10 November 2009

ಇನ್ನು ಉತ್ಸವಗಳ ಕಾಲ...

ಅಚಾನಕ್ಕಾಗಿ ಮತ್ತೆ ಕರಾವಳಿಯಲ್ಲಿ ಮಳೆಗಾಲ ಆರಂಭವಾಗಿದೆ, ಗದ್ದೆ ಕೊಯ್ಲು ಪ್ರಕ್ರಿಯೆ ಗೆ ಸಮಸ್ಯೆ, ಅಡಿಕೆ ಕೃಷಿಕರ ಮನಸ್ಸಿಗೆ ಮಳೆ ಒಂದಷ್ಟು ಸಮಾಧಾನ ತಂದಿದೆ. ಕಳೆದ ಎರಡು ದಿನಗಳಿಂದ ವಾತಾವರಣ ಪೂರ್ತಿ ತಂಪು ತಂದಿದೆ. ವಿದ್ಯಾರ್ಥಿಗಳಿಗೂ ಅಷ್ಟೆ, ಪರೀಕ್ಷೆಯ ದಿನಗಳು ಕಳೆದು ಉತ್ಸವಗಳ ಕಾಲ ಆರಂಭವಾಗುತ್ತಿದೆ, ಈ ತಿಂಗಳು ೧೮,೧೯ ಬದಿಯಡ್ಕದಲ್ಲಿ ಉಪಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆ, ೨೩,೨೪ ರಂದು ಮಾನ್ಯದಲ್ಲಿ ವಿಜ್ಞಾನ ಮೇಳ, ಮುಂದಿನ ತಿಂಗಳು ಅಡೂರಿನಲ್ಲಿ ಉಪಜಿಲ್ಲಾ ಮಟ್ಟದ ಸಂಸ್ಕೃತೋತ್ಸವ ಮತ್ತು ಕಲೋತ್ಸವ... ನಮ್ಮ ತಂಡ ಹುರುಪಿನೊಂದಿಗೆ ತಯಾರಾಗುತ್ತಿದೆ...

06 November 2009

ಬಡಗುಮೂಲೆಗೆ ಬಯಲು ಪ್ರವಾಸ

ನಮ್ಮ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮೊನ್ನೆ ಬಡಗುಮೂಲೆ ಈಶ್ವರ ಭಟ್ಟರ ಕೃಷಿ ಕ್ಷೇತ್ರವನ್ನು ಸಂದರ್ಶಿಸಿದರು. ಹೈನುಗಾರಿಕೆ ಪ್ರಶಸ್ತಿ ವಿಜೇತ ಬಡಗುಮೂಲೆ ಈಶ್ವರ ಭಟ್ಟರು ದನ ಸಾಕಣೆಯ ಕುರಿತು ಮತ್ತು ಅವರ ಪತ್ನಿ ಕನಕಲಕ್ಷ್ಮಿ ಮಲ್ಲಿಗೆ ಕೃಷಿಯ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಔಷಧೀಯ ಸಸ್ಯಗಳು ಮತ್ತು ಬಾಳೆ ತಳಿಗಳ ಬಗೆಗೂ ಮಾಹಿತಿ ಪಡೆದುಕೊಂಡರು. ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್, ಶಿಕ್ಷಕಿಯರಾದ ಮಾಲತಿ. ವೈ ಮತ್ತು ಪ್ರತಿಮಾ ನೇತೃತ್ವ ವಹಿಸಿದ್ದರು.

04 November 2009

ಪೂರ್ವ ವಿದ್ಯಾರ್ಥಿಗಳ ಸಾಧನೆ...

ಕೂಳಕ್ಕೋಡ್ಳು ವೆಂಕಟೇಶ ಮೂರ್ತಿಯ ಸಾಧನೆಯ ಪರಿಚಯವನ್ನು ಮೊನ್ನೆ ಮಾಡಿದ್ದೆವು. ಈ ಬಾರಿ ಮಹೇಶನ ಪರಿಚಯ, ಸಾಧನೆಗಳ ಮಜಲನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ.
ನಮ್ಮ ಸಂಸ್ಕೃತಿಯ ಆಧಾರವಾದ ಸಂಸ್ಕೃತ ಭಾಷೆಯ ಪ್ರಪಂಚದೆಲ್ಲೆಡೆ ಇರುವ ಅಭಿಮಾನದ ದ್ಯೋತಕವೇ ವಿಶ್ವ ಸಂಸ್ಕೃತ ಸಮ್ಮೇಳನ. ಈ ಸಮ್ಮೇಳನ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ೧೩ ನೆಯ ವಿಶ್ವ ಸಂಸ್ಕೃತ ಸಮ್ಮೇಳನ ೨೦೦೬ ರಲ್ಲಿ Edinburgh (Scotland, U.K.) ನಲ್ಲಿ ಆಯೋಜಿತವಾಗಿದ್ದರೆ ಈ ವರ್ಷ ಇತ್ತೀಚೆಗೆ (ಸೆಪ್ಟೆಂಬರ್ ೧-೫, ೨೦೦೯) ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನ ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆಯಿತು. (ಈ ವಿ ವಿ ಯಲ್ಲಿನ ಭಾರತೀಯ ಗಣಿತ-ಖಗೋಳಶಾಸ್ತ್ರದ ಬಗ್ಗೆಯೂ ಸಂಶೋಧನೆ-ಅಧ್ಯಯನ ನಡೆಯುತ್ತಿದೆ.) ಈ ಸಮ್ಮೇಳನದಲ್ಲಿ ಸಂಸ್ಕೃತದಲ್ಲಿರುವ ವಿಶಾಲವಾದ ಜ್ಞಾನ ವಿಜ್ಞಾನ ಶಾಖೆಗಳ ಬಗ್ಗೆ ಆಯಾಯ ಕ್ಷೇತ್ರಗಳಲ್ಲಿ ಪರಿಶ್ರಮ ಮಾಡಿದವರಿಂದ ವಿಚಾರ ಮಂಡನೆ ಗಳು ಮಾದಲ್ಪತ್ತವು. ಸುಮಾರು ೩೫೦ ಪ್ರಸ್ತುತಿಗಳು ೧೫ ಗೋಷ್ಠಿ ಗಳಲ್ಲಿ ೫ ದಿನಗಳ ಕಾಲ ನಡೆದವು. ೩೫ ದೇಶಗಳಿಂದ ಬಂದ ಸಂಸ್ಕೃತ ವಿದ್ವಾಂಸರು, ಶೋಧ ವಿದ್ಯಾರ್ಥಿಗಳು, ಅಭಿಮಾನಿಗಳ ಒಟ್ಟು ಸಂಖ್ಯೆ ೫೦೦ ಆಗಬಹುದು. http://www.indology.bun.kyoto-u.ac.jp/14thWSC/ಇದರಲ್ಲಿ ಸಂಸ್ಕೃತ ಮತ್ತು ವೈಜ್ಞಾನಿಕ ಸಾಹಿತ್ಯ ಎಂಬ ಗೋಷ್ಠಿಯಲ್ಲಿ ಶ್ಯೇನ ಚಿತಿ ಎಂಬ ಒಂದು ವಿಚಾರವನ್ನು ಕಾಸರಗೋಡಿನ ಯುವ ಕನ್ನಡಿಗ ಮಹೇಶ ಕೂಳಕ್ಕೋಡ್ಲು ಇವರು ಪ್ರಸ್ತುತ ಪಡಿಸಿದರು.
ವಿಶ್ವದ ಗಣಿತದ ಇತಿಹಾಸವನ್ನು ತಿಳಿಯುವುದರಲ್ಲಿ ಅತ್ಯಂತ ಆವಶ್ಯಕವಾಗಿರುವುದು ಸಂಸ್ಕೃತದ ಗ್ರಂಥಗಳ ಪರಿಶೀಲನೆ. ಕ್ರಿ ಪೂ ೮೦೦ ಗಿಂತಲೂ ಹಿಂದಿನದಾದ ಶುಲ್ಬಸೂತ್ರ ಗಳಲ್ಲಿ ಯಜ್ಞ ವೇದಿಕೆಗಳ ನಿರ್ಮಾಣಕ್ಕೆ ಸಂಬಂಧಿಸಿದ ರೇಖಾಗಣಿತದ ಮಾಹಿತಿ ದೊರೆಯುತ್ತದೆ. ಶ್ಯೇನ ಚಿತಿ ಎಂಬುದು ಗಿಡುಗ ಪಕ್ಷಿಯಾಕಾರದ ಒಂದು ಯಜ್ಞ ವೇದಿಕೆ. ಇದರ ನಿರ್ಮಾಣದಲ್ಲಿ ಬಳಸಬೇಕಾದ ಇಟ್ಟಿಗೆಗಳ ನಿರ್ಮಾಣ ಕ್ರಮ, ಆಕಾರ, ವಿನ್ಯಾಸ ಕ್ರಮ ಇತ್ಯಾದಿ ವಿಚಾರಗಳು ಅಲ್ಲಿ ಉಲ್ಲಿಖಿತವಾಗಿವೆ. ರೇಖಾಗಣಿತದ ದ್ರಿಷ್ಟಿಯಿಂದ, ವಿನ್ಯಾಸಕ್ರಮದ ರೀತಿಯಿಂದ ಇದರ ಮಹತ್ತ್ವವೇನು ಎಂಬುದರ ಬಗ್ಗೆ ಮಾಹಿತಿ ನೀಡುವಂತಹ ಚಿತ್ರಗಳ-ಸ್ಲೈಡ್ ಶೋ ಸಹಿತವಾದ ಭಾಷಣವಾಗಿತ್ತು ಶ್ರೀ ಮಹೇಶರದ್ದು. ನ್ಯೂಟನ ನಿಗಿಂತ ಸುಮಾರು 200 ವರ್ಷಗಳ ಹಿಂದೆ ಭಾರತದಲ್ಲಿ ದ್ವಿಪದ ವಿಸ್ತರಣೆ (Binomial expansion) ಯ ವಿಚಾರ ಕ್ರಿಯಾಕ್ರಮಕರೀ ಎಂಬ ಗಣಿತ ಗ್ರಂಥದಲ್ಲಿ ಉಲ್ಲೇಖವಾಗಿರುವುದನ್ನು ಆಧಾರಸಹಿತವಾಗಿ ತೋರಿಸುವ ಒಂದು ಭಾಷಣವನ್ನು (Turning an Algebraic Expression into an Infinite Series--An Indian contribution) ಕೆಲವು ತಿಂಗಳುಗಳ ಹಿಂದೆ ಬೆಲ್ಜಿಯಂ ದೇಶದ ಬ್ರಸ್ಸೆಲ್ಸ್ ವಿಶ್ವವಿದ್ಯಾಲಯದಲ್ಲಿ ಮಾಡಿದ್ದರು. 29 ವರ್ಷದ ಈ ಯುವಾ ಸಂಶೋಧಕ ಮುಂಬಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಶ್ರೀ ರಾಮಸುಬ್ರಹ್ಮಣ್ಯಂ ರ ಮಾರ್ಗದರ್ಶನದಲ್ಲಿ ಭಾರತೀಯ ವಿಜ್ಞಾನದ ಬಗ್ಗೆ ಕಾರ್ಯ ನಿರತರಾಗಿದ್ದಾರೆ. ಇವರ ಊರು ಕಾಸರಗೋಡಿನ ಬದಿಯಡ್ಕ. ಈಶಾವಾಸ್ಯಂ (ಕೂಳಕ್ಕೊಡ್ಲು) ಸುಲೋಚನಾ-ಶಂಕರನಾರಾಯಣ ಭಟ್ಟರ ಮಗನಾದ ಇವರು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್ ನ ಪೂರ್ವ ವಿದ್ಯಾರ್ಥಿ. ಉಜಿರೆ ಯ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಾಗೂ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಥದಲ್ಲಿ ವಿಜ್ಞಾನ ಮತ್ತು ಸಂಸ್ಕೃತದ ವಿಶೇಷ ಅಧ್ಯಯನವನ್ನು ಮಾಡಿದ ಇವರು ರಾಷ್ಟ್ರಪತಿ ಸುವರ್ಣ ಪದಕ ಪುರಸ್ಕಾರ (2003), ಯು ಜಿ ಸಿ ಯ ರಿಸರ್ಚ್ ಫೆಲೋಶಿಪ್ (2003),ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಯ ರಿಸರ್ಚ್ ಫೆಲೋಶಿಪ್ (2008--) ಗಳನ್ನೂ ಸಾಧಿಸಿದವರಾಗಿದ್ದಾರೆ. IIT Bombay ಯ ವಿಜ್ಞಾನಿಗಳು-ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇವರಿಂದ ಸಂಸ್ಕೃತ ಮಾತನಾಡಲು ಪ್ರೇರಿತರಾಗುತ್ತಿದ್ದಾರೆ.

30 October 2009

ಹೆಮ್ಮೆ ಇದೆ ನಮಗೆ...


ಸೆಪ್ಟೆಂಬರ್ ೧ ರಿಂದ ೫ ರ ವರೆಗೆ ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆದ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ೩೫ ದೇಶಗಳಿಂದ ಬಂದ ೫೦೦ ಸಂಸ್ಕೃತ ಜ್ಞರು ಭಾಗವಹಿಸಿದ್ದರು. ನಮ್ಮ ಹೆಮ್ಮೆಯ ಕಲೆಯನ್ನು ವಿಶ್ವಮಾನ್ಯ ಭಾಷೆಯಾದ ಸಂಸ್ಕೃತದಲ್ಲಿ ಪ್ರಸ್ತುತಿಪಡಿಸಿದವರು ಕನ್ನಡಿಗರಾದ ಶ್ರೀ ವೆಂಕಟೇಶ ಮೂರ್ತಿ. ಕಾಸರಗೋಡಿನವರು. ಈಶಾವಾಸ್ಯಂ (ಕೂಳಕ್ಕೊಡ್ಲು) ಸುಲೋಚನಾ-ಶಂಕರನಾರಾಯಣ ಭಟ್ಟ ದಂಪತಿಗಳ ಈ ಸುಪುತ್ರ, ನೀರ್ಚಾಲಿನ ಮಹಾಜನ ಸಂಸ್ಕೃತ-ಕಾಲೇಜು-ಹೈಸ್ಕೂಲ್ ನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪಡೆಯುತ್ತಲೇ ಅಲ್ಲಿ ಯಕ್ಷಗಾನದ ನಾಟ್ಯದ ತರಬೇತಿಯನ್ನು ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ಗಳಿಸಿದರು. ತಮ್ಮ ಸಹಧರ್ಮಿಣಿ ಶುಭಲಕ್ಷ್ಮೀ ಹಾಗೂ ಪುತ್ರ ಈಶಾನ ನೊಂದಿಗೆ ದೆಹಲಿಯಲ್ಲಿ ವಾಸ್ತವ್ಯದಲ್ಲಿದ್ದು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ದಲ್ಲಿ ಉಪನ್ಯಾಸಕರಾಗಿದ್ದಾರೆ. ಸಂಸ್ಕೃತ ನಾಟಕದ ಸನ್ನಿವೇಶಗಳಿಗೆ ಯಕ್ಷಗಾನದ ರೂಪವನ್ನು ಕೊಟ್ಟು ಯಕ್ಷಗಾನ-ಏಕಪಾತ್ರಾಭಿನಯದ ಈ ಮನಮೋಹಕ ಪ್ರಯೋಗವನ್ನು ಮೆಚ್ಚಿದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಈ ಬಾರಿಯ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಈ ರೋಚಕ ಅಭಿನಯವನ್ನು ಪ್ರದರ್ಶಿಸಲು ಆಹ್ವಾನವನ್ನಿತ್ತಿತು. ಮುಉರ್ತಿ ಯವರು ಪ್ರದರ್ಶಿಸಿದ ಕೌರವೌರವಮ್ (ಗದಾಯುದ್ಧ-ಊರುಭಂಗ) ಎಂಬ ಕಥಾ-ಪ್ರಸಂಗದ ದುರ್ಯೋಧನನ ರೌಷ-ವಿಲಾಪ ದ ಅಭಿನಯ ಪ್ರೇಕ್ಷಕರ ಹೃದಯ ಸ್ಪರ್ಶಿಯಾಗಿ ಮೂಡಿ ಬಂತು. ಭಾರತದ ವಿವಿಧ ರಾಜ್ಯಗಳಿಂದ ಬಂದ ನಾಟಕಾಭಿಮಾನಿಗಳಿಗೆ, ವಿವಿಧ ದೇಶಗಳಿಂದ ಬಂದ ಅನಿವಾಸಿ-ಭಾರತೀಯರಿಗೆ ಮತ್ತು ಭಾರತೀಯತೆಯನ್ನು ತಿಳಿಯುವ ತವಕದ ವಿದೇಶೀಯರಿಗೆ ಇದೊಂದು ರಸಭರಿತ ಔತಣವಾಯಿತು. ಈ ಮನೋಜ್ಞ ಭಾರತೀಯ ಅಭಿನಯವನ್ನು ವಿಶ್ವಮಾನ್ಯ ಭಾರತೀಯ ಭಾಷೆಯಿಂದಲೇ ನೋಡಿ ಆನಂದಿಸಿದ ವಿಶ್ವಸ್ತರದ ಪ್ರೇಕ್ಷಕರಿಂದ ತುಂಬು ಹೃದಯದ ಪ್ರಶಂಸೆ ವ್ಯಕ್ತವಾಯಿತು. ನಾವು ಬೇರೆ ರಾಜ್ಯಕ್ಕೆ, ದೇಶಕ್ಕೆ ಹೋದಾಗ ಅಲ್ಲಿನವರಿಗೆ ನಮ್ಮ ನೆಲದ ವೈಶಿಷ್ಟ್ಯವನ್ನು ಹೇಳುವ ಸಂಸ್ಕೃತಿಯ ವೈಭವಗಳನ್ನ ತೋರಿಸುವ ಒಂದು ರೀತಿಯ ತವಕ ನಮಗಿರುತ್ತದೆ ತಾನೇ? ಅದಕ್ಕೆ ಸಹಾಯ ಮಾಡುವ ಮಾಧ್ಯಮಗಳಲ್ಲೊಂದು ನಮ್ಮ ಜಾನಪದ-ಸಾಂಸ್ಕೃತಿಕ ಕಲೆಗಳ ಪ್ರದರ್ಶನ. ಕನ್ನಡೇತರರಿಗೆ ಕನ್ನಡಿಗರು ಕೊಡಬಹುದಾದ ಕೊಡುಗೆಗಳಲ್ಲಿ ಕನ್ನಡ ನೆಲದ ಕಲಾ ಪ್ರದರ್ಶನವು ಒಂದು. ಕನ್ನಡನಾಡಿನ ಕಲೆಯಾದ ಯಕ್ಷಗಾನದ ಸವಿಯನ್ನು ಕನ್ನಡ ತಿಳಿಯದವರಿಗೂ ಕೊಡುವ ಪ್ರಯತ್ನ ಬಹಳ ವರ್ಷಗಳಿಂದ ನಡೆಯುತ್ತಿದೆ. ಅದಕ್ಕಾಗಿ ಆಯಾಯ ಪ್ರದೇಶಗಳ ಭಾಷೆಗಳಲ್ಲಿ ( ಹಿಂದಿ ಹಾಗೂ ಇತರ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಅಥವಾ ಇಂಗ್ಲೀಷಿನಲ್ಲಿ) ನಡೆಯುವ ಪ್ರದರ್ಶನದ ಬಗ್ಗೆ ನಾವು ಕೇಳಿದ್ದೇವೆ. ನಾಟ್ಯರಂಗಕ್ಕೆ ವಿಪುಲ ಸಾಹಿತ್ಯದ ಕೊಡುಗೆಯನ್ನೀಯುವ ಸಂಸ್ಕೃತಭಾಷೆಯಲ್ಲಿ ಯಕ್ಷಗಾನದ ಪ್ರದರ್ಶನ ವಾದರೆ ಹೇಗಿರಬಹುದು? ಇಂತಹ ಒಂದು ಪ್ರಯತ್ನ ಜಪಾನಿನಲ್ಲಿ ನಡೆಯಿತು. ಅಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕಲೆಗಳ ಪ್ರತೀಕವಾಗಿ ಕನ್ನಡನಾಡಿನ ಯಕ್ಷಗಾನ ಸಂಸ್ಕೃತದಲ್ಲಿ ಪ್ರದರ್ಶನಗೊಂಡಿತು. ತಮ್ಮಬಾಲ್ಯದಲ್ಲಿ ಪಡೆದ ಗ್ರಾಮೀಣ ಕಲೆಯನ್ನು ಸಂಸ್ಕೃತ ನಾಟಕ ರಂಗಕ್ಕೆ ಜೋಡಿಸಿ ದೆಹಲಿಯ ತಮ್ಮ ಸಂಸ್ಥೆಯ ವಸಂತೋತ್ಸವದಲ್ಲಿ , ಉಜ್ಜಯಿನಿಯ ನಾಟ್ಯ ಮಹೋತ್ಸವದಲ್ಲಿ, ಭೋಪಾಲದ ಸಂಸ್ಕೃತ ರಂಗಮಂಚ ದಲ್ಲೂ ಪ್ರದರ್ಶಿಸಿ ಸಂಸ್ಕೃತ-ವಿದ್ವಾಂಸರ, ಕಲಾ ರಸಿಕರ ಮನವನ್ನು ರಂಜಿಸಿದ್ದಾರೆ. ತಿರುಪತಿಯ ಸಂಸ್ಕೃತ ವಿದ್ಯಾಪೀಥದಿಂದ ಸಂಸ್ಕೃತದಲ್ಲಿ ಉನ್ನತ ವಿದ್ಯಾಬ್ಯಾಸವನ್ನು ಮಾಡಿದ ಈ ಕಲಾವಿದ ಸಂಸ್ಕೃತವನ್ನು ಜನಮಾನಸಕ್ಕೊಯ್ಯುವ ಕಾರ್ಯದಲ್ಲೂ ನಿರತರಾಗಿದ್ದಾರೆ. ಸಂಸ್ಕೃತದಿಂದ ಕನ್ನಡಿಗರಿಗೇನು ಪ್ರಯೋಜನ? ಕನ್ನಡದಿಂದ ಸಂಸ್ಕೃತ ಕ್ಕೇನು ಸಿಗಬಹುದು? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ಇದೊಂದು ಉದಾಹರಣೆಯಾಗಬಹುದೇನೋ?

23 October 2009

ಕೊನೆಯ ಚಿತ್ರ...

ಮೊನ್ನೆ ಅಸುನೀಗಿದ ನಾಲ್ವರು ಬಾಲಕರಲ್ಲಿ ಕಿರಿಯವನಾದ ಅಜಿತ್ ಬಿ.ಟಿ ಬಿಡಿಸಿದ ಚಿತ್ರ ಇದು. ಈಗ ನಿಮ್ಮ ಮುಂದೆ ಇದೆ. ಇದು ಆ ಹುಡುಗ ಬಿಡಿಸಿದ ಕೊನೆಯ ಚಿತ್ರ. ಗುರುವಾರ ಶಾಲೆಯಲ್ಲಿ ಜರಗಿದ ಕಲೋತ್ಸವ ಸ್ಪರ್ಧೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಬಿಡಿಸಿದ ಪೆನ್ಸಿಲ್ ಡ್ರಾಯಿಂಗ್ ಇದು. ಶುಕ್ರವಾರ ಶಾಲಾ ಕ್ರೀಡಾಕೂಟ ಜರಗಿತ್ತು. ಈತ ಮತ್ತು ಅಣ್ಣಂದಿರು ಆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಶನಿವಾರ ದೇವರು ಬಿಡಿಸಿದ ಆ ನಾಲ್ಕು ಪುಟಾಣಿಗಳ ಚಿತ್ರವನ್ನು ಯಮ ಬಲಿ ತೆಗೆದುಕೊಂಡ...
ಅತ್ಯಂತ ಬಡ ಕುಟುಂಬದ ಈ ಬಾಲಕರ ಪೈಕಿ ಇನ್ನುಳಿದವರಿಗೆ ಆಶ್ರಯ ನೀಡುವುದು ಸಮಾಜದ ಕರ್ತವ್ಯ ಎನ್ನುವ ದೃಷ್ಟಿಯಿಂದ ಕುಟುಂಬ ಸಹಾಯ ನಿಧಿಯನ್ನು ಸ್ಥಾಪಿಸಿದ್ದೇವೆ. ಇದಕ್ಕಾಗಿ ಹಳೆ ವಿದ್ಯಾರ್ಥಿಗಳ, ರಕ್ಷಕ ಶಿಕ್ಷಕ ಸಂಘದ ಸಹಾಯ ಸಮಿತಿಯನ್ನೂ ರೂಪೀಕರಿಸಲಾಗಿದೆ. ಅಜಿತ್ ಕುಟುಂಬದಲ್ಲಿ ತಾಯಿ ತಂದೆಯರ ಹೊರತಾಗಿ ಉಳಿದಿರುವುದು ಮಾನಸಿಕ ವಿಕಲ ಚೇತನೆ ತಂಗಿ ಮಾತ್ರ....
ಆಸಕ್ತರು ನೀರ್ಚಾಲು ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ತೆರೆಯಲಾದ ಚಾಲ್ತಿ ಖಾತೆ ಸಂಖ್ಯೆ ೭೧೬೦ಕ್ಕೆ ದೇಣಿಗೆ ಸಲ್ಲಿಸಬೇಕಾಗಿ ಅಪೇಕ್ಷೆ.

19 October 2009

.... ಅಶ್ರುತರ್ಪಣ

ಕ್ಷಮೆ ಇರಲಿ, ಬೇವು ಚಿಗುರೊಡೆದ ಸಂತಸದ ಸುದ್ದಿಯ ಹಿಂದೆ, ಬೆಳೆಯುತ್ತಿರುವ ನಾಲ್ಕು ಚಿಗುರುಗಳು ಮುರುಟಿಹೋದ ಸುದ್ದಿ ಬರೆಯಲು ದುಃಖದ ಕಟ್ಟೆ ಸಮ್ಮತಿಸುವುದಿಲ್ಲ. ನಿಮ್ಮ ಮುಂದೆ ಇಡುವ ವಿಚಾರ ಮೌನ ಮಾತ್ರ.... ಮೊನ್ನೆ ನರಕ ಚತುರ್ದಶಿಯ ಹಬ್ಬದ ದಿನ, ೧೭.೧೦.೨೦೦೯ ಶನಿವಾರ ಕಲ್ಲಕಟ್ಟ ಸಮೀಪದ ಬಾರಿಕ್ಕಾಡು, ಅಜ್ಜಾವರ ಕ್ಷೇತ್ರದ ಬಳಿಯಲ್ಲಿ ಹರಿಯುವ ಮಧುವಾಹಿನಿ ನದಿಯಲ್ಲಿ ಸ್ನಾನಕ್ಕಿಳಿದ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಅಭಿಲಾಶ್, ರತನ್ ಕುಮಾರ್ ಮತ್ತು ಅಜಿತ್ ಹಾಗೂ ಕಳೆದ ವರ್ಷ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಅಜೀಶ್ ಹೀಗೆ... ನಾಲ್ವರು ವಿದ್ಯಾರ್ಥಿಗಳು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾರೆ. ಆಸ್ಪತ್ರೆಗೆ ತಲಪುವ ಮುನ್ನವೇ ಅಸುನೀಗಿದ ಈ ನಾಲ್ವರು ಬಾಲಕರ ಆತ್ಮಕ್ಕೆ ಚಿರಶಾಂತಿಯನ್ನು ಮತ್ತು ಅವರ ತಂದೆತಾಯಿ, ಕುಟುಂಬ ಹಾಗೂ ಮಿತ್ರವರ್ಗಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಪರಮಾತ್ಮನು ನೀಡಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇವೆ.

16 October 2009

ಬೇವು ಚಿಗುರಿತು...!

ಕರಾವಳಿಯ ಮಣ್ಣಿನಲ್ಲಿ ಕಹಿಬೇವಿನ ಗಿಡವನ್ನು ಬದುಕಿಸುವುದು ಮತ್ತು ಉಳಿಸಿಕೊಳ್ಳುವುದು ಅತ್ಯಂತ ತ್ರಾಸದಾಯಕ ಕೆಲಸ. ಇಲ್ಲಿನ ಹವಾಗುಣ ಮತ್ತು ಮಣ್ಣಿನ ತರಗತಿ ಬೇವು ಬೆಳೆಗೆ ಅನುಕೂಲಕರವಾಗಿಲ್ಲ. ಆಯುರ್ವೇದ ಔಷಧ ಲೋಕಕ್ಕೂ ಕಹಿಬೇವು ಅನಿವಾರ್ಯವಾದ ಸಂಬಾರವಾದ್ದರಿಂದ ಕಹಿಬೇವಿಗೆ ಈ ನಾಡಿನಲ್ಲಿ ಭಾರೀ ಬೇಡಿಕೆ. ಇಂತಹಾ ಪರಿಸ್ಥಿತಿಯಲ್ಲೂ ನಮ್ಮ ಶಾಲೆಯಲ್ಲಿ ಕಳೆದ ಒಂದು ಶತಮಾನದಿಂದ ಕಹಿಬೇವಿನ ಮರವೊಂದು ಸೆಟೆದು ನಿಂತಿರುವುದು ಅನೇಕರ ಅಚ್ಚರಿಗೆ, ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಊರಮಂದಿಗೆಲ್ಲ ಔಷಧೀಯ ಗುಣಗಣಿಯಾಗಿ ಅಪಾರ ಸಹಾಯನೀಡಿದ ಈ ವೃಕ್ಷ ಅಂಗಳದಲ್ಲೇ ಸುತ್ತಾಡುತ್ತಿದ್ದ ಪುಟಾಣಿ ವಿದ್ಯಾರ್ಥಿಗಳನ್ನೂ, ನೆರೆಯವರನ್ನೂ ಬೇಸರದಲ್ಲಿ ಸಿಲುಕಿಸಿ ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಗಾಳಿಮಳೆಗೆ ಧರಾಶಾಯಿಯಾಯಿತು. ಪ್ರತಿಷ್ಟಿತ ‘ಮನೋರಮಾ’ ನ್ಯೂಸ್ ಚಾನಲ್ ಸಹಿತ ಅನೇಕ ಕನ್ನಡ, ಮಲಯಾಳ ಪತ್ರಿಕೆಗಳು ಆ ಸಂದರ್ಭದಲ್ಲಿ ವೃಕ್ಷ ಪಿತಾಮಹನಿಗೆ ಅಶ್ರುತರ್ಪಣಗೈದಿದ್ದವು.
ನಾಡಿನಾದ್ಯಂತದಿಂದ ಬಂದ ಒಕ್ಕೊರಲ ಅಭಿಪ್ರಾಯದಂತೆ ಶಾಲಾ ಆಡಳಿತ ಮಂಡಳಿಯು, ಆ ಮರದ ಜೊತೆ ಅವಿನಾಭಾವ ಸಂಬಂಧ ಹೊತ್ತಿದ್ದ ‘ಮಹಾಜನ’ ಖಂಡಿಗೆ ಶಾಮ ಭಟ್ಟರ ನಿರ್ದೇಶನದಂತೆ ಕಹಿಬೇವಿನ ಉಳಿವಿಗಾಗಿ ಚಿಕಿತ್ಸೆ ನೀಡಿತು. ಎಲ್ಲರ ಪ್ರಾರ್ಥನೆಯ ಪರಿಣಾಮವಾಗಿ ಈಗ ಒಂದೆರಡು ತಿಂಗಳ ನಂತರ ಬೇವು ಮತ್ತೆ ಚಿಗುರಿದೆ, ಇನ್ನಷ್ಟು ವರ್ಷ ಅನೇಕ ಮಂದಿಯ ಖಾಯಿಲೆಗಳನ್ನು ದೂರಮಾಡುವ ವಿಶ್ವಾಸವನ್ನು ಮೂಡಿಸಿದೆ.

15 October 2009

ರಾಜ್ಯಪುರಸ್ಕಾರ ಸ್ಕೌಟ್ಸ್ ಪ್ರಶಸ್ತಿ

ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಅಭಿಷೇಕ್.ಎಸ್.ಎನ್, ನವನೀತಕೃಷ್ಣ.ಯು, ಅನುತೇಜ್.ಎಸ್, ದೀಪಕ್.ಎಂ, ಗೋವಿಂದಪ್ರಕಾಶ.ಪಿ.ಜಿ, ಅವಿತೇಶ್.ಬಿ, ಪ್ರಶಾಂತಕೃಷ್ಣ, ರಾಮಕಿಶನ್.ಎಂ, ಶ್ರೀನಿಧಿ, ನಿತಿನ್.ಎಂ.ಡಿ, ಶ್ರೀನಿವಾಸ.ಎಚ್.ಎನ್ ಮತ್ತು ವಿನೀತ್ ಶಂಕರ್.ಎಚ್ ರಾಜ್ಯಪುರಸ್ಕಾರ ಸ್ಕೌಟ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

13 October 2009

‘ಗೋವಿಂದಣ್ಣ’ ಅಸ್ತಂಗತ - ಶ್ರದ್ಧಾಂಜಲಿ

ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಜವಾನನಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆಲ್ಲ ಅಚ್ಚುಮೆಚ್ಚಿನ ‘ಗೋವಿಂದಣ್ಣ’ನಾಗಿ ಇನ್ನೂ ಕರ್ತವ್ಯ ನಿರ್ವಹಿಸುತ್ತಿದ್ದ ಎ.ಗೋವಿಂದ ಭಟ್(೫೨) ನಿನ್ನೆ ರಾತ್ರಿ ೧.೩೦ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದಾಗಿ ನಿಧನ ಹೊಂದಿದರು. ೧೫.೦೫.೧೯೫೭ ರಂದು ಕೃಷ್ಣ ಭಟ್ಟರ ಪುತ್ರನಾಗಿ ಜನಿಸಿದ ಅವರು ೧.೧೧.೧೯೮೯ ರಂದು ನೀರ್ಚಾಲಿನಲ್ಲಿ ಉದ್ಯೋಗಿಯಾಗಿ ಸೇವೆ ಆರಂಭಿಸಿದ್ದರು. ಅವರು ಪತ್ನಿ ರಾಜೇಶ್ವರಿ, ತಾಯಿ, ಅಪಾರ ಬಂಧುವರ್ಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಗೌರವಾರ್ಥ ಇಂದು ನೀರ್ಚಾಲಿನ ಮಹಾಜನ ವಿದ್ಯಾಸಂಸ್ಥೆಗಳಿಗೆ ರಜೆಸಾರಲಾಗಿದೆ. ಮೃತರ ಆತ್ಮಕ್ಕೆ `ಮಹಾಜನ' ಶ್ರದ್ಧಾಂಜಲಿಗಳನ್ನೂ ಸಮರ್ಪಿಸುತ್ತದೆ.

08 October 2009

ರಾಜ್ಯಪುರಸ್ಕಾರ ಗೈಡ್ಸ್ ಪ್ರಶಸ್ತಿ

ನಮ್ಮ ಶಾಲೆಯ ವಿದ್ಯಾರ್ಥಿನಿಯರಾದ ವಿದ್ಯಾ.ಕೆ.ಎನ್, ಸುಶ್ಮಿತಾ.ಬಿ, ಮಾನಸ.ಪಿ.ಎಸ್, ಕೃತಿ.ಪಿ.ಕೆ, ಅಕ್ಷತಾ ದುರ್ಗಾ ಮತ್ತು ಐಶ್ವರ್ಯಾ ಆಳ್ವಾ.ಬಿ ರಾಜ್ಯಪುರಸ್ಕಾರ ಗೈಡ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

06 October 2009

ಯು.ಎಸ್.ಎಸ್. ಪ್ರಶಸ್ತಿ

೨೦೦೮-೦೯ನೇ ಸಾಲಿನ ಯು.ಎಸ್.ಎಸ್ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಾದ ಕೃಷ್ಣ. ಎನ್.ಕೆ, ರಂಜಿತಾ ಮತ್ತು ಸುಬ್ರಹ್ಮಣ್ಯ ಪ್ರಸಾದ ತೇರ್ಗಡೆಹೊಂದಿ ಸ್ಕಾಲರ್‌ಶಿಪ್ ಪಡೆಯಲು ಅರ್ಹತೆಹೊಂದಿದ್ದಾರೆ.

03 October 2009

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮಲ್ಲಿ... ಬನ್ನಿ...

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ವತಿಯಿಂದ ಜನವರಿ ಮೊದಲ ವಾರದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳಲ್ಲಿ ನಡೆಸಲು ತೀರ್ಮಾನಿಸಿದ ಜಿಲ್ಲಾ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಛೇರಿಯ ಉದ್ಘಾಟನೆಯನ್ನು ಹಿರಿಯ ವಿದ್ವಾಂಸ ಹಾಗೂ ಸಮ್ಮೇಳನದ ಗೌರವಾಧ್ಯಕ್ಷ ಖಂಡಿಗೆ ಶಾಮ ಭಟ್ ಅವರು ೦೩.೧೦.೨೦೦೯ ಶನಿವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೆಜು ಪ್ರೌಢಶಾಲೆಯಲ್ಲಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ “ಕಾಸರಗೋಡಿನ ಕನ್ನಡ ಶಕ್ತಿಯನ್ನು ಈ ಸಮ್ಮೇಳನ ಪ್ರತಿಬಿಂಬಿಸಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಒತ್ತು ಕೊಡುವ ಕಾರ್ಯಕ್ರಮಗಳು ಈ ಸಮ್ಮೇಳನದಲ್ಲಿ ನಡೆಯಲಿದ್ದು ಇದರ ಯಶಸ್ವಿಗೆ ಎಲ್ಲ ಕನ್ನಡಿಗರು ಒಂದಾಗಿ ನಿಂತು ದುಡಿಯಬೇಕಾಗಿದೆ” ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ಅಧ್ಯಕ್ಷ ಎಸ್.ವಿ.ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವಜನೋತ್ಸವದ ರೂಪುರೇಷೆಯ ಬಗೆಗೆ ಯುವಜನೋತ್ಸವ ಸಮಿತಿ ಅಧ್ಯಕ್ಷ ಮಾಯಿಪ್ಪಾಡಿ ವಿಶ್ವನಾಥ ರೈ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ರೂಪುರೇಖೆಯ ಬಗ್ಗೆ ಸಮಿತಿ ಸಂಚಾಲಕ ಶ್ರೀಕೃಷ್ಣಯ್ಯ ಅನಂತಪುರ ವಿವರಿಸಿದರು.
ಎಂ.ವಿ.ಭಟ್ ಮಧುರಂಗಾನ, ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ರಾಘವ ಬಲ್ಲಾಳ್, ಸುಕುಮಾರ ಆಲಂಪಾಡಿ, ಜಯದೇವ ಖಂಡಿಗೆ ಹಾಗೂ ಸ್ವಾಗತ ಸಮಿತಿಯ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಎಂ.ವಿ ಸ್ವಾಗತಿಸಿ ತಾಲೂಕು ಕಾರ್ಯದರ್ಶಿ ರಾಮಚಂದ್ರ ಧರ್ಮತ್ತಡ್ಕ ವಂದಿಸಿದರು. ಗೌರವ ಕಾರ್ಯದರ್ಶಿ ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರೂಪಿಸಿದರು.

30 September 2009

ಜಿಲ್ಲಾ ಥ್ರೋ ಬಾಲ್ ಪ್ರಶಸ್ತಿ

ಕಾಸರಗೋಡು ಜಿಲ್ಲಾ ಮಟ್ಟದ ಥ್ರೋ ಬಾಲ್ ಸ್ಪರ್ಧೆಯ ಹುಡುಗರ ಮತ್ತು ಹುಡುಗಿಯರ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಬಂದಿದ್ದೇವೆ.

28 September 2009

ಸರಸ್ವತೀ ನಮಸ್ತುಭ್ಯಂ...

ಇಂದು ನಮ್ಮ ಶಾಲೆಯಲ್ಲಿ ಶ್ರೀ ಶಾರದಾ ಪೂಜೆ, ಪೂರ್ವವಿದ್ಯಾರ್ಥಿ ವೇದಮೂರ್ತಿ ಪಾಂಡೇಲು ಶಿವಶಂಕರ ಭಟ್ಟರ ನೇತೃತ್ವದಲ್ಲಿ ಜರಗಿತು. ಅಷ್ಟಾವಧಾನ ಸೇವೆ ಪೂಜಾಕಾರ್ಯಕ್ರಮದ ವಿಶೇಷ ಆಕರ್ಷಣೆ. ವ್ಯವಸ್ಥಾಪಕರು, ನಿವೃತ್ತ ಅಧ್ಯಾಪಕರು, ಊರ ಮಹನೀಯರು, ಅಧ್ಯಾಪಕ - ವಿದ್ಯಾರ್ಥಿ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು.

26 September 2009

ಜಿಲ್ಲಾ ಸ್ವತಂತ್ರ ಸಾಫ್ಟ್‌ವೇರ್ ಪ್ರಬಂಧ ಸ್ಪರ್ಧೆ - ಶಾಂತಿ.ಕೆ ಪ್ರಥಮ

ಸ್ವತಂತ್ರ ಸಾಫ್ಟ್‌ವೇರ್ ದಿನಾಚರಣೆಯ ಅಂಗವಾಗಿ ಕಾಸರಗೋಡು ಜಿಲ್ಲಾ ಐಟಿ ಸ್ಕೂಲ್ ಆಶ್ರಯದಲ್ಲಿ ೨೪.೦೯.೨೦೦೯ ಗುರುವಾರ ಕಾಸರಗೋಡಿನಲ್ಲಿ ಜರಗಿದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಶಾಂತಿ.ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈಕೆ ಎಡನೀರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಕೆ. ಗಣೇಶ್ ಭಟ್ ಇವರ ಪುತ್ರಿ. ಕಾಸರಗೋಡು ನಗರಸಭಾ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ ಪ್ರಶಸ್ತಿ ವಿತರಿಸಿದರು.

24 September 2009

ಚಿತ್ರ - ಅನುಶ್ರೀ

ಅಕ್ಟೋಬರ್ ೨೧ ರಿಂದ ೩೦ ರ ತನಕ ಶಾಲಾ ಮದ್ಯಾವಧಿ ಪರೀಕ್ಷೆ. ಇನ್ನು ಆ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇವೆ.

23 September 2009

ಶಟಲ್ ಬ್ಯಾಡ್ಮಿಂಟನ್ - ಪ್ರಶಸ್ತಿ

ಕಾಸರಗೋಡು ಜಿಲ್ಲಾ ಮಟ್ಟದ ಹುಡುಗಿಯರ ಜೂನಿಯರ್ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಬಂದಿದ್ದಾರೆ.

22 September 2009

ದಟ್ಸ್ ಕನ್ನಡದಲ್ಲಿ ನಮ್ಮ ಶಾಲೆ

ದಟ್ಸ್ ಕನ್ನಡದ ಪರಿಚಯ ನಿಮಗೆಲ್ಲ ಇರಬಹುದು. ನಮ್ಮ ಬ್ಲಾಗ್ ಓದಿ ದಟ್ಸ್ ಕನ್ನಡದ ಸಂಪಾದಕ ಶ್ಯಾಮ್ ಸುಂದರ್ ಶಾಲೆಯ ಬಗ್ಗೆ ಪರಿಚಯ ಲೇಖನವನ್ನು ಕೇಳಿದ್ದರು ಮತ್ತು ಸಕಾಲದಲ್ಲಿ ಆ ಲೇಖನವನ್ನು ಪ್ರಕಟಿಸಿದ್ದರು. ಧನ್ಯವಾದಗಳು ಅವರಿಗೆ... ನಿಮ್ಮೆಲ್ಲರ ಓದಿಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ. http://thatskannada.oneindia.in/literature/my-karnataka/2009/0910-neerchalu-mahajan-sanskrit-college-kasargod.html

18 September 2009

ಚಿತ್ರ - ಅನುಶ್ರೀ

ಅನುಶ್ರೀ ಬಿಡಿಸಿದ ಹಾಸ್ಯ ಚಿತ್ರ ಇರಿಸಿದ್ದೇವೆ, ನಿಮ್ಮ ಮುಂದೆ...

17 September 2009

ಬಯಲು ಪ್ರವಾಸ

ಬಯಲು ಪ್ರವಾಸದ ಅಂಗವಾಗಿ ಮೊನ್ನೆ ನಮ್ಮ ವಿದ್ಯಾರ್ಥಿಗಳು ನೀರ್ಚಾಲು ವಾಷೆ ಸತ್ಯನಾರಾಯಣ ಭಟ್ಟರ ಮನೆ ಸಂದರ್ಶಿಸಿ ಹಳೆಯ ಕಾಲದ ಅಳತೆ ಮಾನಗಳ ಬಗ್ಗೆ ಮಾಹಿತಿ ಪಡೆದುಕೊಂಡರು.