Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

28 July 2017

ರಕ್ಷಕ ಶಿಕ್ಷಕ ಸಂಘದ ಮಹಾಸಭೆ


“ವಿವಿಧ ರೋಗಗಳ ಹರಡುವಿಕೆಯನ್ನು ನಿಯಂತ್ರಿಸಲು ರೋಗಗಳನ್ನು ತಡೆಗಟ್ಟುವ ಚುಚ್ಚುಮದ್ದುಗಳನ್ನು ಮಕ್ಕಳಿಗೆ ಸಕಾಲದಲ್ಲಿ ನೀಡಬೇಕಾಗುವುದು ಅಗತ್ಯ. ಈ ಬಗ್ಗೆ ಕೇಂದ್ರ ಸರಕಾರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸದ್ಯದಲ್ಲಿಯೇ ಮಕ್ಕಳಿಗೆ ಎಂ.ಆರ್ ವ್ಯಾಕ್ಸಿನ್ ನೀಡಲು ಕ್ರಮ ಕೈಗೊಳ್ಳಲಾಗುವುದು. ಈ ಮಹತ್ತರ ಯೋಜನೆಗೆ ಎಲ್ಲ ರಕ್ಷಕರು ಸಹಕಾರ ನೀಡಿ, ಈ ರೋಗಗಳನ್ನು ನಿರ್ಮೂಲನಗೊಳಿಸಲು ಪ್ರಯತ್ನಿಸಬೇಕು" ಎಂದು ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಲಲಿತಾ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇರಳ ಸರಕಾರದ ಅಬಕಾರಿ ಇಲಾಖೆಯ ವಿಜಯನ್ ಪಿ.ಎಸ್ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ವ್ಯಸನದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಎಸ್. ನಾರಾಯಣ ಇವರನ್ನು ಆಯ್ಕೆ ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿ ವರದಿ ವಾಚಿಸಿದರು. ಹಿರಿಯ ಶಿಕ್ಷಕಿ ಕೆ.ವಿನೋದಿನಿ ವಂದಿಸಿದರು. ಶಿಕ್ಷಕ ಶಿವಪ್ರಕಾಶ್.ಎಂ.ಕೆ ಕಾರ್ಯಕ್ರಮ ನಿರೂಪಿಸಿದರು.

25 July 2017

ಹಾಯ್... ಕುಟ್ಟಿಕೂಟಂ


ಎಂಟನೇ ತರಗತಿಯ ಆಯ್ದ ವಿದ್ಯಾರ್ಥಿಗಳನ್ನು ಕಂಪ್ಯೂಟರ್ ತಜ್ಞರಾಗಿ ಬೆಳೆಸುವ ಯೋಜನೆಯನ್ನು ನಮ್ಮ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ IT@School ಸಂಸ್ಥೆಯು ವಿದ್ಯಾರ್ಥಿಗಳಿಗಾಗಿ Hi...Kuttikootam ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಮ್ಮ ಶಾಲೆಯಿಂದ ಆಯ್ದ 20 ಮಂದಿ ವಿದ್ಯಾರ್ಥಿಗಳಿಗೆ ಈ ಮೂಲಕ ಕಂಪ್ಯೂಟರ್ ಹಾರ್ಡ್‍ವೇರ್, ಎನಿಮೇಶನ್, ಇಲೆಕ್ಟ್ರೋನಿಕ್ಸ್, ಮಾತೃಭಾಷೆಯಲ್ಲಿ ಟೈಪಿಂಗ್ ಮತ್ತು ಕಂಪ್ಯೂಟರ್ ಸುರಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುವುದು.

ಈ ಕಾರ್ಯಕ್ರಮವನ್ನು ಇಂದು ಅಪರಾಹ್ನ 4 ಗಂಟೆಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕರಾದ ಜಯದೇವ ಖಂಡಿಗೆ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಸಭೆಯ ಅಧ್ಯಕ್ಷತೆ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಶುಭಾಶಯಗಳನ್ನು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾದ ರವಿಶಂಕರ ಸ್ವಾಗತಿಸಿ, ವಿಶ್ವನಾಥ ಭಟ್ ವಂದಿಸಿದರು.

21 July 2017

ನೃತ್ಯಾಂಗನ್ ಸಂಸ್ಥೆಯಿಂದ ಭರತನಾಟ್ಯದ ಪರಿಚಯ

ಮಂಗಳೂರಿನ ನೃತ್ಯಾಂಗನ್ ಸಂಸ್ಥೆಯ ಶ್ರೀಮತಿ ರಾಧಿಕಾ ಶೆಟ್ಟಿ ಇವರು ಇಂದು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಭರತನಾಟ್ಯದ ಪರಿಚಯವನ್ನು ಮಾಡಿಕೊಟ್ಟರು. ವಿವಿಧ ಮುದ್ರೆಗಳು, ಭಂಗಿಗಳ ಮೂಲಕ ನೃತ್ಯ ಲೋಕದ ಕಡೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಿದರು. ರಾಧಿಕಾ ಅವರಿಗೆ ಧನ್ಯವಾದಗಳು...

ಶೇಖರಕಾನಕ್ಕೆ ಪಯಣ

ಶೇಖರಕಾನ ನಮ್ಮ ಶಾಲೆಯ ವಿದ್ಯಾರ್ಥಿಗಳ ನೆಚ್ಚಿನ ತಾಣ. ಶಾಲೆಯಿಂದ ಅನತಿ ದೂರದಲ್ಲಿರುವ ಈ ಸ್ಥಳದ ಪ್ರವಾಸದ ಫೋಟೋಗಳನ್ನು ಪ್ರದರ್ಶಿಸಲು ನಮಗೆ ಯಾವತ್ತೂ ಸಂತಸವಾಗುತ್ತದೆ. ಮಳೆಗಾಲದಲ್ಲೆಲ್ಲ ನಮ್ಮನ್ನು ಆಕರ್ಷಿಸುವ ಶೇಖರಕಾನ ಜಲಪಾತಕ್ಕೆ ಇಂದೂ ಹೋಗಿ ಬಂದಿದ್ದೇವೆ. ಹೊಸ ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ಕಟ್ಟಿಕೊಟ್ಟಿದ್ದೇವೆ.

17 July 2017

ತರಕಾರಿ ಬೀಜ ವಿತರಣೆ_2017

ಕೇರಳ ಸರಕಾರದ ಕೃಷಿ ಇಲಾಖೆಯು ಕೃಷಿ ಭವನದ ಮೂಲಕ ವಿದ್ಯಾರ್ಥಿಗಳಲ್ಲಿ ಕೃಷಿ ಪ್ರೀತಿಯನ್ನು ಬೆಳೆಸಲು ಕೊಡಮಾಡಿದ ತರಕಾರಿ ಬೀಜಗಳನ್ನು ನಮ್ಮ ಶಾಲಾ ಮುಖ್ಯೋಪಾಧ್ಯಾಯರು ಇಂದು ವಿದ್ಯಾರ್ಥಿಗಳಿಗೆ ವಿತರಿಸಿದರು. ಕೃಷಿ ಪ್ರೀತಿ ಬೆಳೆಯಲಿ...

05 July 2017

ವಿದ್ಯಾರ್ಥಿಗಳಿಂದ ಗದ್ದೆಗೆ ಭೇಟಿ


ಸಾಂಪ್ರದಾಯಿಕವಾಗಿ ಭತ್ತದ ಬೇಸಾಯವನ್ನು ಮಾಡುತ್ತಿರುವ ಬೇಳ ಸುಬ್ರಹ್ಮಣ್ಯ ಅಡಿಗರ ಭತ್ತದ ಗದ್ದೆಯನ್ನು ನಮ್ಮ ಶಾಲಾ ವಿದ್ಯಾರ್ಥಿಗಳು ಇಂದು ಸಂದರ್ಶಿಸಿ ಭತ್ತದ ಬೆಳೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಶಾಲಾ ಅಧ್ಯಾಪಕರಾದ ಕೃಷ್ಣಪ್ರಸಾದ್ ಬಣ್ಪುತ್ತಡ್ಕ, ನಂದಕುಮಾರ್, ಅವಿನಾಶ ಕಾರಂತ ಪಾಡಿ, ಶ್ರೀಮತಿ ಮಾಲತಿ, ಶ್ರೀಮತಿ ಅನ್ನಪೂರ್ಣ, ಶ್ರೀಮತಿ ಪೂರ್ಣಿಮಾ ಮತ್ತು ಶ್ರೀಮತಿ ಸುಧಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.