Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

18 September 2017

ಉಪಜಿಲ್ಲಾ ಕಲೋತ್ಸವ: ಲಾಂಛನ ಬಿಡುಗಡೆ

“ಒಂದು ಧ್ಯೇಯ, ಲಾಂಛನದೊಂದಿಗೆ ವಿಶಾಲವಾದ ಚಪ್ಪರದಲ್ಲಿ ಉಪಜಿಲ್ಲಾ ಕಲೋತ್ಸವ ರಂಗೇರಲಿದೆ. ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸುವ ಈ ಕಲೋತ್ಸವಕ್ಕೆ ನಾವು ಸರ್ವರೀತಿಯಲ್ಲಿ ಸಜ್ಜುಗೊಳ್ಳಬೇಕಿದೆ. ಕಾಸರಗೋಡಿನ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಈ ಲಾಂಛನವು ಕಾರ್ಯಕ್ರಮವು ಯಶಸ್ವಿಯಾಗುವುದರ ಸಂಕೇತ'' ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಅಕ್ಟೋಬರ್ 31ರಿಂದ ನವೆಂಬರ್ 4ರ ತನಕ ಜರಗಲಿರುವ 58ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಅಧ್ಯಕ್ಷತೆ ವಹಿಸಿದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ.ಕೆ, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕಾರ್ಯಕ್ರಮ ಸಮಿತಿಯ ಉಪಾಧ್ಯಕ್ಷ ಬಾಲಚಂದ್ರ, ಲಾಂಛನವನ್ನು ರೂಪಿಸಿದ ವೇಣುಗೋಪಾಲ ಆರೋಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ. ಸಿ.ಎಚ್ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ರೈ ವಂದಿಸಿದರು. ಶಿಕ್ಷಕಿ ಶೈಲಜ.ಬಿ ಪ್ರಾರ್ಥಿಸಿದರು. ಕಾರ್ಯಕ್ರಮ ಸಮಿತಿ ಸಂಚಾಲಕ ಶಿವಪ್ರಕಾಶ್.ಎಂ.ಕೆ ಕಾರ್ಯಕ್ರಮ ನಿರೂಪಿಸಿದರು.

11 September 2017

ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ನಮ್ಮ ಶಾಲೆಗೆ ಪ್ರಶಸ್ತಿ



ಉಡುಪಿ, ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಆಶ್ರಯದಲ್ಲಿ 2017 ಸೆಪ್ಟೆಂಬರ್  9 ಮತ್ತು 10 ರಂದು ಪಣಂಬೂರು ಎನ್.ಎಂ.ಪಿ.ಟಿ ಪ್ರೌಢಶಾಲೆಯಲ್ಲಿ ಜರಗಿದ 24ನೇ ವರ್ಷದ ಮಕ್ಕಳ ಸಾಹಿತ್ಯಿಕ, ಸಾಂಸ್ಕೃತಿಕ ಸಮ್ಮೇಳನ ‘ಮಕ್ಕಳ ಧ್ವನಿ 2017 ಕಾರ್ಯಕ್ರಮದಲ್ಲಿ ನಮ್ಮ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕವಿತಾಗೋಷ್ಠಿ, ಕಥಾಗೋಷ್ಠಿ, ಅಭಿನಯಗೀತೆ ಮತ್ತು ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಿ ಆಯೋಜಕರಿಂದ ವಿಶೇಷ ಮೆಚ್ಚುಗೆಯನ್ನು ಪಡೆದಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಜರಗಿದ ಷಟ್ಪದಿ ಕಾವ್ಯ ಕಂಠಪಾಠ ಸ್ಪರ್ಧೆಯಲ್ಲಿ ಈ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಪ್ರಗತಿ.ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಕುಂಜಾರು ನಿವಾಸಿ ಗಜರಾಜ.ಕೆ.ಎಸ್ ಮತ್ತು ಸಂಧ್ಯಾ ಇವರ ಪುತ್ರಿ.

08 September 2017

ಉಪಜಿಲ್ಲಾ ಕಲೋತ್ಸವ: ಧನ ಸಂಗ್ರಹಕ್ಕೆ ಚಾಲನೆ


ನಮ್ಮ ಶಾಲೆಯಲ್ಲಿ 2017 ಒಕ್ಟೋಬರ್ 31 ರಿಂದ ನವೆಂಬರ್ 4 ರ ತನಕ ಜರಗಲಿರುವ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಖರ್ಚು ವೆಚ್ಚಗಳಿಗೆ ಪೂರಕವಾಗಿ ಧನಸಂಗ್ರಹಕ್ಕೆ ಇಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸ್ವಗೃಹದಲ್ಲಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಗ್ರಾಮ ಪಂಚಾಯತ್ ವ್ಯವಸ್ಥೆಯ ಮೂಲಕ ನೀರ್ಚಾಲು ಶಾಲಾ ವಿದ್ಯಾರ್ಥಿನಿಯರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು.
ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ.ಕೆ, ಕಲೋತ್ಸವ ಸಂಘಟಕ ಸಮಿತಿಯ ಅಧ್ಯಕ್ಷ ಎಸ್.ನಾರಾಯಣ, ಪ್ರಧಾನ ಸಂಚಾಲಕ ವೆಂಕಟರಾಜ ಸಿ.ಎಚ್, ಆರ್ಥಿಕ ಸಮಿತಿ ಸಂಚಾಲಕ ವಿಶ್ವನಾಥ ಭಟ್, ಚಪ್ಪರ ಸಮಿತಿ ಸಂಚಾಲಕ ಕೃಷ್ಣ ಪ್ರಸಾದ.ಟಿ ಮತ್ತು ಧ್ವನಿವರ್ಧಕ ಸಮಿತಿ ಸಂಚಾಲಕ ಅವಿನಾಶ ಕಾರಂತ ಉಪಸ್ಥಿತರಿದ್ದರು.