Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

30 June 2009

ನೀರ್ಚಾಲಿನಲ್ಲಿ ವಿದ್ಯಾರಂಗ ಆರಂಭ

"ನಮ್ಮಲ್ಲಿರುವ ಪ್ರತಿಭೆಗಳನ್ನು ಸುಪ್ತವಾಗಿರಿಸಬಾರದು, ಅವುಗಳನ್ನು ಅನಾವರಣಗೊಳಿಸಬೇಕು. ಪ್ರತಿಭೆಯ ಪ್ರಕಟಣೆಗೆ ಭಾಷೆ ತೊಡಕಾಗಬಾರದು. ವಿದ್ಯಾರಂಗ ವೇದಿಕೆಯ ಮೂಲಕ ನಿಮ್ಮ ಪ್ರತಿಭೆ ಇನ್ನಷ್ಟು ವಿಕಾಸಗೊಳ್ಳಲಿ "ಎಂದು ಹಿರಿಯ ಸಂಸ್ಕೃತ ಅಧ್ಯಾಪಕ ಎಸ್.ವಿ.ಭಟ್ ಅಭಿಪ್ರಾಯಪಟ್ಟರು. ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ೨೬.೦೬.೨೦೦೯ ಶುಕ್ರವಾರದಂದು ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧ್ಯಾಪಕಿ ಭುವನೇಶ್ವರಿ ಉಪಸ್ಥಿತರಿದ್ದರು. ಶೃತಿ.ವೈ ಕಳೆದ ಅಧ್ಯಯನ ವರ್ಷದ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ವಿನೀತ್ ಶಂಕರ್.ಎಚ್ ಸ್ವಾಗತಿಸಿ ಸ್ಪೂರ್ತಿ.ಕೆ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ಜರಗಿದವು.

26 June 2009

ಶತಮಾನದ ಹೊಸ್ತಿಲಲ್ಲಿ ಸನ್ನಡತೆಯ ಸಭೆ: ಖಂಡಿಗೆ ಶಾಮ ಭಟ್

“ಕಾಸರಗೋಡಿನ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಗಳನ್ನು ನಿರ್ಮಿಸಿದ ಮಹಾಜನ ವಿದ್ಯಾಸಂಸ್ಥೆ ಶತಮಾನದ ಹೊಸ್ತಿಲಿನಲ್ಲಿದೆ. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿಯ ಲಕ್ಷ್ಯವಿರಿಸಿ ನಡೆದ ಸಭೆ ಇಲ್ಲಿನ ಜನ ಸ್ಪಂದನಕ್ಕೆ ಮಾದರಿಯಾಗಿದೆ. ಶತಮಾನದ ಆಚರಣೆಗೆ ಇದು ನಮಗೆ ಸ್ಪೂರ್ತಿ ನೀಡುತ್ತದೆ. ಶಾಲೆ ಮತ್ತು ವಿದ್ಯಾರ್ಥಿಗಳ ಪ್ರಗತಿಯಲ್ಲಿ ರಕ್ಷಕ ಶಿಕ್ಷಕ ಸಂಘದ ಪಾತ್ರ ಮಹತ್ತರವಾದದ್ದು" ಎಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ವ್ಯವಸ್ಥಾಪಕ ಖಂಡಿಗೆ ಶ್ಯಾಮ ಭಟ್ ಅಭಿಪ್ರಾಯಪಟ್ಟರು. ಅವರು ದಿನಾಂಕ ೨೫.೦೬.೨೦೦೯ ಗುರುವಾರದಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಜರಗಿದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಮಾರ್ಗದರ್ಶಕರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಅಬ್ಬಾಸ್ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವರದಿ ವಾಚಿಸಿದರು. ಕೆ.ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಹಿರಿಯ ಅಧ್ಯಾಪಕ ಎಸ್.ವಿ.ಭಟ್ ಧನ್ಯವಾದ ಸಮರ್ಪಿಸಿದರು.

24 June 2009

ಚಿತ್ರ - ಆಶಿತ್ ಕೃಷ್ಣ ಉಪಾಧ್ಯಾಯ

ಬೇಸಗೆ ರಜಾದ ದೀರ್ಘ ಬಿಡುವಿನ ನಂತರ ನಮ್ಮ ವಿದ್ಯಾರ್ಥಿಗಳು ಈಗ ಚಿತ್ರಗಳನ್ನು ಹೊತ್ತು ತರುತ್ತಿದ್ದಾರೆ. ಮಳೆಗಾಲದ ಪುಳಕಕ್ಕೆ ಈ ಚಿತ್ರವನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ. ಸ್ವೀಕರಿಸಿ.

22 June 2009

ಕವನ-ಸೊಬಗಿನ ಪ್ರಕೃತಿ

-ಶ್ರೀವಾಣಿ.ಕೆ

ಮರಗಿಡಗಳ ತಾಯ್ನೆಲವಿದು

ಬನವನಗಳ ನಾಡು

ದಿನದಿನವೂ

ತಂಪೆರೆಯುವ ವನದೇವಿಯ ಬೀಡು

ಈ ಮಣ್ಣಿನ ಈ ನಾಡಿನ

ಹಿರಿಮೆಯದೆಂತೋ

ಈ ನಾಡಿನ ಸ್ವಾತಂತ್ರ್ಯಕೆ

ಹೋರಾಡಿದವರೆನಿತೋ

ಶ್ರೀಗಾಂಧಿಯ ಆದರ್ಶವ

ಪಾಲಿಪ ನಾಡು

ಮತಜಾತಿಯ ಮರೆತಿಹ ಇದು

ದೇವರ ಬೀಡು

ಸೌಂದರ್ಯವ ತುಂಬಿರುವ

ನದಿಹೊಳೆಗಳ ನೋಡು

ಗಿರಿಶಿಖರದ ಉನ್ನತಿಯಲಿ

ಮೆರೆಯುತಿಹುದು ಕಾಡು

ಮೃಗಪಕ್ಷಿಯ ನಲಿವಿರುವುದು

ಇದು ಪ್ರಕೃತಿಯ ಬೆಡಗು

ಮನಮೋಹಕ ಸೌಂದರ್ಯದ

ಭೂ ತಾಯಿಯ ಸೊಬಗು

ಜನಮನಗಳ ಸಮ್ಮಿಲನವು

ತರುತಿಹವು ಹರುಷವು

ಮತಭಾಷೆಯ ಮರೆತಿಹರು

ಹರುಷದಿ ಒಗ್ಗೂಡುವರು

ಪರಿಸರವೇ ನಮ್ಮುಸಿರು

ಅದರಿಂದಲೇ ನಾವು

ಸುಖವಿರುವುದು ಅದನುಳಿಸಿದರೆ

ಭಾಗಿಯಾಗೋಣ ಅದರಲಿ ನಾವು ನೀವು.

19 June 2009

ಮಳೆಗಾಲ ಆರಂಭವಾಗಿದೆ, ಜೊತೆಗೆ ಫಿವರ್ ಕ್ಲಿನಿಕ್ ಕೂಡಾ

ಬದಿಯದ್ಕದಲ್ಲಿರುವ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಶಾಲೆಯಲ್ಲಿ ನಿನ್ನೆ ಫಿವರ್ ಕ್ಲಿನಿಕ್ ಜರಗಿತು. ವಿದ್ಯಾರ್ಥಿಗಳು ಇ ಹೊಸ ಪ್ರಯೋಗದ ಪ್ರಯೋಜನವನ್ನು ಪಡೆದುಕೊಂಡರು. ಹೊಸ ಹೊಸ ಜ್ವರಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಸಹಕರಿಸಿದ ಆರೋಗ್ಯ ಇಲಾಖೆಯ ಡಾ ಅನಿಲ್, ಗೋಪಾಲಕೃಷ್ಣ, ಜೋಸೆಫ್, ಪಂಕಜಾಕ್ಷ ಮತ್ತು ಪೂಮಣಿ ಇವರಿಗೆ ನಮ್ಮ ಅನಂತ ಧನ್ಯವಾದಗಳು.

12 June 2009

ರಜಾಕಾಲದ ಅನುಭವ -ಅಜೇಯಕೃಷ್ಣ. ಕೆ

ನನಗೆ ಮಾರ್ಚ್ ಇಪ್ಪತ್ತೇಳರಂದು ೯ನೇ ತರಗತಿಯ ಎಲ್ಲಾ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಯಿತು. ಎಪ್ರಿಲ್ ೨ ರಂದು ನಾನು ಸ್ಕೌಟ್ ರಾಜ್ಯಪುರಸ್ಕಾರ ಪ್ರಿಟೆಸ್ಟ್ ಶಿಬಿರದಲ್ಲಿ ಸಂತಸದಿಂದ ಭಾಗವಹಿಸಿದೆ. ನಂತರ ನಾನು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಎರಡು ತಿಂಗಳ ಕಾಲ ಜರಗಿದ ವಸಂತ ವೇದಪಾಠ ಶಿಬಿರದಲ್ಲಿ ಭಾಗವಹಿಸಿದೆ. ಅಲ್ಲಿ ಮೇ ೨೧ ರಂದು ಶಿವ ಪಂಚಾಕ್ಷರಿ ಯಜ್ಞ ನಡೆಯಿತು. ಮೇ ೨೬ ರಂದು ನನಗೆ ರಾಜ್ಯ ಪುರಸ್ಕಾರ ಪರಿಕ್ಷೆಯಲ್ಲಿ ಭಾಗವಹಿಸಲಿತ್ತು. ವೇದಪಾಠ ಮುಕ್ತಾಯವಾದ ತಕ್ಷಣ ನಾನು ಆ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದೆ. ಮೇ ೨೯ ರಂದು ಮುಕ್ತಾಯವಾದ ಆ ಪರೀಕ್ಷೆ ಬಹಳ ಸುಲಭವಾಗಿತ್ತು. ಪುನಃ ಶಾಲೆ ಆರಂಭವಾಗುವ ಸಮಯವೂ ಸನ್ನಿಹಿತವಾಯಿತು. ನಾನು ಶಾಲೆಯ ಬಾಗಿಲು ತೆರೆಯುವುದನ್ನೇ ಕಾಯಲು ಆರಂಭಿಸಿದೆ.

10 June 2009

ಡಾ| ಕಯ್ಯಾರ ಕಿಞ್ಞಣ್ಣ ರೈ - ತೊಂಭತ್ತೈದು : ಶುಭಾಶಯಗಳು

ನಮ್ಮ ಹೆಮ್ಮೆಯ ಹಳೆ ವಿದ್ಯಾರ್ಥಿ, ಗಡಿ ಹೋರಾಟದ ಅಧ್ವರ್ಯು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಹಿರಿಯ ಕವಿ, ಸಾಹಿತಿ ಕಯ್ಯಾರ ಕಿಞ್ಞಣ್ಣ ರೈ ಇವರಿಗೆ ಮೊನ್ನೆ ತೊಂಭತ್ತೈದು ವರ್ಷ ಪ್ರಾಯ ಪೂರ್ತಿಯಾಗಿದೆ. ನಾಡೋಜ ಪ್ರಶಸ್ತಿ ವಿಜೇತ, ಬಹುಮುಖ ಪ್ರತಿಭಾನ್ವಿತ, ಅತ್ಯುತ್ತಮ ಶಿಕ್ಷಕ ಪ್ರಸಸ್ತಿ ವಿಜೇತ ಅಧ್ಯಾಪಕನಿಗೆ ನಮ್ಮ ನಮನಗಳನ್ನು ಸಲ್ಲಿಸುತ್ತಿದ್ದೇವೆ.

07 June 2009

ವಿಶ್ವ ಪರಿಸರ ದಿನ - ಸಸಿ ವಿತರಣೆ

ಮೊನ್ನೆ ೫ ನೇ ತಾರೀಕಿನಂದು ವಿಶ್ವ ಪರಿಸರ ದಿನ, ನಮ್ಮಲ್ಲೂ ಆ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ‘ನನ್ನ ಮರ’ ಯೋಜನೆಯ ಅಂಗವಾಗಿ ಸರಕಾರ ವಿತರಿಸಿದ ಮಹೋಗನಿ, ಮಂದಾರ ಇತ್ಯಾದಿ ಗಿಡಗಳನ್ನು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಿದ್ಯಾರ್ಥಿಗಳಿಗೆ ಹಂಚುವುದರ ಮೂಲಕ ವಿಶ್ವ ಪರಿಸರ ದಿನ ಆಚರಣೆಗೆ ಚಾಲನೆ ನೀಡಿದರು. ಅಂದ ಹಾಗೆ ಕಳೆದ ವರ್ಷ ವಿತರಿಸಿದ ಗಿಡಗಳು ಈಗ ಮತ್ತೆ ಚಿಗುರೊಡೆಯುತ್ತಿವೆ.

05 June 2009

ಶಾಲಾರಂಭ - ಒಂದು ನೋಟ


ಶಾಲೆ ಮೊನ್ನೆ ಸೋಮವಾರ ಒಂದನೇ ತಾರೀಕು ಆರಂಭವಾಗಿದೆ, ಜೊತೆಯಲ್ಲಿ ಮಳೆಗಾಲವೂ. ಮಳೆಗೆ ಒದ್ದೆಯಾದ ದೂರವಾಣಿ ತಂತಿ ನಮ್ಮ ಬ್ರಾಡ್‌ಬ್ಯಾಂಡ್ ಲೋಕವನ್ನೆಲ್ಲ ಲಗಾಡಿ ತೆಗೆದು ಬಿಟ್ಟಿದೆ. ಅನಿವಾರ್ಯವಾಗಿ ನಮ್ಮ ಕೈಕಟ್ಟಿ ಹಾಕಿದೆ. ನಾಲ್ಕು ದಿನಗಳ ಸತತ ಪರಿಶ್ರಮದ ನಂತರ ಈ ಹಳ್ಳಿ ಮೂಲೆಯ ಶಾಲೆ ಅಂತರ್ಜಾಲಕ್ಕೆ ಮತ್ತೆ ತೆರೆದುಕೊಂಡಿದೆ. ಈಗ ಹೊಸ ಅವತಾರದೊಂದಿಗೆ ಕಂಪ್ಯೂಟರ್ ಲ್ಯಾಬ್ ಸಜ್ಜಾಗಿದೆ. ಎಲ್ಲಾ ೧೮ ಕಂಪ್ಯೂಟರ್‌ಗಳನ್ನೂ ಲ್ಯಾನ್ ಮೂಲಕ ಬಂಧಿಸಿಡುವ ಪ್ರಯತ್ನ ಮಾಡಿದ್ದೇವೆ. ಈ ಬಾರಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಕಡ್ಡಾಯ ಇಂಟರ್‌ನೆಟ್ ಶಿಕ್ಷಣವೂ ಇದೆ. ಈ ಮಧ್ಯೆ ಶಾಲಾ ಪ್ರವೇಶೋತ್ಸವವನ್ನು ಉಚಿತ ಪುಸ್ತಕ ವಿತರಿಸುವುದರೊಂದಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ದಿವಾಕರ ಮಾನ್ಯ ಇವರು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಅಬ್ಬಾಸ್ ಅವರ ಸಮ್ಮುಖದಲ್ಲಿ ಉದ್ಘಾಟಿಸಿದ್ದಾರೆ. ಫೋಟೋ ನಿಮ್ಮ ಮುಂದೆ ಇರಿಸಿದ್ದೇವೆ. ಈ ಶೈಕ್ಷಣಿಕ ವರ್ಷದ ಪ್ರತಿಭೆಗಳನ್ನು ಶೀಘ್ರ ಹೊತ್ತು ತರುತ್ತೇವೆ. ಹಿಂದೆ ನೀಡಿದಕ್ಕಿಂತಲೂ ಮಿಗಿಲಾದ ಪ್ರೋತ್ಸಾಹವನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ. ಆಗದೇ....

28 May 2009

ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ನಮ್ಮ ಬ್ಲಾಗ್ ಕುರಿತ ಬರಹ

ರಜಾ ಕಾಲದ ಕೊನೆ ದಿನಗಳನ್ನು ಎಣಿಸಲು ಆರಂಭಿಸಿದ್ದೇವೆ. ಈ ಮಧ್ಯೆ ಮಂಗಳೂರು ಆವೃತ್ತಿಯ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಿಟಿ ಹೆರಾಲ್ಡ್ ಪುರವಣಿಯಲ್ಲಿ ನಮ್ಮ ಬ್ಲಾಗ್ ಕುರಿತಾದ ಪ್ರಶಂಸಾತ್ಮಕ ಬರಹ ಪ್ರಕಟವಾಗಿದೆ. ಶನಿವಾರದ ಪುರವಣಿಯಲ್ಲಿ ಸಿಬಂತಿ ಪದ್ಮನಾಭ ಬರೆದ ಈ ಬರಹ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನೇನು, ಕೆಲವೇ ದಿನಗಳಲ್ಲಿ ಶಾಲೆ ಆರಂಭವಾಗಲಿದೆ. ಬೇಸಿಗೆಯ ಬೇಗೆಯಲ್ಲಿ ಮಲಗಿದ್ದ ಪ್ರತಿಭೆಗಳನ್ನು ಹೊತ್ತು ನಿಮ್ಮ ಮುಂದೆ ಸದ್ಯದಲ್ಲೇ ಪ್ರತ್ಯಕ್ಷವಾಗುತ್ತೇವೆ ಎಂಬ ವಿಶ್ವಾಸವಿದೆ.

08 May 2009

ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಿದೆ - ೯೮%

ಕೇರಳ ರಾಜ್ಯ ವಿದ್ಯಾಭ್ಯಾಸ ಇಲಾಖೆ ಕಳೆದ ವರ್ಷ ನಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಇಂದು ಬಂದಿದೆ. ನಮ್ಮ ಶಾಲಾ ವಿದ್ಯಾರ್ಥಿಗಳು ೯೮% ಫಲಿತಾಂಶ ತಂದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದರಲ್ಲಿ ಮೊತ್ತಮೊದಲ ಬಾರಿಗೆ ೯ ಮಂದಿ ವಿದ್ಯಾರ್ಥಿಗಳು ಎಲ್ಲಾ ೧೦ ವಿಷಯಗಳಲ್ಲೂ ಎ-ಪ್ಲಸ್ ಗ್ರೇಡ್ ಪಡೆದು ಶಾಲೆಯ ಗೌರವವನ್ನು ಹೆಚ್ಚಿಸಿದ್ದಾರೆ. ಈ ಗೌರವದಲ್ಲಿ ಪಾಲುದಾರರಾದ ಅದಿತಿದೇವಿ.ಎಸ್, ಅನುಪಮಾ ಪಿ.ಎಸ್, ಧನ್ಯಶ್ರೀ.ಎಚ್, ನಮೃತಾ ಎಂ.ಎಸ್, ಪಾವನಾ. ಇ, ವೈಶಾಲಿ.ಕೆ.ಎನ್, ನರಸಿಂಹ ಕಿಶನ್. ಪಿ, ನವೀನಕೃಷ್ಣ.ಕೆ, ರಾಮರಂಜನ್.ಕೆ ಇವರಿಗೆ ನಮ್ಮ ಅನಂತ ಶುಭಾಶಯಗಳು. ಕಾರಣಾಂತರಗಳಿಂದ ಒಬ್ಬಳು ಪರಿಕ್ಷೆ ಬರೆದಿರಲಿಲ್ಲ, ಇಬ್ಬರು ಇಂಗ್ಲೀಷ್ ಪರಿಕ್ಷೆಯಲ್ಲಿ ಎಡವಿದ್ದಾರೆ. ಶಾಲಾ ಸರಾಸರಿಯು ರಾಜ್ಯ ಸರಾಸರಿಗಿಂತ ಹೆಚ್ಚಿದೆ ಎನ್ನುವುದು ಗಮನಿಸಬಹುದಾದ ಇನ್ನೊಂದು ಅಂಶ.

06 May 2009

ಖಂಡಿಗೆ ಶ್ರೀಕೃಷ್ಣ ಭಟ್, ಕೇರ - ಅಸ್ತಂಗತ

ನಮ್ಮ ಶಾಲಾ ಆಡಳಿತ ಮಂಡಳಿಯ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದ, ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ, ಖಂಡಿಗೆ ಮನೆತನದ ಗೌರವಾನ್ವಿತರಾದ ಖಂಡಿಗೆ ಶ್ರೀಕೃಷ್ಣ ಭಟ್, ಕೇರ ೦೪.೦೫.೨೦೦೯ ಸೋಮವಾರ ಸಂಜೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಜೀವನದ ಕೊನೆಯ ಕ್ಷಣದ ತನಕವೂ ಅವರು ತಮ್ಮ ಜವಾಬ್ದಾರಿಗಳಲ್ಲಿ ಸಕ್ರಿಯರಾಗಿದ್ದರು. ಅಡಿಕೆ ಪತ್ರಿಕೆಯ ಪ್ರಕಾಶಕರಾಗಿ, ಪ್ರತಿಷ್ಟಿತ ‘ಕ್ಯಾಂಪ್ಕೊ’ದ ಅಧ್ಯಕ್ಷರಾಗಿ ಅವರು ನಿರ್ವಹಿಸಿದ ಸಾಮಾಜಿಕ ಸೇವೆಗಳು ಅನೇಕ. ನಮ್ಮ ಬ್ಲಾಗ್ ಲೋಕಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಚೇತನಕ್ಕೆ ನಾವು ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.

05 May 2009

ಚಿತ್ರ ೧೩ - ಆಧಿಶ್ ಎನ್. ಕೆ

ರಜೆ ಒಂದು ತಿಂಗಳು ಕಳೆದಿದೆ. ಕಾಂಗರೂ ಒಂದು ಹೊರಟು ತಯಾರಾಗಿದೆ. ಅಂದ ಹಾಗೆ ನಮ್ಮ ಶಾಲೆಯ ಹೆಚ್ಚಿನ ವಿದ್ಯಾರ್ಥಿಗಳು ಕುಮಾರಮಂಗಲ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ, ಬ್ಯುಸಿಯಾಗಿದ್ದಾರೆ. ಈ ಮಧ್ಯೆ ತುಂಬಾ ವಿಶ್ರಾಂತಿಯ ನಡುವೆ ನಮ್ಮ ಬ್ಲಾಗ್ ಅಪ್‌ಡೇಟ್ ಆಗುತ್ತಿದೆ.

24 April 2009

ಧನ್ಯವಾದಗಳು ನಿಮಗೆ.......

ವಿದ್ಯಾರ್ಥಿಗಳ ಪ್ರತಿಭೆಯನ್ನು ನಿಜಾರ್ಥದಲ್ಲಿ ಜಾಗತಿಕವಾಗಿ ಹೊರಹಮ್ಮಿಸಲು ನಾವು ಪಟ್ಟ ಶ್ರಮ ಸಾರ್ಥಕವಾಗಿದೆ ಅನಿಸುತ್ತಿದೆ. ನಮ್ಮ ಬ್ಲಾಗ್ ಫಾಲೋವರ್ ಸಂಖ್ಯೆ ಅಜೇಯ ಅರ್ಧಶತಕವನ್ನು ದಾಖಲಿಸಿದೆ. ನಾನು ನೋಡಿದ ಕನ್ನಡದ ಬ್ಲಾಗ್‌ಗಳಲ್ಲಿ ಇಷ್ಟು ಫಾಲೋವರ್‌ಗಳಿರುವ ಇನ್ನೊಂದು ಬ್ಲಾಗ್ ಇಲ್ಲ. ಇಷ್ತು ಮಾತ್ರವಲ್ಲ ಅಲ್ಪ ಕಾಲದಲ್ಲಿ ನಾವು ದಾಖಲಿಸಿದ ಹಿಟ್ಸ್ ಸಂಖ್ಯೆ ನಾವೇ ನಿಬ್ಬೆರಗಾಗುವಂತೆ ಬೆಳೆಯುತ್ತಿದೆ. ಅಂದ ಹಾಗೆ ನಮ್ಮ ಫಾಲೋವರ್ ಪಟ್ಟಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿದ್ದಾರೆ, ಹಳೆವಿದ್ಯಾರ್ಥಿಗಳಿದ್ದಾರೆ, ಅದಕ್ಕಿಂತಲೂ ಮುಖ್ಯವಾಗಿ ನಮ್ಮ ಬೆನ್ನು ತಟ್ಟುವ ಹಿರಿಯ ಕನ್ನಡ ಬರಹಗಾರರಿದ್ದಾರೆ. ನಮ್ಮನ್ನು ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೆ ನಾವು ಚಿರಋಣಿಯಾಗಿರುತ್ತೇವೆ. ಈ ಪ್ರೀತಿ ಸದಾ ಹೀಗೆಯೇ.... ಮುಂದುವರಿಯಲಿ.

17 April 2009

ಪ್ರಬಂಧ ೦೭ - ಕೋಲ್ಕತ್ತದಲ್ಲಿ ‘ಪಕ್ಷಿಲೋಕದಲ್ಲೊಂದು ಪ್ರಸಂಗ’


-ಅನುಪಮ.ಪಿ.ಎಸ್
ವಿಷ್ಣು ಶರ್ಮನ ಪಂಚತಂತ್ರ ಕಥೆಯನ್ನಾಧರಿಸಿ ಆಧುನಿಕ ಕಾಲಕ್ಕೆ ಹೋಲಿಸಿ ರಚಿಸಲಾದ ಡಾಎಚ್.ವಿ. ವೇಣುಗೋಪಾಲ್ ರ ‘ಪಕ್ಷಿಲೋಕದಲ್ಲೊಂದು ಪ್ರಸಂಗ’ ನಾಟಕವನ್ನು ಅಪೂರ್ವ ಕಲಾವಿದರು ವಿದ್ಯಾನಗರದ ಚಿನ್ಮಯ ವಿದ್ಯಾಲಯದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಕ್ಕಳ ನಾಟಕೋತ್ಸವಕ್ಕಾಗಿ ಆರಿಸಿದ್ದರು.

ಅಪೂರ್ವ ಕಲಾವಿದರು ಇದರ ಅಧ್ಯಕ್ಷ ಉಮೇಶ್ ಸಾಲ್ಯಾನ್ ನಮ್ಮ ನಾಟಕ ತಂಡದ ನಿರ್ದೇಶಕರು. ಪುಷ್ಪರಾಜ್, ಜಾಹ್ನವಿ, ವಾಸು ಬಾಯಾರ್, ರೀನಾ, ಗೋಪಾಲ್, ಸುರೇಂದ್ರ ಮೊದಲಾದವರು ಸಹಾಯಕರಾಗಿದ್ದ ನಮ್ಮ ತಂಡಕ್ಕೆ ಮೇ ತಿಂಗಳಿಡೀ ಸತತ ತರಬೇತಿ ನೀಡಿದ್ದರು. ನಾಟಕದ ಪಾತ್ರಧಾರಿಗಳಾದ ನಾವು ಹನ್ನೆರಡು ಮಂದಿ ಶ್ರಮ ವಹಿಸಿ ಕಾಸರಗೋಡಿಗೆ ಕೀರ್ತಿ ತರುವ ಮಹದಾಸೆ ಹೊತ್ತಿದ್ದೆವು. ಚಿನ್ಮಯ ವಿದ್ಯಾಲಯದ ಹತ್ತು ಮಂದಿ (ಮೇಘನಾ ಎಸ್, ಶ್ರೇಯಸ್ ಜಿ.ಕಾಮತ್, ಅಬಿತ್ ಕುಮಾರ್ ಬಿ, ಪವನ್ ಕೆ, ಸ್ವಾತಿ ಕೆ, ಮೇಘಶ್ಯಾಮ್ ಖಂಡಿಗೆ, ಆತ್ಮಿಕ ಎಂ, ಅಭಿಷೇಕ್ ವಿ.ಆರ್, ಅಂಜನ, ಕಾರ್ತಿಕ) ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿ ಮಿಥುನ್ ಶೆಟ್ಟಿ ಹಾಗು ನೀರ್ಚಾಲಿನ ಕನ್ನಡ ಮಾಧ್ಯಮ ಹೈಸ್ಕೂಲಿನಲ್ಲಿ ಕಲಿಯುವ ನಾನು ಯುದ್ಧ ವಿರೋಧಿ ನೀತಿಯೊಂದಿಗೆ ಶಾಂತಿಯನ್ನು ಸಾರುವುದೇ ನಮ್ಮ ನಾಟಕದ ಸಾರವಾಗಿತ್ತು.

ಅಂತೂ ಇಂತೂ ನಾನು ಕಲ್ಕತ್ತಾಗೆ ಹೋಗುವ ದಿನ ಬಂದೇ ಬಿಟ್ಟಿತು. ಮೇ ೩೦ ರಂದು ಚೀಲಕ್ಕೆ ಬಟ್ಟೆಬರೆ, ತಿಂಡಿ ತಿನಿಸುಗಳನ್ನು ತುಂಬಿಸಿಕೊಂಡು ಹಿರಿಯರ ಆಶೀರ್ವಾದ ಪಡೆದು ಸಂತೋಷದಿಂದ ಹೊರಟೆವು. ಮಧ್ಯಾಹ್ನ ೨ ಗಂಟೆಗೆ ರೈಲುಗಾಡಿ ಎಂದು ಮೊದಲೇ ತಿಳಿದಿದ್ದರಿಂದ ರೈಲ್ವೇ ನಿಲ್ದಾಣಕ್ಕೆ ೧.೩೦ ಕ್ಕೆ ತಲುಪಿದೆವು. ಸರಿಯಾಗಿ ೨ ಗಂಟೆಗೆ ಪ್ರಯಾಣ ಆರಂಭವಾಯಿತು. ರಾತ್ರಿಯಾಗುತ್ತಿದ್ದಂತೆ ಊಟ ಮುಗಿಸಿ ಚೀಲಗಳನ್ನು ಭದ್ರಗೊಳಿಸಿ ನಿದ್ದೆಗೆ ಜಾರಿದೆವು. ಬೆಳಿಗ್ಗೆ ೭ ಗಂಟೆಗೆ ಚೆನ್ನೈ ಗೆ ತಲುಪಿ ಕಾಫಿ ಕುಡಿದು ಇನ್ನೊಂದು ರೈಲುಗಾಡಿಯನ್ನೇರಿದೆವು. ಹೊತ್ತು ಏರುತ್ತಿದ್ದಂತೆ ಸೆಕೆಯೂ ಏರುತ್ತಾ ಹೋಯಿತು.

ಊಟ ಮುಗಿಸಿ ಎಲ್ಲರೂ ಸ್ವಲ್ಪ ಹೊತ್ತು ವಿರಮಿಸಿದೆವು. ನಂತರ ಒಮ್ಮೆ ನಾಟಕ ಅಭ್ಯಾಸ ಮಾಡಿದೆವು. ಪದ್ಯ ಹಾಡಿ ಸಮಯ ಕಳೆದೆವು. ಊಟ ಮಾಡಿ ನಿದ್ದೆ ಹೋದೆವು. ಮರುದಿವಸವೂ ದಿನಚರಿ ಹೀಗೇ ಹೋಗುತ್ತಿತ್ತು. ದಾರಿಯಲ್ಲಿ ಕಾಣುತ್ತಿದ್ದ ಮನೋಹರ ದೃಶ್ಯಗಳನ್ನು ವೀಕ್ಷಿಸಿದೆವು. ಜೂನ್ ೧ ರಂದು ಮಧ್ಯಾಹ್ನ ೧.೩೦ ಕ್ಕೆ ಕಲ್ಕತ್ತಾಗೆ ತಲುಪಿ ಎರಡು ಟಾಟಾಸುಮೋಗಳಲ್ಲಿ ನಮ್ಮ ವಾಸಸ್ಥಳಕ್ಕೆ ತಲುಪಿದೆವು. ಅದೊಂದು ಫುಟ್ಬಾಲ್ ಸ್ಟೇಡಿಯಂ . ಅದರ ಕೊಠಡಿಗಳನ್ನು ನಾಟಕದಲ್ಲಿ ಭಾಗವಹಿಸಲು ಬಂದಿರುವವರಿಗೆ ಕೊಟ್ಟಿದ್ದರು. ಸ್ಟೇಡಿಯಂ ಬಹಳ ಸುಂದರವಾಗಿತ್ತು. ಅಲ್ಲಿಯ ನೀರು ಕಠಿಣವಾಗಿದ್ದರಿಂದ ಸ್ನಾನ ಮಾಡಿದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ.

ಹವಾಮಾನ, ನೀರು ಬದಲಾದ್ದರಿಂದ ಎಲ್ಲರ ಸ್ವರವೂ ಬಿದ್ದು ಹೋಗಿತ್ತು. ಗುರುಗಳಾದ ಪುಷ್ಪರಾಜ್ ನಮಗೆ ಔಷಧಿ ಕೊಡುತ್ತಿದ್ದರು. ಹಾಗಾಗಿ ನಾವು ಸ್ವಲ್ಪ ಸುದಾರಿಸಿದೆವು. ಸ್ವಲ್ಪ ಹೊತ್ತು ನಾಟಕ ಅಭ್ಯಾಸ ಮಾಡಿ ವಾಯು ವಿಹಾರಕ್ಕೆಂದು ಹೊರ ನಡೆದೆವು. ಪಶ್ಚಿಮ ಬಂಗಾಳವು ಪೂರ್ವ ರಾಜ್ಯವಾದ್ದರಿಂದ ಬೆಳಕು ಬೇಗನೇ ಬರುತ್ತಿತ್ತು. ಮರುದಿನ ನಾಟಕ ಇದ್ದುದರಿಂದ ನಮ್ಮ ಅಭ್ಯಾಸ ಹೆಚ್ಚುತ್ತಾ ಹೋಯಿತು. ನಾಟಕ ರವೀಂದ್ರ ಸದನದಲ್ಲಿ ನಡೆಯುತ್ತಿತ್ತು.

ಸಂಜೆ ಎಲ್ಲಾ ರಾಜ್ಯದವರು ಸೇರಿ ಒಂದು ಮೆರವಣಿಗೆ ಮಾಡಿ ರವೀಂದ್ರ ಸದನಕ್ಕೆ ಹೋದೆವು. ಅಲ್ಲಿ ನಮ್ಮ ತಂಡದ ಕೆಲವು ವಿದ್ಯಾರ್ಥಿಗಳನ್ನು ಪತ್ರಕರ್ತೆಯೋರ್ವೆ ಸಂದರ್ಶಿಸಿದಳು. ನಂತರ ಲಂಡನ್ ನವರ ನಾಟಕದ ಜೊತೆಗೆ ಮತ್ತೆರಡು ನಾಟಕ ನೋಡಿ ಕೊಠಡಿಗೆ ಮರಳಿದೆವು. ನಮ್ಮ ನಾಟಕ ಅಭ್ಯಾಸ ೮ ಗಂಟೆಯಿಂದ ೧೨.೩೦ ವರೆಗೆ ಮುಂದುವರಿಯಿತು. ಊಟ ಮುಗಿಸಿ ಎಲ್ಲರೂ ವೇಷ ಭೂಷಣಗಳನ್ನು ಕಟ್ಟಿಕೊಂಡು ರವೀಂದ್ರ ಸದನಕ್ಕೆ ಹೊರಟೆವು. ಅಲ್ಲಿ ಕೇಳಿದ ರಸಪ್ರಶ್ನೆಗೆ ನಮ್ಮ ತಂಡದವನೊಬ್ಬ ಉತ್ತರ ಹೇಳಿ ಬಹುಮಾನ ಗಳಿಸಿದನು. ಅಲ್ಲಿ ವೇಷ ಹಾಕಿ, ಸುಣ್ಣ ಬಣ್ಣ ಮುಖಕ್ಕೆ ಬಳಿದು ನಮ್ಮ ಶಕ್ತಿ ಮೀರಿ ನಾಟಕ ಮಾಡಿದೆವು. ನಮ್ಮ ನಾಟಕ ರಾತ್ರಿ ೭.೪೫ ರಿಂದ ೯ ಗಂಟೆಯವರೆಗೆ ನಡೆಯಿತು. ನಾವು ಮಾಡಿದ ಅಭ್ಯಾಸಕ್ಕೆ ತಕ್ಕ ಹಾಗೆ ಉತ್ತಮ ಪ್ರತಿಫಲ ಸಿಕ್ಕಿತು. ಕೋಲ್ಕತ್ತದವರಿಗೆ ನಮ್ಮ ನಾಟಕ ಮೆಚ್ಚುಗೆಯಾಯಿತು.

ಮರುದಿನ ಬೆಳಿಗ್ಗೆ ನಮ್ಮ ತಿರುಗಾಟ ಪ್ರಾರಂಭವಾಯಿತು. ಜೈನರ ದೇವಾಲಯಕ್ಕೆ ಮೊದಲು ಭೇಟಿ ನೀಡಿದೆವು. ಕನ್ನಡಿ ತುಂಡುಗಳಿಂದ ನಿರ್ಮಿಸಲಾಗಿದ್ದ ಅದು ಬಹಳ ಸುಂದರವಾಗಿತ್ತು. ನಂತರ ಕಾಳಿ ದೇವಸ್ಥಾನಕ್ಕೆ ಹೋದೆವು. ಬಳಿಕ ರಾಮಕೃಷ್ಣ ಪರಮಹಂಸರ ಆಶ್ರಮಕ್ಕೆ ತೆರಳಿ ಅಲ್ಲಿನ ಕೆಲವು ಸುಂದರ ಹೂದೋಟಗಳನ್ನು ಕಂಡೆವು. ಆ ದೇವಾಲಯವನ್ನು ಪ್ರತ್ಯೇಕ ರೀತಿಯ ಕಲ್ಲಿನಿಂದ ನಿರ್ಮಿಸಲಾಗಿತ್ತು. ಕೆಲವು ಕೆತ್ತನೆಗಳೂ ಅದರಲ್ಲಿತ್ತು. ಅಲ್ಲೇ ಹತ್ತಿರವಿರುವ ನದಿಯ ಸೊಬಗನ್ನು ನೋಡಿಕೊಂಡು ತಿರುಗಾಟ ಮುಂದುವರಿಸಿದೆವು. ಬಳಿಕ ಬಹಳ ಆಕರ್ಷಕವಾದ ಸಯನ್ಸ್ ಸಿಟಿಗೆ ತೆರಳಿ ಡೈನೋಸರ್ ಗಳ ಕಲಾಕೃತಿಗಳನ್ನು, ಜ್ವಾಲಾಮುಖಿಯನ್ನು ನೋಡಿದೆವು.

ಕನ್ನಡಿಗಳ ಲೋಕವಾಗಿದ್ದ ಮಿರರ್ ಮ್ಯಾಜಿಕ್ ಗೆ ಕಾಲಿರಿಸಿದೆವು. ಇನ್ನೊಂದು ಕಡೆ ವಿಜ್ಞಾನದ ಹಲವು ವಿಸ್ಮಯಗಳಿದ್ದವು. ಆ ವಿಸ್ಮಯಗಳನ್ನು ನೋಡಿಕೊಂಡು ಕುಳಿತಾಗ ಗಂಟೆ ೧೨.೩೦ ಆಗಿತ್ತು. ಬಳಿಕ ಉಪಾಹಾರ ಸೇವಿಸಿ ಮೆಟ್ರೋ ರೈಲಿನಲ್ಲಿ ಪಯಣಿಸಿದೆವು. ಮೆಟ್ರೋ ರೈಲು ಪೂರ್ತಿ ಹವಾನಿಯಂತ್ರಿತವಾದ ಕಾರಣ ಸೆಕೆಯ ಅನುಭವವಾಗಲಿಲ್ಲ. ಭಾರತದಲ್ಲೇ ಅತೀ ದೊಡ್ಡ ಪ್ಲಾನಿಟೋರಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪ್ಲಾನಿಟೋರಿಯಂಗೆ ಹೋದೆವು. ಗ್ರಹ, ಆಕಾಶ, ನಕ್ಷತ್ರಗಳ ಬಗ್ಗೆ ಅಲ್ಲಿ ವಿವರವಾಗಿ ಹೇಳಿದರು.

ಬಳಿಕ ಸುಂದರವಾಗಿರುವ ಹೌರಾ ಸೇತುವೆಯ ಮೂಲಕ ಪಯಣಿಸಿದ್ದು, ಹೀಗೆ ಪಯಣಿಸುತ್ತಿದ್ದಾಗ ತೂಗು ಸೇತುವೆಯಂತಿದ್ದ ೨ ಕಂಬಗಳಿರುವ ದೊಡ್ಡ ಸೇತುವೆ ಕಾಣಿಸುತ್ತಿತ್ತು. ಕೋಲ್ಕತ್ತಾ ನಗರದಲ್ಲಿ ವಾಹನಗಳ ಸಾಗರವೇ ಹರಿದು ಬಂದಂತೆ ಕಾಣಿಸುತ್ತಿತ್ತು. ಅಲ್ಲಲ್ಲಿ ಗಗನಚುಂಬಿ ಕಟ್ಟಡಗಳು ಕಾಣಿಸುತ್ತಿದ್ದವು. ಕೆಲವರು ಅಂಗಡಿಯಿಂದ ಕೆಲವು ಸಾಮಗ್ರಿಗಳನ್ನು ಖರೀದಿಸಿ ನಾಟಕ ಥಿಯೇಟರ್ ಗೆ ಹೋದೆವು. ಅಲ್ಲಿ ಒಂದೆರಡು ನಾಟಕ ನೋಡಿದೆವು.

ಕೊನೆಯ ದಿವಸವಾಗಿದ್ದರಿಂದ ಎಲ್ಲಾ ತಂಡದವರೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಬೇಕೆಂದು ಅಲ್ಲಿನವರು ಕೇಳಿಕೊಂಡಿದ್ದರು. ಆದ್ದರಿಂದ ನಾವು ಎರಡು ಪದ್ಯಗಳನ್ನು ಹೇಳಿದೆವು. ಅಲ್ಲಿಯವರೊಬ್ಬರು ನಮ್ಮ ನಾಟಕದ ಒಂದು ಪದ್ಯವನ್ನು ಇಂಗ್ಲೀಷಿನಲ್ಲಿ ಬರೆಯಿಸಿ ತೆಗೆದುಕೊಂಡರು. ಇದರಿಂದ ಎಲ್ಲರಿಗೂ ನಮ್ಮ ನಾಟಕ ಮೆಚ್ಚುಗೆ ಆಗಿದೆ ಎಂದು ತಿಳಿದೆವು. ಬೆಳಿಗ್ಗೆ ಎದ್ದು ಚಹಾ ಸೇವಿಸಿ ಶಾಪಿಂಗ್ ಗೆ ತೆರಳಿದೆವು. ‘ಸ್ವಭೂಮಿ’ ಎನ್ನುವ ಬಜಾರ್ ೧೨ ಗಂಟೆಗೆ ತೆರೆಯುವ ಕಾರಣ ನಾವೆಲ್ಲರೂ ಸಿಟಿ ಸೆಂಟರ್ ಬಜಾರ್ ಗೆ ಹೋಗಿ ನಮಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿ ವಾಸಸ್ಥಳಕ್ಕೆ ಮರಳಿದೆವು.

೧೨ ಗಂಟೆಗೆ ಹೊರಟು ರೈಲ್ವೇ ನಿಲ್ದಾಣ ತಲುಪಿದೆವು. ೩ ಗಂಟೆಗೆ ನಮ್ಮ ಪ್ರಯಾಣ ಪುನಃ ಆರಂಭವಾಯಿತು. ಮರುದಿನ ಸಂಜೆ ೫.೩೦ ಕ್ಕೆ ಚೆನ್ನೈ ತಲುಪಿದೆವು. ರಾತ್ರಿ ೮.೧೫ ಕ್ಕೆ ಕಾಸರಗೋಡಿಗೆ ಬರುವ ರೈಲಿಗೆ ಹತ್ತಿದೆವು. ಮರಳಿ ಗೂಡಿಗೆ ತಲುಪಿದ ಸಂತೋಷ ಒಂದೆಡೆಯಾದರೆ ಮನೆ ಆಹಾರ ಲಭಿಸಿತಲ್ಲಾ ಎಂಬ ಸಂತೊಷ ಇನ್ನೊಂದೆಡೆ. ಈ ಅವಕಾಶ ನಮ್ಮ ಪಾಲಿಗೆ ಒದಗಿದ ಸೌಭಾಗ್ಯವೇ ಸರಿ.

11 April 2009

ಸಂಭ್ರಮದ ವಿಷು ಶುಭಾಶಯಗಳು


ನಾವೆಲ್ಲ ರಜೆಯಲ್ಲಿ ಬಿದ್ದು ಹೋಗಿದ್ದೇವೆ. ಕರಾವಳಿಯ ಸುಡುಬೇಸಿಗೆಗೆ ಸೃಜನಶೀಲತೆ ಮತ್ತಷ್ಟು ಕಡಿಮೆಯಾಗಿದೆ ಅನಿಸುತ್ತಿದೆ. ನಾಡಿದ್ದು ವಿಷು. ಕೇರಳದ ದೊಡ್ಡ ಹಬ್ಬ. ಹೊಸ ಸಂವತ್ಸರವನ್ನು ಸ್ವಾಗತಿಸುವ ಪರ್ವ ಕಾಲ. ನಿಮಗೆಲ್ಲ ವಿಷು ಶುಭಾಶಯಗಳು.

07 April 2009

ಚಿತ್ರ ೧೨ - ನಮ್ರತಾ. ಎಂ.ಎಸ್

ಮತ್ತೆ ಒಂದು ಸುಂದರ ಚಿತ್ರವನ್ನು ನಿಮ್ಮ ಮುಂದೆ ಇರಿಸಿದ್ದೇವೆ, ಸ್ವೀಕರಿಸಿ

03 April 2009

ಪ್ರಬಂಧ ೦೬ - ಬಯಲು ಪ್ರವಾಸ

- ಅನುಪಮ ಪಿ.ಎಸ್

ನಮ್ಮ ಶಾಲೆಯ ಹಳೆವಿದ್ಯಾರ್ಥಿ, ಖ್ಯಾತ ಚಿತ್ರ ಕಲಾವಿದ ಪಿ.ಎಸ್. ಪುಣಿಂಚಿತ್ತಾಯರ ಮನೆಗೆ ಭೇಟಿ ಕೊಡುವ ಅಪೂರ್ವ ಅವಕಾಶ ಒಂದು ಬಾರಿ ನನಗೆ ದೊರೆತಿತ್ತು. ನಾನು‘ಪುಣಿಂಚಿತ್ತಾಯರು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದವರಲ್ಲವೆ? ಅವರ ಮನೆ ತುಂಬಾ ದೊಡ್ಡದಿರಬಹುದು. ಮನೆಯಲ್ಲಿ ತುಂಬಾ ಗೌಜಿ ಗದ್ದಲವಿರಬಹುದು. ಮನೆ ಸುತ್ತಲೂ ತುಂಬಾ ಜನರಿರಬಹುದು. ಅಂತಹ ಮಹಾನ್ ಕಲಾವಿದ ನಮ್ಮೊಂದಿಗೆ ಹೇಗೆ ವರ್ತಿಸಿದಾರು?’ ಎಂದೆಲ್ಲಾ ಆಲೋಚಿಸುತ್ತಿದ್ದೆ.

ನನ್ನ ಆಲೋಚನೆಗೆ ಪೂರ್ಣ ವಿರಾಮವಿತ್ತಂತೆ ಅವರ ಮನೆಯ ಗೇಟಿಗೆ ನಮ್ಮ ವಾಹನ ತಲುಪಿತು. ಅವರ ಮನೆಯ ಎದುರೇ ದೊಡ್ಡ ರಬ್ಬರ್ ತೋಟ. ಮನೆಗೆ ಮಾರ್ಗವೂ ಆ ತೋಟದ ನಡುವಿನಿಂದಲೇ ಬರುತ್ತಿತ್ತು. ಸರಿಯಾಗಿ ಹನ್ನೊಂದು ಗಂಟೆಗೆ ನಾವು ಅಲ್ಲಿಗೆ ತಲುಪಿದೆವು. ಮಾರ್ಗದಿಂದಲೇ ಅವರ ಮನೆ ಕಾಣಿಸುತ್ತಿತ್ತು. ಮನೆಯ ಹಿಂದೆ, ಮುಂದೆ ಎಲ್ಲ ಕಡೆಯೂ ಚಿತ್ರಗಳೇ ಕಾಣಿಸುತ್ತಿದ್ದವು. ಎಲ್ಲರೂ ಕಾರಿನಿಂದ ಇಳಿದೆವು. ಒಬ್ಬಾಕೆ ಮಹಿಳೆ ಮನೆಯಿಂದ ಹೊರ ಬಂದರು. ಅವರು ಪಿ.ಯಸ್ ಪುಣಿಂಚತ್ತಾಯರ ಪತ್ನಿಯೆಂದು ತಿಳಿಯಿತು.

ಆಗಲೇ ನಾವು ನಿರೀಕ್ಷಿಸುತ್ತಿದ್ದ ವ್ಯಕ್ತಿ ಹೊರಬಂದರು. ಸಂಪೂರ್ಣವಾಗಿ ಶಾಂತಚಿತ್ತದವರು. ನಗುಮುಖದವರು. ತಾನೊಬ್ಬ ದೊಡ್ಡ ಕಲಾವಿದ ಎಂಬ ಅಹಂ ಇಲ್ಲದವರು. ಮಕ್ಕಳೊಂದಿಗೆ ಮಗುವಿನಂತೆ ಬೆರೆಯುವವರು. ಭೇದಭಾವ ತೋರಿಸದವರು. ಹೀಗೆ ಹಲವು ಸದ್ಗುಣಗಳೇ ಹೊಂದಿದ ಅಪರೂಪದ ವ್ಯಕ್ತಿಯೇ ಆ ಮಹಾನ್ ಚೇತನ. ‘ಕಾಂಚನಗಂಗಾ’ ಎಂಬ ಹೆಸರಿನ ಅವರ ಮನೆ ಸುಂದರವಾಗಿತ್ತು. ಚಿತ್ರವಿರದ ಗೋಡೆಯಿರಲಿಲ್ಲ. ಪ್ರಶಸ್ತಿ ಇರದ ಶೆಲ್ಫ್ ಇರಲಿಲ್ಲ. ಒಂದೊಂದು ಚಿತ್ರವೂ ಸಾವಿರದಿಂದಾರಂಭಿಸಿ ಲಕ್ಷಗಟ್ಟಲೆ ರೂಪಾಯಿ ಬೆಲೆ ಬಾಳುವಂತಾದ್ದು. ನಾವೆಲ್ಲರೂ ಒಟ್ಟಿಗೆ ಕುಳಿತುಕೊಂಡೆವು. ಪುಣಿಂಚತ್ತಾಯರು ನಮ್ಮೆಲ್ಲರ ಪರಿಚಯ ಮಾಡಿಕೊಂಡರು.

ನಾನು ನೀರ್ಚಾಲು ಶಾಲೆಗೆ ಹೋಗುತ್ತಿರುವವಳು ಎಂದು ತಿಳಿದಾಗ ಅವರು ಕೂಡಾ ಅಲ್ಲಿನ ವಿದ್ಯಾರ್ಥಿಯೆಂದು ತಿಳಿಸಿದರು. ‘ಅದೊಂದು ಉತ್ತಮ ಶಾಲೆಯಾಗಿತ್ತು. ಮುಖ್ಯೋಪಾಧ್ಯಾಯರಾಗಿದ್ದ ಬಿ.ಎಂ ಸುಬ್ರಾಯ ಭಟ್ಟರು ಉತ್ತಮ ಅಧ್ಯಾಪಕರಾಗಿದ್ದರು’ ಎಂದು ಹೇಳಿದರು. ಇದರೊಂದಿಗೆ ತಮ್ಮ ಬಾಲ್ಯದ ಘಟನೆಗಳು, ಬಡತನದ ನಡುವೆಯೂ ತಾನು ಕಾಲೇಜು ಸೇರಿದ್ದು ಮುಂತಾದ ಹಲವು ಅನುಭವಗಳನ್ನು ನಮ್ಮೆಲ್ಲರ ಮುಂದೆ ಹರಡಿದರು.

ಸ್ವತಃ ತನ್ನ ಕೌಶಲ್ಯದಿಂದಲೇ ತಯಾರಿಸಿದಂತಹ ನೀರು ಬಿಸಿ ಮಾಡುವ ಉಪಕರಣವನ್ನು ತೋರಿಸಿ ವಿವರಿಸಿದರು. ಸೋಲಾರ್, ಗೋಬರ್ ಗೇಸ್, ರಬ್ಬರ್ ಶೀಟ್ ತಯಾರಿಸುವುದು ಹೇಗೆಂದು ಸವಿವರವಾಗಿ ಹೇಳಿದರು. ಗೋವನ್ನು ‘ಮಾತೆ’ಯೆಂದು ಪೂಜಿಸುವ ಅವರು ತಮ್ಮ ‘ಫೇನ್’ ಅಳವಡಿಸಿದ ಹಟ್ಟಿ, ದಿನಾಲೂ ದನಗಳಿಗೆ ಸ್ನಾನ ಮಾಡಿಸುತ್ತಿರುವ ಬಗ್ಗೆ ತಿಳಿಸಿ ತೋಟಕ್ಕೆ ಹಿಂಬಾಲಿಸಲು ಹೇಳಿದರು. ಕೇಳುತ್ತಿದ್ದ ಜುಳು ಜುಳು ನಾದದಿಂದ ಹತ್ತಿರದಲ್ಲೆಲ್ಲೋ ತೋಡೋ, ಹೊಳೆಯೋ ಇದ್ದೀತೆಂದು ಭಾವಿಸಿದೆ.

ತೋಟದಲ್ಲಿದ್ದ ಸ್ಲರಿ ಗೊಬ್ಬರ, ತುಂತುರು, ಹನಿ ನೀರಾವರಿ, ಸ್ಪ್ರಿಂಕ್ಲರ್, ವೆನಿಲ್ಲಾ ಗಿಡ ಮೊದಲಾದವುಗಳನ್ನು ತೋರಿಸಿ ವಿವರಿಸಿದರು. ಹತ್ತಿರವೇ ಒಂದು ಕೆರೆಯೂ ಇತ್ತು. ಅದರಿಂದಲೇ ತೋಟಕ್ಕೆ ನೀರು ಹಾಕುವುದೆಂದು ತಿಳಿಸಿದರು. ಒಂದು ಸರಿಗೆಗೆ ಒಂದು ಬಾಲ್ದಿ ಕಟ್ಟಲಾಗಿತ್ತು. ಅದರ ಮೇಲೆ ಮುಚ್ಚಳವಿತ್ತು. ಅದರ ಮಧ್ಯದಲ್ಲಿ ಒಂದು ಸಣ್ಣ ಬಟ್ಟಲಿನಂತೆ ಇತ್ತು. ಆ ಬಟ್ಟಲಿನೊಳಗೆ ಹಳದಿ ದ್ರವವಿದ್ದು, ಅದಕ್ಕೆ ಪಾರದರ್ಶಕವಾದ ಮುಚ್ಚಳವಿತ್ತು. ಬಾಲ್ದಿಯೊಳಗೆ ನೀರಿತ್ತು. ನೀರಿನಲ್ಲಿ ತೆಂಗಿಗೆ ರೋಗ ಬರಿಸುವಂತಹ ಕೂರ್ಬಾಯಿಗಳು ಬಿದ್ದಿದ್ದವು. ತೆಂಗಿನ ಮರವನ್ನು ರೋಗಗಳಿಂದ ರಕ್ಷಿಸಲು ಇದು ಸಹಾಯಕವಾಗುತ್ತದೆಯೆಂದೂ, ಕೂರ್ಬಾಯಿಗಳು ಆ ಬಟ್ಟಲಿನೊಳಗಿರುವ ದ್ರವದಿಂದ ಆಕರ್ಷಣೆ ಹೊಂದಿ ಬಂದು ನೀರಿಗೆ ಬೀಳುತ್ತವೆ ಎಂದು ತಿಳಿಸಿದರು.

ತೋಟದಲ್ಲಿ ಎಲ್ಲವನ್ನೂ ತೋರಿಸಿದ ನಂತರ ಒಂದು ಪುಟ್ಟ ಜಲಪಾತಕ್ಕೆ ಕರಕೊಂಡು ಹೋದರು. ಈ ಜಲಪಾತದ್ದೇ ಜುಳು ಜುಳು ನಾದ ಕೇಳುತ್ತಿದ್ದುದು ಎಂದು ಅರಿವಾಯಿತು. ನಾವೆಲ್ಲರೂ ಸಂತೋಷದಿಂದ ಆಡಿದೆವು. ಕೆಲವರು ಕಾಗದದ ದೋಣಿ ಮಾಡಿ ನೀರಿನಲ್ಲಿ ಬಿಟ್ಟರು. ನಾವು ನೀರಿನೊಂದಿಗೆ ಸ್ವಲ್ಪದೂರ ಹೋದೆವು. ನಂತರ ಹಿಂದೆ ಬಂದು ಬಂಡೆಕಲ್ಲಿನ ಮೇಲೆ ಕುಳಿತುಕೊಂಡೆವು. ಗಂಟೆ ಒಂದಾಯಿತು. ಕಲಾವಿದರ ಮನೆಗೆ ತೋಟದ ಮೂಲಕ ಸಾಗಿದೆವು. ಅವರ ಮನೆಯಲ್ಲಿ ಭಾರವನ್ನಳೆಯುವಂತಹ ಹಿಂದಿನ ಕಾಲದ ಕಲ್ಲುಗಳು, ಎತ್ತಿನ ಗಾಡಿಯ ಚಕ್ರವು ತಿಳಿಸುವ ಒಳ್ಳೆಯ ನೀತಿ, ಅವರ ಮಗ ಮಾಡಿದಂತಹ ಶಿಲ್ಪಕಲೆಗಳನ್ನು ತೋರಿಸಿ ವಿವರಿಸಿದರು. ಒಂದೂವರೆಗೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದೆವು.

ಊಟದ ನಂತರ ಹಲವು ವಿಷಯಗಳನ್ನು ಹೇಳಿ ನಮ್ಮ ಜ್ಞಾನ ಹೆಚ್ಚಿಸಿದರು. ಶಂಖದ ಮಹಿಮೆಯನ್ನು ಹೇಳಿದರು. ಶಂಖ ಊದುವುದು ಎಂದರೆ ಮೂಢ ನಂಬಿಕೆಯಲ್ಲ. ವೈಜ್ಞಾನಿಕವಾದ ಕಾರಣವೂ ಇದೆ ಎಂದು ವಿವರಿಸಿದರು. ಅನಂತರ ನಮಗೆಲ್ಲರಿಗೂ ಒಂದು ಚಿತ್ರ ಮಾಡಿ ತೋರಿಸಿದರು. ಒಂದೇ ನಿಮಿಷದಲ್ಲಿ ಸೂರ್ಯೋದಯದ ಚಿತ್ರವನ್ನು ಸುಂದರವಾಗಿ ಕಾಗದದ ಮೇಲೆ ಮೂಡಿಸಿದ್ದರು. ಸ್ವಲ್ಪ ಹೊತ್ತಿನಲ್ಲೇ ಪುಣಿಂಚತ್ತಾಯರ ಪತ್ನಿ ಎಲ್ಲರಿಗೂ ಉಪಾಹಾರ ತಯಾರಿಸಿ ತಂದಿಟ್ಟರು. ನಮ್ಮ ವಾಹನದ ಚಾಲಕರಾದ ಚಂದ್ರಶೇಖರ್ ಎಲ್ಲರಿಗೂ ಹಂಚಿದರು. ಸ್ವಲ್ಪ ಹೊತ್ತಿನಲ್ಲಿ ಇಬ್ಬರು ಪತ್ರಕರ್ತರು ಪುಣಿಂಚತ್ತಾಯರನ್ನು ಸಂದರ್ಶಿಸಲೆಂದು ಬಂದರು. ಅಂತಹ ಮಹಾನ್ ಕಲಾವಿದರ ಬಳಿ ನಾವೆಲ್ಲರೂ ಆಟೋಗ್ರಾಫ್ ತೆಗೆದುಕೊಂಡೆವು.

ಮೂರೂವರೆಗೆ ಸರಿಯಾಗಿ ಎಲ್ಲರೂ ಅಲ್ಲಿಂದ ಹೊರೆಟೆವು. ಅವರು ಸಂತೋಷದಿಂದ ನಮ್ಮನ್ನು ಬೀಳ್ಕೊಟ್ಟರು ನಾಲ್ಕೂವರೆಗೆ ಸರಿಯಾಗಿ ಮನೆಗೆ ತಲುಪಿದೆವು. ನಾನು ಭಾವಿಸಿದ್ದಕ್ಕಿಂತ ತುಂಬಾ ವ್ಯತ್ಯಾಸ ವ್ಯಕ್ತಿತ್ವದವರಾಗಿದ್ದರು ಪಿ.ಯಸ್ ಪುಣಿಂಚತ್ತಾಯ ಅವರು. ಒಂದು ಸ್ವಲ್ಪವೂ ಅಹಂ ಇರಲಿಲ್ಲ. ಕೆಲಸದವರೊಂದಿಗೆ ಕೂಡಾ ಪ್ರೀತಿಯಿಂದ ಮಾತನಾಡುತ್ತಿದ್ದರು. ಮನೆಯ ಸುತ್ತಮುತ್ತಲೂ ಪ್ರಶಾಂತ ವಾತವರಣವಿತ್ತು. ಇಂತಹ ಬಹುಮುಖ ವ್ಯಕ್ತಿತ್ವವುಳ್ಳ ನಿರಾಡಂಬರ, ಸರಳ ಜೀವನ ನಡೆಸುವ ಪಿ.ಯಸ್ ಪುಣಿಂಚತ್ತಾಯರ ‘ಗೃಹಸಂದರ್ಶನ’ ನಡೆಸಿದ ನಾವೇ ಭಾಗ್ಯವಂತರು ಎಂದು ಮನಸ್ಸಲ್ಲೇ ಭಾವಿಸಿದೆ! ನಮ್ಮನ್ನು ಇದಕ್ಕಾಗಿಯೇ ತಮ್ಮ ಸ್ವಂತ ವಾಹನದಲ್ಲಿ ಕರೆದೊಯ್ದ ಪ್ರೊ ಶ್ರೀನಾಥ್ ಕಾಸರಗೋಡು ಇವರಿಗೆ ನಾನು ಎಲ್ಲರ ಪರವಾಗಿ ಚಿರಋಣಿಯಾಗಿರುತ್ತೇನೆ.

31 March 2009

ಚಿತ್ರ ೧೧ - ಗಣೇಶ. ಎಂ.


ಇಂದಿನಿಂದ ನಮಗೂ ವಿದ್ಯಾರ್ಥಿಗಳಿಗೂ ಬೇಸಿಗೆ ರಜಾ. ಕೆಲವರು ಈ ವಿಮಾನದಲ್ಲಿ ಪ್ರವಾಸ ಹೊರಟಿದ್ದಾರೆ ಅಜ್ಜನ ಮನೆಗೆ, ಬೀಜದ ಗುಡ್ಡೆಗೆ. ಹಲಸು ಮಾವುಗಳ ಲೋಕಕ್ಕೆ. ಗಣೇಶ ಎಂ. ಬಿಡಿಸಿದ ಈ ಚಿತ್ರವನ್ನು ಈ ಸಂದರ್ಭಕ್ಕಾಗಿಯೇ ವಿಶೇಷವಾಗಿ ಆಯ್ಕೆ ಮಾಡಿದ್ದೇವೆ.

29 March 2009

ಚಿತ್ರ ೧೦ - ಶಿಲ್ಪಾ. ಎಂ


ಇಂದು ಭಾನುವಾರ ಶಾಲೆಗೆ ರಜಾದಿನ. ಇನ್ನೆರಡು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಆರಂಭವಾಗುತ್ತದೆ. ವಸಂತನ ಆಗಮನದ ಸಂದರ್ಭದಲ್ಲಿ ನಿಮ್ಮೆದುರು ಶಿಲ್ಪಾ ಬಿಡಿಸಿದ ಚಿತ್ರವನ್ನು ಇಡುತ್ತಿದ್ದೇವೆ.