16 December 2015
10 December 2015
ಥ್ರೋ ಬಾಲ್ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ನಮ್ಮ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿ ಶುಭರಾಜ್. ಕೆ 16 ವರ್ಷಕ್ಕಿಂತ ಕೆಳಗಿನ ಹುಡುಗರಿಗಾಗಿ ರಾಷ್ಟ್ರ ಮಟ್ಟದಲ್ಲಿ ನಡೆಯಲಿರುವ ಥ್ರೋ ಬಾಲ್ ಪಂದ್ಯಾಟದಲ್ಲಿ ಕೇರಳ ರಾಜ್ಯದ ತಂಡವನ್ನು ಪ್ರತಿನಿಧಿಸಿ ಆಡಲು ಆಯ್ಕೆಯಾಗಿದ್ದಾನೆ. ಈತ ಕನ್ನೆಪ್ಪಾಡಿ ನಿವಾಸಿ ಬಾಲಕೃಷ್ಣ. ಪಿ ಮತ್ತು ಕುಸುಮಾ ಇವರ ಪುತ್ರ. ನಮ್ಮ ಶಾಲೆಯ ಶಾರೀರಿಕ ಶಿಕ್ಷಕ ಎಂ.ಸೂರ್ಯನಾರಾಯಣ ಇವರಿಂದ ಈತ ತರಬೇತಿ ಪಡೆಯುತ್ತಿದ್ದಾನೆ.
ಕಬಡ್ಡಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಧನುಷಾ.ಬಿ 16 ವರ್ಷಕ್ಕಿಂತ ಕೆಳಗಿನ ಹುಡುಗಿಯರಿಗಾಗಿ ರಾಷ್ಟ್ರ ಮಟ್ಟದಲ್ಲಿ ನಡೆಯಲಿರುವ ಕಬಡ್ಡಿ ಪಂದ್ಯಾಟದಲ್ಲಿ ಕೇರಳ ರಾಜ್ಯದ ತಂಡವನ್ನು ಪ್ರತಿನಿಧಿಸಿ ಆಡಲು ಆಯ್ಕೆಯಾಗಿದ್ದಾಳೆ. ಈಕೆ ಬೇಳ ಕಟ್ಟತ್ತಂಗಡಿ ನಿವಾಸಿ ಮಾಧವ.ಬಿ ಮತ್ತು ಲಕ್ಷ್ಮಿ. ಕೆ.ಬಿ ಇವರ ಪುತ್ರಿ. ನಮ್ಮ ಶಾಲೆಯ ಶಾರೀರಿಕ ಶಿಕ್ಷಕ ಎಂ.ಸೂರ್ಯನಾರಾಯಣ ಇವರಿಂದ ಈಕೆ ತರಬೇತಿ ಪಡೆಯುತ್ತಿದ್ದಾಳೆ.
08 December 2015
ವಿಜ್ಞಾನ ಮೇಳ - ರಾಜ್ಯ ಮಟ್ಟದಲ್ಲಿ ಬಹುಮಾನ
ಕೊಲ್ಲಂನಲ್ಲಿ ಜರಗಿದ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಅಕ್ಷತಾ.ಡಿ (ಎಡನಾಡು ಗ್ರಾಮದ ಡಿ.ಗಣಪತಿ ಭಟ್ - ಸಾವಿತ್ರಿ ಇವರ ಪುತ್ರಿ) ಮತ್ತು ನಿಸರ್ಗ.ಕೆ (ಕೇಶವಪ್ರಸಾದ್ ಕೊಡ್ವಕರೆ - ಭಾರತಿ. ಎಂ.ಜಿ ಇವರ ಪುತ್ರಿ) ಮಾಲಿನ್ಯ ಸಂಸ್ಕರಣೆಯ ಕುರಿತಾಗಿ ಪ್ರದರ್ಶಿಸಿದ ಸ್ಥಿರ ಮಾದರಿಯು ‘ಬಿ’ ಗ್ರೇಡ್ ಸಹಿತ ಬಹುಮಾನವನ್ನು ಪಡೆದಿದೆ. ಒಂಭತ್ತನೇ ತರಗತಿ ವಿದ್ಯಾರ್ಥಿಗಳಾದ ಚಿನ್ಮಯ ಭಟ್.ಕೆ.ಕೆ (ಕಳತ್ತೂರು ಕಲ್ಪತರು ನಿವಾಸಿ ಕೆ.ಕೆ.ಲಕ್ಷ್ಮೀನಾರಾಯಣ ಭಟ್ - ಪರಮೇಶ್ವರಿ.ಕೆ.ಕೆ ಇವರ ಪುತ್ರ) ಮತ್ತು ಶರಣ್ ಕುಮಾರ್ (ಬೇಳ ದೊಡ್ಡಡ್ಕ ನಿವಾಸಿ ಹರಿಶ್ಚಂದ್ರ ಶೆಟ್ಟಿ - ಶಾಲಿನಿ ಇವರ ಪುತ್ರ) ಜೈವಿಕ ಕೀಟನಾಶಕದ ಕುರಿತಾಗಿ ಮಂಡಿಸಿದ ಸಂಶೋಧನಾತ್ಮಕ ಪ್ರೋಜೆಕ್ಟ್ ‘ಎ’ ಗ್ರೇಡ್ ಪಡೆದಿದೆ. ಇವರಿಗೆ ಶುಭಾಶಯಗಳು...
24 November 2015
``ದೈಹಿಕ ಶಿಕ್ಷಣ ಪಡೆಯುವುದು ವಿದ್ಯಾರ್ಥಿ ಜೀವನದ ಅಗತ್ಯ:" ಅಡ್ವಕೇಟ್ ಶ್ರೀಕಾಂತ್

“ಮಗು
ವಿದ್ಯಾರ್ಥಿ ಜೀವನದಲ್ಲಿ ಬಹುಮುಖಿ ಬೆಳವಣಿಗೆಯನ್ನು ಪಡೆದುಕೊಳ್ಳಬೇಕು. ಕಲೆ,
ಕ್ರೀಡೆಗಳ ಜೊತೆ ಬೌದ್ಧಿಕ ವಿಕಾಸಕ್ಕೂ ವಿದ್ಯಾರ್ಥಿ ಜೀವನದಲ್ಲಿ ಪ್ರಸ್ತುತ ಸಾಕಷ್ಟು
ಅವಕಾಶ ದೊರೆಯುತ್ತಿರುವುದು ಸಂತಸದ ವಿಚಾರ. ಶರೀರದ ಸರ್ವತೋಮುಖ ಬೆಳವಣಿಗೆ ದೈಹಿಕ
ಶಿಕ್ಷಣ ಅಗತ್ಯವಾದುದರಿಂದ ವಿದ್ಯಾರ್ಥಿಯು ಕ್ರೀಡಾಕೂಟಗಳಿಂದ ವಿಮುಖನಾಗಬಾರದು.
ಸ್ಪರ್ಧೆಗಳ ಜಯಾಪಜಯಕ್ಕಿಂತ ಭಾಗವಹಿಸುವಿಕೆ ಹೆಚ್ಚು ಮಹತ್ವಪೂರ್ಣವಾದುದು ಎಂದು
ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯ ಅಡ್ವಕೇಟ್ ಶ್ರೀಕಾಂತ್ ಅಭಿಪ್ರಾಯಪಟ್ಟರು. ಅವರು
21.11.2015 ಶನಿವಾರ ಸಾಯಂಕಾಲ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ
ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ
ವಿದ್ಯಾರ್ಥಿಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಿ
ಮಾತನಾಡುತ್ತಿದ್ದರು.
ಬದಿಯಡ್ಕ
ಗ್ರಾಮ ಪಂಚಾಯತು ಉಪಾಧ್ಯಕ್ಷೆ ಸೈಬುನ್ನೀಸಾ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ
ಪಂಚಾಯತು ಸದಸ್ಯರಾದ ಪ್ರೇಮ ಕುಮಾರಿ, ಶ್ಯಾಮಪ್ರಸಾದ್ ಮಾನ್ಯ, ಮಹಾಜನ ವಿದ್ಯಾಸಂಸ್ಥೆಗಳ
ವ್ಯವಸ್ಥಾಪಕ ಜಯದೇವ ಖಂಡಿಗೆ, ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ
ಮುಖ್ಯೋಪಾಧ್ಯಾಯ ವೆಂಕಟರಾಜ.ಸಿ.ಎಚ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮೂರು
ದಿನಗಳ ಕಾಲ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿ ಕುಂಬಳೆ
ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಚಾಂಪಿಯನ್ ಪಟ್ಟವನ್ನು ಮತ್ತು ಆತಿಥೇಯ ನೀರ್ಚಾಲು
ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ರನ್ನರ್ಸ್ ಅಪ್ ಗೌರವವನ್ನು
ಪಡೆದುಕೊಂಡಿತು.
20 November 2015
“ಕ್ರೀಡಾಕೂಟಗಳು ಶಾರೀರಿಕ ಬೆಳವಣಿಗೆಗೆ ಸಹಕಾರಿ": ಎನ್.ಎ.ನೆಲ್ಲಿಕುನ್ನು

ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಬ್ಲೋಕ್ ಪಂಚಾಯತು ಸದಸ್ಯರಾದ ಅವಿನಾಶ್ ರೈ. ವಿ, ಎ.ಎಸ್.ಅಹ್ಮದ್, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಶಂಕರ.ಡಿ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ.ಕೆ, ಕಾಸರಗೋಡು ಜಿಲ್ಲಾ ಸ್ಪೋರ್ಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಎಂ.ಬಲ್ಲಾಳ್, ಕುಂಬಳೆ ಉಪಜಿಲ್ಲಾ ಕ್ರೀಡಾಕೂಟದ ಕಾರ್ಯದರ್ಶಿ ಎಂ.ಸೂರ್ಯನಾರಾಯಣ ಇವರು ಕ್ರೀಡಾಕೂಟಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಲೆಯ ಹಳೆ ವಿದ್ಯಾರ್ಥಿ ಕೆ.ಎನ್.ಕೃಷ್ಣ ಭಟ್ ಇವರನ್ನು ಮಹಾಜನ ವಿದ್ಯಾಸಂಸ್ಥೆಗಳ ಪರವಾಗಿ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಗೌರವಿಸಿದರು. ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ. ಸಿ.ಎಚ್ ಸ್ವಾಗತಿಸಿದರು. ಕಾರ್ಯಕ್ರಮ ಸಮಿತಿ ಸಂಚಾಲಕ ವಿಶ್ವನಾಥ ಭಟ್ ಧನ್ಯವಾದ ಸಮರ್ಪಿಸಿದರು.
19 November 2015
ಕ್ರೀಡಾ ಜ್ಯೋತಿ ಬೆಳಗಿ ಕುಂಬಳೆ ಉಪಜಿಲ್ಲಾ ಕ್ರೀಡಾಕೂಟ ಆರಂಭ
ಕುಂಬಳೆ ಉಪಜಿಲ್ಲಾ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ನವೆಂಬರ್ 19 ರಿಂದ 21 ರ ತನಕ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಲಿದೆ. 19.11.2015 ಗುರುವಾರ ಬೆಳಗ್ಗೆ 9 ಗಂಟೆಗೆ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ.ಕೆ ಧ್ವಜಾರೋಹಣಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೀರ್ಚಾಲು ಶಾಲೆಯ ಹಳೆ ವಿದ್ಯಾರ್ಥಿ ಮತ್ತು ಪ್ರಸ್ತುತ ಅಂತಾರಾಷ್ಟ್ರೀಯ ಕ್ರೀಡಾಪಟು ವಿಶ್ವ.ಸಿ.ಎಚ್., ಮತ್ತು ಶಾಲೆಯ ಪ್ರತಿಭಾನ್ವಿತ ಕ್ರೀಡಾಪಟುಗಳು ಕ್ರೀಡಾ ಜ್ಯೋತಿಯನ್ನು ಬೆಳಗಿದರು.
ಎಲ್.ಪಿ ಮಿನಿ, ಎಲ್.ಪಿ ಕಿಡ್ಡೀಸ್, ಯು.ಪಿ ಕಿಡ್ಡೀಸ್, ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಕುಂಬಳೆ ಉಪಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟ 81 ಶಾಲೆಗಳಿಂದ ಸುಮಾರು 1700 ಮಂದಿ ಕ್ರೀಡಾಪಟುಗಳು ಮೂರು ದಿನ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
16 November 2015
ನವೆಂಬರ್ 19 ರಿಂದ ಕುಂಬಳೆ ಉಪಜಿಲ್ಲಾ ಕ್ರೀಡಾಕೂಟ
ಕುಂಬಳೆ ಉಪಜಿಲ್ಲಾ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ನವೆಂಬರ್ 19 ರಿಂದ 21 ರ ತನಕ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಲಿದೆ. 19.11.2015 ಗುರುವಾರ ಬೆಳಗ್ಗೆ 9 ಗಂಟೆಗೆ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ.ಕೆ ಧ್ವಜಾರೋಹಣಗೈಯುವರು. ನೀರ್ಚಾಲು ಶಾಲೆಯ ಹಳೆ ವಿದ್ಯಾರ್ಥಿ ಮತ್ತು ಪ್ರಸ್ತುತ ಅಂತಾರಾಷ್ಟ್ರೀಯ ಕ್ರೀಡಾಪಟು ವಿಶ್ವ.ಸಿ.ಎಚ್. ಕ್ರೀಡಾ ಜ್ಯೋತಿಯನ್ನು ಬೆಳಗಿಸಲಿದ್ದಾರೆ.
20.11.2015 ಶುಕ್ರವಾರ ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 9 ಗಂಟೆಗೆ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ಜರಗಲಿದೆ. ಈ ಸಂದರ್ಭದಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ನೆಲ್ಲಿಕುನ್ನು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾಸರಗೋಡು ಬ್ಲೋಕ್ ಪಂಚಾಯತು ಸದಸ್ಯರಾದ ಅವಿನಾಶ್ ರೈ. ವಿ, ಎ.ಎಸ್.ಅಹ್ಮದ್ ಮತ್ತು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಶಂಕರ.ಡಿ ಇವರು ಕ್ರೀಡಾಕೂಟಕ್ಕೆ ಶುಭಹಾರೈಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಸ್ವಾಗತವನ್ನು ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ. ಸಿ.ಎಚ್ ಮತ್ತು ಧನ್ಯವಾದ ಸಮರ್ಪಣೆಯನ್ನು ಕಾರ್ಯಕ್ರಮ ಸಮಿತಿ ಸಂಚಾಲಕ ವಿಶ್ವನಾಥ ಭಟ್ ನಿರ್ವಹಿಸಲಿದ್ದಾರೆ.
21.11.2015 ಶನಿವಾರ ಅಪರಾಹ್ನ 4 ಗಂಟೆಗೆ ಜರಗಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷರು ವಹಿಸಲಿದ್ದಾರೆ. ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯ ಅಡ್ವಕೇಟ್ ಕೆ.ಶ್ರೀಕಾಂತ್ ಬಹುಮಾನಗಳನ್ನು ವಿತರಿಸಲಿದ್ದಾರೆ. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಪ್ರೇಮಾ, ಶ್ಯಾಮಪ್ರಸಾದ್ ಮಾನ್ಯ ಮತ್ತು ಕುಂಬಳೆ ಉಪಜಿಲ್ಲಾ ಮುಖ್ಯೋಪಾಧ್ಯಾಯರ ಸಂಘಟನೆಯ ವಿನೋದನ್.ಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಲಿದ್ದಾರೆ. ಸಮಾರೋಪ ಸಮಾರಂಭದ ಸ್ವಾಗತವನ್ನು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ಕೈಲಾಸಮೂರ್ತಿ ಮತ್ತು ಧನ್ಯವಾದ ಸಮರ್ಪಣೆಯನ್ನು ಕುಂಬಳೆ ಉಪಜಿಲ್ಲಾ ಕ್ರೀಡಾಕೂಟದ ಕಾರ್ಯದರ್ಶಿ ಎಂ.ಸೂರ್ಯನಾರಾಯಣ ನಿರ್ವಹಿಸಲಿದ್ದಾರೆ.
28 September 2015
ಕುಂಬಳೆ ಉಪಜಿಲ್ಲಾ ಕ್ರೀಡಾಕೂಟ ಲಾಂಛನ ಲೋಕಾರ್ಪಣೆ
“ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಕೇರಳದಲ್ಲಿ ವ್ಯವಸ್ಥಿತವಾಗಿ ಪ್ರತಿವರ್ಷವೂ ಆಯೋಜಿಸಲ್ಪಡುತ್ತಿರುವ ಕ್ರೀಡಾಕೂಟಗಳು ಅತ್ಯಂತ ಪರಿಣಾಮಕಾರಿಯಾಗಿವೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗುವ ಈ ಕ್ರೀಡಾಕೂಟವು ಕುಂಬಳೆ ಉಪಜಿಲ್ಲಾ ಮಟ್ಟದಲ್ಲಿ ನಮ್ಮ ಗ್ರಾಮೀಣ ಪ್ರದೇಶವಾದ ನೀರ್ಚಾಲಿನಲ್ಲಿ ನಡೆಯಲಿರುವುದು ಸಂತಸದ ವಿಚಾರ. ಎಂದು ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಕ್ರೀಡಾಕೂಟದ ಲಾಂಛನವನ್ನು ಲೋಕಾರ್ಪಣೆಗೈದು ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ವ್ಯವಸ್ಥಾಪಕ ಜಯದೇವ ಖಂಡಿಗೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ, ಅಬ್ದುಲ್ಲ ತಲ್ಪಣಾಜೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಉಪಸ್ಥಿತರಿದ್ದರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ ಸ್ವಾಗತಿಸಿದರು. ಕುಂಬಳೆ ಉಪಜಿಲ್ಲಾ ಸ್ಪೋರ್ಟ್ಸ್ ಮತ್ತು ಗೇಮ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಎಂ. ಸೂರ್ಯನಾರಾಯಣ ವಂದಿಸಿದರು.
09 September 2015
ಸಂಸ್ಕೃತ ದಿನಾಚರಣೆಯಲ್ಲಿ ಬಹುಮಾನ

05 September 2015
ಶ್ರೀಕೃಷ್ಣ ಜಯಂತಿ ಉತ್ಸವ 2015


ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ರಮ್ಯಾ.ಕೆ ವರದಿ ವಾಚಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತಿರುಪತಿ ತಿರುಮಲ ದಾಸ ಸಾಹಿತ್ಯ ಪ್ರೋಜೆಕ್ಟ್ನಲ್ಲಿ ನೋಂದಾವಣೆಗೊಂಡ ಶ್ರೀ ಮಹಾದೇವಿ ಮಹಿಳಾ ಭಜನಾ ಮಂಡಳಿ ಕಳತ್ತೂರು ಇವರಿಂದ ದಾಸ ಸಂಕೀರ್ತನೆ ಕಾರ್ಯಕ್ರಮ ಜರಗಿತು.
04 September 2015
ರಕ್ಷಕ ಶಿಕ್ಷಕ ಸಂಘದ ಮಹಾಸಭೆ 2015
“ನೀರ್ಚಾಲಿನ ಗ್ರಾಮೀಣ ಪರಿಸರದಲ್ಲಿ ಬೆಳೆದು ಬಂದ ಮಹಾಜನ ವಿದ್ಯಾಲಯವು ಈಗ ಪುನ: ಹೈಯರ್ ಸೆಕೆಂಡರಿ ವಿಭಾಗದ ತನಕ ಬೆಳೆದಿದೆ. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗಾಗಿ ತಕ್ಷಣವೇ ಶಾಲಾ ವಾಹನವನ್ನು ಖರೀದಿಸಿ ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ನೀಡಲಿದ್ದೇವೆ." ಎಂದು ನಮ್ಮ ಶಾಲೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು 04.09.2015 ಶುಕ್ರವಾರ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ, ರಕ್ಷಕ ಶಿಕ್ಷಕ ಸಂಘದ ಮಾತೃ ವಿಭಾಗದ ಅಧ್ಯಕ್ಷೆ ಫೌಝಿಯಾ ಮತ್ತು ಪರಮೇಶ್ವರಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿ ವರದಿ ವಾಚಿಸಿದರು. ಶಿಕ್ಷಕರಾದ ಎಚ್.ಸೂರ್ಯನಾರಾಯಣ ವಂದಿಸಿದರು. ಶಿವಪ್ರಕಾಶ್. ಎಂ.ಕೆ ಕಾರ್ಯಕ್ರಮ ನಿರೂಪಿಸಿದರು.
15 August 2015
ಸ್ವಾತಂತ್ರ್ಯ ಯಾತ್ರೆ 2015
“ಸ್ವಾತಂತ್ರ್ಯ ದಿನದ ಆಚರಣೆ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ಬೆಳಗಿಸುತ್ತದೆ. ಆ ಮೂಲಕ ಹಿರಿಯರ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ ನಾವು ಶ್ರಮಿಸಬೇಕಾಗಿದೆ. ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು ಸ್ವಾತಂತ್ರ್ಯ ದಿನ ಕಾರ್ಯಕ್ರಮದ ಆಚರಣೆ ನೆರವಾಗುತ್ತದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ, ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಿ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಾವು ಶ್ರಮಿಸಬೇಕಾಗಿದೆ" ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಅಭಿಪ್ರಾಯಪಟ್ಟರು. ಅವರು 15.08.2015 ಶನಿವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ಸ್ವಾತಂತ್ರ್ಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸಾಯಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿ ವಿನೋದಿನಿ.ಕೆ ಸ್ವಾಗತಿಸಿ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ಧನ್ಯವಾದ ಸಮರ್ಪಿಸಿದರು.
ವಿದ್ಯಾರ್ಥಿಗಳಿಂದ ನೀರ್ಚಾಲಿನಲ್ಲಿ ಸ್ವಾತಂತ್ರ್ಯ ಮೆರವಣಿಗೆ ನಡೆಯಿತು.
30 July 2015
ಶಾಲೆಯ ಮುಂದೆ ಬೇರಿಕೇಡ್
ನಮ್ಮ ಶಾಲೆಯ ಮುಂದಿನ ರಸ್ತೆ ಉತ್ತಮ ಸ್ಥಿತಿಯಲ್ಲಿದ್ದು, ವಾಹನಗಳು ವೇಗವಾಗಿ ಸಂಚರಿಸುತ್ತಿದ್ದುದರಿಂದ ಶಾಲಾ ವಿದ್ಯಾರ್ಥಿಗಳ ಪ್ರಾಣಕ್ಕೆ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿತ್ತು. ಈ ಸಮಸ್ಯೆಯನ್ನು ಮನಗಂಡ ಸಹೃದಯರು ಶಾಲೆಯ ಮುಂಭಾಗದ ರಸ್ತೆಯಲ್ಲಿ ವಾಹನಗಳ ವೇಗದ ಸಂಚಾರಕ್ಕೆ ತಡೆಯನ್ನು ಒಡ್ಡುವಂತಹ ಬೇರಿಕೇಡ್ ಸ್ಥಾಪಿಸಿದ್ದಾರೆ. ಮೊನ್ನೆ 26ರಂದು ಜರಗಿದ ಈ ಬೇರಿಕೇಡ್ ಉದ್ಘಾಟನಾ ಸಮಾರಂಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಶ್ರೀ ಕೆ.ಎನ್. ಕೃಷ್ಣ ಭಟ್ ಬೇರಿಕೇಡ್ಗಳಿಗೆ ಚಾಲನೆ ನೀಡಿದರು. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು...
30 June 2015
ವಿದಾಯ ಸಮಾರಂಭ
“ನಿವೃತ್ತ ಜೀವನದಲ್ಲಿ ಸಾಮಾಜಿಕ ಚಟುವಟಿಕೆಗಳ ಕಡೆಗೆ ಸಕ್ರಿಯರಾಗಿರಬೇಕಾದ ಕಾಲ. ಸಮಾಜಕ್ಕೆ ನಿವೃತ್ತರಿಂದ ಇನ್ನಷ್ಟು ಕೊಡುಗೆಗಳು ದೊರೆಯಬೇಕಾಗಿದೆ. ನಿಸ್ವಾರ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಈ ಇಬ್ಬರು ಅಧ್ಯಾಪಕರು ಶಾಲೆಯ ಕ್ರೀಡಾ ಚಟುವಟಿಕೆಗಳಲ್ಲಿ, ಸಾಂಸ್ಕೃತಿಕ ಹಿನ್ನೆಲೆಗಳಲ್ಲಿ ದುಡಿದು ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ. ಭವಿಷ್ಯದಲ್ಲಿ ನೈಜ ಜೀವನವನ್ನು ಪೂರೈಸಲು ಭಗವಂತನು ಅವರನ್ನು ಹರಸಲಿ” ಎಂದು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ಶಾಲಾ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಮತ್ತು ಹಿರಿಯ ಶಿಕ್ಷಕ ಕೆ.ನಾರಾಯಣ ಭಟ್ ಇವರ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ಉಪಸ್ಥಿತರಿದ್ದರು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿದರು. ಶಾಲಾ ಹಿರಿಯ ಶಿಕ್ಷಕಿ ಕೆ.ವಿನೋದಿನಿ ವಂದಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.
26 June 2015
22 June 2015
ರಸ್ತೆ ಸುರಕ್ಷೆಯನ್ನು ಹೆಚ್ಚಿಸಬೇಕು: ರಸ್ತೆ ಸುರಕ್ಷಾ ಸಮಿತಿ
“ಸಾವಿರಾರು ಮಂದಿ ವಿದ್ಯಾರ್ಥಿಗಳು ನಿತ್ಯ ಸಂಚಾರ ನಡೆಸುವ, ರಸ್ತೆಯನ್ನು ದಾಟಲು ಕಷ್ಟಪಡುವ ನೀರ್ಚಾಲು ಶಾಲಾ ವಠಾರದಲ್ಲಿ ರಸ್ತೆ ಸುರಕ್ಷೆಯು ಆತಂಕಕಾರಿಯಾಗಿದೆ. ಕುಂಬಳೆ-ಮುಳ್ಳೇರಿಯ ರಸ್ತೆಯು ಅಭಿವೃದ್ಧಿ ಹೊಂದಿರುವುದರಿಂದ ವಾಹನಗಳು ಅತ್ಯಂತ ವೇಗವಾಗಿ, ಭೀತಿ ಹುಟ್ಟಿಸುವಂತೆ ಚಲಿಸುತ್ತಿದ್ದು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ಗಂಭೀರ ಅಪಾಯವನ್ನೊಡ್ಡುತ್ತಿದೆ. ಈ ನಿಟ್ಟಿನಲ್ಲಿ ರಸ್ತೆ ಸುರಕ್ಷೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಎಂದು ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ಜರಗಿದ ರಸ್ತೆ ಸುರಕ್ಷಾ ಕ್ಲಬ್ ಮತ್ತು ಶಾಲಾ ಸಂರಕ್ಷಣಾ ಸಮಿತಿಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಮಂಜುನಾಥ ಮಾನ್ಯ, ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ, ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ, ಬದಿಯಡ್ಕ ಪೋಲೀಸು ಇಲಾಖೆಯ ರತ್ನಾಕರನ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬಾಲಸುಬ್ರಹ್ಮಣ್ಯ ಭಟ್, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿ ಶಿಕ್ಷಕ ಶಿವಪ್ರಕಾಶ್ ಎಂ.ಕೆ ವಂದಿಸಿದರು.
ನೀರ್ಚಾಲು ಶಾಲೆಯ ಎದುರು ಭಾಗದ ರಸ್ತೆಯಲ್ಲಿ ಜೀಬ್ರಾ ಗುರುತು, ರಸ್ತೆ ಬಾರಿಕೇಡ್ಗಳನ್ನು ಅಳವಡಿಸುವುದು, ಶಾಲಾ ವಠಾರ ಎಂಬ ಸೂಚನಾ ಫಲಕದ ಸ್ಥಾಪನೆ ಮತ್ತು ಬಸ್ ಬೇ ನಿರ್ಮಾಣ ಮಾಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಕಾರ್ಯಗತಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
20 June 2015
09 June 2015
ಕವಿ ಕಯ್ಯಾರರಿಗೆ ಮಾತೃಶಾಲೆಯ ಅಭಿನಂದನೆ
ನಾಡೋಜ ಡಾ|ಕಯ್ಯಾರ ಕಿಞ್ಞಣ್ಣ ರೈಯವರು ನೂರು ಸಂವತ್ಸರಗಳನ್ನು ಪೂರ್ತಿಗೊಳಿಸಿದ ಸಂದರ್ಭದಲ್ಲಿ ನಿನ್ನೆ 08.06.2015 ಸೋಮವಾರ ಅವರು ಕಲಿತ ನಮ್ಮ ಮಹಾಜನ ಸಂಸ್ಕೃತ ಕಾಲೇಜಿನ ಪರವಾಗಿ ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಗೌರವವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ, ಶಿಕ್ಷಕರಾದ ವಾಣಿ.ಪಿಎಸ್, ಶೈಲಜಾ.ಬಿ, ಗೋವಿಂದ ಶರ್ಮ.ಕೆ, ತಲೆಂಗಳ ಕೃಷ್ಣಪ್ರಸಾದ ಉಪಸ್ಥಿತರಿದ್ದರು.
05 June 2015
ವಿಶ್ವಪರಿಸರ ದಿನಾಚರಣೆ
“ವಾತಾವರಣದಲ್ಲಿ ಅಂಗಾರಾಮ್ಲ ಮತ್ತು ಇತರ ವಿಷಕಾರಿ ಅನಿಲಗಳ, ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಭೂಮಾಲಿನ್ಯದಿಂದಾಗಿ ಆಮ್ಲ ಮಳೆಯಂತಹ ಅಪಾಯಕಾರಿ ಪರಿಸ್ಥಿತಿ ನಿರ್ವಣವಾಗುತ್ತಿದೆ. ವನ್ಯಜೀವಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದು ಜೀವಜಾಲದ ಭದ್ರತೆಗೆ ತೊಡಕಾಗಿ ಪರಿಣಮಿಸಿದೆ. ಆಹಾರದ ಉತ್ಪಾದನೆ ಸಸ್ಯಗಳಿಂದ ಮಾತ್ರ ಸಾಧ್ಯ. ಅಂತಹ ಸಸ್ಯಗಳಿಗೆ ಪರಿಸರವು ಮಾರಕವಾಗಿ ಪರಿಣಮಿಸುತ್ತಿರುವುದರಿಂದ ನಾವು ಪರಿಸರ ಸಂರಕ್ಷಣೆಯ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ತ್ಯಾಜ್ಯದ ಸಮರ್ಪಕ ವಿಲೇವಾರಿ, ತ್ಯಾಜ್ಯದ ಮರುಬಳಕೆ, ಮನೆಯ ಸುತ್ತ ಮುತ್ತ ಗಿಡ-ಮರ ಬೆಳೆಸುವುದು, ಸಾವಯವ ಕೃಷಿಗೆ ಉತ್ತೇಜನ, ರಾಸಾಯನಿಕಗಳ ಮಿತ ಬಳಕೆ, ನೈಸರ್ಗಿಕ ಮೂಲಗಳ ಸದ್ಬಳಕೆ, ತ್ಯಾಜ್ಯದ ಉತ್ಪಾದನೆಯನ್ನು ಆದಷ್ಟು ನಿಯಂತ್ರಣದಲ್ಲಿಡುವುದರಿಂದ ಸಾಕಷ್ಟು ಮಟ್ಟಿಗೆ ಭೂಮಾಲಿನ್ಯವನ್ನು ತಪ್ಪಿಸಬಹುದು. ಜೊತೆಗೆ ದೊರೆತ ಆಹಾರವನ್ನು ಯುಕ್ತಿಯಿಂದ ಉಪಯೋಗಿಸಬೇಕಾಗಿದೆ, ಮುಂದಿನ ತಲೆಮಾರಿನ ಜೀವಿಗಳಿಗಾಗಿ ಪರಿಸರವನ್ನು ಉಳಿಸಬೇಕಾಗಿದೆ" ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್. ವೆಂಕಟರಾಜ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವಿಶ್ವಪರಿಸರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಶಿಕ್ಷಕರಾದ ಕೆ.ವಿನೋದಿನಿ ಅಧ್ಯಕ್ಷತೆ ವಹಿಸಿದ್ದರು. ಇಕೋ ಕ್ಲಬ್ ಸಂಚಾಲಕ ಶಿವಪ್ರಕಾಶ್.ಎಂ.ಕೆ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಸೂರ್ಯನಾರಾಯಣ. ಎಂ ವಂದಿಸಿದರು.
01 June 2015
ಪ್ರವೇಶೋತ್ಸವ 2015
“ಹೊಸ ಕನಸುಗಳನ್ನು ಕಟ್ಟಿಕೊಂಡು ಶಾಲೆಗೆ ತಲಪುವ ವಿದ್ಯಾರ್ಥಿಗಳಿಗೆ ಶಿಕ್ಷಣವು ಉತ್ತಮ ಭವಿಷ್ಯವನ್ನು ಕಟ್ಟಿಕೊಡಲಿದೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಉತ್ತಮವಾಗಿ ಕಲಿಯುವುದು ಅನಿವಾರ್ಯ. ಶಿಸ್ತುಬದ್ಧವಾದ ಶಿಕ್ಷಣ ಸುಸಂಸ್ಕೃತ ಸಮಾಜವನ್ನು ರೂಪಿಸುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಮೆಟ್ಟಿಲುಗಳನ್ನು ಏರಿ ಬರುತ್ತಿರುವ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಲಿ, ಬಾಳು ಹಸನಾಗಲಿ" ಎಂದು ನಮ್ಮ ಶಾಲೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ, ಶಿವಪ್ರಸಾದ್ ಹೊಸಮನೆ, ನಿವೃತ್ತಿ ಹೊಂದುತ್ತಿರುವ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್. ವೆಂಕಟರಾಜ ಪ್ರಾಸ್ತಾವಿಕ ಭಾಷಣ ಮಾಡಿದರು. ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.
20 January 2015
‘ರನ್ ಕೇರಳ ರನ್’
“ಆಧುನಿಕ ಜಗತ್ತಿನಲ್ಲಿ ಶಾರೀರಿಕ ವ್ಯಾಯಾಮ ಕಡಿಮೆಯಾಗುತ್ತಿದ್ದು, ಇದು ಆರೋಗ್ಯವನ್ನು ವ್ಯತಿರಿಕ್ತವಾಗಿ ಬಾಧಿಸುತ್ತಿದೆ. ಅರೋಗ್ಯಕರ ಸಮಾಜದ ನಿರ್ಮಾಣದಲ್ಲಿ ದೈಹಿಕ ಕ್ರೀಡೆಗಳ ಮಹತ್ವವೂ ಅಧಿಕವಾಗಿದ್ದು ಈ ನಿಟ್ಟಿನಲ್ಲಿ ಕೇರಳ ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ. ಈ ತಿಂಗಳ ಅಂತ್ಯಕ್ಕೆ ಕೇರಳದಲ್ಲಿ ಜರಗುವ ರಾಷ್ಟ್ರೀಯ ಗೇಮ್ಸ್ ಯಶಸ್ವಿಯಾಗಲಿ" ಎಂದು ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ‘ರನ್ ಕೇರಳ ರನ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲಾ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ಎಂ.ಸೂರ್ಯನಾರಾಯಣ ಪ್ರತಿಜ್ಞೆಯನ್ನು ಬೋಧಿಸಿದರು. ಶಾಲಾ ಹಿರಿಯ ಶಿಕ್ಷಕಿ ಎ.ಭುವನೇಶ್ವರಿ ಸ್ವಾಗತಿಸಿದರು, ಶಿಕ್ಷಕಿ ವಾಣಿ.ಪಿ.ಎಸ್ ವಂದಿಸಿದರು.
Subscribe to:
Posts (Atom)