“ವಿದ್ಯಾರ್ಜನೆಯ ಹಂತದಲ್ಲಿಯೇ ಮಕ್ಕಳಿಗೆ ಭವಿಷ್ಯದ ಕಡೆಗೆ ಸ್ಪಷ್ಟವಾದ ಗುರಿ ಇರಬೇಕು. ಅದನ್ನು ಸಾಧಿಸುವ ಛಲವೂ ಬದ್ಧತೆಯೂ ಇರಬೇಕು. ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಂಡರೆ ಜೀವನದಲ್ಲಿ ಸಾಧನೆಯ ಹೆಜ್ಜೆಗಳನ್ನು ಇಡಲು ಸಹಕಾರಿಯಾಗಬಹುದು. ಒಂದು ಕಾಲದಲ್ಲಿ ನಾಡಿನಾದ್ಯಂತ ಮಾಹಿತಿ ವಿನಿಮಯದ ಏಕೈಕ ಮಾಧ್ಯಮವಾಗಿದ್ದ ರೇಡಿಯೋ ಪ್ರಸ್ತುತ ಹೊಸರೂಪದಲ್ಲಿ ಪ್ರಸ್ತುತಿಗೊಳ್ಳುತ್ತಾ ನಗರ ಗ್ರಾಮೀಣ ಜನರಿಗೆ ಮನರಂಜನೆ ನೀಡುತ್ತಿದೆ. ಅಂತಹ ವ್ಯವಸ್ಥೆಯನ್ನು ತಮ್ಮ ಪರಿಧಿಯೊಳಗೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ಶುಭಾಶಯಗಳು” ಮಂಗಳೂರು ಆಕಾಶವಾಣಿ ಕೇಂದ್ರದ ಉಪನಿರ್ದೇಶಕಿ ಡಾ|ಮಾಲತಿ ಆರ್. ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡ ‘ಮಹಾಜನ ವಾಣಿ’ ಬಾನುಲಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಸಭೆಯ ಅಧ್ಯಕ್ಷತೆ ವಹಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಮತ್ತು ಶಾಲಾ ಶಿಕ್ಷಕಿ ವಾಣಿ ಪಿ.ಎಸ್ ಶುಭಹಾರೈಸಿದರು. ವಿದ್ಯಾರ್ಥಿನಿ ಶರಣ್ಯ.ಪಿ.ಜೆ ಪ್ರಾಸ್ತಾವಿಕ ಮಾತನ್ನಾಡಿದಳು. ವಿದ್ಯಾರ್ಥಿಗಳಾದ ಸಂಪತ್.ಕೆ ಸ್ವಾಗತಿಸಿ ವಿಲ್ಸನ್ ಶರುಣ್ ಕ್ರಾಸ್ತಾ ವಂದಿಸಿದರು. ವರಲಕ್ಷ್ಮಿ.ಎನ್ ಕಾರ್ಯಕ್ರಮ ನಿರೂಪಿಸಿದಳು.






















