Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

04 November 2009

ಪೂರ್ವ ವಿದ್ಯಾರ್ಥಿಗಳ ಸಾಧನೆ...

ಕೂಳಕ್ಕೋಡ್ಳು ವೆಂಕಟೇಶ ಮೂರ್ತಿಯ ಸಾಧನೆಯ ಪರಿಚಯವನ್ನು ಮೊನ್ನೆ ಮಾಡಿದ್ದೆವು. ಈ ಬಾರಿ ಮಹೇಶನ ಪರಿಚಯ, ಸಾಧನೆಗಳ ಮಜಲನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ.
ನಮ್ಮ ಸಂಸ್ಕೃತಿಯ ಆಧಾರವಾದ ಸಂಸ್ಕೃತ ಭಾಷೆಯ ಪ್ರಪಂಚದೆಲ್ಲೆಡೆ ಇರುವ ಅಭಿಮಾನದ ದ್ಯೋತಕವೇ ವಿಶ್ವ ಸಂಸ್ಕೃತ ಸಮ್ಮೇಳನ. ಈ ಸಮ್ಮೇಳನ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ೧೩ ನೆಯ ವಿಶ್ವ ಸಂಸ್ಕೃತ ಸಮ್ಮೇಳನ ೨೦೦೬ ರಲ್ಲಿ Edinburgh (Scotland, U.K.) ನಲ್ಲಿ ಆಯೋಜಿತವಾಗಿದ್ದರೆ ಈ ವರ್ಷ ಇತ್ತೀಚೆಗೆ (ಸೆಪ್ಟೆಂಬರ್ ೧-೫, ೨೦೦೯) ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನ ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆಯಿತು. (ಈ ವಿ ವಿ ಯಲ್ಲಿನ ಭಾರತೀಯ ಗಣಿತ-ಖಗೋಳಶಾಸ್ತ್ರದ ಬಗ್ಗೆಯೂ ಸಂಶೋಧನೆ-ಅಧ್ಯಯನ ನಡೆಯುತ್ತಿದೆ.) ಈ ಸಮ್ಮೇಳನದಲ್ಲಿ ಸಂಸ್ಕೃತದಲ್ಲಿರುವ ವಿಶಾಲವಾದ ಜ್ಞಾನ ವಿಜ್ಞಾನ ಶಾಖೆಗಳ ಬಗ್ಗೆ ಆಯಾಯ ಕ್ಷೇತ್ರಗಳಲ್ಲಿ ಪರಿಶ್ರಮ ಮಾಡಿದವರಿಂದ ವಿಚಾರ ಮಂಡನೆ ಗಳು ಮಾದಲ್ಪತ್ತವು. ಸುಮಾರು ೩೫೦ ಪ್ರಸ್ತುತಿಗಳು ೧೫ ಗೋಷ್ಠಿ ಗಳಲ್ಲಿ ೫ ದಿನಗಳ ಕಾಲ ನಡೆದವು. ೩೫ ದೇಶಗಳಿಂದ ಬಂದ ಸಂಸ್ಕೃತ ವಿದ್ವಾಂಸರು, ಶೋಧ ವಿದ್ಯಾರ್ಥಿಗಳು, ಅಭಿಮಾನಿಗಳ ಒಟ್ಟು ಸಂಖ್ಯೆ ೫೦೦ ಆಗಬಹುದು. http://www.indology.bun.kyoto-u.ac.jp/14thWSC/ಇದರಲ್ಲಿ ಸಂಸ್ಕೃತ ಮತ್ತು ವೈಜ್ಞಾನಿಕ ಸಾಹಿತ್ಯ ಎಂಬ ಗೋಷ್ಠಿಯಲ್ಲಿ ಶ್ಯೇನ ಚಿತಿ ಎಂಬ ಒಂದು ವಿಚಾರವನ್ನು ಕಾಸರಗೋಡಿನ ಯುವ ಕನ್ನಡಿಗ ಮಹೇಶ ಕೂಳಕ್ಕೋಡ್ಲು ಇವರು ಪ್ರಸ್ತುತ ಪಡಿಸಿದರು.
ವಿಶ್ವದ ಗಣಿತದ ಇತಿಹಾಸವನ್ನು ತಿಳಿಯುವುದರಲ್ಲಿ ಅತ್ಯಂತ ಆವಶ್ಯಕವಾಗಿರುವುದು ಸಂಸ್ಕೃತದ ಗ್ರಂಥಗಳ ಪರಿಶೀಲನೆ. ಕ್ರಿ ಪೂ ೮೦೦ ಗಿಂತಲೂ ಹಿಂದಿನದಾದ ಶುಲ್ಬಸೂತ್ರ ಗಳಲ್ಲಿ ಯಜ್ಞ ವೇದಿಕೆಗಳ ನಿರ್ಮಾಣಕ್ಕೆ ಸಂಬಂಧಿಸಿದ ರೇಖಾಗಣಿತದ ಮಾಹಿತಿ ದೊರೆಯುತ್ತದೆ. ಶ್ಯೇನ ಚಿತಿ ಎಂಬುದು ಗಿಡುಗ ಪಕ್ಷಿಯಾಕಾರದ ಒಂದು ಯಜ್ಞ ವೇದಿಕೆ. ಇದರ ನಿರ್ಮಾಣದಲ್ಲಿ ಬಳಸಬೇಕಾದ ಇಟ್ಟಿಗೆಗಳ ನಿರ್ಮಾಣ ಕ್ರಮ, ಆಕಾರ, ವಿನ್ಯಾಸ ಕ್ರಮ ಇತ್ಯಾದಿ ವಿಚಾರಗಳು ಅಲ್ಲಿ ಉಲ್ಲಿಖಿತವಾಗಿವೆ. ರೇಖಾಗಣಿತದ ದ್ರಿಷ್ಟಿಯಿಂದ, ವಿನ್ಯಾಸಕ್ರಮದ ರೀತಿಯಿಂದ ಇದರ ಮಹತ್ತ್ವವೇನು ಎಂಬುದರ ಬಗ್ಗೆ ಮಾಹಿತಿ ನೀಡುವಂತಹ ಚಿತ್ರಗಳ-ಸ್ಲೈಡ್ ಶೋ ಸಹಿತವಾದ ಭಾಷಣವಾಗಿತ್ತು ಶ್ರೀ ಮಹೇಶರದ್ದು. ನ್ಯೂಟನ ನಿಗಿಂತ ಸುಮಾರು 200 ವರ್ಷಗಳ ಹಿಂದೆ ಭಾರತದಲ್ಲಿ ದ್ವಿಪದ ವಿಸ್ತರಣೆ (Binomial expansion) ಯ ವಿಚಾರ ಕ್ರಿಯಾಕ್ರಮಕರೀ ಎಂಬ ಗಣಿತ ಗ್ರಂಥದಲ್ಲಿ ಉಲ್ಲೇಖವಾಗಿರುವುದನ್ನು ಆಧಾರಸಹಿತವಾಗಿ ತೋರಿಸುವ ಒಂದು ಭಾಷಣವನ್ನು (Turning an Algebraic Expression into an Infinite Series--An Indian contribution) ಕೆಲವು ತಿಂಗಳುಗಳ ಹಿಂದೆ ಬೆಲ್ಜಿಯಂ ದೇಶದ ಬ್ರಸ್ಸೆಲ್ಸ್ ವಿಶ್ವವಿದ್ಯಾಲಯದಲ್ಲಿ ಮಾಡಿದ್ದರು. 29 ವರ್ಷದ ಈ ಯುವಾ ಸಂಶೋಧಕ ಮುಂಬಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಶ್ರೀ ರಾಮಸುಬ್ರಹ್ಮಣ್ಯಂ ರ ಮಾರ್ಗದರ್ಶನದಲ್ಲಿ ಭಾರತೀಯ ವಿಜ್ಞಾನದ ಬಗ್ಗೆ ಕಾರ್ಯ ನಿರತರಾಗಿದ್ದಾರೆ. ಇವರ ಊರು ಕಾಸರಗೋಡಿನ ಬದಿಯಡ್ಕ. ಈಶಾವಾಸ್ಯಂ (ಕೂಳಕ್ಕೊಡ್ಲು) ಸುಲೋಚನಾ-ಶಂಕರನಾರಾಯಣ ಭಟ್ಟರ ಮಗನಾದ ಇವರು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್ ನ ಪೂರ್ವ ವಿದ್ಯಾರ್ಥಿ. ಉಜಿರೆ ಯ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಾಗೂ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಥದಲ್ಲಿ ವಿಜ್ಞಾನ ಮತ್ತು ಸಂಸ್ಕೃತದ ವಿಶೇಷ ಅಧ್ಯಯನವನ್ನು ಮಾಡಿದ ಇವರು ರಾಷ್ಟ್ರಪತಿ ಸುವರ್ಣ ಪದಕ ಪುರಸ್ಕಾರ (2003), ಯು ಜಿ ಸಿ ಯ ರಿಸರ್ಚ್ ಫೆಲೋಶಿಪ್ (2003),ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಯ ರಿಸರ್ಚ್ ಫೆಲೋಶಿಪ್ (2008--) ಗಳನ್ನೂ ಸಾಧಿಸಿದವರಾಗಿದ್ದಾರೆ. IIT Bombay ಯ ವಿಜ್ಞಾನಿಗಳು-ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇವರಿಂದ ಸಂಸ್ಕೃತ ಮಾತನಾಡಲು ಪ್ರೇರಿತರಾಗುತ್ತಿದ್ದಾರೆ.

No comments:

Post a Comment