Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

24 October 2012

ಶಾರದಾ ಪೂಜಾ - 2012

ಇಂದು ನಮ್ಮ ಶಾಲೆಯ ಶಾರದಾ ಪೂಜೆ. ವರ್ಷಂಪ್ರತಿ ನಡೆಸುವಂತೆ ವಿದ್ಯಾರ್ಥಿಗಳು ‘ಅಷ್ಟಾವಧಾನ ಸೇವೆ’ ನೆರವೇರಿಸಿ, ಶಾರದಾಂಬೆಯ ಪೂಜೆಯಲ್ಲಿ ಪಾಲ್ಗೊಂಡರು. ನಿಮಗೆಲ್ಲರಿಗೂ ವಿಜಯ ದಶಮಿಯ ಶುಭಾಶಯಗಳು.

19 October 2012

ಕಾಸರಗೋಡಿನಲ್ಲಿ ಕನ್ನಡ ಉಳಿದಿದೆ: ಪ್ರಕಾಶ್ ಮತ್ತಿಹಳ್ಳಿ


“ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ದೂರವಾಗುತ್ತಿದೆ. ಬೆಂಗಳೂರಿನ ಜನಸಂಖ್ಯೆಯ ಕೇವಲ ೨೩ ಶೇಕಡಾ ಜನ ಮಾತ್ರ ಸದ್ಯ ಕನ್ನಡಿಗರಿದ್ದಾರೆ. ಆದರೆ ಕರ್ನಾಟಕದಲ್ಲಿರುವ ಕನ್ನಡಿಗರಿಗಿಂತಲೂ ಸುಲಲಿತವಾಗಿ ಕನ್ನಡ ಮಾತನಾಡುವ ಜನ ಈ ಗಡಿನಾಡಿನಲ್ಲಿದ್ದಾರೆ ಎಂಬುದನ್ನು ತಿಳಿದು ಸಂತಸವಾಗಿದೆ. ಕನ್ನಡದ ಬೆಳವಣಿಗೆಗಾಗಿ ಈ ನಾಡಿನ ಜನತೆಯ ಜೊತೆ ನಾವೂ ಕೈಜೋಡಿಸುತ್ತೇವೆ. ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿ ಪ್ರಕಾಶ್ ಮತ್ತಿಹಳ್ಳಿ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಪ್ರಾಯೋಜಿಸುವ ಧನ ಸಹಾಯದಿಂದ ನಿರ್ಮಿಸಲಾದ ಗ್ರಂಥಾಲಯ ಕಟ್ಟಡದ ಕಾಮಗಾರಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಎಂ. ಸುಬ್ರಾಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾರ್ಯದರ್ಶಿ ಎಂ.ವಿ. ಮಹಾಲಿಂಗೇಶ್ವರ ಭಟ್, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಸ್ವಾಗತಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಧನ್ಯವಾದ ಸಮರ್ಪಿಸಿದರು. ಚಿತ್ರಕಲಾ ಶಿಕ್ಷಕ ಗೋವಿಂದ ಶರ್ಮ ಕಾರ್ಯಕ್ರಮ ನಿರೂಪಿಸಿದರು.

17 October 2012

19ರಂದು ಗ್ರಂಥಾಲಯ ಕಟ್ಟಡ - ಕಾಮಗಾರಿ ಪರಿಶೀಲನಾ ಸಭೆ

ನಮ್ಮ ಪ್ರೌಢಶಾಲೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕೊಡಮಾಡುವ ಧನ ಸಹಾಯದಿಂದ ನಿರ್ಮಿಸಲಾದ ಗ್ರಂಥಾಲಯ ಕಟ್ಟಡದ ಕಾಮಗಾರಿ ಪರಿಶೀಲನಾ ಸಭೆಯು ೧೯.೧೦.೨೦೧೨ ಶುಕ್ರವಾರ ಮಧ್ಯಾಹ್ನ ೧೨ ಗಂಟೆಗೆ ಜರಗಲಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಎಚ್.ವಿ.ರಾಮಚಂದ್ರ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಎಂ. ಸುಬ್ರಾಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿ ಪ್ರಕಾಶ್ ಮತ್ತಿಹಳ್ಳಿಯವರು  ಪರಿಶೀಲನಾ ವರದಿಯನ್ನು ಮಂಡಿಸುವರು.  ಶಾಲಾ ಹಳೆ ವಿದ್ಯಾರ್ಥಿ ಕುಂಜಾರು ಸುಬ್ರಾಯ ಮತ್ತು ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್ ಶುಭ ಹಾರೈಸಲಿದ್ದಾರೆ.

12 October 2012

ರಕ್ತ ಗುಂಪು ನಿರ್ಣಯ ಶಿಬಿರ

ಇಂದು ನಮ್ಮ ಶಾಲೆಯಲ್ಲಿ ರಕ್ತ ಗುಂಪು ನಿರ್ಣಯ ಶಿಬಿರ ಜರಗಿತು. ನೀರ್ಚಾಲಿನಲ್ಲಿ ಹೊಸದಾಗಿ ಆರಂಭವಾದ ‘ಅಭಯ’ ಡಯಗ್ನೋಸ್ಟಿಕ್ ಲ್ಯಾಬ್‌ನ ತಜ್ಞೆ ಸುಲೋಚನಾ ಇಂದು ನಮ್ಮ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳ ರಕ್ತ ಗುಂಪು ನಿರ್ಣಯ ನಡೆಸಿಕೊಟ್ಟರು. ಕೃತಜ್ಞತೆಗಳು...