Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

18 August 2018

ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ


ಕೇರಳದ ಪ್ರವಾಹ ಸಂತ್ರಸ್ತರಿಗೆ ನೀಡಲು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಸಂಗ್ರಹಿಸಿದ ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್. ವೆಂಕಟರಾಜ ಸ್ವೀಕರಿಸಿದರು.

ಈ ಮೊತ್ತದಿಂದ ಖರೀದಿಸಲಾದ 50 ಕಿಲೋಗ್ರಾಂ ಅಕ್ಕಿ, 10 ಕಿಲೋಗ್ರಾಂ ಅವಲಕ್ಕಿ, 10 ಕಿಲೋಗ್ರಾಂ ಸಜ್ಜಿಗೆ,10 ಕಿಲೋಗ್ರಾಂ ಹಸರು ಬೇಳೆ, 15 ಕಿಲೋಗ್ರಾಂ ಸಕ್ಕರೆ, 10 ಕಿಲೋಗ್ರಾಂ ಕಡಲೆ, 10 ಕಿಲೋಗ್ರಾಂ ತೊಗರಿ ಬೇಳೆ, 4 ಕಿಲೋಗ್ರಾಂ ಚಾಹುಡಿ, 5 ಟೂಥ್ ಪೇಸ್ಟ್, ಇವುಗಳನ್ನು ಸ್ಕೌಟ್ ಗೈಡ್ ಜಿಲ್ಲಾ ಸಮಿತಿಯ ಮೂಲಕ ನೆರೆ ಸಂತ್ರಸ್ತರಿಗೆ ಕಳುಹಿಸಿಕೊಡಲಾಯಿತು. ನಮ್ಮ ಜೊತೆ ಕೈಜೋಡಿಸಿದವರಿಗೆ ಕೃತಜ್ಞತೆಗಳು...

02 August 2018

‘ಮಹಾಜನ ವಾಣಿ’ ಬಾನುಲಿ ಕೇಂದ್ರಕ್ಕೆ ಚಾಲನೆ



“ವಿದ್ಯಾರ್ಜನೆಯ ಹಂತದಲ್ಲಿಯೇ ಮಕ್ಕಳಿಗೆ ಭವಿಷ್ಯದ ಕಡೆಗೆ ಸ್ಪಷ್ಟವಾದ ಗುರಿ ಇರಬೇಕು. ಅದನ್ನು ಸಾಧಿಸುವ ಛಲವೂ ಬದ್ಧತೆಯೂ ಇರಬೇಕು. ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಂಡರೆ ಜೀವನದಲ್ಲಿ ಸಾಧನೆಯ ಹೆಜ್ಜೆಗಳನ್ನು ಇಡಲು ಸಹಕಾರಿಯಾಗಬಹುದು. ಒಂದು ಕಾಲದಲ್ಲಿ ನಾಡಿನಾದ್ಯಂತ ಮಾಹಿತಿ ವಿನಿಮಯದ ಏಕೈಕ ಮಾಧ್ಯಮವಾಗಿದ್ದ ರೇಡಿಯೋ ಪ್ರಸ್ತುತ ಹೊಸರೂಪದಲ್ಲಿ ಪ್ರಸ್ತುತಿಗೊಳ್ಳುತ್ತಾ ನಗರ ಗ್ರಾಮೀಣ ಜನರಿಗೆ ಮನರಂಜನೆ ನೀಡುತ್ತಿದೆ. ಅಂತಹ ವ್ಯವಸ್ಥೆಯನ್ನು ತಮ್ಮ ಪರಿಧಿಯೊಳಗೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ಶುಭಾಶಯಗಳು” ಮಂಗಳೂರು ಆಕಾಶವಾಣಿ ಕೇಂದ್ರದ ಉಪನಿರ್ದೇಶಕಿ ಡಾ|ಮಾಲತಿ ಆರ್. ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡ ‘ಮಹಾಜನ ವಾಣಿ’ ಬಾನುಲಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಸಭೆಯ ಅಧ್ಯಕ್ಷತೆ ವಹಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಮತ್ತು ಶಾಲಾ ಶಿಕ್ಷಕಿ ವಾಣಿ ಪಿ.ಎಸ್ ಶುಭಹಾರೈಸಿದರು. ವಿದ್ಯಾರ್ಥಿನಿ ಶರಣ್ಯ.ಪಿ.ಜೆ ಪ್ರಾಸ್ತಾವಿಕ ಮಾತನ್ನಾಡಿದಳು. ವಿದ್ಯಾರ್ಥಿಗಳಾದ ಸಂಪತ್.ಕೆ ಸ್ವಾಗತಿಸಿ ವಿಲ್ಸನ್ ಶರುಣ್ ಕ್ರಾಸ್ತಾ ವಂದಿಸಿದರು. ವರಲಕ್ಷ್ಮಿ.ಎನ್ ಕಾರ್ಯಕ್ರಮ ನಿರೂಪಿಸಿದಳು.