Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

13 September 2013

ಮಕ್ಕಳ ಧ್ವನಿ - 2013

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮವು ಇತ್ತೀಚೆಗೆ ಮಂಗಳೂರಿನ ಶಾರದಾ ಕಾಲೇಜಿನಲ್ಲಿ ಆಯೋಜಿಸಿದ ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗಳಿಸಿದರು.

12 September 2013

ಹೊಸತನದ ಕಡೆಗೆ ನಮ್ಮ ಶಾಲೆ...


ಶಾಲೆಯ ಈ ಹಳೆಯ ನಾಲ್ಕು ಸೂತ್ರದ ಕಟ್ಟಡ ಸಹಸ್ರಾರು ಮಂದಿಗೆ ಅರಿವಿನ ಅಕ್ಷರಗಳನ್ನು ಹೇಳಿಕೊಟ್ಟಿದೆ. ಶತಮಾನೋತ್ಸವದ ಸಿದ್ಧತೆಯಲ್ಲಿ ಈ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ತಲೆ ಎತ್ತಲಿದೆ. ಸಿದ್ಧತೆಗಳು ಆರಂಭವಾಗಿವೆ, ನಿನ್ನೆಯಿಂದ...

ಶ್ರೀಶ.ಕೆ - ವಾಚನ ಪರೀಕ್ಷೆಯಲ್ಲಿ ಪ್ರಥಮ


ಕಾಸರಗೋಡು ಜಿಲ್ಲಾ ಗ್ರಂಥಾಲಯ ಕೌನ್ಸಿಲ್ 2013-14 ಅಧ್ಯಯನ ವರ್ಷದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಕಾಸರಗೋಡು ತಾಲೂಕು ಮಟ್ಟದ ವಾಚನ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಶ್ರೀಶ.ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ಈತ ಸೂರಂಬೈಲು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕೆ.ಸುಬ್ರಹ್ಮಣ್ಯ ಭಟ್ ಮತ್ತು ನಮ್ಮ ಶಾಲಾ ಶಿಕ್ಷಕಿ ಶೈಲಜಾ.ಬಿ ಇವರ ಪುತ್ರ.

28 August 2013

‘ಶ್ರೀಕೃಷ್ಣ ಜಯಂತಿ’ - 2013

   


“ಶ್ರೀಕೃಷ್ಣ ಬೆಣ್ಣೆಕಳ್ಳ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಕೃಷ್ಣ ಆತನ ಜೊತೆಗಿದ್ದ ಅಶಕ್ತ ಮಕ್ಕಳಿಗಾಗಿ ಗೋಪಿಕೆಯರ ಬಳಿಯಲ್ಲಿದ್ದ ಬೆಣ್ಣೆಯನ್ನು ಕದ್ದು ಪುಟಾಣಿಗಳಿಗೆ ಪೌಷ್ಟಿಕ ಆಹಾರವನ್ನು ಕೊಡುತ್ತಿದ್ದ. ಆತನ ಜನನ, ಬಾಲ ಲೀಲೆಗಳೆಲ್ಲವೂ ಲೋಕ ಕಲ್ಯಾಣಕ್ಕಾಗಿ ಮುಡಿಪಾಗಿದ್ದವು. ಅಂತಹ ಪರಮಾತ್ಮನ ಲೀಲೆಗಳನ್ನು ಕೊಂಡಾಡುವುದಕ್ಕಾಗಿ ಇಂತಹ ಆಚರಣೆಗಳನ್ನು ಸಮಾಜದಲ್ಲಿ ನಡೆಸಲಾಗುತ್ತಿದೆ. ಇವು ಸಮಾಜದ ಅಭಿವೃದ್ಧಿಗೆ ದಾರಿದೀಪವಾಗುತ್ತವೆ.” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಡಿ.ಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ‘ವಿದ್ಯೋದಯ ಸಭಾ’ ಆಶ್ರಯದಲ್ಲಿ ನಮ್ಮ ಶಾಲೆಗಳಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೀರ್ಚಾಲು ಮೇಲಿನ ಪೇಟೆಯ ಸ್ವೀಕಾರ್ ಕಮ್ಯುನಿಕೇಷನ್ಸ್ ಮಾಲಕ ರವಿ.ಕೆ ಪ್ರಾಯೋಜಿಸಿದ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ಅನುಶ್ರೀ. ಎಂ.ಪಿ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.

    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಳ್ಳಪದವು ನಟರಾಜ ಶರ್ಮ ಇವರಿಂದ ‘ಭಕ್ತಿಗೀತೆ’ ಗಾಯನ ಕಾರ್ಯಕ್ರಮ ಜರಗಿತು.

27 August 2013

ಜಿಲ್ಲಾ ಮಟ್ಟದ ಸಂಸ್ಕೃತ ದಿನಾಚರಣೆ - ಬಹುಮಾನಗಳು

21.08.2013 ಬುಧವಾರ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಜರಗಿದ ಜಿಲ್ಲಾ ಮಟ್ಟದ ಸಂಸ್ಕೃತ ದಿನಾಚರಣೆಯಲ್ಲಿ ನಮ್ಮಶಾಲೆಯ ವಿದ್ಯಾರ್ಥಿಗಳು ವಿವಿಧ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಶಾಲೆಯ ನೂತನ ಸಂಸ್ಕೃತ ಶಿಕ್ಷಕ ನಂದಕುಮಾರ್. ಕೆ, ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಮತ್ತು ಶಿಕ್ಷಕಿ ಶೈಲಜಾ. ಬಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿದ್ದರು.

23 August 2013

ಕೂಳಕ್ಕೋಡ್ಳು ವೆಂಕಟೇಶ ಮೂರ್ತಿಗೆ ‘ಮಹರ್ಷಿ ಬಾದರಾಯಣ ವ್ಯಾಸ ಸನ್ಮಾನ’

   
ಸಂಸ್ಕೃತದ ಅಧ್ಯಯನದಲ್ಲಿ ವಿಶಿಷ್ಟ ಸಾಧನೆ ಮಾಡಿದ ಯುವ ಸಾಧಕರಿಗಾಗಿ ಭಾರತದ ಸನ್ಮಾನ್ಯ ರಾಷ್ಟ್ರಪತಿಗಳು ನೀಡುವ ‘ಮಹರ್ಷಿ ಬಾದರಾಯಣ ವ್ಯಾಸ ಸನ್ಮಾನ’ ಪುರಸ್ಕಾರಕ್ಕೆ ಈ ವರ್ಷ ಗಡಿನಾಡು ಕಾಸರಗೋಡಿನ ಕನ್ನಡಿಗ ಕೂಳಕ್ಕೋಡ್ಳು ವೆಂಕಟೇಶ ಮೂರ್ತಿ ಅರ್ಹರಾಗಿದ್ದಾರೆ. ಸ್ವಾತ೦ತ್ರ್ಯೋತ್ಸವದ ದಿನದಂದು ಭಾರತ ಸರಕಾರವು ಘೋಷಿಸುವ ಈ ಪ್ರಶಸ್ತಿಯು ಪ್ರಸ್ತುತ ಶತಮಾನೋತ್ಸವ ವರ್ಷದಲ್ಲಿರುವ ನಮ್ಮ ಶಾಲೆಯ ಹಳೆವಿದ್ಯಾರ್ಥಿಗೆ ದೊರೆತಿರುವುದು ಶಾಲೆಯ ಶತಮಾನೋತ್ಸವಕ್ಕೆ ಮತ್ತಷ್ಟು ಮೆರುಗು ತಂದಿದೆ.

 ಬದಿಯಡ್ಕ ಸನಿಹದ “ಕೂಳಕ್ಕೋಡ್ಳು-ಈಶಾವಾಸ್ಯಮ್” ಮನೆಯ ಸುಲೋಚನಾ ಮತ್ತು ಶಂಕರನಾರಾಯಣ ಭಟ್ಟರ ಹಿರಿಯ ಪುತ್ರ ವೆಂಕಟೇಶ ಮೂರ್ತಿ ಎಳವೆಯಲ್ಲಿಯೇ ಸಂಸ್ಕೃತದ ಕಡೆಗೆ ಆಸಕ್ತರಾಗಿದ್ದವರು. ಪ್ರಸ್ತುತ ದೆಹಲಿಯಲ್ಲಿರುವ ಅಂಗೀಕೃತ ವಿಶ್ವವಿದ್ಯಾಲಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಮುಕ್ತಸ್ವಾಧ್ಯಾಯ ಪೀಠ (ಇನ್ಸ್ಟಿಟ್ಯೂಟ್ ಒಫ್ ಡಿಸ್ಟೇನ್ಸ್ ಎಜುಕೇಶನ್)ದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ (ಅಸಿಸ್ಟೆಂಟ್ ಪ್ರೊಫೆಸರ್) ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವವಿದ್ಯಾಲಯ ಆಯೋಜಿಸುವ ರಾಷ್ಟ್ರೀಯ ಕಾರ್ಯಕ್ರಮಗಳ, ಪ್ರಶಿಕ್ಷಣ ಕಾರ್ಯಕ್ರಮಗಳ ಸಂಯೋಜಕರಾಗಿ ಇವರು ನಾಡಿನ ಎಲ್ಲ ವಿದ್ವಜ್ಜನರಿಗೆ ಸುಪರಿಚಿತರಾಗಿದ್ದಾರೆ. ವಿಶ್ವವಿದ್ಯಾಲಯ ತಯಾರಿಸುವ ಭಾಷಾಧ್ಯಯನದ ಡಿವಿಡಿಗಳಲ್ಲಿ ಇವರ ಪರಿಶ್ರಮ ಅಪಾರವಾಗಿದೆ. ದೂರದರ್ಶನದ ‘ಡಿಡಿ ಭಾರತಿ’ಯಲ್ಲಿ ಪ್ರಸಾರವಾಗುವ ‘ಭಾಷಾಮಂದಾಕಿನೀ’ ಕಾರ್ಯಕ್ರಮದಲ್ಲಿಯೂ ಇವರು ಶಿಕ್ಷಕರಾಗಿ ಪರಿಚಿತರಾಗಿದ್ದಾರೆ.

ಶಾಲಾಮಟ್ಟದ ಕಲಿಕೆಯ ಹಂತದಲ್ಲಿಯೇ ಕಲೆ, ಭಾಷಣ, ಕ್ರೀಡೆ, ನೇತೃತ್ವಗಳನ್ನು ಮೈಗೂಡಿಸಿಕೊಂಡು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠದಲ್ಲಿ ಅದ್ವೈತ ವೇದಾಂತದ ಕುರಿತು ವಿಶೇಷ ಅಧ್ಯಯನ ಪೂರೈಸಿದ್ದಾರೆ. 2009 ಸೆಪ್ಟೆಂಬರ್ 1 ರಿಂದ 5 ರ ತನಕ  ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆದ 14ನೆಯ ವಿಶ್ವಸಂಸ್ಕೃತ ಸಮ್ಮೇಳನದಲ್ಲಿ “ಕೌರವೌರವಮ್” ಎಂಬ ಏಕವ್ಯಕ್ತಿ-ಯಕ್ಷಗಾನವನ್ನು ಇವರು ಪ್ರದರ್ಶಿಸಿದ್ದರು. ಈ ಪ್ರಸಂಗದಲ್ಲಿ ಗದಾಯುದ್ಧದ ದುರ್ಯೋಧನನ ರೋಷ-ವಿಲಾಪದ ಮನೋಜ್ಞ ಅಭಿನಯ ಹಲವರ ಮನಸೂರೆಗೊಂಡಿತ್ತು.

ಇವರ ಮನೆ ‘ಸಂಸ್ಕೃತ ಗೃಹ’ವೆಂದೇ ಸುಪರಿಚಿತವಾಗಿದೆ. ಪತ್ನಿ ಶುಭಲಕ್ಷ್ಮೀ ಮತ್ತು ಮಗ ಈಶಾನ ಸಂಸ್ಕೃತದಲ್ಲಿಯೇ ವ್ಯವಹರಿಸುತ್ತಾರೆ. ಇತ್ತೀಚಿಗೆ ಜನಿಸಿದ ತಮ್ಮ ಸುಪುತ್ರಿಗೂ ಇವರು ಸಂಸ್ಕೃತದ ಬಾಲಪಾಠಗಳನ್ನು ಆರಂಭಿಸಿದ್ದಾರೆ! ವೆಂಕಟೇಶ ಮೂರ್ತಿಯವರ ತಮ್ಮ ಡಾ|ಮಹೇಶ್ ಕೂಳಕ್ಕೋಡ್ಳು ಸಂಸ್ಕೃತದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.

19 August 2013

ಶಾಸಕರ ನಿಧಿಯಿಂದ ಕಂಪ್ಯೂಟರ್ ಕೊಡುಗೆ

ನಮ್ಮ ಶಾಲೆಗೆ ಕಾಸರಗೋಡು ವಿಧಾನಸಭಾ ಸದಸ್ಯ ಎನ್.ಎ.ನೆಲ್ಲಿಕುನ್ನು ಇವರ ಪ್ರದೇಶ ಅಭಿವೃದ್ಧಿ ನಿಧಿಯಿಂದ ಕೊಡಮಾಡಿದ ಎರಡು ಕಂಪ್ಯೂಟರುಗಳನ್ನು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ಇಂದು ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಬೊಳುಂಬು, ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಉಪಸ್ಥಿತರಿದ್ದರು.

ಶತಮಾನೋತ್ಸವ ಕಟ್ಟಡ ಶಿಲಾನ್ಯಾಸ

   “ಸೂರ್ಯನ ಚಲನೆಗೆ ಸಂಬಂಧಿಸಿ ಕಟ್ಟಡ ನಿರ್ಮಾಣದ ಆರಂಭಕ್ಕೆ ಇಂದಿನ ಗ್ರಹಗತಿ ಅತ್ಯಂತ ಸೂಕ್ತ. ಇಂತಹ ಉತ್ತಮವಾದ ಘಳಿಗೆಯಲ್ಲಿ ನನ್ನ ಮಾತೃಶಾಲೆಯ ಶತಮಾನೋತ್ಸವಕ್ಕೆ ಸಂಬಂಧಿಸಿದ ಕಟ್ಟಡದ ಶಿಲಾನ್ಯಾಸ ನೆರವೇರಿಸುತ್ತಿರುವುದು ಸಂತೃಪ್ತಿ ತಂದಿದೆ. ಉತ್ತಮ ಮುಹೂರ್ತದಲ್ಲಿ ಆರಂಭವಾದ ಈ ಕಟ್ಟಡದ ನಿರ್ಮಾಣ ಅತ್ಯಂತ ವೇಗವಾಗಿ ಮುಂದುವರಿಯಲಿ" ಎಂದು ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಮಹಾಜನ ವಿದ್ಯಾಸಂಸ್ಥೆಗಳಲ್ಲಿ ಜರಗಿದ ಶತಮಾನೋತ್ಸವ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತಿದ್ದರು.



ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಐ.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕದ ಉದ್ಯಮಿ ಬಿ.ವಸಂತ ಪೈ ದೇಣಿಗೆ ಸಂಗ್ರಹಣೆಗೆ ಚಾಲನೆ ನೀಡಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್, ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಬೊಳುಂಬು, ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಡಾ|ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಸ್ವಾಗತಿಸಿ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು. ಶಾಲಾ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಚ್.ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು.

15 August 2013

ಸ್ವಾತಂತ್ರ್ಯ ಯಾತ್ರೆ 2013

   



  “ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು ಸ್ವಾತಂತ್ರ್ಯ ದಿನ ಕಾರ್ಯಕ್ರಮದ ಆಚರಣೆ ನೆರವಾಗುತ್ತದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ, ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಿ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಾವು ಶ್ರಮಿಸಬೇಕಾಗಿದೆ" ಎಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಶಿಕ್ಷಕರಾದ ಕೆ.ಶಂಕರನಾರಾಯಣ ಶರ್ಮ, ಕೆ.ನಾರಾಯಣ ಭಟ್ ಮತ್ತು ಎಂ.ಸೂರ್ಯನಾರಾಯಣ ಸ್ವಾತಂತ್ರ್ಯ ಸಂಗ್ರಾಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಧನ್ಯವಾದ ಸಮರ್ಪಿಸಿದರು. ಚಿತ್ರಕಲಾ ಶಿಕ್ಷಕ ಕೆ.ಗೋವಿಂದ ಶರ್ಮ ಕಾರ್ಯಕ್ರಮ ನಿರೂಪಿಸಿದರು.

    ವಿದ್ಯಾರ್ಥಿಗಳಿಂದ ನೀರ್ಚಾಲಿನಲ್ಲಿ ಸ್ವಾತಂತ್ರ್ಯ ಮೆರವಣಿಗೆ ಮತ್ತು ಸ್ವಾತಂತ್ರ್ಯ ರೂಪಕಗಳು ನಡೆದವು.

ಹೂರಂಗವಲ್ಲಿ...




ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಮ್ಮ ಶಾಲಾ ಸಮಾಜ ವಿಜ್ಞಾನ ಸಂಘದ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹೂವಿನಲ್ಲಿ ಭಾರತದ ಭೂಪಟ ಮತ್ತು ಯು.ಪಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಕೇರಳದ ಭೂಪಟವನ್ನು ರಚಿಸುವ ಸ್ಪರ್ಧೆ ನಿನ್ನೆ ಜರಗಿತು. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಚಿತ್ರ ಇಲ್ಲಿ ನಿಮಗಾಗಿ...

12 August 2013

ಆಗಸ್ಟ್ 19ರಂದು ಶತಮಾನೋತ್ಸವ ಕಟ್ಟಡಕ್ಕೆ ಶಿಲಾನ್ಯಾಸ

ನಮ್ಮ ಶಾಲೆಗಳ ಶತಮಾನೋತ್ಸವದ ಸವಿನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿದ ಕಟ್ಟಡದ ಶಿಲಾನ್ಯಾಸ ಹಾಗೂ ಆರ್ಥಿಕ ಸಂಗ್ರಹದ ಪ್ರಾರಂಭೋತ್ಸವವನ್ನು ದಿನಾಂಕ 19.08.2013 ಸೋಮವಾರ ಬೆಳಗ್ಗೆ ಘ೦ಟೆ 9.30ಕ್ಕೆ ಶಾಲಾ ವಠಾರದಲ್ಲಿ ನೆರವೇರಿಸಲಾಗುವುದು. ಪೂರ್ವ ವಿದ್ಯಾರ್ಥಿ ಜ್ಯೋತಿಷ್ಯರತ್ನ ಬ್ರಹ್ಮಶ್ರೀ ಪದ್ಮನಾಭ ಶರ್ಮ ಬೇಳ, ಇರಿಂಞಾಲಕುಡ ಶಿಲಾನ್ಯಾಸ ಮತ್ತು ಬದಿಯಡ್ಕದ ಉದ್ಯಮಿ ಬಿ. ವಸಂತ ಪೈ ದೇಣಿಗೆ ಸಂಗ್ರಹದ ಉಧ್ಘಾಟನೆ ನಡೆಸಲಿದ್ದಾರೆ. ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಉಪಸ್ಥಿತಿ, ಸಹಕಾರವಿರಲಿ. ಪ್ರೀತಿಯಿಟ್ಟು ಬನ್ನಿ...

26 July 2013

ಸ್ವಾಗತ ರೈ. ಬಿ - ಕುಂಬಳೆ ಉಪಜಿಲ್ಲಾ ಮಟ್ಟದ ಚೆಸ್ ಚಾಂಪಿಯನ್

ನಮ್ಮ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಸ್ವಾಗತ ರೈ.ಬಿ ಕಳೆದ 20.07.2013 ರಂದು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯ ಜೂನಿಯರ್ ಹುಡುಗಿಯರ ವಿಭಾಗದಲ್ಲಿ ಚಾಂಪಿಯನ್‍ಶಿಪ್ ಗಳಿಸಿದ್ದಾಳೆ. ಈಕೆ ಶಿಕ್ಷಕ ದಂಪತಿಗಳಾದ ಚಂದ್ರಶೇಖರ ರೈ.ಕೆ ಮತ್ತು ಚಂದ್ರಾವತಿ.ಬಿ ಇವರ ಪುತ್ರಿ. ಶುಭಾಶಯಗಳು...

25 July 2013

ಚೇತನಕೃಷ್ಣ ಸಿ.ವಿ - NMMS ಸ್ಕೋಲರ್‍ಶಿಪ್

ನಮ್ಮ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿ ಚೇತನಕೃಷ್ಣ ಸಿ.ವಿ ಕಳೆದ 2012-13ನೇ ಅಧ್ಯಯನ ವರ್ಷದ ಕೊನೆಗೆ ಜರಗಿದ NMMS (National Means cum Merit Scholarship) ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸ್ಕೋಲರ್ ಶಿಪ್ ಪಡೆಯಲು ಅರ್ಹತೆ ಪಡೆದಿದ್ದಾನೆ. ಈತ ಸಮೀಪದ ಚೇತನಡ್ಕ ನಿವಾಸಿ ಸಿ.ವೆಂಕಟ್ರಮಣ ಭಟ್ ಮತ್ತು ವಿಜಯಲಕ್ಷ್ಮಿ ಇವರ ಪುತ್ರ. ಶುಭಾಶಯಗಳು...

19 July 2013

ಎಂ. ನಟರಾಜ ರಾವ್ ನಿಧನ - ಸಂತಾಪ

ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್ ಇಂದು ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪರಮಾತ್ಮನಲ್ಲಿ ಬೇಡಿಕೊಳ್ಳುತ್ತೇವೆ. ಕಂಬನಿಗಳು...

12 July 2013

ರಮ್ಯಾ.ಕೆ ಗೆ ಯು.ಎಸ್.ಎಸ್

ನಮ್ಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ರಮ್ಯಾ.ಕೆ ಕಳೆದ 2012-13ನೇ ಅಧ್ಯಯನ ವರ್ಷದ ಕೊನೆಗೆ ಜರಗಿದ ಯು.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಕೇರಳ ಸರಕಾರ ನೀಡುವ ಸ್ಕೋಲರ್ ಶಿಪ್ ಪಡೆಯಲು ಅರ್ಹತೆ ಪಡೆದಿದ್ದಾಳೆ. ಈಕೆ ಕಿಳಿಂಗಾರು ಸಮೀಪದ ಕೊಡ್ವಕೆರೆ ನಿವಾಸಿ ಕೆ.ಶಿವಕುಮಾರ ಮತ್ತು ಗಂಗಾರತ್ನ ಇವರ ಪುತ್ರಿ.

08 July 2013

ರಕ್ಷಕ ಶಿಕ್ಷಕ ಸಂಘದ ಮಹಾಸಭೆ - 2013

   
   “ನಮ್ಮ ನಾಡಿನ ಅತ್ಯಂತ ಹಳೆಯ ವಿದ್ಯಾಸಂಸ್ಥೆಗಳಲ್ಲಿ ಖ್ಯಾತಿ ಪಡೆದ ಮಹಾಜನ ವಿದ್ಯಾಸಂಸ್ಥೆಗಳ ಶತಮಾನೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಲಿ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೂ ಕೂಡಾ ಚೆನ್ನಾಗಿ ಕಲಿತು ಉತ್ತಮ ಫಲಿತಾಂಶ ಪಡೆದು ಹೆತ್ತವರ, ಸಮಾಜದ ಗೌರವಕ್ಕೆ ಪಾತ್ರರಾಗಲಿ" ಎಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ರಕ್ಷಕ ಶಿಕ್ಷಕ ಸಂಘದ ಮಾತೃ ವಿಭಾಗದ ಅಧ್ಯಕ್ಷೆ ಅನ್ನಪೂರ್ಣ ಕುಳಮರ್ವ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವರದಿ ವಾಚಿಸಿದರು. ಶಿಕ್ಷಕರಾದ ಕೆ.ಶಂಕರನಾರಾಯಣ ಶರ್ಮ ಸ್ವಾಗತಿಸಿ ಕೆ.ನಾರಾಯಣ ಭಟ್ ವಂದಿಸಿದರು.

26 June 2013

ಮಾದಕ ದ್ರವ್ಯ ವಿರುದ್ಧ ದಿನ

 
“ನೈತಿಕತೆಯನ್ನು ಬದಿಗಿರಿಸಿ ಮಾದಕ ದ್ರವ್ಯಗಳ ದಾಸರಾಗುವತ್ತ ಯುವ ಸಮೂಹ ಮುಖ ಮಾಡಿರುವುದು ಸಮಾಜವನ್ನು ನಲುಗಿಸಲು ಆರಂಭಿಸಿದೆ. ಆ ಮೂಲಕ ಸಮಾಜದ ಧನ, ಆರೋಗ್ಯ ಬಲ ಕುಸಿತಗೊಳ್ಳುತ್ತಿದೆ. ಇದರಿಂದಾಗಿ ದೇಶ ಉನ್ಮತ್ತವಾಗಲು ಆರಂಭಿಸಿದೆ ಹಾಗೂ ಭವಿಷ್ಯದ ಕುರಿತ ಚಿಂತನೆ ಶೋಚನೀಯವಾಗುತ್ತಿದೆ. ಮಾದಕ ದ್ರವ್ಯಗಳನ್ನು ವಿರೋಧಿಸುವ ಮೂಲಕ ಸುಸಂಸ್ಕೃತ ಸಮಾಜವನ್ನು ರೂಪಿಸುವತ್ತ ನಾವು ಶ್ರಮಿಸಬೇಕಾಗಿದೆ" ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ವಿಶ್ವ ಮಾದಕ ದ್ರವ್ಯ ವಿರುದ್ಧ ದಿನದ ಅಂಗವಾಗಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
    ಶಿಕ್ಷಕರಾದ ಕೆ.ಶಂಕರನಾರಾಯಣ ಶರ್ಮ, ಕೆ.ನಾರಾಯಣ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಶ.ಕೆ ಮತ್ತು ಸ್ವಾಗತ ರೈ ಓದುವಿಕೆಯ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿ ಸೌಮ್ಯ ಸ್ವಾಗತಿಸಿ ಭವ್ಯಲಕ್ಷ್ಮಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

25 June 2013

ಗದ್ದೆಗೆ ಸಂದರ್ಶನ

ನಮ್ಮ ಶಾಲೆಯ ವಿದ್ಯಾರ್ಥಿಗಳು ಇಂದು ಮೈಕುರಿ ಕೃಷ್ಣ ನಾಯ್ಕರ ಗದ್ದೆಯನ್ನು ಸಂದರ್ಶಿಸಿ ಭತ್ತದ ಬಿತ್ತನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಕೃಷಿಯ ಕಷ್ಟ ಸುಖಗಳನ್ನು ಆಲಿಸುವಲ್ಲಿ ಕೃಷ್ಣ ನಾಯ್ಕ್ ಮತ್ತು ಅವರ ಸಹೋದರ ಕುಞಪ್ಪು ನಾಯ್ಕ್ ನಮ್ಮ ಜೊತೆ ಸಹಕರಿಸಿದ್ದು ನಮಗೆ ತುಂಬಾ ಸಂತೋಷ ನೀಡಿದೆ. ಧನ್ಯವಾದಗಳು.

19 June 2013

ವಾಚನಾ ಸಪ್ತಾಹ - ಉದ್ಘಾಟನೆ

  
  “ಓದು ಭವಿಷ್ಯದ ಹಾದಿಯನ್ನು ರೂಪಿಸುತ್ತದೆ. ಆಕರ್ಷಕ ಗ್ರಂಥಾಲಯಗಳು ಮತ್ತು ಅತ್ಯುತ್ತಮ ಪುಸ್ತಕಗಳು ಸಮಾಜವನ್ನು ತಮ್ಮತ್ತ ಸೆಳೆಯುತ್ತವೆ. ಈ ಓದುವಿಕೆ ವಿದ್ಯಾರ್ಥಿಗಳಿಗೆ ಅಪಾರ ಜ್ಞಾನ ಸಂಪತ್ತನ್ನು ಒದಗಿಸುತ್ತದೆ. ಉತ್ತಮ ಪ್ರಜೆಗಳಾಗಿ ಬೆಳೆಯಲು ಓದುವಿಕೆ ಅನಿವಾರ್ಯ." ಎಂದು ನಮ್ಮ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವಾಚನಾ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
    ಶಿಕ್ಷಕರಾದ ಕೆ.ನಾರಾಯಣ ಭಟ್ ಮತ್ತು ಶಿಕ್ಷಕಿ ವಾಣಿ.ಪಿ.ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಶ.ಕೆ ಮತ್ತು ಸ್ವಾಗತ ರೈ ಓದುವಿಕೆಯ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿ ಮಂಜೂಷಾ.ಪಿ.ಎಸ್ ಸ್ವಾಗತಿಸಿ ಮಹಿಮಾ. ಎಚ್.ಎನ್ ವಂದಿಸಿದರು. ಅಶ್ವಿನಿ.ಕೆ ಕಾರ್ಯಕ್ರಮ ನಿರೂಪಿಸಿದರು.

05 June 2013

‘ಯೋಚಿಸಿ, ಸೇವಿಸಿ, ಉಳಿಸಿ’ - ವಿಶ್ವ ಪರಿಸರ ದಿನ


  
   “ವಾತಾವರಣದಲ್ಲಿ ಅಂಗಾರಾಮ್ಲ ಮತ್ತು ಇತರ ವಿಷಕಾರಿ ಅನಿಲಗಳ, ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಇದು ಜೀವಜಾಲದ ಭದ್ರತೆಗೆ ತೊಡಕಾಗಿ ಪರಿಣಮಿಸಿದೆ. ಆಹಾರದ ಉತ್ಪಾದನೆ ಸಸ್ಯಗಳಿಂದ ಮಾತ್ರ ಸಾಧ್ಯ. ಅಂತಹ ಸಸ್ಯಗಳಿಗೆ ಪರಿಸರವು ಮಾರಕವಾಗಿ ಪರಿಣಮಿಸುತ್ತಿರುವುದರಿಂದ ನಾವು ಪರಿಸರ ಸಂರಕ್ಷಣೆಯ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಜೊತೆಗೆ ದೊರೆತ ಆಹಾರವನ್ನು ಯುಕ್ತಿಯಿಂದ ಉಪಯೋಗಿಸಬೇಕಾಗಿದೆ, ಮುಂದಿನ ತಲೆಮಾರಿನ ಜೀವಿಗಳಿಗಾಗಿ ಪರಿಸರವನ್ನು ಉಳಿಸಬೇಕಾಗಿದೆ" ಎಂದು ನಮ್ಮ ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವಿಶ್ವಪರಿಸರ ದಿನಾಚರಣೆಯಲ್ಲಿ ಸಾಂಕೇತಿಕವಾಗಿ ಗಿಡ ನೆಟ್ಟು ಮಾತನಾಡುತ್ತಿದ್ದರು.

ಶಿಕ್ಷಕರಾದ ಕೆ.ಶಂಕರನಾರಾಯಣ ಶರ್ಮ, ಶೈಲಜಾ. ಬಿ ಉಪಸ್ಥಿತರಿದ್ದರು. ಇಕೋ ಕ್ಲಬ್ ಸಂಚಾಲಕ ಶಿವಪ್ರಕಾಶ್.ಎಂ.ಕೆ ಸ್ವಾಗತಿಸಿ ವಿದ್ಯಾರ್ಥಿ ನಾಯಕ ಶ್ರೀಶ.ಕೆ ವಂದಿಸಿದರು.