಿನೊಳಗಿರುವ ದ್ರವದಿಂದ ಆಕರ್ಷಣೆ ಹೊಂದಿ ಬಂದು ನೀರಿಗೆ ಬೀಳುತ್ತವೆ ಎಂದು ತಿಳಿಸಿದರು.

ತೋಟದಲ್ಲಿ ಎಲ್ಲವನ್ನೂ ತೋರಿಸಿದ ನಂತರ ಒಂದು ಪುಟ್ಟ ಜಲಪಾತಕ್ಕೆ ಕರಕೊಂಡು ಹೋದರು. ಈ ಜಲಪಾತದ್ದೇ ಜುಳು ಜುಳು ನಾದ ಕೇಳುತ್ತಿದ್ದುದು ಎಂದು ಅರಿವಾಯಿತು. ನಾವೆಲ್ಲರೂ ಸಂತೋಷದಿಂದ ಆಡಿದೆವು. ಕೆಲವರು ಕಾಗದದ ದೋಣಿ ಮಾಡಿ ನೀರಿನಲ್ಲಿ ಬಿಟ್ಟರು. ನಾವು ನೀರಿನೊಂದಿಗೆ ಸ್ವಲ್ಪದೂರ ಹೋದೆವು. ನಂತರ ಹಿಂದೆ ಬಂದು ಬಂಡೆಕಲ್ಲಿನ ಮೇಲೆ ಕುಳಿತುಕೊಂಡೆವು. ಗಂಟೆ ಒಂದಾಯಿತು. ಕಲಾವಿದರ ಮನೆಗೆ ತೋಟದ ಮೂಲಕ ಸಾಗಿದೆವು. ಅವರ ಮನೆಯಲ್ಲಿ ಭಾರವನ್ನಳೆಯುವಂತಹ ಹಿಂದಿನ ಕಾಲದ ಕಲ್ಲುಗಳು, ಎತ್ತಿನ ಗಾಡಿಯ ಚಕ್ರವು ತಿಳಿಸುವ ಒಳ್ಳೆಯ ನೀತಿ, ಅವರ ಮಗ ಮಾಡಿದಂತಹ ಶಿಲ್ಪಕಲೆಗಳನ್ನು ತೋರಿಸಿ ವಿವರಿಸಿದರು. ಒಂದೂವರೆಗೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದೆವು.

ಊಟದ ನಂತರ ಹಲವು ವಿಷಯಗಳನ್ನು ಹೇಳಿ ನಮ್ಮ ಜ್ಞಾನ ಹೆಚ್ಚಿಸಿದರು. ಶಂಖದ ಮಹಿಮೆಯನ್ನು ಹೇಳಿದರು. ಶಂಖ ಊದುವುದು ಎಂದರೆ ಮೂಢ ನಂಬಿಕೆಯಲ್ಲ. ವೈಜ್ಞಾನಿಕವಾದ ಕಾರಣವೂ ಇದೆ ಎಂದು ವಿವರಿಸಿದರು. ಅನಂತರ ನಮಗೆಲ್ಲರಿಗೂ ಒಂದು ಚಿತ್ರ ಮಾಡಿ ತೋರಿಸಿದರು. ಒಂದೇ ನಿಮಿಷದಲ್ಲಿ ಸೂರ್ಯೋದಯದ ಚಿತ್ರವನ್ನು ಸುಂದರವಾಗಿ ಕಾಗದದ ಮೇಲೆ ಮೂಡಿಸಿದ್ದರು. ಸ್ವಲ್ಪ ಹೊತ್ತಿನಲ್ಲೇ ಪುಣಿಂಚತ್ತಾಯರ ಪತ್ನಿ ಎಲ್ಲರಿಗೂ ಉಪಾಹಾರ ತಯಾರಿಸಿ ತಂದಿಟ್ಟರು. ನಮ್ಮ ವಾಹನದ ಚಾಲಕರಾದ ಚಂದ್ರಶೇಖರ್ ಎಲ್ಲರಿಗೂ ಹಂಚಿದರು. ಸ್ವಲ್ಪ ಹೊತ್ತಿನಲ್ಲಿ ಇಬ್ಬರು ಪತ್ರಕರ್ತರು ಪುಣಿಂಚತ್ತಾಯರನ್ನು ಸಂದರ್ಶಿಸಲೆಂದು ಬಂದರು. ಅಂತಹ ಮಹಾನ್ ಕಲಾವಿದರ ಬಳಿ ನಾವೆಲ್ಲರೂ ಆಟೋಗ್ರಾಫ್ ತೆಗೆದುಕೊಂಡೆವು.

ಮೂರೂವರೆಗೆ ಸರಿಯಾಗಿ ಎಲ್ಲರೂ ಅಲ್ಲಿಂದ ಹೊರೆಟೆವು. ಅವರು ಸಂತೋಷದಿಂದ ನಮ್ಮನ್ನು ಬೀಳ್ಕೊಟ್ಟರು ನಾಲ್ಕೂವರೆಗೆ ಸರಿಯಾಗಿ ಮನೆಗೆ ತಲುಪಿದೆವು. ನಾನು ಭಾವಿಸಿದ್ದಕ್ಕಿಂತ ತುಂಬಾ ವ್ಯತ್ಯಾಸ ವ್ಯಕ್ತಿತ್ವದವರಾಗಿದ್ದರು ಪಿ.ಯಸ್ ಪುಣಿಂಚತ್ತಾಯ ಅವರು. ಒಂದು ಸ್ವಲ್ಪವೂ ಅಹಂ ಇರಲಿಲ್ಲ. ಕೆಲಸದವರೊಂದಿಗೆ ಕೂಡಾ ಪ್ರೀತಿಯಿಂದ ಮಾತನಾಡುತ್ತಿದ್ದರು. ಮನೆಯ ಸುತ್ತಮುತ್ತಲೂ ಪ್ರಶಾಂತ ವಾತವರಣವಿತ್ತು. ಇಂತಹ ಬಹುಮುಖ ವ್ಯಕ್ತಿತ್ವವುಳ್ಳ ನಿರಾಡಂಬರ, ಸರಳ ಜೀವನ ನಡೆಸುವ ಪಿ.ಯಸ್ ಪುಣಿಂಚತ್ತಾಯರ ‘ಗೃಹಸಂದರ್ಶನ’ ನಡೆಸಿದ ನಾವೇ ಭಾಗ್ಯವಂತರು ಎಂದು ಮನಸ್ಸಲ್ಲೇ ಭಾವಿಸಿದೆ! ನಮ್ಮನ್ನು ಇದಕ್ಕಾಗಿಯೇ ತಮ್ಮ ಸ್ವಂತ ವಾಹನದಲ್ಲಿ ಕರೆದೊಯ್ದ ಪ್ರೊ ಶ್ರೀನಾಥ್ ಕಾಸರಗೋಡು ಇವರಿಗೆ ನಾನು ಎಲ್ಲರ ಪರವಾಗಿ ಚಿರಋಣಿಯಾಗಿರುತ್ತೇನೆ.

4 comments:

  1. ಓದುಗರ ಗಮನ ಸೆಳೆಯುವ ಅತ್ಯುತ್ತಮ ಪ್ರಬಂಧ "ಬಯಲು ಪ್ರವಾಸ".ಉದಯೋನ್ಮುಖ ಲೇಖಕಿ ಅನುಪಮ ಪಿ.ಎಸ್ ಅವರ ಉತ್ತಮ ಲೇಖನಗಳು ಇನ್ನು ಮುಂದೆಯೂ ಮೂಡಿ ಬರಲಿ ಎಂದು ಹಾರೈಸುತ್ತೇನೆ.

    ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್ ದೇಶ

    ReplyDelete
  2. ತುಳು ಭಾಷೆಗೆ, ಸಾಹಿತ್ಯಕೆ, ಸಂಶೋಧನೆಗೆ ಅವರ ಕೊಡುಗೆ ಅಪಾರ, ಅನುಪಮ ಬರಹ ಇಷ್ಟ ಆಯಿತು

    ReplyDelete
  3. Congratulations! Blog is very good,keep up the good work.I was very happy to see the photos of dear Principal Shree Shambhat and the building of my Alma Mater(1946-1955).
    Best Wishes
    Undemane Narayana Bhat

    ReplyDelete