Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

08 January 2010

ಸಾಹಿತ್ಯ ಸಮ್ಮೇಳನ ನಾಳೆಯಿಂದ....

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ಆಶ್ರಯದಲ್ಲಿ ನಡೆಯುವ ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಆವರಣದಲ್ಲಿ ಕನ್ನಡದೋಜ ಪೆರಡಾಲ ಕೃಷ್ಣಯ್ಯ ನಗರ ಭರದಿಂದ ಸಿದ್ಧಗೊಳ್ಳುತ್ತಿದೆ. ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಖಂಡಿಗೆ ಶಾಮ ಭಟ್ ೦೯.೦೧.೨೦೧೦ಶನಿವಾರದಂದು ಬೆಳಗ್ಗೆ ೯ ಗಂಟೆಗೆ ಧ್ವಜಾರೋಹಣಗೈದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರಗುವ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಯುವಜನೋತ್ಸವದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನದಾಸ್ ನೆರವೇರಿಸಲಿದ್ದಾರೆ. ಕಸಾಪ, ಕೇರಳ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಈ ದಿನ ನಡೆಯುವ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾಸರಗೋಡು ಜಿಲ್ಲೆಯ ವಿವಿಧ ಶಾಲೆ, ಕಾಲೇಜುಗಳಿಂದ ೧೫೦೦ ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಯುವಜನೋತ್ಸವದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಅಂಗನವಾಡಿ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ, ಕಾಲೇಜು ವಿಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಅಭಿನಯಗೀತೆ, ಕಾವ್ಯವಾಚನ, ಯಕ್ಷಗಾನ ಹಾಡುಗಳು, ಸಮೂಹ ಗೀತೆ ಇತ್ಯಾದಿ ಸ್ಪರ್ಧೆಗಳು ಜರಗಲಿವೆ. ಯುವಜನೋತ್ಸವದ ಪೂರ್ವಭಾವಿ ತಯಾರಿಗಳು, ಕ್ರೋಢೀಕರಣದ ಕಾರ್ಯ ಭರದಿಂದ ನಡೆಯುತ್ತಿದೆ.
ಸಮ್ಮೇಳನ ಪೂರ್ವಭಾವಿ ಪ್ರಚಾರ ಯಾತ್ರೆ ಮಂಜೇಶ್ವರ ಗೋವಿಂದ ಪೈಗಳ ನಿವಾಸದಿಂದ ಆರಂಭವಾಗಿ ಜನವರಿ ೭ರಂದು ಕಾಸರಗೋಡು ಜಿಲ್ಲೆಯಾದ್ಯಂತ ಸಂಚರಿಸಿದೆ. ೭೫೦೦ ಚದರ ಅಡಿ ವಿಸ್ತಾರವಾದ ಸಮ್ಮೇಳನದ ಪ್ರಧಾನ ಮಂಟಪ ಹಾಗೂ ಭೋಜನ ಶಾಲೆಯ ೫೦೦೦ ಅಡಿ ವಿಸ್ತೀರ್ಣದ ಶಾಮಿಯಾನದ ಕಾರ್ಯಗಳು ಪೂರ್ಣವಾಗಿವೆ. ಸಮ್ಮೇಳನದ ಮೊದಲ ದಿನ ಸುಮಾರು ೨೦೦೦ ಮಂದಿ ಹಾಗೂ ಭಾನುವಾರ ೫೦೦೦ ಜನ ಸೇರುವ ನಿರೀಕ್ಷೆಯಿದೆ. ಪಾಕಶಾಲೆ ಎಲ್ಲ ಕನ್ನಡ ಬಾಂಧವರ ಹಸಿವು ತಣಿಸುವ ನಿಟ್ಟಿನಲ್ಲಿ ಸಜ್ಜುಗೊಳ್ಳುತ್ತಿದೆ.

No comments:

Post a Comment