Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

29 November 2011

ಚಿತ್ರ - ರಮೇಶ ನಾಯಕ್

ರಮೇಶ ನಾಯಕ್ ನಮ್ಮ ಶಾಲೆಯ ಎಂಟನೇ ತರಗತಿಯ ಹುಡುಗ. ತರಗತಿಯೊಳಗೆ ಸುಪ್ತವಾಗಿ ಉಳಿಯುತ್ತಿದ್ದವನ ಪ್ರತಿಭೆ ನಮ್ಮ ಚಿತ್ರಕಲಾ ಅಧ್ಯಾಪಕರ ಕೈಗೆ ಸಿಕ್ಕಿದ್ದರಿಂದ ಉಪಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿಯೂ ಆತ ಪ್ರಶಸ್ತಿಗಳಿಸುವಂತಾಯಿತು. ಶುಭಾಶಯಗಳು.

29 October 2011

“ಸೃಜನಶೀಲತೆಯಿಂದ ಆನಿಮೇಶನಿನ ಹೊಸ ಉತ್ಪನ್ನ: ಆಗಸ್ಟಿನ್ ಬರ್ನಾಡ್"

“ತಂತ್ರಜ್ಞಾನವನ್ನು ಕಲಿಕೆಯಲ್ಲಿ ಬಳಸಿಕೊಳ್ಳಬೇಕು. ೨೦೦೨ರಲ್ಲಿ ಶಾಲೆಗಳಲ್ಲಿ ಆರಂಭವಾದ ಐಟಿ ಎಟ್ ಸ್ಕೂಲ್ ಯೋಜನೆ ಪ್ರಸ್ತುತ ಮಾಹಿತಿ ತಂತ್ರಜ್ಞಾನ ಆಧಾರಿತ ಶಿಕ್ಷಣ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ನೀಡುವಷ್ಟರ ತನಕ ಬೆಳೆದು ನಿಂತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಆನಿಮೇಶನ್ ತರಬೇತಿಯೂ ವಿದ್ಯಾರ್ಥಿಗಳ ಎಲ್ಲ ಪಠ್ಯ ವಿಷಯಗಳ ಕಲಿಕೆಯಲ್ಲಿ ನೆರವಾಗಲಿದೆ. ಸೃಜನಶೀಲತೆ ಇದ್ದರೆ ಆನಿಮೇಶನ್ ತಂತ್ರಜ್ಞಾನದ ಮೂಲಕ ಹೊಸ ಉತ್ಪನ್ನವನ್ನು ನಾವು ಜಗತ್ತಿಗೆ ನೀಡಬಹುದು. ಆದ್ದರಿಂದ ಇಲ್ಲಿ ದೊರೆತ ಶಿಕ್ಷಣವನ್ನು ಮುಂದಿನ ಜೀವನದಲ್ಲಿ ಉಪಯೋಗಿಸಿಕೊಳ್ಳಿ” ಎಂದು ಕೇರಳ ವಿದ್ಯಾಭ್ಯಾಸ ಇಲಾಖೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಕಾಸರಗೋಡು ಜಿಲ್ಲಾ ಮಾಸ್ಟರ್ ಟ್ರೈನರ್ ಆಗಸ್ಟಿನ್ ಬರ್ನಾಡ್ ಅಭಿಪ್ರಾಯಪಟ್ಟರು. ಅವರು ಇಂದು ಅಪರಾಹ್ನ ನಮ್ಮ ಶಾಲೆಯಲ್ಲಿ ನಾಲ್ಕು ದಿನಗಳಿಂದ ಜರಗುತ್ತಿರುವ ‘ಆಂಟ್ಸ್ ಆನಿಮೇಶನ್’ ಕಾರ್ಯಕ್ರಮದ ಸಮಾರೋಪ ಭಾಷಣವನ್ನು ನೆರವೇರಿಸುತ್ತಾ ಮಾತನಾಡುತ್ತಿದ್ದರು.

ನೀರ್ಚಾಲಿನ ‘ಶಾರ್ಪ್ ಡಿಜಿಟಲ್ ಸ್ಟುಡಿಯೋ’ ಸಂಸ್ಥೆಯ ಮಾಲಕ ವೇಣುಗೋಪಾಲ ಆರೋಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆನಿಮೇಶನ್ ಸಾಧ್ಯತೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಾಹಿತಿ ತಂತ್ರಜ್ಞಾನ ವಿಭಾಗದ ಸಂಯೋಜಕ ಎಚ್. ಸೂರ್ಯನಾರಾಯಣ ಮತ್ತು ಸಂಪನ್ಮೂಲ ಅಧ್ಯಾಪಕ ಬಿ.ಸುಬ್ರಹ್ಮಣ್ಯ ಕೆದಿಲಾಯ ಉಪಸ್ಥಿತರಿದ್ದರು. ತರಬೇತಿ ಪಡೆದ ವಿದ್ಯಾರ್ಥಿಗಳಾದ ಶ್ರೀಶ.ಕೆ ಮತ್ತು ಸುಶೀಲಾ. ಎಸ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

ವಿದ್ಯಾರ್ಥಿಗಳಾದ ಅನುಶ್ರೀ ಸ್ವಾಗತಿಸಿ ಆದರ್ಶ ಎಚ್.ಎ ವಂದಿಸಿದರು. ಶ್ರದ್ಧಾ.ಎಸ್ ಪ್ರಾರ್ಥಿಸಿದರು ಮತ್ತು ಚೈತಾಲಿ.ಕೆ.ಎನ್ ಕಾರ್ಯಕ್ರಮ ನಿರೂಪಿಸಿದರು. ನಾಲ್ಕು ದಿನಗಳ ಆನಿಮೇಶನ್ ಶಿಬಿರದಲ್ಲಿ ವಿದ್ಯಾರ್ಥಿಗಳಾದ ಶಾಂತಿ.ಕೆ, ಶಶಾಂಕ ಶರ್ಮ.ಎಸ್, ವರ್ಷಾ.ಕೆ, ಸುಬ್ರಹ್ಮಣ್ಯ ಪ್ರಸಾದ.ಕೆ, ಮೇಘನಾ ಮತ್ತು ಅಜಿತ್ ವಿ.ಶರ್ಮ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಇಪ್ಪತ್ತು ಮಂದಿ ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡರು.

21 October 2011

‘ಆನಿಮೇಶನ್ ಸಾಧ್ಯತೆಗಳು ಅಪಾರ’: ಜಯದೇವ ಖಂಡಿಗೆ

“ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅತ್ಯಧಿಕ ಅವಕಾಶಗಳೊಂದಿಗೆ ತೆರೆದುಕೊಳ್ಳುತ್ತಿದೆ. ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಶಿಕ್ಷಣ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗುತ್ತಾ ಇದೆ. ಆನಿಮೇಶನ್, ಗ್ರಾಫಿಕ್ಸ್ ಇತ್ಯಾದಿ ರಂಗಗಳಲ್ಲಿ ಹೊಸ ಹೊಸ ಸಂಶೋಧನೆಗಳು ನಿರಂತರವಾಗಿ ಅನಾವರಣಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಈ ಆನಿಮೇಶನ್ ತರಬೇತಿ ಅವರ ವಿಕಾಸಕ್ಕೆ ದಾರಿದೀಪವಾಗಲಿ" ಎಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ನಾಲ್ಕು ದಿನಗಳ ‘ಆಂಟ್ಸ್ ಆನಿಮೇಶನ್’ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನೀರ್ಚಾಲಿನ ಸೈನೇಜ್ ಇಂಡಸ್ಟ್ರೀಸ್ ಸಂಸ್ಥೆಯ ಮಾಲಕ ಗಣೇಶ್ ಕಿರಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಆನಿಮೇಶನ್ ಸಾಧ್ಯತೆಗಳ ಕುರಿತು ಮಾಹಿತಿ ನೀಡಿದರು. ಶಾಲಾ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಸಂಯೋಜಕ ಎಚ್.ಸೂರ್ಯನಾರಾಯಣ ಪ್ರಾಸ್ತಾವಿಕ ಭಾಷಣ ಮಾಡಿದರು.

ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಪ್ರಸಾದ.ಕೆ ಸ್ವಾಗತಿಸಿ ಮೇಘನಾ ವಂದಿಸಿದರು. ಶಾಲಾ ವಿದ್ಯಾರ್ಥಿ ನಾಯಕಿ ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು. ನಾಲ್ಕು ದಿನಗಳ ಈ ತರಬೇತಿಯಲ್ಲಿ ಎಂಟು ಮತ್ತು ಒಂಬತ್ತನೇ ತರಗತಿಯ ಇಪ್ಪತ್ತು ಮಂದಿ ಆನಿಮೇಶನ್ ತರಬೇತಿ ಪಡೆಯಲಿದ್ದಾರೆ. ಸಂಪನ್ಮೂಲ ವಿದ್ಯಾರ್ಥಿಗಳಾಗಿ ಒಂಬತ್ತನೇ ತರಗತಿಯ ಮೇಘನಾ, ಹತ್ತನೇ ತರಗತಿಯ ಶಾಂತಿ.ಕೆ, ವರ್ಷ.ಕೆ, ಸುಬ್ರಹ್ಮಣ್ಯ ಪ್ರಸಾದ.ಕೆ, ಶಶಾಂಕ ಶರ್ಮ.ಎಸ್, ಅಜಿತ್. ವಿ. ಶರ್ಮ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳೇ ತರಬೇತಿ ನೀಡುವುದು ಈ ಕಾರ್ಯಕ್ರಮದ ವಿಶೇಷತೆ.

19 October 2011

ಮದಕಗಳನ್ನು ಉಳಿಸಿ: ಹರೀಶ್ ಹಳೆಮನೆ

“ಮದಕಗಳ ಮಧ್ಯಭಾಗದಲ್ಲಿರುವ ಜಾಗದಲ್ಲಿ ಸುತ್ತಲಿನ ಎತ್ತರದ ನೆಲದಿಂದ ಹರಿದುಬಂದ ಮಳೆನೀರು ಸಂಗ್ರಹವಾಗಿ ನಿಲ್ಲುತ್ತದೆ. ನಿಧಾನವಾಗಿ ಭೂಮಿಗೆ ಇಂಗುತ್ತದೆ. ಆದ ಕಾರಣ ಮದಕವನ್ನು ಒಂದು ವಿಶಾಲವಾದ ಇಂಗುಕೊಳವೆಂದೇ ಹೇಳಬಹುದು. ಇದರ ಪರಿಣಾಮ ಹತ್ತಿರದಲ್ಲಿರುವ ಕೆರೆ, ಬಾವಿಗಳಲ್ಲಿ ನೀರು ಒರತೆಯ ರೂಪದಲ್ಲಿ ಕಾಣಸಿಗುತ್ತದೆ. ಕೆಲವು ಕಡೆ ಕೆರೆಗಳನ್ನೂ ಮದಕಗಳೆಂದು ಹೇಳುತ್ತಾರೆ. ಸುರಂಗದ ನೀರಿನ ಸಂಗ್ರಹಕ್ಕೆಂದು ಮಾಡಿದ ಕೆರೆಗಳನ್ನು ಮದಕಗಳೆನ್ನುವುದು ವಾಡಿಕೆ. ಕೆರೆಗಳಿಂದ ನೀರನ್ನು ನೇರವಾಗಿ ನೀರಾವರಿಗಾಗಿ ಬಳಸುತ್ತಾರೆ. ಮದಕಗಳಿಂದ ನೇರವಾಗಿ ನೀರೆತ್ತುವ ಉದಾಹರಣೆಗಳು ಇಲ್ಲ. ಮದಕಗಳಿಂದ ಬರುವ ಒರತೆ ನೀರನ್ನು ಮಾತ್ರ ಕೃಷಿಗೆ ಬಳಸುತ್ತಾರೆ. ಆದ್ದರಿಂದ ಮದಕಗಳು ಹೆಚ್ಚು ಸುಸ್ಥಿರವಾದ ಜಲಮೂಲಗಳಾಗಿವೆ. ಮದಕಗಳ ಕೆಳಭಾಗದಲ್ಲಿರುವ ಕೃಷಿಭೂಮಿಗಳಿಗೆ ಪಂಪಿನ ಮೂಲಕ ನೀರಿನ ಹಾಯಿಸುವಿಕೆಯ ಪ್ರಮಾಣ ಕಡಿಮೆ ಸಾಕಾಗುತ್ತದೆ. ಇದರಿಂದಾಗಿ ನೀರಿನ ಶೋಷಣೆಯನ್ನು ಕಡಿಮೆ ಮಾಡಬಹುದು ಹಾಗೂ ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿರುವ ಮಾನವ ಸಂಬಂಧಗಳನ್ನು ಸುಧಾರಿಸಬಹುದು. ಎಂದು ಹವ್ಯಾಸಿ ಪತ್ರಕರ್ತ ಹರೀಶ್ ಹಳೆಮನೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ “ಮದಕ-ಸಂವಾದ” ಕಾರ್ಯಕ್ರಮದಲ್ಲಿ ಸ್ಲೈಡ್ ಪ್ರದರ್ಶನ ಸಹಿತ ಉಪನ್ಯಾಸವನ್ನು ನೀಡುತ್ತಾ ಮಾತನಾಡುತ್ತಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಕಾವ್ಯ ಸ್ವಾಗತಿಸಿ ಚೇತನ್‌ಕೃಷ್ಣ.ಸಿ ವಂದಿಸಿದರು. ಶ್ರವಣ್. ಬಿ ಕಾರ್ಯಕ್ರಮ ನಿರೂಪಿಸಿದರು.

12 October 2011

ಗೌತಮ್ ಬಿಡಿಸಿದ ಚಿತ್ರ

ಎಂಟನೇ ತರಗತಿಯಲ್ಲಿ ಈ ಬಾರಿ ನಮ್ಮ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವೂ ಆರಂಭವಾಗಿದೆ. ಮೊದಲ ತಂಡದಲ್ಲಿರುವ ಗೌತಮ್ ಚಿತ್ರ ಬಿಡಿಸುವುದರಲ್ಲಿ ತನ್ನ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ನೆನಪುಗಳನ್ನು ಈ ಮೂಲಕ ಮತ್ತೆ ಮಾಡಿಕೊಳ್ಳುತ್ತಿದ್ದೇವೆ.

10 October 2011

ಶುಭಾಶಯಗಳು, ಪೂರ್ವ ವಿದ್ಯಾರ್ಥಿಗಳಿಗೆ...


ಹಿಮಾಚಲ ಪ್ರದೇಶ ಸರಕಾರದ ವತಿಯಿಂದ ಜರಗುವ ಅಂತರ್ದೇಶೀಯ ಕುಲು ಫೆಸ್ಟಿವಲ್ ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಮೂವರು ಹಳೆ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ಕೇರಳದಿಂದ ಆಯ್ಕೆಯಾದ ಒಟ್ಟು ಇಪ್ಪತ್ತು ಮಂದಿಯಲ್ಲಿ ನಮ್ಮ ಶಾಲೆಯಲ್ಲಿ ಈ ಹಿಂದಿನ ವರ್ಷಗಳಲ್ಲಿ ವಿದ್ಯಾರ್ಜನೆ ಮಾಡಿದ ನೇತ್ರಾವತಿ, ಲಕ್ಷ್ಮಿ ಮತ್ತು ಧನ್ಯ ರಾಘವ ಸೇರಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಪಯ್ಯನ್ನೂರಿನ ಫೋಕ್ ಲ್ಯಾಂಡ್ ಕಲಾ ಶಾಲೆಯ ವಿದ್ಯಾರ್ಥಿಗಳಾದ ಇವರು ಹಿಮಾಚಲ ಪ್ರದೇಶದಲ್ಲಿ ತಿರುವಾದಿರಕ್ಕಳಿ, ಮಾರ್ಗಂ ಕಳಿ ಮತ್ತು ಒಪ್ಪನ ಕಲೆಗಳನ್ನು ಪ್ರದರ್ಶಿಸಲಿದ್ದಾರೆ. ಅವರಿಗೆ ನಮ್ಮ ಶುಭಾಶಯಗಳು.

08 October 2011

ಶ್ರೀ ಶಾರದಾ ಪೂಜಾ - ೨೦೧೧

ನಮ್ಮ ಶಾಲೆಯಲ್ಲಿ ವರ್ಷಂಪ್ರತಿ ಜರಗುವ ಶ್ರೀ ಶಾರದಾ ಪೂಜಾ ಕಾರ್ಯಕ್ರಮ ಅಷ್ಟಾವಧಾನ ಕಾರ್ಯಕ್ರಮ ಸಹಿತ ಮೊನ್ನೆ ೦೬.೧೦.೨೦೧೧ ಗುರುವಾರ ಜರಗಿತು.

03 October 2011

ಆದರ್ಶ ಬಿಡಿಸಿದ ಚಿತ್ರ


ಲ್ಲಕಟ್ಟ ಶಾಲೆಯಲ್ಲಿ ಏಳನೇ ತರಗತಿಯನ್ನು ಪೂರ್ತಿಗೊಳಿಸಿ ನಮ್ಮ ಶಾಲೆಯ ಎಂಟನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಆದರ್ಶ. ಎಚ್. ಎ ಇವನಿಗೆ ಬ್ಲಾಗ್ ಲೋಕಕ್ಕೆ ನಮ್ಮೆಲ್ಲರ ಸ್ವಾಗತಗಳು. ಗಣೇಶ ಚತುರ್ಥಿ ದಿನದ ಅಂಗವಾಗಿ ಮಧೂರು ಶ್ರೀ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ‘ಗಣೇಶ’ನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಗಳಿಸಿದ ಆದರ್ಶನಿಗೆ ಶುಭಾಶಯಗಳು.

20 September 2011

ರಸ್ತೆ ಸುರಕ್ಷಾ ಜಾಗೃತಿ ಕಾರ್ಯಕ್ರಮ

“ಮಾನವನ ಜೀವ ಅತ್ಯಂತ ಅಮೂಲ್ಯವಾದುದು. ದಿನವೊಂದರಲ್ಲಿ ರಸ್ತೆ ಅಪಘಾತಗಳಿಂದಾಗಿ ಇಹಲೋಕವನ್ನು ತ್ಯಜಿಸುತ್ತಿರುವ, ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರನ್ನು ಗಮನಿಸುವಾಗ, ನಾವು ರಸ್ತೆ ನಿಯಮಗಳ ಬಗ್ಗೆ ಎಷ್ಟು ಜಾಗೃತರಾಗಿರಬೇಕೆಂಬುದು ಅರಿವಾಗುತ್ತದೆ. ರಸ್ತೆ ನಿಯಮಗಳು ಕೇವಲ ವಾಹನ ಚಾಲಕರಿಗೆ ಮಾತ್ರವಲ್ಲ, ಪಾದಚಾರಿಗಳಿಗೂ ಅನ್ವಯವಾಗುತ್ತದೆ. ರಸ್ತೆಯನ್ನು ದಾಟುವಾಗ ಎಡಬಲಗಳನ್ನು ಸ್ಪಷ್ಟವಾಗಿ ವೀಕ್ಷಿಸಿ, ಯಾವುದೇ ವಾಹನಗಳು ಸಂಚರಿಸುತ್ತಿಲ್ಲವೆಂಬುದನ್ನು ಗಮನಿಸಿಯೇ ದಾಟಬೇಕು. ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸಬೇಕು. ವಾಹನ ಸವಾರರು ಸಡಿಲವಾದ ಉಡುಪುಗಳನ್ನು ಧರಿಸಬಾರದು. ರಾತ್ರಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರಿಗೆ ಬಿಳಿ ಬಣ್ಣದ ಉಡುಪುಗಳು ಉತ್ತಮ. ಕಾರು, ಜೀಪು ಮುಂತಾದ ವಾಹನಗಳಲ್ಲಿ ಚಲಿಸುವವರು ಸೀಟ್ ಬೆಲ್ಟ್ ಧರಿಸಿಕೊಳ್ಳಬೇಕು” ಎಂದು ಕಾಸರಗೋಡು ಜಿಲ್ಲಾ ಅಸಿಸ್ಟೆಂಟ್ ಮೋಟಾರ್ ವೆಹಿಕಲ್ ಇನ್‌ಸ್ಪೆಕ್ಟರ್ ರಾಜೀವನ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ‘ರಸ್ತೆ ಸುರಕ್ಷಾ ಜಾಗೃತಿ ಕಾರ್ಯಕ್ರಮ’ದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಸ್ಲೈಡ್ ಪ್ರದರ್ಶನದ ಮೂಲಕ ವಿವರಣೆಗಳನ್ನು ನೀಡುತ್ತಾ ಮಾತನಾಡುತ್ತಿದ್ದರು.



ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಉಪಸ್ಥಿತರಿದ್ದರು. ಶಾಲಾ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಸ್ವಾಗತಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕವನ - ಪ್ರಕೃತಿಯ ಸೌಂದರ್ಯ

-- ಆಶಾಲತಾ. ಪಿ

ಹತ್ತನೇ ತರಗತಿ
ಚಿಲಿಪಿಲಿ ಚಿಲಿಪಿಲಿ ಹಕ್ಕಿಗಳಿಂಚರ
ಕೇಳಲು ಬಲು ಮಧುರ


ಘಮಘಮಿಸುವ ಪರಿಮಳದಲಿ

ಅರಳುವ ಪುಷ್ಪಗಳು

ಬಾನಿನಲಿ ಸ್ವಚ್ಛಂದ ಹಾರಾಡುವ

ಬೆಳ್ಳಕ್ಕಿಗಳ ಗುಂಪುಗಳು

ತಿಳಿಯಾದ ಜಲಧಾರೆ ಹರಿಯುತಿರೆ
ಕಲಕಲ ನಾದದಲಿ
ಬಣ್ಣಬಣ್ಣದ ಚಿಟ್ಟೆಗಳು ಹಾರಾಡುವವು
ಮಕರಂದವ ಹೀರುತಲಿ


ಆಕಾಶವನು ಮುತ್ತಿಕೊಂಡ ಕಾರ್ಮೋಡಗಳು

ಮಳೆಯನು ಸುರಿಸಲು ಕಾಯುತಿವೆ

ತಂಗಾಳಿಯ ಬೀಸುವ ಪರಿಸರವು

ನಮಗೆ ನೆಮ್ಮದಿಯ ನೀಡುತಿವೆ

ಈ ನಮ್ಮ ಪ್ರಕೃತಿ ಎಷ್ಟೊಂದು ಸುಂದರ
ಇದನು ಸವಿದಿಹನು ಆ ಬೆಳ್ಳಿಯ ಚಂದಿರ

02 September 2011

ಓಣಂ ಭೋಜನ

ಇಂದಿನಿಂದ ಓಣಂ ರಜೆ ಆರಂಭ. ಮುಂದಿನ ವಾರ ಕೇರಳದಾದ್ಯಂತ ಓಣಂ ಹಬ್ಬದ ಸಡಗರ. ಈ ಹಿನ್ನೆಲೆಯಲ್ಲಿ ನಮ್ಮ ಶಾಲಾ ನೂತನ ವ್ಯವಸ್ಥಾಪಕ ಶ್ರೀ ಜಯದೇವ ಖಂಡಿಗೆ ಮತ್ತು ಶಾಲಾ ಶಿಕ್ಷಕಿ ವಾಣಿ.ಪಿ.ಎಸ್ ಅವರಿಂದ ವಿದ್ಯಾರ್ಥಿಗಳಿಗೆ ಓಣಂ ಭೋಜನದ ಕೊಡುಗೆ. ಜಯದೇವ ಖಂಡಿಗೆಯವರು ಇಂದಿನ ಓಣಂ ಭೋಜನ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಹಭೋಜನದ ಸವಿಯನ್ನು ನೀಡಿದರು. ಧನ್ಯವಾದಗಳು, ನಿಮಗೆಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು...

26 August 2011

ರಾಜ್ಯ ಪುರಸ್ಕಾರ ಗೈಡ್

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನೀಡುವ ರಾಜ್ಯ ಪುರಸ್ಕಾರ ಗೈಡ್ ಪ್ರಶಸ್ತಿಗೆ ಭಾಜನರಾದ ನಮ್ಮ ಶಾಲಾ ಗೈಡ್‌ಗಳು...


ರಾಜ್ಯ ಪುರಸ್ಕಾರ ಸ್ಕೌಟ್

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನೀಡುವ ರಾಜ್ಯ ಪುರಸ್ಕಾರ ಸ್ಕೌಟ್ ಪ್ರಶಸ್ತಿಗೆ ಭಾಜನರಾದ ನಮ್ಮ ಶಾಲಾ ಸ್ಕೌಟ್‌ಗಳು...

21 August 2011

ಶ್ರೀಕೃಷ್ಣ ಜಯಂತಿ





ವಿದ್ಯೆ, ತಪಸ್ಸು, ಧ್ಯಾನ, ಜ್ಞಾನ, ಶೀಲ, ಗುಣ, ಧರ್ಮ ಈ ಏಳು ಗುಣಗಳು ಇಲ್ಲದಿರುವವರು ಭೂಮಿಗೆ ಭಾರವಾಗಿರುವ ಮನುಷ್ಯರೂಪದ ಮೃಗಗಳು. ಉತ್ತಮ ಮನಸ್ಸು ನಮ್ಮ ದೇಹವನ್ನು ಶ್ರೀಮಂತವಾಗಿಸುತ್ತವೆ. ಶುದ್ಧ ಮನಸ್ಸು ನಮ್ಮ ಆತ್ಮೀಯ ಗೆಳೆಯ. ಮನಸ್ಸನ್ನು ತಿದ್ದುವ ಕಾರ್ಯ ನಿತ್ಯ ನಿರಂತರವಾಗಬೇಕು. ಹಾಗಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ, ಜನ್ಮ ಸಾರ್ಥಕವಾಗಲು ಸಾಧ್ಯ" ಎಂದು ಪೆರ್ಲ ಶ್ರೀಸತ್ಯನಾರಾಯಣ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಆರ್. ನರಸಿಂಹ ಭಟ್ ಹೇಳಿದರು. ಅವರು ಇಂದು ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ‘ವಿದ್ಯೋದಯ ಸಭಾ’ ಆಶ್ರಯದಲ್ಲಿ ನಮ್ಮ ಶಾಲೆಗಳಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ ಮುಖ್ಯ ಅತಿಥಿಗಳಾಗಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ಶಾಂತಿ.ಕೆ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.


ಮನರಂಜನಾ ಕಾರ್ಯಕ್ರಮದ ಅಂಗವಾಗಿ ಕೀರ್ತನ ಪ್ರವೀಣ ಶ್ರೀ ಬೆಳ್ಳೂರು ಕಮಲ ತನಯ ಅವರಿಂದ ‘ಭಕ್ತ ಕನಕದಾಸ’ ಹರಿಕಥೆ ಕಾರ್ಯಕ್ರಮ ಜರಗಿತು.


17 August 2011

ನೀರ್ಚಾಲು ಮದಕಕ್ಕೆ ಪ್ರಯಾಣ

ಮಳೆಗಾಲದಲ್ಲಿ ನೀರು ತುಂಬಿ ಮೈದಳೆಯುವ ಮದಕ ನೋಡಲು ವಿದ್ಯಾರ್ಥಿಗಳಿಗೆ ಬಲು ಖುಷಿ. ಅವರಿಗೆ ನೀರೆಚ್ಚರದ ಪಾಠ ಹೇಳಲು ನಮ್ಮ ಇಂದಿನ ಪಯಣ ನೀರ್ಚಾಲಿನ ಅಂಗನವಾಡಿ ಪರಿಸರದ ಮದಕಕ್ಕೆ...

16 August 2011

ಹೂ ರಂಗವಲ್ಲಿ...

ಶಾಲಾ ವಿಜ್ಞಾನ ಕ್ಲಬ್ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಆ೦ಗವಾಗಿ ನಡೆದ ಹೂವಿನಲ್ಲಿ ಭಾರತದ ಭೂಪಟವನ್ನು ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಡೆದ ತ೦ಡ .
ಶಾಲಾ ವಿಜ್ಞಾನ ಕ್ಲಬ್ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಆ೦ಗವಾಗಿ ನಡೆದ ಹೂವಿನಲ್ಲಿ ಕೇರಳದ ಭೂಪಟವನ್ನು ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ತಂಡ.

15 August 2011

ಸ್ವಾತಂತ್ರ್ಯ ಯಾತ್ರೆ

“ಹಿರಿಯರ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನಾವು ಸಂರಕ್ಷಿಸಬೇಕಾಗಿದೆ. ಇಂದು ಭಾರತ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು ನಿಸ್ವಾರ್ಥವಾಗಿ ದೇಶಕ್ಕಾಗಿ ದುಡಿದರೆ ರಾಜಕಾರಣಿಗಳು ಸ್ವಂತ ಸಂಪತ್ತಿಗಾಗಿ ಹವಣಿಸುತ್ತಿದ್ದಾರೆ. ನಮ್ಮ ಸಂವಿಧಾನ ಭಾರತದ ಪ್ರಜಾಪ್ರಭುತ್ವಕ್ಕೆ ಆಧಾರ ಸ್ತಂಭವಾಗಿದೆ. ಆಡಳಿತಕ್ಕೆ ಚೌಕಟ್ಟು ನೀಡಿದರೂ ಇಂದು ನಡೆಯುತ್ತಿರುವ ಸಂವಿಧಾನಾತೀತವಾದ ಚಟುವಟಿಕೆಗಳು ದೇಶಕ್ಕೆ ಸವಾಲಾಗಿ ಪರಿಣಮಿಸುತ್ತಿದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ ನಾವು ಶ್ರಮಿಸಬೇಕಾಗಿದೆ" ಎಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಚಂದ್ರಶೇಖರ ರೈ ಹೇಳಿದರು. ಅವರು ಇಂದು ನಮ್ಮ ಶಾಲೆಗಳಲ್ಲಿ ಜರಗಿದ ಸ್ವಾತಂತ್ರ್ಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಅಧ್ಯಕ್ಷತೆ ವಹಿಸಿದರು. ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ಶುಭಾಶಯಗಳನ್ನು ಹೇಳಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕಿ ಶಾಂತಿ.ಕೆ ಸ್ವಾಗತಿಸಿದರು. ಶಿಕ್ಷಕ ಎಂ.ಸೂರ್ಯನಾರಾಯಣ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಸ್ವಾತಂತ್ರ್ಯ ವಿಶೇಷಾಂಕವನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳಿಂದ ನೀರ್ಚಾಲಿನಲ್ಲಿ ಸ್ವಾತಂತ್ರ್ಯ ಮೆರವಣಿಗೆ ನಡೆಯಿತು.

11 August 2011

ಚಿನ್ನದ ಕುಸುರಿ ಕಲೆಯ ಕಡೆಗೆ...

ವಿದ್ಯಾರ್ಥಿಗಳಿಗೆ ಸಂದರ್ಶನದಲ್ಲಿ ತೀವ್ರ ಆಸಕ್ತಿ. ಪಠ್ಯಪುಸ್ತಕದಲ್ಲಿ ಕಲಿತ ಅಕ್ಕಸಾಲಿಗರನ್ನು ಪರಿಚಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಇಂದು ನಮ್ಮ ಸಂದರ್ಶನ ನೀರ್ಚಾಲಿನ ಚಿನ್ನದ ಕೆಲಸಗಾರ ಭಾಸ್ಕರ ಆಚಾರ್ಯ ಅವರ ಬಳಿಗೆ. ವಿದ್ಯಾರ್ಥಿಗಳಿಗೆ ಬಂಗಾರದ ಧಾರಣೆ ಮುಗಿಲು ಮುಟ್ಟಿದ ಈ ದಿನಗಳಲ್ಲಿ ಇದು ಹೊಸ ಅನುಭವ...

05 August 2011

ಇಂದು ಶಾಲಾ ಚುನಾವಣೆ...


ನಮ್ಮ ಶಾಲಾ ವಿದ್ಯಾರ್ಥಿ ನಾಯಕನ ಆಯ್ಕೆಗಾಗಿ ಇಂದು ಚುನಾವಣೆ ನಡೆಯಿತು. ಎಲ್ಲಾ ತರಗತಿಯ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಬಂದು ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸಿದರು. ಶಾಲಾ ಉಪನಾಯಕನ ಸ್ಥಾನಕ್ಕೆ ೯ಬಿ ತರಗತಿಯ ಸುಚಿತ್ರಾ ಅವಿರೋಧ ಆಯ್ಕೆಯಾಗಿದ್ದಳು. ಶಾಲಾ ವಿದ್ಯಾರ್ಥಿ ನಾಯಕ ಮತ್ತು ‘ಗಾಯತ್ರಿ’ ಭಿತ್ತಿಪತ್ರಿಕೆಯ ಸಂಪಾದಕ ಸ್ಥಾನಕ್ಕೆ ಸ್ಪರ್ಧೆ ನಡೆದಿತ್ತು. ಈಗ ಮತ ಎಣಿಕೆ ಪೂರ್ತಿಗೊಂಡಿದ್ದು ಶಾಲಾ ವಿದ್ಯಾರ್ಥಿ ನಾಯಕಿಯಾಗಿ ೧೦ಬಿ ತರಗತಿಯ ಶಾಂತಿ.ಕೆ ಮತ್ತು ‘ಗಾಯತ್ರಿ’ ಭಿತ್ತಿ ಪತ್ರಿಕೆಯ ಸಂಪಾದಕನಾಗಿ ೧೦ಎ ತರಗತಿಯ ಆಶಿಕ್. ಜಿ ಆಯ್ಕೆಯಾಗಿದ್ದಾರೆ. ಶುಭಾಶಯಗಳು...

29 July 2011

ಕಡೆಯುವ ಕಲ್ಲು ತಯಾರಿ ಹೇಗೆ..?

ಈ ವಾರ ನಮ್ಮ ಪ್ರಯಾಣ ಕಡೆಯುವ ಕಲ್ಲು ತಯಾರಿಕಾ ಕೇಂದ್ರಕ್ಕೆ. ಪಠ್ಯದ ವಿಚಾರಗಳನ್ನು ಕಣ್ಣಾರೆ ಕಂಡು ಪರಾಂಬರಿಸುವ ನಿಟ್ಟಿನಲ್ಲಿ ಇಂದು ನೀರ್ಚಾಲಿನ ಮೇಲಿನ ಪೇಟೆಯ ಕಡೆಯುವ ಕಲ್ಲು ತಯಾರಿಕಾ ಕೇಂದ್ರಕ್ಕೆ ನಮ್ಮ ಸಂದರ್ಶನದ ಛಾಯಾಚಿತ್ರ ನಿಮ್ಮ ಮುಂದೆ...