Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

17 April 2009

ಪ್ರಬಂಧ ೦೭ - ಕೋಲ್ಕತ್ತದಲ್ಲಿ ‘ಪಕ್ಷಿಲೋಕದಲ್ಲೊಂದು ಪ್ರಸಂಗ’


-ಅನುಪಮ.ಪಿ.ಎಸ್
ವಿಷ್ಣು ಶರ್ಮನ ಪಂಚತಂತ್ರ ಕಥೆಯನ್ನಾಧರಿಸಿ ಆಧುನಿಕ ಕಾಲಕ್ಕೆ ಹೋಲಿಸಿ ರಚಿಸಲಾದ ಡಾಎಚ್.ವಿ. ವೇಣುಗೋಪಾಲ್ ರ ‘ಪಕ್ಷಿಲೋಕದಲ್ಲೊಂದು ಪ್ರಸಂಗ’ ನಾಟಕವನ್ನು ಅಪೂರ್ವ ಕಲಾವಿದರು ವಿದ್ಯಾನಗರದ ಚಿನ್ಮಯ ವಿದ್ಯಾಲಯದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಕ್ಕಳ ನಾಟಕೋತ್ಸವಕ್ಕಾಗಿ ಆರಿಸಿದ್ದರು.

ಅಪೂರ್ವ ಕಲಾವಿದರು ಇದರ ಅಧ್ಯಕ್ಷ ಉಮೇಶ್ ಸಾಲ್ಯಾನ್ ನಮ್ಮ ನಾಟಕ ತಂಡದ ನಿರ್ದೇಶಕರು. ಪುಷ್ಪರಾಜ್, ಜಾಹ್ನವಿ, ವಾಸು ಬಾಯಾರ್, ರೀನಾ, ಗೋಪಾಲ್, ಸುರೇಂದ್ರ ಮೊದಲಾದವರು ಸಹಾಯಕರಾಗಿದ್ದ ನಮ್ಮ ತಂಡಕ್ಕೆ ಮೇ ತಿಂಗಳಿಡೀ ಸತತ ತರಬೇತಿ ನೀಡಿದ್ದರು. ನಾಟಕದ ಪಾತ್ರಧಾರಿಗಳಾದ ನಾವು ಹನ್ನೆರಡು ಮಂದಿ ಶ್ರಮ ವಹಿಸಿ ಕಾಸರಗೋಡಿಗೆ ಕೀರ್ತಿ ತರುವ ಮಹದಾಸೆ ಹೊತ್ತಿದ್ದೆವು. ಚಿನ್ಮಯ ವಿದ್ಯಾಲಯದ ಹತ್ತು ಮಂದಿ (ಮೇಘನಾ ಎಸ್, ಶ್ರೇಯಸ್ ಜಿ.ಕಾಮತ್, ಅಬಿತ್ ಕುಮಾರ್ ಬಿ, ಪವನ್ ಕೆ, ಸ್ವಾತಿ ಕೆ, ಮೇಘಶ್ಯಾಮ್ ಖಂಡಿಗೆ, ಆತ್ಮಿಕ ಎಂ, ಅಭಿಷೇಕ್ ವಿ.ಆರ್, ಅಂಜನ, ಕಾರ್ತಿಕ) ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿ ಮಿಥುನ್ ಶೆಟ್ಟಿ ಹಾಗು ನೀರ್ಚಾಲಿನ ಕನ್ನಡ ಮಾಧ್ಯಮ ಹೈಸ್ಕೂಲಿನಲ್ಲಿ ಕಲಿಯುವ ನಾನು ಯುದ್ಧ ವಿರೋಧಿ ನೀತಿಯೊಂದಿಗೆ ಶಾಂತಿಯನ್ನು ಸಾರುವುದೇ ನಮ್ಮ ನಾಟಕದ ಸಾರವಾಗಿತ್ತು.

ಅಂತೂ ಇಂತೂ ನಾನು ಕಲ್ಕತ್ತಾಗೆ ಹೋಗುವ ದಿನ ಬಂದೇ ಬಿಟ್ಟಿತು. ಮೇ ೩೦ ರಂದು ಚೀಲಕ್ಕೆ ಬಟ್ಟೆಬರೆ, ತಿಂಡಿ ತಿನಿಸುಗಳನ್ನು ತುಂಬಿಸಿಕೊಂಡು ಹಿರಿಯರ ಆಶೀರ್ವಾದ ಪಡೆದು ಸಂತೋಷದಿಂದ ಹೊರಟೆವು. ಮಧ್ಯಾಹ್ನ ೨ ಗಂಟೆಗೆ ರೈಲುಗಾಡಿ ಎಂದು ಮೊದಲೇ ತಿಳಿದಿದ್ದರಿಂದ ರೈಲ್ವೇ ನಿಲ್ದಾಣಕ್ಕೆ ೧.೩೦ ಕ್ಕೆ ತಲುಪಿದೆವು. ಸರಿಯಾಗಿ ೨ ಗಂಟೆಗೆ ಪ್ರಯಾಣ ಆರಂಭವಾಯಿತು. ರಾತ್ರಿಯಾಗುತ್ತಿದ್ದಂತೆ ಊಟ ಮುಗಿಸಿ ಚೀಲಗಳನ್ನು ಭದ್ರಗೊಳಿಸಿ ನಿದ್ದೆಗೆ ಜಾರಿದೆವು. ಬೆಳಿಗ್ಗೆ ೭ ಗಂಟೆಗೆ ಚೆನ್ನೈ ಗೆ ತಲುಪಿ ಕಾಫಿ ಕುಡಿದು ಇನ್ನೊಂದು ರೈಲುಗಾಡಿಯನ್ನೇರಿದೆವು. ಹೊತ್ತು ಏರುತ್ತಿದ್ದಂತೆ ಸೆಕೆಯೂ ಏರುತ್ತಾ ಹೋಯಿತು.

ಊಟ ಮುಗಿಸಿ ಎಲ್ಲರೂ ಸ್ವಲ್ಪ ಹೊತ್ತು ವಿರಮಿಸಿದೆವು. ನಂತರ ಒಮ್ಮೆ ನಾಟಕ ಅಭ್ಯಾಸ ಮಾಡಿದೆವು. ಪದ್ಯ ಹಾಡಿ ಸಮಯ ಕಳೆದೆವು. ಊಟ ಮಾಡಿ ನಿದ್ದೆ ಹೋದೆವು. ಮರುದಿವಸವೂ ದಿನಚರಿ ಹೀಗೇ ಹೋಗುತ್ತಿತ್ತು. ದಾರಿಯಲ್ಲಿ ಕಾಣುತ್ತಿದ್ದ ಮನೋಹರ ದೃಶ್ಯಗಳನ್ನು ವೀಕ್ಷಿಸಿದೆವು. ಜೂನ್ ೧ ರಂದು ಮಧ್ಯಾಹ್ನ ೧.೩೦ ಕ್ಕೆ ಕಲ್ಕತ್ತಾಗೆ ತಲುಪಿ ಎರಡು ಟಾಟಾಸುಮೋಗಳಲ್ಲಿ ನಮ್ಮ ವಾಸಸ್ಥಳಕ್ಕೆ ತಲುಪಿದೆವು. ಅದೊಂದು ಫುಟ್ಬಾಲ್ ಸ್ಟೇಡಿಯಂ . ಅದರ ಕೊಠಡಿಗಳನ್ನು ನಾಟಕದಲ್ಲಿ ಭಾಗವಹಿಸಲು ಬಂದಿರುವವರಿಗೆ ಕೊಟ್ಟಿದ್ದರು. ಸ್ಟೇಡಿಯಂ ಬಹಳ ಸುಂದರವಾಗಿತ್ತು. ಅಲ್ಲಿಯ ನೀರು ಕಠಿಣವಾಗಿದ್ದರಿಂದ ಸ್ನಾನ ಮಾಡಿದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ.

ಹವಾಮಾನ, ನೀರು ಬದಲಾದ್ದರಿಂದ ಎಲ್ಲರ ಸ್ವರವೂ ಬಿದ್ದು ಹೋಗಿತ್ತು. ಗುರುಗಳಾದ ಪುಷ್ಪರಾಜ್ ನಮಗೆ ಔಷಧಿ ಕೊಡುತ್ತಿದ್ದರು. ಹಾಗಾಗಿ ನಾವು ಸ್ವಲ್ಪ ಸುದಾರಿಸಿದೆವು. ಸ್ವಲ್ಪ ಹೊತ್ತು ನಾಟಕ ಅಭ್ಯಾಸ ಮಾಡಿ ವಾಯು ವಿಹಾರಕ್ಕೆಂದು ಹೊರ ನಡೆದೆವು. ಪಶ್ಚಿಮ ಬಂಗಾಳವು ಪೂರ್ವ ರಾಜ್ಯವಾದ್ದರಿಂದ ಬೆಳಕು ಬೇಗನೇ ಬರುತ್ತಿತ್ತು. ಮರುದಿನ ನಾಟಕ ಇದ್ದುದರಿಂದ ನಮ್ಮ ಅಭ್ಯಾಸ ಹೆಚ್ಚುತ್ತಾ ಹೋಯಿತು. ನಾಟಕ ರವೀಂದ್ರ ಸದನದಲ್ಲಿ ನಡೆಯುತ್ತಿತ್ತು.

ಸಂಜೆ ಎಲ್ಲಾ ರಾಜ್ಯದವರು ಸೇರಿ ಒಂದು ಮೆರವಣಿಗೆ ಮಾಡಿ ರವೀಂದ್ರ ಸದನಕ್ಕೆ ಹೋದೆವು. ಅಲ್ಲಿ ನಮ್ಮ ತಂಡದ ಕೆಲವು ವಿದ್ಯಾರ್ಥಿಗಳನ್ನು ಪತ್ರಕರ್ತೆಯೋರ್ವೆ ಸಂದರ್ಶಿಸಿದಳು. ನಂತರ ಲಂಡನ್ ನವರ ನಾಟಕದ ಜೊತೆಗೆ ಮತ್ತೆರಡು ನಾಟಕ ನೋಡಿ ಕೊಠಡಿಗೆ ಮರಳಿದೆವು. ನಮ್ಮ ನಾಟಕ ಅಭ್ಯಾಸ ೮ ಗಂಟೆಯಿಂದ ೧೨.೩೦ ವರೆಗೆ ಮುಂದುವರಿಯಿತು. ಊಟ ಮುಗಿಸಿ ಎಲ್ಲರೂ ವೇಷ ಭೂಷಣಗಳನ್ನು ಕಟ್ಟಿಕೊಂಡು ರವೀಂದ್ರ ಸದನಕ್ಕೆ ಹೊರಟೆವು. ಅಲ್ಲಿ ಕೇಳಿದ ರಸಪ್ರಶ್ನೆಗೆ ನಮ್ಮ ತಂಡದವನೊಬ್ಬ ಉತ್ತರ ಹೇಳಿ ಬಹುಮಾನ ಗಳಿಸಿದನು. ಅಲ್ಲಿ ವೇಷ ಹಾಕಿ, ಸುಣ್ಣ ಬಣ್ಣ ಮುಖಕ್ಕೆ ಬಳಿದು ನಮ್ಮ ಶಕ್ತಿ ಮೀರಿ ನಾಟಕ ಮಾಡಿದೆವು. ನಮ್ಮ ನಾಟಕ ರಾತ್ರಿ ೭.೪೫ ರಿಂದ ೯ ಗಂಟೆಯವರೆಗೆ ನಡೆಯಿತು. ನಾವು ಮಾಡಿದ ಅಭ್ಯಾಸಕ್ಕೆ ತಕ್ಕ ಹಾಗೆ ಉತ್ತಮ ಪ್ರತಿಫಲ ಸಿಕ್ಕಿತು. ಕೋಲ್ಕತ್ತದವರಿಗೆ ನಮ್ಮ ನಾಟಕ ಮೆಚ್ಚುಗೆಯಾಯಿತು.

ಮರುದಿನ ಬೆಳಿಗ್ಗೆ ನಮ್ಮ ತಿರುಗಾಟ ಪ್ರಾರಂಭವಾಯಿತು. ಜೈನರ ದೇವಾಲಯಕ್ಕೆ ಮೊದಲು ಭೇಟಿ ನೀಡಿದೆವು. ಕನ್ನಡಿ ತುಂಡುಗಳಿಂದ ನಿರ್ಮಿಸಲಾಗಿದ್ದ ಅದು ಬಹಳ ಸುಂದರವಾಗಿತ್ತು. ನಂತರ ಕಾಳಿ ದೇವಸ್ಥಾನಕ್ಕೆ ಹೋದೆವು. ಬಳಿಕ ರಾಮಕೃಷ್ಣ ಪರಮಹಂಸರ ಆಶ್ರಮಕ್ಕೆ ತೆರಳಿ ಅಲ್ಲಿನ ಕೆಲವು ಸುಂದರ ಹೂದೋಟಗಳನ್ನು ಕಂಡೆವು. ಆ ದೇವಾಲಯವನ್ನು ಪ್ರತ್ಯೇಕ ರೀತಿಯ ಕಲ್ಲಿನಿಂದ ನಿರ್ಮಿಸಲಾಗಿತ್ತು. ಕೆಲವು ಕೆತ್ತನೆಗಳೂ ಅದರಲ್ಲಿತ್ತು. ಅಲ್ಲೇ ಹತ್ತಿರವಿರುವ ನದಿಯ ಸೊಬಗನ್ನು ನೋಡಿಕೊಂಡು ತಿರುಗಾಟ ಮುಂದುವರಿಸಿದೆವು. ಬಳಿಕ ಬಹಳ ಆಕರ್ಷಕವಾದ ಸಯನ್ಸ್ ಸಿಟಿಗೆ ತೆರಳಿ ಡೈನೋಸರ್ ಗಳ ಕಲಾಕೃತಿಗಳನ್ನು, ಜ್ವಾಲಾಮುಖಿಯನ್ನು ನೋಡಿದೆವು.

ಕನ್ನಡಿಗಳ ಲೋಕವಾಗಿದ್ದ ಮಿರರ್ ಮ್ಯಾಜಿಕ್ ಗೆ ಕಾಲಿರಿಸಿದೆವು. ಇನ್ನೊಂದು ಕಡೆ ವಿಜ್ಞಾನದ ಹಲವು ವಿಸ್ಮಯಗಳಿದ್ದವು. ಆ ವಿಸ್ಮಯಗಳನ್ನು ನೋಡಿಕೊಂಡು ಕುಳಿತಾಗ ಗಂಟೆ ೧೨.೩೦ ಆಗಿತ್ತು. ಬಳಿಕ ಉಪಾಹಾರ ಸೇವಿಸಿ ಮೆಟ್ರೋ ರೈಲಿನಲ್ಲಿ ಪಯಣಿಸಿದೆವು. ಮೆಟ್ರೋ ರೈಲು ಪೂರ್ತಿ ಹವಾನಿಯಂತ್ರಿತವಾದ ಕಾರಣ ಸೆಕೆಯ ಅನುಭವವಾಗಲಿಲ್ಲ. ಭಾರತದಲ್ಲೇ ಅತೀ ದೊಡ್ಡ ಪ್ಲಾನಿಟೋರಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪ್ಲಾನಿಟೋರಿಯಂಗೆ ಹೋದೆವು. ಗ್ರಹ, ಆಕಾಶ, ನಕ್ಷತ್ರಗಳ ಬಗ್ಗೆ ಅಲ್ಲಿ ವಿವರವಾಗಿ ಹೇಳಿದರು.

ಬಳಿಕ ಸುಂದರವಾಗಿರುವ ಹೌರಾ ಸೇತುವೆಯ ಮೂಲಕ ಪಯಣಿಸಿದ್ದು, ಹೀಗೆ ಪಯಣಿಸುತ್ತಿದ್ದಾಗ ತೂಗು ಸೇತುವೆಯಂತಿದ್ದ ೨ ಕಂಬಗಳಿರುವ ದೊಡ್ಡ ಸೇತುವೆ ಕಾಣಿಸುತ್ತಿತ್ತು. ಕೋಲ್ಕತ್ತಾ ನಗರದಲ್ಲಿ ವಾಹನಗಳ ಸಾಗರವೇ ಹರಿದು ಬಂದಂತೆ ಕಾಣಿಸುತ್ತಿತ್ತು. ಅಲ್ಲಲ್ಲಿ ಗಗನಚುಂಬಿ ಕಟ್ಟಡಗಳು ಕಾಣಿಸುತ್ತಿದ್ದವು. ಕೆಲವರು ಅಂಗಡಿಯಿಂದ ಕೆಲವು ಸಾಮಗ್ರಿಗಳನ್ನು ಖರೀದಿಸಿ ನಾಟಕ ಥಿಯೇಟರ್ ಗೆ ಹೋದೆವು. ಅಲ್ಲಿ ಒಂದೆರಡು ನಾಟಕ ನೋಡಿದೆವು.

ಕೊನೆಯ ದಿವಸವಾಗಿದ್ದರಿಂದ ಎಲ್ಲಾ ತಂಡದವರೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಬೇಕೆಂದು ಅಲ್ಲಿನವರು ಕೇಳಿಕೊಂಡಿದ್ದರು. ಆದ್ದರಿಂದ ನಾವು ಎರಡು ಪದ್ಯಗಳನ್ನು ಹೇಳಿದೆವು. ಅಲ್ಲಿಯವರೊಬ್ಬರು ನಮ್ಮ ನಾಟಕದ ಒಂದು ಪದ್ಯವನ್ನು ಇಂಗ್ಲೀಷಿನಲ್ಲಿ ಬರೆಯಿಸಿ ತೆಗೆದುಕೊಂಡರು. ಇದರಿಂದ ಎಲ್ಲರಿಗೂ ನಮ್ಮ ನಾಟಕ ಮೆಚ್ಚುಗೆ ಆಗಿದೆ ಎಂದು ತಿಳಿದೆವು. ಬೆಳಿಗ್ಗೆ ಎದ್ದು ಚಹಾ ಸೇವಿಸಿ ಶಾಪಿಂಗ್ ಗೆ ತೆರಳಿದೆವು. ‘ಸ್ವಭೂಮಿ’ ಎನ್ನುವ ಬಜಾರ್ ೧೨ ಗಂಟೆಗೆ ತೆರೆಯುವ ಕಾರಣ ನಾವೆಲ್ಲರೂ ಸಿಟಿ ಸೆಂಟರ್ ಬಜಾರ್ ಗೆ ಹೋಗಿ ನಮಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿ ವಾಸಸ್ಥಳಕ್ಕೆ ಮರಳಿದೆವು.

೧೨ ಗಂಟೆಗೆ ಹೊರಟು ರೈಲ್ವೇ ನಿಲ್ದಾಣ ತಲುಪಿದೆವು. ೩ ಗಂಟೆಗೆ ನಮ್ಮ ಪ್ರಯಾಣ ಪುನಃ ಆರಂಭವಾಯಿತು. ಮರುದಿನ ಸಂಜೆ ೫.೩೦ ಕ್ಕೆ ಚೆನ್ನೈ ತಲುಪಿದೆವು. ರಾತ್ರಿ ೮.೧೫ ಕ್ಕೆ ಕಾಸರಗೋಡಿಗೆ ಬರುವ ರೈಲಿಗೆ ಹತ್ತಿದೆವು. ಮರಳಿ ಗೂಡಿಗೆ ತಲುಪಿದ ಸಂತೋಷ ಒಂದೆಡೆಯಾದರೆ ಮನೆ ಆಹಾರ ಲಭಿಸಿತಲ್ಲಾ ಎಂಬ ಸಂತೊಷ ಇನ್ನೊಂದೆಡೆ. ಈ ಅವಕಾಶ ನಮ್ಮ ಪಾಲಿಗೆ ಒದಗಿದ ಸೌಭಾಗ್ಯವೇ ಸರಿ.

3 comments:

  1. ರವಿಶಂಕರ್ ಅವರೆ,
    ನಿಮ್ಮೀ ಬ್ಲಾಗ್ ನೋಡಿ ಬಹಳ ಖುಶಿ ಆಯ್ತು. ನಿಮ್ಮ ಪ್ರಯತ್ನ ಶ್ಲಾಘನೀಯ!! ಸಾಧ್ಯವಾದರೆ ಕನ್ನಡ ಪಠ್ಯ ಪುಸ್ತಕದಲ್ಲಿರೊ ಪದ್ಯ especially ೧-೫ನೆ ತರಗತಿಯ ಪದ್ಯಗಳ್ನ್ನು ಇಲ್ಲಿ ಹಾಕಿ. ಅದು ಹೊರದೇಶದಲ್ಲಿದ್ದು ತಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಯತ್ನಿಸುತ್ತಿರೋ ನನ್ನಂತಹವರಿಗೆ ಬಲು ಉಪ್ಕಾರವಾಗುತ್ತೆ.

    ReplyDelete
  2. This comment has been removed by the author.

    ReplyDelete
  3. ಕೋಲ್ಕತ್ತದಲ್ಲಿ ‘ಪಕ್ಷಿಲೋಕದಲ್ಲೊಂದು ಪ್ರಸಂಗ’ ಅತ್ಯಂತ ಉತ್ತಮವಾದ ಪ್ರಬಂಧ .

    ಉದಯೋನ್ಮುಖ ಲೇಖಕಿ ಅನುಪಮ ಪಿ.ಎಸ್ ಅವರ ಉತ್ತಮ ಲೇಖನಗಳು ಕನ್ನಡ ನಾಡಿನ ಪ್ರಧಾನ ಸಮೂಹ ಮಾಧ್ಯಮಗಳಲ್ಲಿ ಇನ್ನು ಮುಂದೆ ಮೂಡಿ ಬರಲಿ ಎಂದು ಹಾರೈಸುತ್ತೇನೆ.

    ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್ ದೇಶ

    ReplyDelete