Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

28 August 2013

‘ಶ್ರೀಕೃಷ್ಣ ಜಯಂತಿ’ - 2013

   


“ಶ್ರೀಕೃಷ್ಣ ಬೆಣ್ಣೆಕಳ್ಳ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಕೃಷ್ಣ ಆತನ ಜೊತೆಗಿದ್ದ ಅಶಕ್ತ ಮಕ್ಕಳಿಗಾಗಿ ಗೋಪಿಕೆಯರ ಬಳಿಯಲ್ಲಿದ್ದ ಬೆಣ್ಣೆಯನ್ನು ಕದ್ದು ಪುಟಾಣಿಗಳಿಗೆ ಪೌಷ್ಟಿಕ ಆಹಾರವನ್ನು ಕೊಡುತ್ತಿದ್ದ. ಆತನ ಜನನ, ಬಾಲ ಲೀಲೆಗಳೆಲ್ಲವೂ ಲೋಕ ಕಲ್ಯಾಣಕ್ಕಾಗಿ ಮುಡಿಪಾಗಿದ್ದವು. ಅಂತಹ ಪರಮಾತ್ಮನ ಲೀಲೆಗಳನ್ನು ಕೊಂಡಾಡುವುದಕ್ಕಾಗಿ ಇಂತಹ ಆಚರಣೆಗಳನ್ನು ಸಮಾಜದಲ್ಲಿ ನಡೆಸಲಾಗುತ್ತಿದೆ. ಇವು ಸಮಾಜದ ಅಭಿವೃದ್ಧಿಗೆ ದಾರಿದೀಪವಾಗುತ್ತವೆ.” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಡಿ.ಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ‘ವಿದ್ಯೋದಯ ಸಭಾ’ ಆಶ್ರಯದಲ್ಲಿ ನಮ್ಮ ಶಾಲೆಗಳಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೀರ್ಚಾಲು ಮೇಲಿನ ಪೇಟೆಯ ಸ್ವೀಕಾರ್ ಕಮ್ಯುನಿಕೇಷನ್ಸ್ ಮಾಲಕ ರವಿ.ಕೆ ಪ್ರಾಯೋಜಿಸಿದ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ಅನುಶ್ರೀ. ಎಂ.ಪಿ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.

    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಳ್ಳಪದವು ನಟರಾಜ ಶರ್ಮ ಇವರಿಂದ ‘ಭಕ್ತಿಗೀತೆ’ ಗಾಯನ ಕಾರ್ಯಕ್ರಮ ಜರಗಿತು.

No comments:

Post a Comment