Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

28 January 2010

ಅವಿತೇಶ್ ಬಿಡಿಸಿದ ಚಿತ್ರ

ಇನ್ನು ಪರೀಕ್ಷೆಗಳ ಕಾಲ ಆರಂಭವಾಗುತ್ತದೆ. ನಮ್ಮ ಹತ್ತನೇ ತರಗತಿ ವಿದ್ಯಾರ್ಥಿಗಳೂ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಬಿಡುವಿನ ವೇಳೆಯಲ್ಲಿ ಇದು ಹತ್ತನೇ ತರಗತಿಯ ಅವಿತೇಶ್ ಬಿಡಿಸಿದ ಚಿತ್ರ ನಿಮಗಾಗಿ...

25 January 2010

ಪರ್ಯಟನೆ...

ಐದು,ಆರು,ಏಳನೇ ತರಗತಿ ವಿದ್ಯಾರ್ಥಿಗಳು ಇಂದು ಕಾಸರಗೋಡು ಸುತ್ತಮುತ್ತ ಅಡ್ಡಾಡಿ ಬಂದರು. ನ್ಯಾಯಾಲಯ, ಕಾರವಲ್ ಪತ್ರಿಕಾಲಯ, ಕೈಮಗ್ಗ ಕೇಂದ್ರ, ಅಂಧ ವಿದ್ಯಾರ್ಥಿಗಳ ಶಾಲೆ, ಪ್ಲಾಸ್ಟಿಕ್ ಕಾರ್ಖಾನೆ, ಬ್ಯಾಟರಿ ಕಾರ್ಖಾನೆ, ಸಮುದ್ರ ತೀರ, ಲೈಟ್ ಹೌಸ್, ಮಧೂರು ದೇವಾಲಯ ದರ್ಶನ ಮಾಡಿ ಸಂತಸದಿಂದ ಹಿಂತಿರುಗಿದರು.















21 January 2010

ಭಿತ್ತಿ ಫಲಕ ಕೊಡುಗೆ

ನಮ್ಮ ಶಾಲೆಯ ಪೂರ್ವ ವಿದ್ಯಾರ್ಥಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಚುಕ್ಕಾಣಿಯನ್ನು ಅನೇಕ ವರ್ಷಗಳ ಕಾಲ ಹಿಡಿದು ಉನ್ನತಿಯತ್ತ ಶಾಲೆಯ ಹೆಸರನ್ನು ಕೊಂಡೊಯ್ದ, ಹಿರಿಯ ಸಾಹಿತಿ, ಅಂಕಣಕಾರ ಎಂ.ವಿ.ಭಟ್ ಮಧುರಂಗಾನ ಇವರು ಸಿರಿಗನ್ನಡ ವೇದಿಕೆಯ ಪರವಾಗಿ ಶಾಲೆಗೆ ಭಿತ್ತಿ ಫಲಕ ಮತ್ತು ಅಮೂಲ್ಯ ಪುಸ್ತಕಗಳನ್ನು ಮೊನ್ನೆ ನೀಡಿದ್ದಾರೆ. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಜಯದೇವ ಖಂಡಿಗೆ, ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಮತ್ತು ಇತರ ಅಧ್ಯಾಪಕ ಬಂಧುಗಳು ಈ ಕೊಡುಗೆಯನ್ನು ಸ್ವೀಕರಿಸಿದರು. ಧನ್ಯವಾದಗಳು...

19 January 2010

ಮೊದಲ ಹುಟ್ಟುಹಬ್ಬ

ಸೆಲ್ಯೂಟ್ ನಿಮಗೆ. ನಮ್ಮ ಬ್ಲಾಗ್ ಜನ್ಮ ತಾಳಿ ಇಂದಿಗೆ ಭರ್ತಿ ಒಂದು ವರ್ಷ. ನಮ್ಮನ್ನು ಸ್ವೀಕರಿಸಿದ ಎಲ್ಲ ಸಹೃದಯಿಗಳಿಗೆ ಇದು ನಲ್ಮೆಯ ನಮಸ್ಕಾರ. ಬ್ಲಾಗ್ ರೂಪುಗೊಳ್ಳುವ ಮುನ್ನ ತರಬೇತಿ ನೀಡಿದ ಇಂಡಿಯಾ ವಾಟರ್ ಪೋರ್ಟಲ್ ತಂಡಕ್ಕೆ, ಸಲಹೆ ನೀಡಿದ ಎಲ್ಲ ಮಿತ್ರರಿಗೆ ನಾವು ನೆನಪಿನಂಗಳದಲ್ಲಿ ಖಾಯಂ ಸ್ಥಾನ ಮೀಸಲಿರಿಸಿದ್ದೇವೆ. ನಮ್ಮನ್ನು ಮುಂದೆಯೂ ಕೈಹಿಡಿದು ನಡೆಸಿ...

ಬಯಲು ಪ್ರವಾಸ

ಮೊನ್ನೆ ಸಾಹಿತ್ಯ ಸಮ್ಮೇಳನದ ಗೌಜಿಯ ಮಧ್ಯೆಯೂ ಶಾಲಾ ಚಟುವಟಿಕೆಗಳು ಯಥಾಸ್ಥಿತಿಯಲ್ಲಿ ನಡೆಯುತ್ತಿದ್ದವು. ಸಾಹಿತ್ಯ ಸಮ್ಮೇಳನದ ಅಬ್ಬರ ಕಳೆದ ನಂತರ ನಾವು ಗೃಹ ಕೈಗಾರಿಕೆಗಳ ಕುರಿತು ಅಧ್ಯಯನ ನಡೆಸುವುದಕ್ಕಾಗಿ ಬೇಳ ನಿವಾಸಿ ಲಕ್ಷ್ಮೀನಾರಾಯಣ ಭಟ್ಟರ ಮನೆ ಭೇಟಿ ಮಾಡಿದ್ದೆವು. ವಿವಿಧ ತಿಂಡಿ ತಿನಿಸು ತಯಾರಿ ವಿಧಾನಗಳನ್ನು ಕಲಿತುಕೊಂಡೆವು.

18 January 2010

ಕಲೋತ್ಸವ ಸಮಗ್ರ ಪ್ರಶಸ್ತಿ

ಅಡೂರಿನಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಯುಪಿ ಮತ್ತು ಪ್ರೌಢಶಾಲಾ ಸಂಸ್ಕೃತೋತ್ಸವ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಸಮಗ್ರ ಚಾಂಪಿಯನ್‍ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಮ್ಮ ಶಾಲಾ ತಂಡ, ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ಪ್ರತಿನಿಧಿಗಳ ಜೊತೆ.

15 January 2010

ಸಹವಾಸ ಶಿಬಿರ

ಶಾಲೆಯಲ್ಲಿ ಇಂದು ನಾಳೆ ಸಹವಾಸ ಶಿಬಿರ. ಏಳನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಮತ್ತು ಸ್ಕೌಟ್ ಗೈಡ್ ತಂಡಗಳ ವಿದ್ಯಾರ್ಥಿಗಳು ಶಿಬಿರ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದಾರೆ. ಜೊತೆಯಲ್ಲಿ ಸೂರ್ಯ ಗ್ರಹಣವನ್ನೂ ವೀಕ್ಷಿಸಿದ್ದಾರೆ. ಅಲ್ಲಿಂದ ಸಿಕ್ಕ ಕೆಲ ಛಾಯಾ ಚಿತ್ರಗಳನ್ನು ನಿಮ್ಮ ಮುಂದೆ ಇರಿಸಿದ್ದೇವೆ...



14 January 2010

ರಾಜ್ಯ ಮಟ್ಟದಲ್ಲಿ ಶ್ರೀವಾಣಿ. ಕೆ

ಕಲ್ಲಿಕೋಟೆಯಲ್ಲಿ ಜರಗುತ್ತಿರುವ ಕೇರಳ ರಾಜ್ಯ ಮಟ್ಟದ ಕಲೋತ್ಸವ ಸ್ಪರ್ಧೆಗಳಲ್ಲಿ ಪ್ರೌಢಶಾಲಾ ಸಂಸ್ಕೃತೋತ್ಸವದಲ್ಲಿ ಅಷ್ಟಪದಿ ಸ್ಪರ್ಧೆಯಲ್ಲಿ ಭಾಗವಹಿಸಿದ ಶ್ರೀವಾಣಿ.ಕೆ ನಮ್ಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ. ಈಕೆ ಕಾಕುಂಜೆ ನಿವಾಸಿ ಕುಂಬಳೆ ಸರಕಾರಿ ಪ್ರೌಢಶಾಲಾ ಅಧ್ಯಾಪಕ ಕೆ.ಸುಬ್ರಹ್ಮಣ್ಯ ಭಟ್ಟರ ಪುತ್ರಿ. ಅಷ್ಟಪದಿ ಪ್ರಸ್ತುತಿಯಲ್ಲಿ ಶಾಸ್ತ್ರೀಯ ವಿಧಾನವನ್ನು ಅನುಸರಿಸಿದ್ದಕ್ಕಾಗಿ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆ ಶ್ರೀವಾಣಿ ಫೋಟೋ ಸಹಿತ ವರದಿ ಪ್ರಕಟಿಸಿದೆ. ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ಇವಳಿಗೆ ‘ಮಹಾಜನ’ ಶುಭಾಶಯಗಳನ್ನು ಕೋರುತ್ತದೆ.

12 January 2010

ಶಾಲೆಯ ಅಂಗಳದಲ್ಲಿ ಹಳೆ ವಿದ್ಯಾರ್ಥಿ...

ಮಂಗಳೂರು ಮೇಯರ್ ಶಂಕರ ಭಟ್ ಮೊನ್ನೆ ಸಾಹಿತ್ಯ ಸಮ್ಮೇಳನದ ಸಂದರ್ಭ ಶಾಲೆಗೆ ಬಂದಿದ್ದರು. ತಾವು ನಲಿದಾಡಿ ಬೆಳೆದ ಅಂಗಳದಲ್ಲಿ ಸುತ್ತಾಡಿದರು, ಮುಖ್ಯೋಪಾಧ್ಯಾಯರ ಜೊತೆ ಹಳೆಯ ನೆನಪುಗಳನ್ನು ಹಂಚಿಕೊಂಡರು...

10 January 2010

ಇನ್ನಷ್ಟು ಚಿತ್ರಗಳು...











ಮತ್ತಷ್ಟು ....









ಸಾಹಿತ್ಯ ಸಮ್ಮೇಳನ ಅಭೂತಪೂರ್ವ


ಒಂದಷ್ಟು ಚಿತ್ರಗಳನ್ನು ಸಮ್ಮೇಳನ ವೇದಿಕೆಯಿಂದ ಹಂಚಿಕೊಳ್ಳುತ್ತಿದ್ದೇವೆ.

09 January 2010

ನೀರ್ಚಾಲಿನಲ್ಲಿ ಕನ್ನಡ ಯುವಜನೋತ್ಸವ ಆರಂಭ


ಕನ್ನಡದೋಜ ಪೆರಡಾಲ ಕೃಷ್ಣಯ್ಯ ನಗರ ನವವಧುವಿನಂತೆ ಸಿಂಗರಿಸಲ್ಪಟ್ಟಿದೆ. ತಳಿರು ತೋರಣಗಳು ಕನ್ನಡಾಭಿಮಾನಿಗಳನ್ನು ಕೈಬೀಸಿ ಕರೆಯುತ್ತಿದೆ. ಎರಡು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನದ ಪೂರ್ವಭಾವೀ ಸಿದ್ಧತೆಗಳು ಪೂರ್ತಿಗೊಂಡಿವೆ. ಜನಪ್ರವಾಹ ನೀರ್ಚಾಲಿನತ್ತ ಹರಿದುಬರುತ್ತಿದೆ. ಕಾಸರಗೋಡು ಜಿಲ್ಲಾ ಕನ್ನಡ ಯುವಜನೋತ್ಸವ ಮತ್ತು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ - ೨೦೧೦ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಆವರಣದಲ್ಲಿ ಸಿದ್ಧಪಡಿಸಲಾದ ಕನ್ನಡದೋಜ ಪೆರಡಾಲ ಕೃಷ್ಣಯ್ಯ ಮಹಾನಗರಿ ಮತ್ತು ಡಾ ಲಲಿತಾ ಎಸ್.ಎನ್. ಭಟ್ ವೇದಿಕೆಯಲ್ಲಿ ೦೯.೦೧.೨೦೧೦ ಶನಿವಾರದಂದು ಬೆಳಗ್ಗೆ ವಿಧ್ಯುಕ್ತವಾಗಿ ಆರಂಭವಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ಆಶ್ರಯದಲ್ಲಿ ಜರಗುತ್ತಿರುವ ಈ ಸಮ್ಮೇಳನವನ್ನು ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಖಂಡಿಗೆ ಶಾಮ ಭಟ್ ಧ್ವಜಾರೋಹಣಗೈದು ಚಾಲನೆ ನೀಡಿದರು . ಶಾಲಾ ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನದಾಸ್ ಉದ್ಘಾಟಿಸಿದರು.
“ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಕೀಳರಿಮೆ ಬಾರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರಲ್ಲಿದೆ. ಹೆಚ್ಚಿನ ಸ್ಪರ್ಧೆಗಳು ಪ್ರಶಸ್ತಿಯ ದೃಷ್ಟಿಕೋನದಿಂದ ನಡೆಯುತ್ತಿದೆ ಅವುಗಳು ವಿದ್ಯಾರ್ಥಿಗಳ ವಿಕಾಸಕ್ಕೆ ಪೂರಕವಲ್ಲ. ಆದ್ದರಿಂದ ಕನ್ನಡದ ಬೆಳವಣೆಗೆಗೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ" ಎಂದು ಅವರು ಈ ಸಂದರ್ಭದಲ್ಲಿ ನುಡಿದರು. ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಮಾಹಿನ್ ಕೇಳೋಟ್ ಮತ್ತು ಖ್ಯಾತ ಉದ್ಯಮಿ ಕೆ.ಅಜಿತ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿದ್ದರು. ಕಾರಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ ಜಯಲಕ್ಷ್ಮೀ ಭಟ್, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ ರತ್ನಾವತಿ, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಅಧ್ಯಕ್ಷ ಶಂಕರ ರೈ ಮಾಸ್ತರ್, ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಗೌರವಾಧ್ಯಕ್ಷ ಕೆ.ಸತ್ಯನಾರಾಯಣ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ರವಿಕೃಷ್ಣ.ಯು ಶುಭಾಶಂಸನೆಗೈದರು. ನ್ಯಾಯವಾದಿ ಎ.ವಿ.ಶ್ಯಾನುಭೋಗ್, ಭಾಷಾಂತರಗಾರ ಎ. ನರಸಿಂಹ ಭಟ್, ನ್ಯಾಯವಾದಿ ಅಡೂರು ಉಮೇಶ ನಾಯಕ್ ಉಪಸ್ಥಿತರಿದ್ದರು. ಯುವಜನೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಸ್ವಾಗತಿಸಿದರು, ರವೀಂದ್ರ ಎಂ.ಎ, ಮಾನ್ಯ ವಂದಿಸಿದರು. ಶಿವಕುಮಾರ್ ಕೆ.ಪೆರ್ಲ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ವಿಭಾಗಗಳಲ್ಲಿ ಜರಗಿದ ಸ್ಪರ್ಧೆಗಳಲ್ಲಿ ಕಾಸರಗೋಡಿನ ವಿವಿಧ ಭಾಗಳಿಂದ ಆಗಮಿಸಿದ ೧೫೦೦ ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸಿದರು. ಸುಮಾರು ೨೦೦೦ಕ್ಕೂ ಅಧಿಕ ಮಂದಿ ಮಧ್ಯಾಹ್ನ ಭೋಜನವನ್ನು ಸವಿದಿದ್ದಾರೆ ಎಂದು ಸಮ್ಮೇಳನ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

08 January 2010

ಸಾಹಿತ್ಯ ಸಮ್ಮೇಳನ ನಾಳೆಯಿಂದ....

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ಆಶ್ರಯದಲ್ಲಿ ನಡೆಯುವ ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಆವರಣದಲ್ಲಿ ಕನ್ನಡದೋಜ ಪೆರಡಾಲ ಕೃಷ್ಣಯ್ಯ ನಗರ ಭರದಿಂದ ಸಿದ್ಧಗೊಳ್ಳುತ್ತಿದೆ. ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಖಂಡಿಗೆ ಶಾಮ ಭಟ್ ೦೯.೦೧.೨೦೧೦ಶನಿವಾರದಂದು ಬೆಳಗ್ಗೆ ೯ ಗಂಟೆಗೆ ಧ್ವಜಾರೋಹಣಗೈದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರಗುವ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಯುವಜನೋತ್ಸವದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನದಾಸ್ ನೆರವೇರಿಸಲಿದ್ದಾರೆ. ಕಸಾಪ, ಕೇರಳ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಈ ದಿನ ನಡೆಯುವ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾಸರಗೋಡು ಜಿಲ್ಲೆಯ ವಿವಿಧ ಶಾಲೆ, ಕಾಲೇಜುಗಳಿಂದ ೧೫೦೦ ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಯುವಜನೋತ್ಸವದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಅಂಗನವಾಡಿ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ, ಕಾಲೇಜು ವಿಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಅಭಿನಯಗೀತೆ, ಕಾವ್ಯವಾಚನ, ಯಕ್ಷಗಾನ ಹಾಡುಗಳು, ಸಮೂಹ ಗೀತೆ ಇತ್ಯಾದಿ ಸ್ಪರ್ಧೆಗಳು ಜರಗಲಿವೆ. ಯುವಜನೋತ್ಸವದ ಪೂರ್ವಭಾವಿ ತಯಾರಿಗಳು, ಕ್ರೋಢೀಕರಣದ ಕಾರ್ಯ ಭರದಿಂದ ನಡೆಯುತ್ತಿದೆ.
ಸಮ್ಮೇಳನ ಪೂರ್ವಭಾವಿ ಪ್ರಚಾರ ಯಾತ್ರೆ ಮಂಜೇಶ್ವರ ಗೋವಿಂದ ಪೈಗಳ ನಿವಾಸದಿಂದ ಆರಂಭವಾಗಿ ಜನವರಿ ೭ರಂದು ಕಾಸರಗೋಡು ಜಿಲ್ಲೆಯಾದ್ಯಂತ ಸಂಚರಿಸಿದೆ. ೭೫೦೦ ಚದರ ಅಡಿ ವಿಸ್ತಾರವಾದ ಸಮ್ಮೇಳನದ ಪ್ರಧಾನ ಮಂಟಪ ಹಾಗೂ ಭೋಜನ ಶಾಲೆಯ ೫೦೦೦ ಅಡಿ ವಿಸ್ತೀರ್ಣದ ಶಾಮಿಯಾನದ ಕಾರ್ಯಗಳು ಪೂರ್ಣವಾಗಿವೆ. ಸಮ್ಮೇಳನದ ಮೊದಲ ದಿನ ಸುಮಾರು ೨೦೦೦ ಮಂದಿ ಹಾಗೂ ಭಾನುವಾರ ೫೦೦೦ ಜನ ಸೇರುವ ನಿರೀಕ್ಷೆಯಿದೆ. ಪಾಕಶಾಲೆ ಎಲ್ಲ ಕನ್ನಡ ಬಾಂಧವರ ಹಸಿವು ತಣಿಸುವ ನಿಟ್ಟಿನಲ್ಲಿ ಸಜ್ಜುಗೊಳ್ಳುತ್ತಿದೆ.

06 January 2010

ಸಾಹಿತ್ಯ ಸಮ್ಮೇಳನಕ್ಕೆ ಭರದ ತಯಾರಿ

ನಾಡಿದ್ದು ೯ ಮತ್ತು ೧೦ರಂದು ನಮ್ಮ ಶಾಲೆ ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸುತ್ತಿದೆ. ಸಮ್ಮೇಳನದ ಯಶಸ್ವಿಗಾಗಿ ವಿವಿಧ ಸಮಿತಿಗಳು, ಪದಾಧಿಕಾರಿಗಳು ಅವಿರತ ಶ್ರಮ ಧಾರೆ ಎರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಹೊಸ ಹುರುಪಿನಲ್ಲಿದ್ದಾರೆ. ಆದರೆ ಕೇರ‍ಳದಲ್ಲಿ ನಡೆಯುತ್ತಿರುವ ಖಾಸಗಿ ಬಸ್ ಮುಷ್ಕರ ಈ ಯಶಸ್ವಿ ಸಮ್ಮೇಳನಕ್ಕೆ ಅಡ್ಡಗಾಲು ಆಗುತ್ತದೆಯೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಆ ಕೊರತೆಯನ್ನು ತುಂಬಿಕೊಡುವ ಸಾಮರ್ಥ್ಯ ನಿಮಗಿದೆ, ಬನ್ನಿ, ಭಾಗವಹಿಸಿ.

04 January 2010

ಕಥೆ - ಮೂರ್ಖರು

-ರೇಣುಕಾ. ಎ
ಒಂದು ದಿನ ಓರ್ವ ವ್ಯಾಪಾರಿಯು ಪೇಟೆಯಲ್ಲಿಳಿದು ಸಾಮಾನುಗಳನ್ನು ಕೊಂಡು ಆ ವಸ್ತುಗಳನ್ನೆಲ್ಲ ತನ್ನ ಹಳ್ಳಿಗೆ ಸಾಗಿಸಲು ಒಂದು ಕತ್ತೆಯನ್ನು ಬಾಡಿಗೆ ಹಿಡಿದು ಅದರ ಮೇಲೆ ತಾನು ಕೊಂಡ ಸಾಮಾನುಗಳನ್ನು ಹೇರಿದನು. ಕತ್ತೆಯ ಒದೆಯನು ಆ ಕತ್ತೆಯನ್ನು ಹೊಡೆದುಕೊಂಡು ನಡೆದನು. ವ್ಯಾಪಾರಿಯು ಕತ್ತೆಯೊಂದಿಗೇ ನಡೆದಿದ್ದನು. ಮಾರ್ಗ ಮಧ್ಯದಲ್ಲಿ ಅಸಾಧ್ಯವಾದ ಬಿಸಿಲು ಕಾಯುತ್ತಿತ್ತು. ವ್ಯಾಪಾರಿಗೆ ದಣಿವು ಆಗಿ ಆತನು ವಿಶ್ರಾಂತಿ ಪಡೆದುಕೊಳ್ಳಲು ಸುತ್ತಲೂ ನೋಡಿದನು. ಆದರೆ ಅಲ್ಲಿ ಎಲ್ಲಿಯೂ ಆತನಿಗೆ ಗಿಡಗಳೇ ಕಾಣಲಿಲ್ಲ. ಆಗ ಆ ವ್ಯಾಪಾರಿಯು ಕತ್ತೆಯನ್ನು ನಿಲ್ಲಿಸಿ ಅದರ ಕೆಳಗಿದ್ದ ನೆರಳಲ್ಲಿ ಕುಳಿತನು. ಕತ್ತೆಯ ಒಡೆಯನಿಗೂ ಬಿಸಿಲಿನ ತಾಪದಿಂದಾಗಿ ನೆರಳು ಬೇಕಾಗಿತ್ತು. ಹಾಗಾಗಿ ಅವನೂ ಆ ಕತ್ತೆಯ ನೆರಳಿನಲ್ಲಿ ಕುಳಿತುಕೊಳ್ಳಲು ಮುಂದಾದನು. ಆಗ ವ್ಯಾಪಾರಿಯು ಕತ್ತೆಯನ್ನು ನಾನು ಬಾಡಿಗೆ ಪಡೆದುಕೊಂಡಿರುವುದರಿಂದ ಅದರ ನೆರಳಿನಲ್ಲಿ ಕುಳಿತುಕೊಳ್ಳಲು ನಾನು ಮಾತ್ರ ಅರ್ಹ ಎಂದು ಕತ್ತೆಯ ಯಜಮಾನನನ್ನು ಗದರಿಸಿದನು. ಕತ್ತೆಯನ್ನು ಬಾಡಿಗೆಗೆ ಹಿಡಿದ ಮಾತ್ರಕ್ಕೆ ಕತ್ತೆಯ ನೆರಳು ನಿನ್ನದಲ್ಲ, ದೂರ ಸರಿ ಇಲ್ಲಿಂದ ಎಂದನು. ಹೀಗೆ ಇವರಿಬ್ಬರ ಮಧ್ಯೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿತು. ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಕತ್ತೆ ಬದುಕಿದೆಯಾ ಬಡಜೀವವೇ ಎಂದು ಅಲ್ಲಿಂದ ಕಾಲ್ಕಿತ್ತಿತು. ಕತ್ತೆಯ ಒಡೆಯ ಮತ್ತು ವ್ಯಾಪಾರಿ ಬೆಪ್ಪರಾಗಿ ಕುಳಿತರು.