“ತಂತ್ರಜ್ಞಾನವನ್ನು ಕಲಿಕೆಯಲ್ಲಿ ಬಳಸಿಕೊಳ್ಳಬೇಕು. ೨೦೦೨ರಲ್ಲಿ ಶಾಲೆಗಳಲ್ಲಿ ಆರಂಭವಾದ ಐಟಿ ಎಟ್ ಸ್ಕೂಲ್ ಯೋಜನೆ ಪ್ರಸ್ತುತ ಮಾಹಿತಿ ತಂತ್ರಜ್ಞಾನ ಆಧಾರಿತ ಶಿಕ್ಷಣ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ನೀಡುವಷ್ಟರ ತನಕ ಬೆಳೆದು ನಿಂತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಆನಿಮೇಶನ್ ತರಬೇತಿಯೂ ವಿದ್ಯಾರ್ಥಿಗಳ ಎಲ್ಲ ಪಠ್ಯ ವಿಷಯಗಳ ಕಲಿಕೆಯಲ್ಲಿ ನೆರವಾಗಲಿದೆ. ಸೃಜನಶೀಲತೆ ಇದ್ದರೆ ಆನಿಮೇಶನ್ ತಂತ್ರಜ್ಞಾನದ ಮೂಲಕ ಹೊಸ ಉತ್ಪನ್ನವನ್ನು ನಾವು ಜಗತ್ತಿಗೆ ನೀಡಬಹುದು. ಆದ್ದರಿಂದ ಇಲ್ಲಿ ದೊರೆತ ಶಿಕ್ಷಣವನ್ನು ಮುಂದಿನ ಜೀವನದಲ್ಲಿ ಉಪಯೋಗಿಸಿಕೊಳ್ಳಿ” ಎಂದು ಕೇರಳ ವಿದ್ಯಾಭ್ಯಾಸ ಇಲಾಖೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಕಾಸರಗೋಡು ಜಿಲ್ಲಾ ಮಾಸ್ಟರ್ ಟ್ರೈನರ್ ಆಗಸ್ಟಿನ್ ಬರ್ನಾಡ್ ಅಭಿಪ್ರಾಯಪಟ್ಟರು. ಅವರು ಇಂದು ಅಪರಾಹ್ನ ನಮ್ಮ ಶಾಲೆಯಲ್ಲಿ ನಾಲ್ಕು ದಿನಗಳಿಂದ ಜರಗುತ್ತಿರುವ ‘ಆಂಟ್ಸ್ ಆನಿಮೇಶನ್’ ಕಾರ್ಯಕ್ರಮದ ಸಮಾರೋಪ ಭಾಷಣವನ್ನು ನೆರವೇರಿಸುತ್ತಾ ಮಾತನಾಡುತ್ತಿದ್ದರು.
ನೀರ್ಚಾಲಿನ ‘ಶಾರ್ಪ್ ಡಿಜಿಟಲ್ ಸ್ಟುಡಿಯೋ’ ಸಂಸ್ಥೆಯ ಮಾಲಕ ವೇಣುಗೋಪಾಲ ಆರೋಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆನಿಮೇಶನ್ ಸಾಧ್ಯತೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಾಹಿತಿ ತಂತ್ರಜ್ಞಾನ ವಿಭಾಗದ ಸಂಯೋಜಕ ಎಚ್. ಸೂರ್ಯನಾರಾಯಣ ಮತ್ತು ಸಂಪನ್ಮೂಲ ಅಧ್ಯಾಪಕ ಬಿ.ಸುಬ್ರಹ್ಮಣ್ಯ ಕೆದಿಲಾಯ ಉಪಸ್ಥಿತರಿದ್ದರು. ತರಬೇತಿ ಪಡೆದ ವಿದ್ಯಾರ್ಥಿಗಳಾದ ಶ್ರೀಶ.ಕೆ ಮತ್ತು ಸುಶೀಲಾ. ಎಸ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳಾದ ಅನುಶ್ರೀ ಸ್ವಾಗತಿಸಿ ಆದರ್ಶ ಎಚ್.ಎ ವಂದಿಸಿದರು. ಶ್ರದ್ಧಾ.ಎಸ್ ಪ್ರಾರ್ಥಿಸಿದರು ಮತ್ತು ಚೈತಾಲಿ.ಕೆ.ಎನ್ ಕಾರ್ಯಕ್ರಮ ನಿರೂಪಿಸಿದರು. ನಾಲ್ಕು ದಿನಗಳ ಆನಿಮೇಶನ್ ಶಿಬಿರದಲ್ಲಿ ವಿದ್ಯಾರ್ಥಿಗಳಾದ ಶಾಂತಿ.ಕೆ, ಶಶಾಂಕ ಶರ್ಮ.ಎಸ್, ವರ್ಷಾ.ಕೆ, ಸುಬ್ರಹ್ಮಣ್ಯ ಪ್ರಸಾದ.ಕೆ, ಮೇಘನಾ ಮತ್ತು ಅಜಿತ್ ವಿ.ಶರ್ಮ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಇಪ್ಪತ್ತು ಮಂದಿ ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡರು.
No comments:
Post a Comment