Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

30 August 2012

ಓಣಂ ಆಚರಣೆ



ಮೊನ್ನೆ 24 ರಂದು, ಓಣಂ ರಜೆ ಆರಂಭವಾಗುವ ಮುನ್ನ ನಮ್ಮ ಶಾಲೆಯಲ್ಲಿ ಓಣಂ ಆಚರಣೆ ಜರಗಿತು. ಗಣಿತ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಹೂರಂಗವಲ್ಲಿಯಲ್ಲಿ ಗಣಿತ ಆಕೃತಿಗಳನ್ನು ಬಿಡಿಸುವ ಸ್ಪರ್ಧೆ, ಮೊಸರು ಕುಡಿಕೆ ಇತ್ಯಾದಿ ಸ್ಪರ್ಧೆಗಳು ಜರಗಿದವು.  ರಕ್ಷಕ ಶಿಕ್ಷಕ ಸಂಘದ ಸದಸ್ಯರು ವಿದ್ಯಾರ್ಥಿಗಳಿಗೆ ‘ಓಣಂ ಊಟ’ವನ್ನು ಬಡಿಸಿದರು.

18 August 2012

ಕಾಗದದ ದೋಣಿ

ಅಧ್ಯಾಪಕರ ಸಾನ್ನಿಧ್ಯದಲ್ಲಿ ನೀರಲ್ಲಿ ಇಳಿದು ಆಟವಾಡುವುದೆಂದರೆ ಮಕ್ಕಳಿಗೆ ತುಂಬಾ ಖುಷಿ. ಪುತ್ತಿಗೆ ಗ್ರಾಮ ಪಂಚಾಯತು ವ್ಯಾಪ್ತಿಯ ಎಡನಾಡು ಗ್ರಾಮದಲ್ಲಿರುವ ಆನಾಡಿಪಳ್ಳ ಮದಕ ಹೆಚ್ಚು ಆಳವಿಲ್ಲದ ನೀರಾಶ್ರಯ, ವರ್ಷಪೂರ್ತಿ ನೀರಿರುವ ಪ್ರದೇಶ. ಅಂತಹ ನೀರ ಜಾಗದಲ್ಲಿ ಕಾಗದದ ದೋಣಿ ಬಿಟ್ಟು ಸಂತಸ ಪಟ್ಟ ವಿದ್ಯಾರ್ಥಿಗಳು...

ಮುಖಾರಿಕಂಡ ಅಣೆಕಟ್ಟಿನ ಕಡೆಗೆ...



ಕಾಲು ವಾರ್ಷಿಕ ಪರೀಕ್ಷೆಗಳ ನಡುವೆ ನಿನ್ನೆ, ನಮ್ಮ ಶಾಲಾ ಯು.ಪಿ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದ ದಿನ. ‘ಸೋಣೆ’ ತಿಂಗಳ ‘ಸೋನೆ’ ಮಳೆಯ ನಡುವೆ ಸೀತಾಂಗೋಳಿ ಪರಿಸರದಲ್ಲಿ ಒಂದು ಸುತ್ತಾಟ. ಮುಖಾರಿಕಂಡ ಅಣೆಕಟ್ಟು ಸಂದರ್ಶಿಸಿ, ಕೋಡಿಮೂಲೆಯಲ್ಲಿ ಕಬ್ಬಿಣದ ಕತ್ತಿ ತಯಾರಿಯ ಬಗ್ಗೆ ಮಾಹಿತಿ ತಿಳಿದುಕೊಂಡು ಮರಳಿ ಶಾಲೆ ಸೇರುವಾಗ ಒಂದು ಖುಷಿ...

15 August 2012

ಸ್ವಾತಂತ್ರ್ಯ ಯಾತ್ರೆ

“ಸ್ವಾತಂತ್ರ್ಯ ದಿನದ ಆಚರಣೆ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ಬೆಳಗಿಸುತ್ತದೆ. ಆ ಮೂಲಕ ಹಿರಿಯರ  ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ ನಾವು ಶ್ರಮಿಸಬೇಕಾಗಿದೆ" ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಗಳಲ್ಲಿ ಜರಗಿದ ಸ್ವಾತಂತ್ರ್ಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಧ್ವಜಾರೋಹಣವನ್ನು ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಹಿರಿಯ ಶಿಕ್ಷಕರಾದ ಎಸ್.ವಿ.ಭಟ್, ಕೆ.ನಾರಾಯಣ ಭಟ್ ಮತ್ತು ಎಂ.ಸೂರ್ಯನಾರಾಯಣ ಸ್ವಾತಂತ್ರ್ಯ ಸಂಗ್ರಾಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು.

ವಿದ್ಯಾರ್ಥಿಗಳಿಂದ ನೀರ್ಚಾಲಿನಲ್ಲಿ ಸ್ವಾತಂತ್ರ್ಯ ಮೆರವಣಿಗೆ ನಡೆಯಿತು.

13 August 2012

‘ಹೂ’ಗಳನ್ನು ಉಪಯೋಗಿಸಿ ಭೂಪಟ

ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ ನಮ್ಮ ಶಾಲಾ ಸಮಾಜ ವಿಜ್ಞಾನ ಕ್ಲಬ್ ಆಶ್ರಯದಲ್ಲಿ 10.08.2012 ಶುಕ್ರವಾರ ನಡೆದ ಹೂರಂಗವಲ್ಲಿಯಲ್ಲಿ ಭಾರತ ಭೂಪಟ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ತಂಡ ಮತ್ತು ಕೇರಳ ಭೂಪಟ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿಯರ ತಂಡ.

ತರಕಾರಿ ಬೀಜ ವಿತರಣೆ

ನಮ್ಮ ಶಾಲೆಯಲ್ಲಿ 10.08.2012 ಶುಕ್ರವಾರ ಕೇರಳ ಸರಕಾರದ ಕೃಷಿ ಇಲಾಖೆಯು ವಿತರಿಸಿದ ತರಕಾರಿ ಬೀಜಗಳನ್ನು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಿದ್ಯಾರ್ಥಿಗಳಿಗೆ ವಿತರಿಸಿದರು.

10 August 2012

ಸಿ.ಪಿ.ಸಿ.ಆರ್.ಐ ಗೆ ಭೇಟಿ

ಕಾಸರಗೋಡಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರಕ್ಕೆ 06.08.2012 ಸೋಮವಾರದಂದು ನಮ್ಮ ಶಾಲಾ ವಿದ್ಯಾರ್ಥಿಗಳು ಭೇಟಿ ನೀಡಿ ವಿಜ್ಞಾನಿ ಮಣಿಕಂಠನ್ ಅವರಿಂದ ಕಸಿ ಕಟ್ಟುವ ವಿಧಾನದ ಬಗ್ಗೆ ಮಾಹಿತಿ ಪಡೆದುಕೊಂಡರು.

“ಶ್ರೀಕೃಷ್ಣ ಆತ್ಮೀಯ ದೇವರು": ಕೆ.ಶಿವಕುಮಾರ್


 “ಶ್ರೀಕೃಷ್ಣನ ಬಾಲಲೀಲೆಗಳು ಎಂದೆಂದಿಗೂ ಚೇತೋಹಾರಿ. ಧರ್ಮ ಸಂಸ್ಥಾಪನೆಗಾಗಿ ಅವನು ಕೈಗೊಂಡ ಕಾರ್ಯಗಳ ಸಮಾಜಕ್ಕೆ ಆದರ್ಶ. ಅವನ ಪಥ ಅನುಕರಣೀಯ, ಆದರಿಂದಲೇ ಆತ ಎಲ್ಲರಿಗೂ ಆತ್ಮೀಯ ದೇವರು ಎಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು. ಅವರು ೦೯.೦೮.೨೦೧೨ ಗುರುವಾರ ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ‘ವಿದ್ಯೋದಯ ಸಭಾ’ ಆಶ್ರಯದಲ್ಲಿ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ್ ರಾವ್ ಮುಖ್ಯ ಅತಿಥಿಗಳಾಗಿದ್ದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ಸುಶೀಲಾ.ಎಸ್ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ಹಳೆ ವಿದ್ಯಾರ್ಥಿಗಳಾದ ಹೇಮಶ್ರೀ ಕಾಕುಂಜೆ ಮತ್ತು ಶ್ರೀವಾಣಿ ಕಾಕುಂಜೆ ಇವರಿಂದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ಕಾರ್ಯಕ್ರಮ ಜರಗಿತು. ವಯಲಿನ್‌ನಲ್ಲಿ ಪ್ರಭಾಕರ ಕುಂಜಾರು ಮತ್ತು ಮೃದಂಗದಲ್ಲಿ ಶ್ರೀಧರ ಭಟ್ ಬಡಕ್ಕೇಕೆರೆ ಸಹಕರಿಸಿದರು.