Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

20 September 2011

ರಸ್ತೆ ಸುರಕ್ಷಾ ಜಾಗೃತಿ ಕಾರ್ಯಕ್ರಮ

“ಮಾನವನ ಜೀವ ಅತ್ಯಂತ ಅಮೂಲ್ಯವಾದುದು. ದಿನವೊಂದರಲ್ಲಿ ರಸ್ತೆ ಅಪಘಾತಗಳಿಂದಾಗಿ ಇಹಲೋಕವನ್ನು ತ್ಯಜಿಸುತ್ತಿರುವ, ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರನ್ನು ಗಮನಿಸುವಾಗ, ನಾವು ರಸ್ತೆ ನಿಯಮಗಳ ಬಗ್ಗೆ ಎಷ್ಟು ಜಾಗೃತರಾಗಿರಬೇಕೆಂಬುದು ಅರಿವಾಗುತ್ತದೆ. ರಸ್ತೆ ನಿಯಮಗಳು ಕೇವಲ ವಾಹನ ಚಾಲಕರಿಗೆ ಮಾತ್ರವಲ್ಲ, ಪಾದಚಾರಿಗಳಿಗೂ ಅನ್ವಯವಾಗುತ್ತದೆ. ರಸ್ತೆಯನ್ನು ದಾಟುವಾಗ ಎಡಬಲಗಳನ್ನು ಸ್ಪಷ್ಟವಾಗಿ ವೀಕ್ಷಿಸಿ, ಯಾವುದೇ ವಾಹನಗಳು ಸಂಚರಿಸುತ್ತಿಲ್ಲವೆಂಬುದನ್ನು ಗಮನಿಸಿಯೇ ದಾಟಬೇಕು. ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸಬೇಕು. ವಾಹನ ಸವಾರರು ಸಡಿಲವಾದ ಉಡುಪುಗಳನ್ನು ಧರಿಸಬಾರದು. ರಾತ್ರಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರಿಗೆ ಬಿಳಿ ಬಣ್ಣದ ಉಡುಪುಗಳು ಉತ್ತಮ. ಕಾರು, ಜೀಪು ಮುಂತಾದ ವಾಹನಗಳಲ್ಲಿ ಚಲಿಸುವವರು ಸೀಟ್ ಬೆಲ್ಟ್ ಧರಿಸಿಕೊಳ್ಳಬೇಕು” ಎಂದು ಕಾಸರಗೋಡು ಜಿಲ್ಲಾ ಅಸಿಸ್ಟೆಂಟ್ ಮೋಟಾರ್ ವೆಹಿಕಲ್ ಇನ್‌ಸ್ಪೆಕ್ಟರ್ ರಾಜೀವನ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ‘ರಸ್ತೆ ಸುರಕ್ಷಾ ಜಾಗೃತಿ ಕಾರ್ಯಕ್ರಮ’ದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಸ್ಲೈಡ್ ಪ್ರದರ್ಶನದ ಮೂಲಕ ವಿವರಣೆಗಳನ್ನು ನೀಡುತ್ತಾ ಮಾತನಾಡುತ್ತಿದ್ದರು.



ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಉಪಸ್ಥಿತರಿದ್ದರು. ಶಾಲಾ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಸ್ವಾಗತಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕವನ - ಪ್ರಕೃತಿಯ ಸೌಂದರ್ಯ

-- ಆಶಾಲತಾ. ಪಿ

ಹತ್ತನೇ ತರಗತಿ
ಚಿಲಿಪಿಲಿ ಚಿಲಿಪಿಲಿ ಹಕ್ಕಿಗಳಿಂಚರ
ಕೇಳಲು ಬಲು ಮಧುರ


ಘಮಘಮಿಸುವ ಪರಿಮಳದಲಿ

ಅರಳುವ ಪುಷ್ಪಗಳು

ಬಾನಿನಲಿ ಸ್ವಚ್ಛಂದ ಹಾರಾಡುವ

ಬೆಳ್ಳಕ್ಕಿಗಳ ಗುಂಪುಗಳು

ತಿಳಿಯಾದ ಜಲಧಾರೆ ಹರಿಯುತಿರೆ
ಕಲಕಲ ನಾದದಲಿ
ಬಣ್ಣಬಣ್ಣದ ಚಿಟ್ಟೆಗಳು ಹಾರಾಡುವವು
ಮಕರಂದವ ಹೀರುತಲಿ


ಆಕಾಶವನು ಮುತ್ತಿಕೊಂಡ ಕಾರ್ಮೋಡಗಳು

ಮಳೆಯನು ಸುರಿಸಲು ಕಾಯುತಿವೆ

ತಂಗಾಳಿಯ ಬೀಸುವ ಪರಿಸರವು

ನಮಗೆ ನೆಮ್ಮದಿಯ ನೀಡುತಿವೆ

ಈ ನಮ್ಮ ಪ್ರಕೃತಿ ಎಷ್ಟೊಂದು ಸುಂದರ
ಇದನು ಸವಿದಿಹನು ಆ ಬೆಳ್ಳಿಯ ಚಂದಿರ

02 September 2011

ಓಣಂ ಭೋಜನ

ಇಂದಿನಿಂದ ಓಣಂ ರಜೆ ಆರಂಭ. ಮುಂದಿನ ವಾರ ಕೇರಳದಾದ್ಯಂತ ಓಣಂ ಹಬ್ಬದ ಸಡಗರ. ಈ ಹಿನ್ನೆಲೆಯಲ್ಲಿ ನಮ್ಮ ಶಾಲಾ ನೂತನ ವ್ಯವಸ್ಥಾಪಕ ಶ್ರೀ ಜಯದೇವ ಖಂಡಿಗೆ ಮತ್ತು ಶಾಲಾ ಶಿಕ್ಷಕಿ ವಾಣಿ.ಪಿ.ಎಸ್ ಅವರಿಂದ ವಿದ್ಯಾರ್ಥಿಗಳಿಗೆ ಓಣಂ ಭೋಜನದ ಕೊಡುಗೆ. ಜಯದೇವ ಖಂಡಿಗೆಯವರು ಇಂದಿನ ಓಣಂ ಭೋಜನ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಹಭೋಜನದ ಸವಿಯನ್ನು ನೀಡಿದರು. ಧನ್ಯವಾದಗಳು, ನಿಮಗೆಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು...