Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

26 November 2013

ಮಹಾಜನ ಶತಮಾನೋತ್ಸವ ಭವನ ‘ಸಮರ್ಪಣೆ’ಗೆ ಸಿದ್ಧ


ಶತಮಾನಗಳಿಂದ ವಿದ್ಯಾಶಾರದೆಯ ಸೇವೆಗೈದು ಅಸಂಖ್ಯಾತ ಸಂಸ್ಕೃತ ಪಂಡಿತರನ್ನು, ವಿದ್ವಜ್ಜನರನ್ನು, ಸಜ್ಜನರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಮಹಾಜನ ಸಂಸ್ಕೃತ ಕಾಲೇಜು, ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಶತಮಾನೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇದೇ ವರ್ಷದ ಅಗೋಸ್ತು 19 ರಂದು ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಆ ದಿನದ ಗ್ರಹಗತಿ ಅತ್ಯುತ್ತಮವಾಗಿದ್ದು ಕಟ್ಟಡದ ಕಾಮಗಾರಿ ಅತ್ಯಂತ ವೇಗವಾಗಿ ಪೂರ್ತಿಗೊಳ್ಳಲಿದೆ ಎಂದು ಶುಭ ಹಾರೈಸಿದ್ದರು. ಅವರ ನುಡಿಯಂತೆ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗಿ ಈಗ ಪೂರ್ಣಗೊಳ್ಳುವ ಹಂತ ತಲಪಿದೆ.

ಕನ್ನಡ ಕರಾವಳಿಯ ನಾಡಿಗೆ ಸುಸಂಸ್ಕೃತ ವಿದ್ವಾಂಸ ಪರಂಪರೆಯ ಶ್ರೇಷ್ಠ ಸಾಂಸ್ಕೃತಿಕ, ಸಾಮಾಜಿಕ, ನಾಗರಿಕ ಪರಂಪರೆಯನ್ನೊದಗಿಸಿದ ಈ ಶಾಲೆ ಗಡಿನಾಡು ಕಾಸರಗೋಡಿನ ಸಾಂಸ್ಕೃತಿಕ ಹಿನ್ನೆಲೆಗೆ ಬೆನ್ನೆಲುಬಾಗಿ ಬೆಳೆದಿರುವುದು ಕಟ್ಟಡ ನಿರ್ಮಾಣದ ಕಾರ್ಯ ವೇಗ ಪಡೆದುಕೊಳ್ಳಲು ಮೂಲ ಕಾರಣವಾಗಿದೆ. ಪೆರಡಾಲ ದೇವಸ್ಥಾನದಲ್ಲಿ ಪ್ರಾರಂಭಗೊಂಡು 1913ರಲ್ಲಿ ಅಧಿಕೃತ ನೋಂದಾವಣೆ ಹೊಂದಿ ನೀರ್ಚಾಲಿನಲ್ಲಿ ಸಂಸ್ಕೃತ ಶಾಲೆಯಾಗಿ ಈ ಸಂಸ್ಥೆ ಹೊರಲೋಕಕ್ಕೆ ತೆರೆದುಕೊಂಡಿತ್ತು. ಶಾಲಾ ಕಟ್ಟಡವೂ ಸುಮಾರು ಅಷ್ಟೇ ಹಳೆಯದಾಗಿರುವುದರಿಂದ ಆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ಕಟ್ಟಲು ಶಾಲಾ ಆಡಳಿತ ಸಮಿತಿ ತೀರ್ಮಾನಿಸಿತ್ತು. ಶಾಲಾ ಆಡಳಿತ ಮಂಡಳಿಯ ವಿನಂತಿ ಮೇರೆಗೆ ಸೆಪ್ಟೆಂಬರ್ 2 ರಂದು ಶಾಲೆಗೆ ಭೇಟಿ ನೀಡಿದ ನೂತನ ಜಿಲ್ಲಾ ವಿದ್ಯಾಭ್ಯಾಸ ಅಧಿಕಾರಿ ಐ. ಸತ್ಯನಾರಾಯಣ ಭಟ್ ಹಳೆಯ ಕಟ್ಟಡವನ್ನು ಕೆಡವಲು ಅನುಮತಿ ನೀಡಿದ್ದರು.

        ಸರಕಾರೀ ಅಂಗೀಕಾರ ಗಳಿಸಿಕೊಂಡು ಹಳೆಯ ನಾಲ್ಕಂಕಣದ ಕಟ್ಟಡವನ್ನು ಕೆಡಹುವ ಕಾರ್ಯ ಓಣಂ ರಜೆಯ ಜೊತೆಗೆ ಸೆಪ್ಟೆಂಬರ್ 11 ರಂದು ಆರಂಭವಾಗಿತ್ತು. ಇತರ ಕಟ್ಟಡಗಳು ಸಾಕಷ್ಟು ಲಭ್ಯವಿರುವುದರಿಂದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಹಳೆಯ ಕಟ್ಟಡವನ್ನು ಕೆಡಹುವ ಕಾರ್ಯಕ್ಕೆ ಯಾವುದೇ ಅಡೆತಡೆಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಶಾಲಾ ತರಗತಿಗಳನ್ನು ಪುನರ್ ವಿನ್ಯಾಸಗೊಳಿಸಿ, ಶಾಲಾ ಅಧ್ಯಯನ ವರ್ಷದ ದ್ವಿತೀಯಾರ್ಧ ಆರಂಭವಾಗುವಾಗ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ವೇಗದ ಚಾಲನೆ ದೊರೆತಿತ್ತು. ಸಮಾಜದ ಎಲ್ಲ ಸಜ್ಜನರ ಆಶಯದಂತೆ, ಅತ್ಯಂತ ವೇಗವಾಗಿ ಸಾಗಿದ ಈ ಕಾರ್ಯ ಈಗ ಪೂರ್ಣಗೊಳ್ಳುವ ಹಂತದಲ್ಲಿದೆ. ಆ ಮೂಲಕ ಸಭಾಂಗಣವನ್ನು ಒಳಗೊಂಡ ಹತ್ತು ತರಗತಿ ಕೊಠಡಿಗಳು ಶಾಲಾ ವಿದ್ಯಾರ್ಥಿಗಳ ಉಪಯೋಗಕ್ಕೆ ದೊರೆಯಲಿದೆ. ಪ್ರಸ್ತುತ ಒಂದು ಸಾವಿರ ಮಂದಿ ಮಳೆಗಾಲದಲ್ಲೂ ಆರಾಮವಾಗಿ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾದ ವಿಶಾಲ ಸಭಾಂಗಣ ನಿರ್ಮಾಣ ಕಾರ್ಯ ಆರಂಭವಾಗಿದೆ. ಶತಮಾನೋತ್ಸವದ ಸ್ಮಾರಕವಾಗಿ ನಿರ್ಮಾಣವಾಗುತ್ತಿರುವ ಈ ಕಟ್ಟಡ ಮತ್ತು ಸಭಾಂಗಣಕ್ಕೆ ಅಂದಾಜು 2 ಕೋಟಿ ರೂಪಾಯಿ ಖರ್ಚು ನಿರೀಕ್ಷಿಸಲಾಗಿದ್ದು, ಈಗಾಗಲೇ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚು ವೆಚ್ಚವಾಗಿದೆ.

        ಅಂದ ಹಾಗೆ ದಶಂಬರ 20,21 ಮತ್ತು 22 ರಂದು ವೈಭವದ ಶತಮಾನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾವು ಕುಟುಂಬ ಸಮೇತರಾಗಿ ಬನ್ನಿ, ಕಾರ್ಯಕ್ರಮವನ್ನು ಚಂದಗಾಣಿಸಿಕೊಡಿ...

No comments:

Post a Comment