“ಗೌತಮ್ ಬೇಗ ಏಳಪ್ಪಾ, ಆಗಲೇ ಆರು ಗಂಟೆ ಆಯ್ತು. ಇನ್ನೂ ಮಲಗಿದ್ರೆ ನೋಡು ಬಸ್ಸು ಹೊರಟು ಹೋಗುತ್ತೆ” ಶೀಲಾ ಆಂಟಿ ಗೌತಮನನ್ನು ಎಚ್ಚರಿಸುತ್ತ ಹೇಳಿದರು. ಆದರೆ ಗೌತಮನಿಗೆ ಬೇಗ ಏಳಲು ಮನಸ್ಸಿರಲಿಲ್ಲ. ಅಲ್ಲೇ ಕಣ್ಣು ಮುಚ್ಚಿಕೊಂಡು ಪುನಃ ಮಲಗಿದ.
“ಬೇಗ ಹೋಗಿ ಸ್ನಾನ ಮಾಡಿ ಬಾ, ಅಷ್ಟರಲ್ಲಿ ನಿನಗೆ ತಿಂಡಿ ಮಾಡಿಡ್ತೇನೆ.” ಎಂದರು ಆಂಟಿ. ಸರಿ ಎಂದ ಗೌತಮ್.
ಗೌತಮ್ ಹಳ್ಳಿಯಲ್ಲಿ ಬೆಳೆದ ಹುಡುಗ. ಓದಿನಲ್ಲೂ ಬುದ್ಧಿವಂತ. ಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಹೆಚ್ಚಿನ ಅನುಕೂಲ ಇಲ್ಲದ್ದರಿಂದ ಮಾವನ ಮನೆಯಲ್ಲಿ ಬಿಟ್ಟು ಒಳ್ಳೆಯ ಶಾಲೆಗೆ ಸೇರಿಸಿದ್ದರು. ಆದರೆ ಗೌತಮನಿಗೆ ಅದೊಂದು ದೊಡ್ಡ ಶಿಕ್ಷೆಯಾಗಿತ್ತು. ಎಲ್ಲಾ ಹೋಂವರ್ಕ್ ಮಾಡಿ ಮುಗಿಸುವುದಲ್ಲದೆ, ಆಂಟಿಯ ಎಲ್ಲಾ ಆಜ್ಞೆಗಳನ್ನು ಪಾಲಿಸಬೇಕಿತ್ತು. ದಿನಾ ಬೇಗನೆ ಏಳಬೇಕು. ಇಷ್ಟೇ ಸಮಯ ಆಡಬೇಕು. ಹೀಗೆ ಒಂದು ವೇಳಾಪಟ್ಟಿ ಸಿದ್ಧಗೊಳಿಸಿದ್ದರು. ಗೌತಮ್ಗೆ ಯಾವಾಗಲೂ ಆಂಟಿಯನ್ನು ಕಂಡರೆ ಆಗುವುದೇ ಇಲ್ಲ, ಆದರೆ ಅಂಕಲ್ ಒಳ್ಳೆಯವರು.
ವಾರ್ಷಿಕ ಪರೀಕ್ಷೆ ಆರಂಭವಾಗಲು ಇನ್ನೂ ಒಂದು ವಾರ ಬಾಕಿ ಇತ್ತು. ಗೌತಮ್ ಪರೀಕ್ಷೆಗೆ ಭಾರೀ ಸಿದ್ಧತೆ ನಡೆಸಿದ್ದ. ಹೀಗಿರಲು ಒಂದು ದಿನ ಆತ ಶಾಲೆಯಿಂದ ಬರುತ್ತಿದ್ದಾಗ ಆತನಿಗೆ ಜ್ವರ ಬರುತ್ತಿತ್ತು. ಆಗ ಆಂಟಿಯು ಆತನನ್ನು ಬಹಳ ಪ್ರೀತಿಯಿಂದ ನೋಡಿಕೊಂಡರು. ನಾಲ್ಕು ದಿನ ಶಾಲೆಗೆ ರಜೆ ಮಾಡಬೇಕಾಗಿ ಬಂತು. ಆದರೂ ಆತನಿಗೆ ಜ್ವರ ಕಡಿಮೆಯಾಗಲಿಲ್ಲ. ಕೊನೆಗೆ ಆಂಟಿ ಪಕ್ಕದಲ್ಲಿ ಕುಳಿತು ಪಾಠಗಳನ್ನು ಓದಿ ಹೇಳಿದರು. ಗೌತಮ್ ಆ ಪಾಠಗಳನ್ನು ಸರಿಯಾಗಿ ಕೇಳಿಸಿಕೊಂಡನು.ವಾರ್ಷಿಕ ಪರೀಕ್ಷೆಗಳು ಆರಂಭವಾದಾಗ ಜ್ವರ ಕಡಿಮೆಯಾಗಿತ್ತು.
ಫಲಿತಾಂಶ ಪ್ರಕಟಗೊಂಡಾಗ ಆತ ತರಗತಿಯಲ್ಲಿ ಮೊದಲ ಸ್ಥಾನ ಪಡೆದಿದ್ದ. ಶೀಲಾ ಆಂಟಿ ಕಷ್ಟಪಡದಿದ್ರೆ ಪರೀಕ್ಷೆಯಲ್ಲಿ ಯಶ ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬ ಸತ್ಯ ಆತನಿಗೆ ಅರಿವಾಯಿತು.
- ಶುಭಲಕ್ಷ್ಮಿ. ಪಿ
No comments:
Post a Comment