Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

24 November 2015

``ದೈಹಿಕ ಶಿಕ್ಷಣ ಪಡೆಯುವುದು ವಿದ್ಯಾರ್ಥಿ ಜೀವನದ ಅಗತ್ಯ:" ಅಡ್ವಕೇಟ್ ಶ್ರೀಕಾಂತ್



“ಮಗು ವಿದ್ಯಾರ್ಥಿ ಜೀವನದಲ್ಲಿ ಬಹುಮುಖಿ ಬೆಳವಣಿಗೆಯನ್ನು ಪಡೆದುಕೊಳ್ಳಬೇಕು. ಕಲೆ, ಕ್ರೀಡೆಗಳ ಜೊತೆ ಬೌದ್ಧಿಕ ವಿಕಾಸಕ್ಕೂ ವಿದ್ಯಾರ್ಥಿ ಜೀವನದಲ್ಲಿ ಪ್ರಸ್ತುತ ಸಾಕಷ್ಟು ಅವಕಾಶ ದೊರೆಯುತ್ತಿರುವುದು ಸಂತಸದ ವಿಚಾರ. ಶರೀರದ ಸರ್ವತೋಮುಖ ಬೆಳವಣಿಗೆ ದೈಹಿಕ ಶಿಕ್ಷಣ ಅಗತ್ಯವಾದುದರಿಂದ ವಿದ್ಯಾರ್ಥಿಯು ಕ್ರೀಡಾಕೂಟಗಳಿಂದ ವಿಮುಖನಾಗಬಾರದು. ಸ್ಪರ್ಧೆಗಳ ಜಯಾಪಜಯಕ್ಕಿಂತ ಭಾಗವಹಿಸುವಿಕೆ ಹೆಚ್ಚು ಮಹತ್ವಪೂರ್ಣವಾದುದು ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯ ಅಡ್ವಕೇಟ್ ಶ್ರೀಕಾಂತ್ ಅಭಿಪ್ರಾಯಪಟ್ಟರು. ಅವರು 21.11.2015 ಶನಿವಾರ ಸಾಯಂಕಾಲ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಸೈಬುನ್ನೀಸಾ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಪ್ರೇಮ ಕುಮಾರಿ, ಶ್ಯಾಮಪ್ರಸಾದ್ ಮಾನ್ಯ, ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ, ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟರಾಜ.ಸಿ.ಎಚ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ.ಕೆ ಸ್ವಾಗತಿಸಿದರು. ಕುಂಬಳೆ ಉಪಜಿಲ್ಲಾ ಕ್ರೀಡಾ ಅಸೋಸಿಯೇಷನ್ ಕಾರ್ಯದರ್ಶಿ ಎಂ.ಸೂರ್ಯನಾರಾಯಣ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮ ಸಮಿತಿ ಸಂಚಾಲಕ ವಿಶ್ವನಾಥ ಭಟ್ ಕಾರ್ಯಕ್ರಮ ನಿರೂಪಿಸಿದರು.
ಮೂರು ದಿನಗಳ ಕಾಲ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಚಾಂಪಿಯನ್ ಪಟ್ಟವನ್ನು ಮತ್ತು ಆತಿಥೇಯ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ರನ್ನರ್ಸ್ ಅಪ್ ಗೌರವವನ್ನು ಪಡೆದುಕೊಂಡಿತು.

No comments:

Post a Comment