೨೧ನೇ ಶತಮಾನದ ಹೊಸ ದಶಕವನ್ನು ಪ್ರವೇಶಿಸುತ್ತಿದ್ದೇವೆ. ನೆಮ್ಮದಿ, ಶಾಂತಿ, ಸಹಬಾಳ್ವೆಯ ಹೊಸ ಮನ್ವಂತರವನ್ನು ನಿರೀಕ್ಷಿಸುತ್ತಾ ಹೊಸ ವರುಷವನ್ನು ಸ್ವಾಗತಿಸೋಣ. ನಮ್ಮ ಎಲ್ಲ ಹಿತೈಷಿಗಳಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.31 December 2009
ಹೊಸ ವರುಷ ತರಲಿ ಹೊಸ ಹರುಷ
೨೧ನೇ ಶತಮಾನದ ಹೊಸ ದಶಕವನ್ನು ಪ್ರವೇಶಿಸುತ್ತಿದ್ದೇವೆ. ನೆಮ್ಮದಿ, ಶಾಂತಿ, ಸಹಬಾಳ್ವೆಯ ಹೊಸ ಮನ್ವಂತರವನ್ನು ನಿರೀಕ್ಷಿಸುತ್ತಾ ಹೊಸ ವರುಷವನ್ನು ಸ್ವಾಗತಿಸೋಣ. ನಮ್ಮ ಎಲ್ಲ ಹಿತೈಷಿಗಳಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.26 December 2009
ಕಾಸರಗೋಡು ಜಿಲ್ಲಾ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನ, ಬನ್ನಿ..
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ೨೦೧೦ನೇ ಜನವರಿ ೯ ಮತ್ತು ೧೦ರಂದು ಜಿಲ್ಲಾ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ನಡೆಸಲು ತೀರ್ಮಾನಿಸಿದ್ದು ಅದಕ್ಕಾಗಿ ನಾಡಿನ ಹಿರಿಯ ಖ್ಯಾತ ವಿದ್ವಾಂಸರಾದ ಶ್ರೀ ಖಂಡಿಗೆ ಶಾಮ ಭಟ್ಟರ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರೂಪೀಕರಿಸಿ ಕಾರ್ಯಪ್ರವೃತ್ತರಾಗಿರುವ ವಿಚಾರ ಕಾಸರಗೋಡಿನ ಕನ್ನಡಾಭಿಮಾನಿಗಳಿಗೆ ಸಂತಸ ತಂದಿದೆ.ಕನ್ನಡ ಮಾಧ್ಯಮದ ಬಾಲವಾಡಿಯಿಂದ ಪದವಿ ತನಕದ ವಿದ್ಯಾರ್ಥಿಗಳಿಗಾಗಿ ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ಪರ್ಧೆ ನಡೆಯಲಿದೆ. ಸುಮಾರು ೧೫೦೦ ಮಂದಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿನ ಹಿರಿಯ ವಿದ್ವಾಂಸರೂ ಖ್ಯಾತ ಯಕ್ಷಗಾನ ಅರ್ಥಧಾರಿಗಳೂ ನಿವೃತ್ತ ಅಧ್ಯಾಪಕರೂ ಆದ ಶ್ರೀ ಪೆರ್ಲ ಕೃಷ್ಣ ಭಟ್ಟರು ಆಯ್ಕೆಯಾಗಿರುವುದು ತುಂಬ ಸಂತಸದ ವಿಷಯ. ಸಮ್ಮೇಳನದ ಉದ್ಘಾಟನೆಯನ್ನು ಉಡುಪಿಯ ಖ್ಯಾತ ವಿದ್ವಾಂಸ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ನಡೆಸಲಿದ್ದು ಹಾಸ್ಯಗೋಷ್ಟಿ, ಕವಿಗೋಷ್ಟಿ, ಭಾಷಾ ಸೌಹಾರ್ದ ಗೋಷ್ಟಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ಸಂಪನ್ನವಾಗಲಿದೆ.
ಕಾಸರಗೋಡಿನ ಕನ್ನಡಕ್ಕೆ ಕಂಪು ಇದೆ, ಇಂಪು ಇದೆ, ತನ್ನತನವಿದೆ. ಕರ್ನಾಟಕದ ಗಣ್ಯವ್ಯಕ್ತಿಗಳೆಲ್ಲ ಕಾಸರಗೋಡನ್ನು ಸಂದರ್ಶಿಸಿದಾಗಲೆಲ್ಲ ಇಲ್ಲಿಯ ಕನ್ನಡ ಚಟುವಟಿಕೆಗಳ ಕುರಿತು ಭಾಷಾ ಶುದ್ಧತೆಯ ಕುರಿತು ಪ್ರಶಂಸೆಯ ಮಾತುಗಳನ್ನು ಹೇಳುತ್ತಾರೆ. ಅದು ಈ ನೆಲದ ಕನ್ನಡ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಶ್ರೀ ಕ್ಷೇತ್ರ ಅನಂತಪುರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭೇಟಿ ಇತ್ತಾಗ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಈ ನೆಲದ ಕನ್ನಡ ಭಾಷೆಯ ಅಚ್ಚತನದ ಕುರಿತು ಪ್ರಶಂಸೆಯ ಮಾತುಗಳನ್ನಾಡಿರುವುದು ಖಂಡಿತವಾಗಿಯೂ ಕನ್ನಡಿಗರಿಗೆ ಪ್ರೋತ್ಸಾಹಕರ. ಕಾಸರಗೋಡಿನಲ್ಲಿ ಕನ್ನಡ ನಶಿಸಿಹೋಗುತ್ತಿದೆ ಎನ್ನುವಂತಹ ಕೂಗು ಕೇಳಿಸುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಎಲ್ಲ ಸಹೃದಯರೂ ಸಹರಿಸಬೇಕಾಗಿ ಕೇಳಿಕೊಳ್ಳುತ್ತೇವೆ.
24 December 2009
23 December 2009
ನಮಗೆ ಕ್ರಿಸ್ಮಸ್ ರಜೆ...
18 December 2009
ಪದ್ಯ - ಅಮ್ಮಾ ಪ್ಲೀಸಮ್ಮಾ-ಶ್ರೀವಾಣಿ.ಕೆ.
ಕಾರ್ಟೂನ್ ಇದೆಯಮ್ಮಾ
ಐದು ಕಾಲದು ಚಿಂಟು ಟಿವಿಲಿ
ನೋಡಲೆಬೇಕಮ್ಮಾ
ಅಮ್ಮಾ ಪ್ಲೀಸಮ್ಮಾ
ಈಗದು ಕಾರ್ಟೂನ್ ನೋಡುವ ಆಸೆ
ನನಗದು ಕೇಳಮ್ಮಾ
16 December 2009
ನಮ್ಮ ಪ್ರಯಾಣ ರಾಜ್ಯ ಮಟ್ಟಕ್ಕೆ...
14 December 2009
ಚುಟುಕುಗಳು
ಪಂಚಾಯತಿನ ಒಂದು ಅಭಿಯಾನ
ಝೀರೋ ವೇಸ್ಟ್
ಇದು ಕಂಡು ಹೇಳಿದರು ಕೆಲವರು
ಇದು ಬಹಳ ವೇಸ್ಟ್
ಮೊಬೈಲು - ವನಿತ ಕುಮಾರಿ. ಸಿ.ಎಚ್
ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್
ಅದುಮಿ ಮಾಡುತ್ತಾರೆ ಸ್ಟೈಲ್
ರೇಂಜ್ ಇಲ್ಲ ಹತ್ತುತ್ತಾರೆ ಗುಡ್ಡ
ಕೆಳಗೆ ಬಿದ್ದು ಗುಳಿಬೀಳುತ್ತದೆ ಗಡ್ಡ.
11 December 2009
ಕ್ಷಮಿಸಿ...
27 November 2009
ಚುಟುಕು - ಅಜೇಯಕೃಷ್ಣ. ಕೆ
ಕಾಫಿ ಸಿಕ್ಕಿತು ನನಗೆ
ನಾಲಗೆ ಕರಚಿತು ಬಿಸಿಗೆ
ವೈದ್ಯರ ಬಳಿ ಹೋದೆನು ಮದ್ದಿಗೆ
ಈ ದಿನ ರಜಾ ಎಂದು ಬಂತು ನೆನಪಿಗೆ.
ದಾನ
ಮೂರ್ಖರ ಶ್ರೇಷ್ಟ ದಾನ
ಮೈದಾನ
ಪಂಡಿತರ ಶ್ರೇಷ್ಟ ದಾನ
ಅನ್ನದಾನ
19 November 2009
ಕಥೆ - ಪುಟ್ಟುವಿನ ಮೂರ್ಖತನ
-ರೇಣುಕಾ. ಎ
ಪುಟ್ಟುವಿಗೆ ಅವನೇ ಹೆಚ್ಚು ವಿದ್ಯಾವಂತ ಎಂಬ ಭಾರೀ ಅಹಂಕಾರವಿತ್ತು. ಒಂದು ದಿನ ಅವನು ಗೆಳೆಯನಾದ ಕಿಟ್ಟನ ಮನೆಗೆ ಬಂದನು. ಕಿಟ್ಟನು ಭಾರತದ ಕ್ರಿಕೆಟ್ ಪಂದ್ಯಾಟ ನೋಡುತ್ತಾ ಕುಳಿತುಕೊಂಡಿದ್ದನು. ಪುಟ್ಟು ಬಂದುದನ್ನು ನೋಡಿ ಕಿಟ್ಟನು ಅವನನ್ನು ಕುಳಿತುಕೊಳ್ಳುವಂತೆ ಹೇಳಿ “ನೀನು ಭಾರತದ ಬ್ಯಾಟಿಂಗ್ ನೋಡುತ್ತಾ ಇರು, ನಾನು ಈಗ ಒಳಗೆ ಹೋಗಿ ಅಮ್ಮನಲ್ಲಿ ಹೇಳಿ ಬರುತ್ತೇನೆ"ಎಂದನು. ಕಿಟ್ಟನು ಒಳಗೆ ಹೋದಾಗ ಪುಟ್ಟನು ಕ್ರಿಕೆಟ್ ನೋಡುತ್ತಾ ಕುಳಿತನು. ಸ್ವಲ್ಪ ಸಮಯ ಕಳೆದಾಗ ಒಬ್ಬ ಬ್ಯಾಟ್ಸ್ ಮನ್ ಔಟಾಗಿ ಪೆವಿಲಿಯನ್ ಕಡೆ ಹೋದನು. ಆಗ ಪುಟ್ಟನು ಜೋರಾಗಿ ನಕ್ಕನು, ಕೇಕೆ ಹಾಕಿ ಕುಣಿದನು. ಆದರೆ ಕಿಟ್ಟನು ಬಂದಾಗ ಒಂದು ವಿಕೆಟ್ ಹೋದದ್ದು ಕಂಡು ಬೇಸರಿಸಿದನು. ಸ್ವಲ್ಪ ಸಮಯ ಕಳೆದಾಗ ಬ್ಯಾಟ್ಸ್ ಮನ್ ಸಿಕ್ಸ್ ಬಾರಿಸಿದನು. ಇದು ಕಂಡು ಪುಟ್ಟುವಿಗೆ ದುಃಖ ಬಂತು. ಭಾರತದ ಆಟಗಾರ ಸಿಕ್ಸ್ ಬಾರಿಸಿದಾಗ ಖುಷಿ ಪಡಬೇಕಾದ, ಔಟಾದಾಗ ದುಃಖಿಸಬೇಕಾದ ಬದಲು ಪುಟ್ಟುವಿನಂತೆ ವರ್ತಿಸುವುದು ಅತೀ ದೊಡ್ಡ ಮೂರ್ಖತನ ಎಂದು ಕಿಟ್ಟನು ತೀರ್ಮಾನಿಸಿದನು.
10 November 2009
ಇನ್ನು ಉತ್ಸವಗಳ ಕಾಲ...
ಅಚಾನಕ್ಕಾಗಿ ಮತ್ತೆ ಕರಾವಳಿಯಲ್ಲಿ ಮಳೆಗಾಲ ಆರಂಭವಾಗಿದೆ, ಗದ್ದೆ ಕೊಯ್ಲು ಪ್ರಕ್ರಿಯೆ ಗೆ ಸಮಸ್ಯೆ, ಅಡಿಕೆ ಕೃಷಿಕರ ಮನಸ್ಸಿಗೆ ಮಳೆ ಒಂದಷ್ಟು ಸಮಾಧಾನ ತಂದಿದೆ. ಕಳೆದ ಎರಡು ದಿನಗಳಿಂದ ವಾತಾವರಣ ಪೂರ್ತಿ ತಂಪು ತಂದಿದೆ. ವಿದ್ಯಾರ್ಥಿಗಳಿಗೂ ಅಷ್ಟೆ, ಪರೀಕ್ಷೆಯ ದಿನಗಳು ಕಳೆದು ಉತ್ಸವಗಳ ಕಾಲ ಆರಂಭವಾಗುತ್ತಿದೆ, ಈ ತಿಂಗಳು ೧೮,೧೯ ಬದಿಯಡ್ಕದಲ್ಲಿ ಉಪಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆ, ೨೩,೨೪ ರಂದು ಮಾನ್ಯದಲ್ಲಿ ವಿಜ್ಞಾನ ಮೇಳ, ಮುಂದಿನ ತಿಂಗಳು ಅಡೂರಿನಲ್ಲಿ ಉಪಜಿಲ್ಲಾ ಮಟ್ಟದ ಸಂಸ್ಕೃತೋತ್ಸವ ಮತ್ತು ಕಲೋತ್ಸವ... ನಮ್ಮ ತಂಡ ಹುರುಪಿನೊಂದಿಗೆ ತಯಾರಾಗುತ್ತಿದೆ...06 November 2009
ಬಡಗುಮೂಲೆಗೆ ಬಯಲು ಪ್ರವಾಸ
ನಮ್ಮ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮೊನ್ನೆ ಬಡಗುಮೂಲೆ ಈಶ್ವರ ಭಟ್ಟರ ಕೃಷಿ ಕ್ಷೇತ್ರವನ್ನು ಸಂದರ್ಶಿಸಿದರು. ಹೈನುಗಾರಿಕೆ ಪ್ರಶಸ್ತಿ ವಿಜೇತ ಬಡಗುಮೂಲೆ ಈಶ್ವರ ಭಟ್ಟರು ದನ ಸಾಕಣೆಯ ಕುರಿತು ಮತ್ತು ಅವರ ಪತ್ನಿ ಕನಕಲಕ್ಷ್ಮಿ ಮಲ್ಲಿಗೆ ಕೃಷಿಯ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಔಷಧೀಯ ಸಸ್ಯಗಳು ಮತ್ತು ಬಾಳೆ ತಳಿಗಳ ಬಗೆಗೂ ಮಾಹಿತಿ ಪಡೆದುಕೊಂಡರು. ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್, ಶಿಕ್ಷಕಿಯರಾದ ಮಾಲತಿ. ವೈ ಮತ್ತು ಪ್ರತಿಮಾ ನೇತೃತ್ವ ವಹಿಸಿದ್ದರು.04 November 2009
ಪೂರ್ವ ವಿದ್ಯಾರ್ಥಿಗಳ ಸಾಧನೆ...
ಕೂಳಕ್ಕೋಡ್ಳು ವೆಂಕಟೇಶ ಮೂರ್ತಿಯ ಸಾಧನೆಯ ಪರಿಚಯವನ್ನು ಮೊನ್ನೆ ಮಾಡಿದ್ದೆವು. ಈ ಬಾರಿ ಮಹೇಶನ ಪರಿಚಯ, ಸಾಧನೆಗಳ ಮಜಲನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ. ನಮ್ಮ ಸಂಸ್ಕೃತಿಯ ಆಧಾರವಾದ ಸಂಸ್ಕೃತ ಭಾಷೆಯ ಪ್ರಪಂಚದೆಲ್ಲೆಡೆ ಇರುವ ಅಭಿಮಾನದ ದ್ಯೋತಕವೇ ವಿಶ್ವ ಸಂಸ್ಕೃತ ಸಮ್ಮೇಳನ. ಈ ಸಮ್ಮೇಳನ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ೧೩ ನೆಯ ವಿಶ್ವ ಸಂಸ್ಕೃತ ಸಮ್ಮೇಳನ ೨೦೦೬ ರಲ್ಲಿ Edinburgh (Scotland, U.K.) ನಲ್ಲಿ ಆಯೋಜಿತವಾಗಿದ್ದರೆ ಈ ವರ್ಷ ಇತ್ತೀಚೆಗೆ (ಸೆಪ್ಟೆಂಬರ್ ೧-೫, ೨೦೦೯) ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನ ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆಯಿತು. (ಈ ವಿ ವಿ ಯಲ್ಲಿನ ಭಾರತೀಯ ಗಣಿತ-ಖಗೋಳಶಾಸ್ತ್ರದ ಬಗ್ಗೆಯೂ ಸಂಶೋಧನೆ-ಅಧ್ಯಯನ ನಡೆಯುತ್ತಿದೆ.) ಈ ಸಮ್ಮೇಳನದಲ್ಲಿ ಸಂಸ್ಕೃತದಲ್ಲಿರುವ ವಿಶಾಲವಾದ ಜ್ಞಾನ ವಿಜ್ಞಾನ ಶಾಖೆಗಳ ಬಗ್ಗೆ ಆಯಾಯ ಕ್ಷೇತ್ರಗಳಲ್ಲಿ ಪರಿಶ್ರಮ ಮಾಡಿದವರಿಂದ ವಿಚಾರ ಮಂಡನೆ ಗಳು ಮಾದಲ್ಪತ್ತವು. ಸುಮಾರು ೩೫೦ ಪ್ರಸ್ತುತಿಗಳು ೧೫ ಗೋಷ್ಠಿ ಗಳಲ್ಲಿ ೫ ದಿನಗಳ ಕಾಲ ನಡೆದವು. ೩೫ ದೇಶಗಳಿಂದ ಬಂದ ಸಂಸ್ಕೃತ ವಿದ್ವಾಂಸರು, ಶೋಧ ವಿದ್ಯಾರ್ಥಿಗಳು, ಅಭಿಮಾನಿಗಳ ಒಟ್ಟು ಸಂಖ್ಯೆ ೫೦೦ ಆಗಬಹುದು. http://www.indology.bun.kyoto-u.ac.jp/14thWSC/ಇದರಲ್ಲಿ ಸಂಸ್ಕೃತ ಮತ್ತು ವೈಜ್ಞಾನಿಕ ಸಾಹಿತ್ಯ ಎಂಬ ಗೋಷ್ಠಿಯಲ್ಲಿ ಶ್ಯೇನ ಚಿತಿ ಎಂಬ ಒಂದು ವಿಚಾರವನ್ನು ಕಾಸರಗೋಡಿನ ಯುವ ಕನ್ನಡಿಗ ಮಹೇಶ ಕೂಳಕ್ಕೋಡ್ಲು ಇವರು ಪ್ರಸ್ತುತ ಪಡಿಸಿದರು.
ವಿಶ್ವದ ಗಣಿತದ ಇತಿಹಾಸವನ್ನು ತಿಳಿಯುವುದರಲ್ಲಿ ಅತ್ಯಂತ ಆವಶ್ಯಕವಾಗಿರುವುದು ಸಂಸ್ಕೃತದ ಗ್ರಂಥಗಳ ಪರಿಶೀಲನೆ. ಕ್ರಿ ಪೂ ೮೦೦ ಗಿಂತಲೂ ಹಿಂದಿನದಾದ ಶುಲ್ಬಸೂತ್ರ ಗಳಲ್ಲಿ ಯಜ್ಞ ವೇದಿಕೆಗಳ ನಿರ್ಮಾಣಕ್ಕೆ ಸಂಬಂಧಿಸಿದ ರೇಖಾಗಣಿತದ ಮಾಹಿತಿ ದೊರೆಯುತ್ತದೆ. ಶ್ಯೇನ ಚಿತಿ ಎಂಬುದು ಗಿಡುಗ ಪಕ್ಷಿಯಾಕಾರದ ಒಂದು ಯಜ್ಞ ವೇದಿಕೆ. ಇದರ ನಿರ್ಮಾಣದಲ್ಲಿ ಬಳಸಬೇಕಾದ ಇಟ್ಟಿಗೆಗಳ ನಿರ್ಮಾಣ ಕ್ರಮ, ಆಕಾರ, ವಿನ್ಯಾಸ ಕ್ರಮ ಇತ್ಯಾದಿ ವಿಚಾರಗಳು ಅಲ್ಲಿ ಉಲ್ಲಿಖಿತವಾಗಿವೆ. ರೇಖಾಗಣಿತದ ದ್ರಿಷ್ಟಿಯಿಂದ, ವಿನ್ಯಾಸಕ್ರಮದ ರೀತಿಯಿಂದ ಇದರ ಮಹತ್ತ್ವವೇನು ಎಂಬುದರ ಬಗ್ಗೆ ಮಾಹಿತಿ ನೀಡುವಂತಹ ಚಿತ್ರಗಳ-ಸ್ಲೈಡ್ ಶೋ ಸಹಿತವಾದ ಭಾಷಣವಾಗಿತ್ತು ಶ್ರೀ ಮಹೇಶರದ್ದು. ನ್ಯೂಟನ ನಿಗಿಂತ ಸುಮಾರು 200 ವರ್ಷಗಳ ಹಿಂದೆ ಭಾರತದಲ್ಲಿ ದ್ವಿಪದ ವಿಸ್ತರಣೆ (Binomial expansion) ಯ ವಿಚಾರ ಕ್ರಿಯಾಕ್ರಮಕರೀ ಎಂಬ ಗಣಿತ ಗ್ರಂಥದಲ್ಲಿ ಉಲ್ಲೇಖವಾಗಿರುವುದನ್ನು ಆಧಾರಸಹಿತವಾಗಿ ತೋರಿಸುವ ಒಂದು ಭಾಷಣವನ್ನು (Turning an Algebraic Expression into an Infinite Series--An Indian contribution) ಕೆಲವು ತಿಂಗಳುಗಳ ಹಿಂದೆ ಬೆಲ್ಜಿಯಂ ದೇಶದ ಬ್ರಸ್ಸೆಲ್ಸ್ ವಿಶ್ವವಿದ್ಯಾಲಯದಲ್ಲಿ ಮಾಡಿದ್ದರು. 29 ವರ್ಷದ ಈ ಯುವಾ ಸಂಶೋಧಕ ಮುಂಬಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಶ್ರೀ ರಾಮಸುಬ್ರಹ್ಮಣ್ಯಂ ರ ಮಾರ್ಗದರ್ಶನದಲ್ಲಿ ಭಾರತೀಯ ವಿಜ್ಞಾನದ ಬಗ್ಗೆ ಕಾರ್ಯ ನಿರತರಾಗಿದ್ದಾರೆ. ಇವರ ಊರು ಕಾಸರಗೋಡಿನ ಬದಿಯಡ್ಕ. ಈಶಾವಾಸ್ಯಂ (ಕೂಳಕ್ಕೊಡ್ಲು) ಸುಲೋಚನಾ-ಶಂಕರನಾರಾಯಣ ಭಟ್ಟರ ಮಗನಾದ ಇವರು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್ ನ ಪೂರ್ವ ವಿದ್ಯಾರ್ಥಿ. ಉಜಿರೆ ಯ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಾಗೂ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಥದಲ್ಲಿ ವಿಜ್ಞಾನ ಮತ್ತು ಸಂಸ್ಕೃತದ ವಿಶೇಷ ಅಧ್ಯಯನವನ್ನು ಮಾಡಿದ ಇವರು ರಾಷ್ಟ್ರಪತಿ ಸುವರ್ಣ ಪದಕ ಪುರಸ್ಕಾರ (2003), ಯು ಜಿ ಸಿ ಯ ರಿಸರ್ಚ್ ಫೆಲೋಶಿಪ್ (2003),ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಯ ರಿಸರ್ಚ್ ಫೆಲೋಶಿಪ್ (2008--) ಗಳನ್ನೂ ಸಾಧಿಸಿದವರಾಗಿದ್ದಾರೆ. IIT Bombay ಯ ವಿಜ್ಞಾನಿಗಳು-ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇವರಿಂದ ಸಂಸ್ಕೃತ ಮಾತನಾಡಲು ಪ್ರೇರಿತರಾಗುತ್ತಿದ್ದಾರೆ.
30 October 2009
ಹೆಮ್ಮೆ ಇದೆ ನಮಗೆ...

ಸೆಪ್ಟೆಂಬರ್ ೧ ರಿಂದ ೫ ರ ವರೆಗೆ ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆದ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ೩೫ ದೇಶಗಳಿಂದ ಬಂದ ೫೦೦ ಸಂಸ್ಕೃತ ಜ್ಞರು ಭಾಗವಹಿಸಿದ್ದರು. ನಮ್ಮ ಹೆಮ್ಮೆಯ ಕಲೆಯನ್ನು ವಿಶ್ವಮಾನ್ಯ ಭಾಷೆಯಾದ ಸಂಸ್ಕೃತದಲ್ಲಿ ಪ್ರಸ್ತುತಿಪಡಿಸಿದವರು ಕನ್ನಡಿಗರಾದ ಶ್ರೀ ವೆಂಕಟೇಶ ಮೂರ್ತಿ. ಕಾಸರಗೋಡಿನವರು. ಈಶಾವಾಸ್ಯಂ (ಕೂಳಕ್ಕೊಡ್ಲು) ಸುಲೋಚನಾ-ಶಂಕರನಾರಾಯಣ ಭಟ್ಟ ದಂಪತಿಗಳ ಈ ಸುಪುತ್ರ, ನೀರ್ಚಾಲಿನ ಮಹಾಜನ ಸಂಸ್ಕೃತ-ಕಾಲೇಜು-ಹೈಸ್ಕೂಲ್ ನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪಡೆಯುತ್ತಲೇ ಅಲ್ಲಿ ಯಕ್ಷಗಾನದ ನಾಟ್ಯದ ತರಬೇತಿಯನ್ನು ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ಗಳಿಸಿದರು. ತಮ್ಮ ಸಹಧರ್ಮಿಣಿ ಶುಭಲಕ್ಷ್ಮೀ ಹಾಗೂ ಪುತ್ರ ಈಶಾನ ನೊಂದಿಗೆ ದೆಹಲಿಯಲ್ಲಿ ವಾಸ್ತವ್ಯದಲ್ಲಿದ್ದು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ದಲ್ಲಿ ಉಪನ್ಯಾಸಕರಾಗಿದ್ದಾರೆ. ಸಂಸ್ಕೃತ ನಾಟಕದ ಸನ್ನಿವೇಶಗಳಿಗೆ ಯಕ್ಷಗಾನದ ರೂಪವನ್ನು ಕೊಟ್ಟು ಯಕ್ಷಗಾನ-ಏಕಪಾತ್ರಾಭಿನಯದ ಈ ಮನಮೋಹಕ ಪ್ರಯೋಗವನ್ನು ಮೆಚ್ಚಿದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಈ ಬಾರಿಯ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಈ ರೋಚಕ ಅಭಿನಯವನ್ನು ಪ್ರದರ್ಶಿಸಲು ಆಹ್ವಾನವನ್ನಿತ್ತಿತು. ಮುಉರ್ತಿ ಯವರು ಪ್ರದರ್ಶಿಸಿದ ಕೌರವೌರವಮ್ (ಗದಾಯುದ್ಧ-ಊರುಭಂಗ) ಎಂಬ ಕಥಾ-ಪ್ರಸಂಗದ ದುರ್ಯೋಧನನ ರೌಷ-ವಿಲಾಪ ದ ಅಭಿನಯ ಪ್ರೇಕ್ಷಕರ ಹೃದಯ ಸ್ಪರ್ಶಿಯಾಗಿ ಮೂಡಿ ಬಂತು. ಭಾರತದ ವಿವಿಧ ರಾಜ್ಯಗಳಿಂದ ಬಂದ ನಾಟಕಾಭಿಮಾನಿಗಳಿಗೆ, ವಿವಿಧ ದೇಶಗಳಿಂದ ಬಂದ ಅನಿವಾಸಿ-ಭಾರತೀಯರಿಗೆ ಮತ್ತು ಭಾರತೀಯತೆಯನ್ನು ತಿಳಿಯುವ ತವಕದ ವಿದೇಶೀಯರಿಗೆ ಇದೊಂದು ರಸಭರಿತ ಔತಣವಾಯಿತು. ಈ ಮನೋಜ್ಞ ಭಾರತೀಯ ಅಭಿನಯವನ್ನು ವಿಶ್ವಮಾನ್ಯ ಭಾರತೀಯ ಭಾಷೆಯಿಂದಲೇ ನೋಡಿ ಆನಂದಿಸಿದ ವಿಶ್ವಸ್ತರದ ಪ್ರೇಕ್ಷಕರಿಂದ ತುಂಬು ಹೃದಯದ ಪ್ರಶಂಸೆ ವ್ಯಕ್ತವಾಯಿತು. ನಾವು ಬೇರೆ ರಾಜ್ಯಕ್ಕೆ, ದೇಶಕ್ಕೆ ಹೋದಾಗ ಅಲ್ಲಿನವರಿಗೆ ನಮ್ಮ ನೆಲದ ವೈಶಿಷ್ಟ್ಯವನ್ನು ಹೇಳುವ ಸಂಸ್ಕೃತಿಯ ವೈಭವಗಳನ್ನ ತೋರಿಸುವ ಒಂದು ರೀತಿಯ ತವಕ ನಮಗಿರುತ್ತದೆ ತಾನೇ? ಅದಕ್ಕೆ ಸಹಾಯ ಮಾಡುವ ಮಾಧ್ಯಮಗಳಲ್ಲೊಂದು ನಮ್ಮ ಜಾನಪದ-ಸಾಂಸ್ಕೃತಿಕ ಕಲೆಗಳ ಪ್ರದರ್ಶನ. ಕನ್ನಡೇತರರಿಗೆ ಕನ್ನಡಿಗರು ಕೊಡಬಹುದಾದ ಕೊಡುಗೆಗಳಲ್ಲಿ ಕನ್ನಡ ನೆಲದ ಕಲಾ ಪ್ರದರ್ಶನವು ಒಂದು. ಕನ್ನಡನಾಡಿನ ಕಲೆಯಾದ ಯಕ್ಷಗಾನದ ಸವಿಯನ್ನು ಕನ್ನಡ ತಿಳಿಯದವರಿಗೂ ಕೊಡುವ ಪ್ರಯತ್ನ ಬಹಳ ವರ್ಷಗಳಿಂದ ನಡೆಯುತ್ತಿದೆ. ಅದಕ್ಕಾಗಿ ಆಯಾಯ ಪ್ರದೇಶಗಳ ಭಾಷೆಗಳಲ್ಲಿ ( ಹಿಂದಿ ಹಾಗೂ ಇತರ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಅಥವಾ ಇಂಗ್ಲೀಷಿನಲ್ಲಿ) ನಡೆಯುವ ಪ್ರದರ್ಶನದ ಬಗ್ಗೆ ನಾವು ಕೇಳಿದ್ದೇವೆ. ನಾಟ್ಯರಂಗಕ್ಕೆ ವಿಪುಲ ಸಾಹಿತ್ಯದ ಕೊಡುಗೆಯನ್ನೀಯುವ ಸಂಸ್ಕೃತಭಾಷೆಯಲ್ಲಿ ಯಕ್ಷಗಾನದ ಪ್ರದರ್ಶನ ವಾದರೆ ಹೇಗಿರಬಹುದು? ಇಂತಹ ಒಂದು ಪ್ರಯತ್ನ ಜಪಾನಿನಲ್ಲಿ ನಡೆಯಿತು. ಅಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕಲೆಗಳ ಪ್ರತೀಕವಾಗಿ ಕನ್ನಡನಾಡಿನ ಯಕ್ಷಗಾನ ಸಂಸ್ಕೃತದಲ್ಲಿ ಪ್ರದರ್ಶನಗೊಂಡಿತು. ತಮ್ಮಬಾಲ್ಯದಲ್ಲಿ ಪಡೆದ ಗ್ರಾಮೀಣ ಕಲೆಯನ್ನು ಸಂಸ್ಕೃತ ನಾಟಕ ರಂಗಕ್ಕೆ ಜೋಡಿಸಿ ದೆಹಲಿಯ ತಮ್ಮ ಸಂಸ್ಥೆಯ ವಸಂತೋತ್ಸವದಲ್ಲಿ , ಉಜ್ಜಯಿನಿಯ ನಾಟ್ಯ ಮಹೋತ್ಸವದಲ್ಲಿ, ಭೋಪಾಲದ ಸಂಸ್ಕೃತ ರಂಗಮಂಚ ದಲ್ಲೂ ಪ್ರದರ್ಶಿಸಿ ಸಂಸ್ಕೃತ-ವಿದ್ವಾಂಸರ, ಕಲಾ ರಸಿಕರ ಮನವನ್ನು ರಂಜಿಸಿದ್ದಾರೆ. ತಿರುಪತಿಯ ಸಂಸ್ಕೃತ ವಿದ್ಯಾಪೀಥದಿಂದ ಸಂಸ್ಕೃತದಲ್ಲಿ ಉನ್ನತ ವಿದ್ಯಾಬ್ಯಾಸವನ್ನು ಮಾಡಿದ ಈ ಕಲಾವಿದ ಸಂಸ್ಕೃತವನ್ನು ಜನಮಾನಸಕ್ಕೊಯ್ಯುವ ಕಾರ್ಯದಲ್ಲೂ ನಿರತರಾಗಿದ್ದಾರೆ. ಸಂಸ್ಕೃತದಿಂದ ಕನ್ನಡಿಗರಿಗೇನು ಪ್ರಯೋಜನ? ಕನ್ನಡದಿಂದ ಸಂಸ್ಕೃತ ಕ್ಕೇನು ಸಿಗಬಹುದು? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ಇದೊಂದು ಉದಾಹರಣೆಯಾಗಬಹುದೇನೋ?
23 October 2009
ಕೊನೆಯ ಚಿತ್ರ...
ಮೊನ್ನೆ ಅಸುನೀಗಿದ ನಾಲ್ವರು ಬಾಲಕರಲ್ಲಿ ಕಿರಿಯವನಾದ ಅಜಿತ್ ಬಿ.ಟಿ ಬಿಡಿಸಿದ ಚಿತ್ರ ಇದು. ಈಗ ನಿಮ್ಮ ಮುಂದೆ ಇದೆ. ಇದು ಆ ಹುಡುಗ ಬಿಡಿಸಿದ ಕೊನೆಯ ಚಿತ್ರ. ಗುರುವಾರ ಶಾಲೆಯಲ್ಲಿ ಜರಗಿದ ಕಲೋತ್ಸವ ಸ್ಪರ್ಧೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಬಿಡಿಸಿದ ಪೆನ್ಸಿಲ್ ಡ್ರಾಯಿಂಗ್ ಇದು. ಶುಕ್ರವಾರ ಶಾಲಾ ಕ್ರೀಡಾಕೂಟ ಜರಗಿತ್ತು. ಈತ ಮತ್ತು ಅಣ್ಣಂದಿರು ಆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಶನಿವಾರ ದೇವರು ಬಿಡಿಸಿದ ಆ ನಾಲ್ಕು ಪುಟಾಣಿಗಳ ಚಿತ್ರವನ್ನು ಯಮ ಬಲಿ ತೆಗೆದುಕೊಂಡ...ಅತ್ಯಂತ ಬಡ ಕುಟುಂಬದ ಈ ಬಾಲಕರ ಪೈಕಿ ಇನ್ನುಳಿದವರಿಗೆ ಆಶ್ರಯ ನೀಡುವುದು ಸಮಾಜದ ಕರ್ತವ್ಯ ಎನ್ನುವ ದೃಷ್ಟಿಯಿಂದ ಕುಟುಂಬ ಸಹಾಯ ನಿಧಿಯನ್ನು ಸ್ಥಾಪಿಸಿದ್ದೇವೆ. ಇದಕ್ಕಾಗಿ ಹಳೆ ವಿದ್ಯಾರ್ಥಿಗಳ, ರಕ್ಷಕ ಶಿಕ್ಷಕ ಸಂಘದ ಸಹಾಯ ಸಮಿತಿಯನ್ನೂ ರೂಪೀಕರಿಸಲಾಗಿದೆ. ಅಜಿತ್ ಕುಟುಂಬದಲ್ಲಿ ತಾಯಿ ತಂದೆಯರ ಹೊರತಾಗಿ ಉಳಿದಿರುವುದು ಮಾನಸಿಕ ವಿಕಲ ಚೇತನೆ ತಂಗಿ ಮಾತ್ರ....
ಆಸಕ್ತರು ನೀರ್ಚಾಲು ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ತೆರೆಯಲಾದ ಚಾಲ್ತಿ ಖಾತೆ ಸಂಖ್ಯೆ ೭೧೬೦ಕ್ಕೆ ದೇಣಿಗೆ ಸಲ್ಲಿಸಬೇಕಾಗಿ ಅಪೇಕ್ಷೆ.
19 October 2009
.... ಅಶ್ರುತರ್ಪಣ
ಕ್ಷಮೆ ಇರಲಿ, ಬೇವು ಚಿಗುರೊಡೆದ ಸಂತಸದ ಸುದ್ದಿಯ ಹಿಂದೆ, ಬೆಳೆಯುತ್ತಿರುವ ನಾಲ್ಕು ಚಿಗುರುಗಳು ಮುರುಟಿಹೋದ ಸುದ್ದಿ ಬರೆಯಲು ದುಃಖದ ಕಟ್ಟೆ ಸಮ್ಮತಿಸುವುದಿಲ್ಲ. ನಿಮ್ಮ ಮುಂದೆ ಇಡುವ ವಿಚಾರ ಮೌನ ಮಾತ್ರ.... ಮೊನ್ನೆ ನರಕ ಚತುರ್ದಶಿಯ ಹಬ್ಬದ ದಿನ, ೧೭.೧೦.೨೦೦೯ ಶನಿವಾರ ಕಲ್ಲಕಟ್ಟ ಸಮೀಪದ ಬಾರಿಕ್ಕಾಡು, ಅಜ್ಜಾವರ ಕ್ಷೇತ್ರದ ಬಳಿಯಲ್ಲಿ ಹರಿಯುವ ಮಧುವಾಹಿನಿ ನದಿಯಲ್ಲಿ ಸ್ನಾನಕ್ಕಿಳಿದ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಅಭಿಲಾಶ್, ರತನ್ ಕುಮಾರ್ ಮತ್ತು ಅಜಿತ್ ಹಾಗೂ ಕಳೆದ ವರ್ಷ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಅಜೀಶ್ ಹೀಗೆ... ನಾಲ್ವರು ವಿದ್ಯಾರ್ಥಿಗಳು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾರೆ. ಆಸ್ಪತ್ರೆಗೆ ತಲಪುವ ಮುನ್ನವೇ ಅಸುನೀಗಿದ ಈ ನಾಲ್ವರು ಬಾಲಕರ ಆತ್ಮಕ್ಕೆ ಚಿರಶಾಂತಿಯನ್ನು ಮತ್ತು ಅವರ ತಂದೆತಾಯಿ, ಕುಟುಂಬ ಹಾಗೂ ಮಿತ್ರವರ್ಗಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಪರಮಾತ್ಮನು ನೀಡಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇವೆ.16 October 2009
ಬೇವು ಚಿಗುರಿತು...!
ಕರಾವಳಿಯ ಮಣ್ಣಿನಲ್ಲಿ ಕಹಿಬೇವಿನ ಗಿಡವನ್ನು ಬದುಕಿಸುವುದು ಮತ್ತು ಉಳಿಸಿಕೊಳ್ಳುವುದು ಅತ್ಯಂತ ತ್ರಾಸದಾಯಕ ಕೆಲಸ. ಇಲ್ಲಿನ ಹವಾಗುಣ ಮತ್ತು ಮಣ್ಣಿನ ತರಗತಿ ಬೇವು ಬೆಳೆಗೆ ಅನುಕೂಲಕರವಾಗಿಲ್ಲ. ಆಯುರ್ವೇದ ಔಷಧ ಲೋಕಕ್ಕೂ ಕಹಿಬೇವು ಅನಿವಾರ್ಯವಾದ ಸಂಬಾರವಾದ್ದರಿಂದ ಕಹಿಬೇವಿಗೆ ಈ ನಾಡಿನಲ್ಲಿ ಭಾರೀ ಬೇಡಿಕೆ. ಇಂತಹಾ ಪರಿಸ್ಥಿತಿಯಲ್ಲೂ ನಮ್ಮ ಶಾಲೆಯಲ್ಲಿ ಕಳೆದ ಒಂದು ಶತಮಾನದಿಂದ ಕಹಿಬೇವಿನ ಮರವೊಂದು ಸೆಟೆದು ನಿಂತಿರುವುದು ಅನೇಕರ ಅಚ್ಚರಿಗೆ, ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಊರಮಂದಿಗೆಲ್ಲ ಔಷಧೀಯ ಗುಣಗಣಿಯಾಗಿ ಅಪಾರ ಸಹಾಯನೀಡಿದ ಈ ವೃಕ್ಷ ಅಂಗಳದಲ್ಲೇ ಸುತ್ತಾಡುತ್ತಿದ್ದ ಪುಟಾಣಿ ವಿದ್ಯಾರ್ಥಿಗಳನ್ನೂ, ನೆರೆಯವರನ್ನೂ ಬೇಸರದಲ್ಲಿ ಸಿಲುಕಿಸಿ ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಗಾಳಿಮಳೆಗೆ ಧರಾಶಾಯಿಯಾಯಿತು. ಪ್ರತಿಷ್ಟಿತ ‘ಮನೋರಮಾ’ ನ್ಯೂಸ್ ಚಾನಲ್ ಸಹಿತ ಅನೇಕ ಕನ್ನಡ, ಮಲಯಾಳ ಪತ್ರಿಕೆಗಳು ಆ ಸಂದರ್ಭದಲ್ಲಿ ವೃಕ್ಷ ಪಿತಾಮಹನಿಗೆ ಅಶ್ರುತರ್ಪಣಗೈದಿದ್ದವು.ನಾಡಿನಾದ್ಯಂತದಿಂದ ಬಂದ ಒಕ್ಕೊರಲ ಅಭಿಪ್ರಾಯದಂತೆ ಶಾಲಾ ಆಡಳಿತ ಮಂಡಳಿಯು, ಆ ಮರದ ಜೊತೆ ಅವಿನಾಭಾವ ಸಂಬಂಧ ಹೊತ್ತಿದ್ದ ‘ಮಹಾಜನ’ ಖಂಡಿಗೆ ಶಾಮ ಭಟ್ಟರ ನಿರ್ದೇಶನದಂತೆ ಕಹಿಬೇವಿನ ಉಳಿವಿಗಾಗಿ ಚಿಕಿತ್ಸೆ ನೀಡಿತು. ಎಲ್ಲರ ಪ್ರಾರ್ಥನೆಯ ಪರಿಣಾಮವಾಗಿ ಈಗ ಒಂದೆರಡು ತಿಂಗಳ ನಂತರ ಬೇವು ಮತ್ತೆ ಚಿಗುರಿದೆ, ಇನ್ನಷ್ಟು ವರ್ಷ ಅನೇಕ ಮಂದಿಯ ಖಾಯಿಲೆಗಳನ್ನು ದೂರಮಾಡುವ ವಿಶ್ವಾಸವನ್ನು ಮೂಡಿಸಿದೆ.
15 October 2009
ರಾಜ್ಯಪುರಸ್ಕಾರ ಸ್ಕೌಟ್ಸ್ ಪ್ರಶಸ್ತಿ
13 October 2009
‘ಗೋವಿಂದಣ್ಣ’ ಅಸ್ತಂಗತ - ಶ್ರದ್ಧಾಂಜಲಿ
ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಜವಾನನಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆಲ್ಲ ಅಚ್ಚುಮೆಚ್ಚಿನ ‘ಗೋವಿಂದಣ್ಣ’ನಾಗಿ ಇನ್ನೂ ಕರ್ತವ್ಯ ನಿರ್ವಹಿಸುತ್ತಿದ್ದ ಎ.ಗೋವಿಂದ ಭಟ್(೫೨) ನಿನ್ನೆ ರಾತ್ರಿ ೧.೩೦ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದಾಗಿ ನಿಧನ ಹೊಂದಿದರು. ೧೫.೦೫.೧೯೫೭ ರಂದು ಕೃಷ್ಣ ಭಟ್ಟರ ಪುತ್ರನಾಗಿ ಜನಿಸಿದ ಅವರು ೧.೧೧.೧೯೮೯ ರಂದು ನೀರ್ಚಾಲಿನಲ್ಲಿ ಉದ್ಯೋಗಿಯಾಗಿ ಸೇವೆ ಆರಂಭಿಸಿದ್ದರು. ಅವರು ಪತ್ನಿ ರಾಜೇಶ್ವರಿ, ತಾಯಿ, ಅಪಾರ ಬಂಧುವರ್ಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಗೌರವಾರ್ಥ ಇಂದು ನೀರ್ಚಾಲಿನ ಮಹಾಜನ ವಿದ್ಯಾಸಂಸ್ಥೆಗಳಿಗೆ ರಜೆಸಾರಲಾಗಿದೆ. ಮೃತರ ಆತ್ಮಕ್ಕೆ `ಮಹಾಜನ' ಶ್ರದ್ಧಾಂಜಲಿಗಳನ್ನೂ ಸಮರ್ಪಿಸುತ್ತದೆ.08 October 2009
ರಾಜ್ಯಪುರಸ್ಕಾರ ಗೈಡ್ಸ್ ಪ್ರಶಸ್ತಿ
06 October 2009
ಯು.ಎಸ್.ಎಸ್. ಪ್ರಶಸ್ತಿ
03 October 2009
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮಲ್ಲಿ... ಬನ್ನಿ...
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ವತಿಯಿಂದ ಜನವರಿ ಮೊದಲ ವಾರದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳಲ್ಲಿ ನಡೆಸಲು ತೀರ್ಮಾನಿಸಿದ ಜಿಲ್ಲಾ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಛೇರಿಯ ಉದ್ಘಾಟನೆಯನ್ನು ಹಿರಿಯ ವಿದ್ವಾಂಸ ಹಾಗೂ ಸಮ್ಮೇಳನದ ಗೌರವಾಧ್ಯಕ್ಷ ಖಂಡಿಗೆ ಶಾಮ ಭಟ್ ಅವರು ೦೩.೧೦.೨೦೦೯ ಶನಿವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೆಜು ಪ್ರೌಢಶಾಲೆಯಲ್ಲಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ “ಕಾಸರಗೋಡಿನ ಕನ್ನಡ ಶಕ್ತಿಯನ್ನು ಈ ಸಮ್ಮೇಳನ ಪ್ರತಿಬಿಂಬಿಸಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಒತ್ತು ಕೊಡುವ ಕಾರ್ಯಕ್ರಮಗಳು ಈ ಸಮ್ಮೇಳನದಲ್ಲಿ ನಡೆಯಲಿದ್ದು ಇದರ ಯಶಸ್ವಿಗೆ ಎಲ್ಲ ಕನ್ನಡಿಗರು ಒಂದಾಗಿ ನಿಂತು ದುಡಿಯಬೇಕಾಗಿದೆ” ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ಅಧ್ಯಕ್ಷ ಎಸ್.ವಿ.ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವಜನೋತ್ಸವದ ರೂಪುರೇಷೆಯ ಬಗೆಗೆ ಯುವಜನೋತ್ಸವ ಸಮಿತಿ ಅಧ್ಯಕ್ಷ ಮಾಯಿಪ್ಪಾಡಿ ವಿಶ್ವನಾಥ ರೈ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ರೂಪುರೇಖೆಯ ಬಗ್ಗೆ ಸಮಿತಿ ಸಂಚಾಲಕ ಶ್ರೀಕೃಷ್ಣಯ್ಯ ಅನಂತಪುರ ವಿವರಿಸಿದರು.
ಎಂ.ವಿ.ಭಟ್ ಮಧುರಂಗಾನ, ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ರಾಘವ ಬಲ್ಲಾಳ್, ಸುಕುಮಾರ ಆಲಂಪಾಡಿ, ಜಯದೇವ ಖಂಡಿಗೆ ಹಾಗೂ ಸ್ವಾಗತ ಸಮಿತಿಯ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಎಂ.ವಿ ಸ್ವಾಗತಿಸಿ ತಾಲೂಕು ಕಾರ್ಯದರ್ಶಿ ರಾಮಚಂದ್ರ ಧರ್ಮತ್ತಡ್ಕ ವಂದಿಸಿದರು. ಗೌರವ ಕಾರ್ಯದರ್ಶಿ ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರೂಪಿಸಿದರು.
30 September 2009
ಜಿಲ್ಲಾ ಥ್ರೋ ಬಾಲ್ ಪ್ರಶಸ್ತಿ
28 September 2009
ಸರಸ್ವತೀ ನಮಸ್ತುಭ್ಯಂ...
26 September 2009
ಜಿಲ್ಲಾ ಸ್ವತಂತ್ರ ಸಾಫ್ಟ್ವೇರ್ ಪ್ರಬಂಧ ಸ್ಪರ್ಧೆ - ಶಾಂತಿ.ಕೆ ಪ್ರಥಮ
24 September 2009
23 September 2009
ಶಟಲ್ ಬ್ಯಾಡ್ಮಿಂಟನ್ - ಪ್ರಶಸ್ತಿ
22 September 2009
ದಟ್ಸ್ ಕನ್ನಡದಲ್ಲಿ ನಮ್ಮ ಶಾಲೆ
18 September 2009
17 September 2009
ಬಯಲು ಪ್ರವಾಸ
16 September 2009
ಶಾಲಾ ಸಂದರ್ಶನ
14 September 2009
ಕ್ರೀಡಾ ವಿಶೇಷಾಂಕ ಬಿಡುಗಡೆ
10 September 2009
09 September 2009
“ಯಕ್ಷಗಾನ ಗಂಡುಕಲೆ”:- ಮಾಧವ ತಲ್ಪಣಾಜೆ
“ಕರಾವಳಿ ಮಲೆನಾಡಿನ ಗಂಡುಕಲೆ ಯಕ್ಷಗಾನವು ಕಲಾಲೋಕಕ್ಕೆ ನೀಡಿದ ಸಂಭಾವನೆ ಅನನ್ಯವಾದುದು, ಈ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು” ಎಂದು ಯಕ್ಷಗಾನ ಕಲಾವಿದ ಮಾಧವ ತಲ್ಪಣಾಜೆ ಅಭಿಪ್ರಾಯಪಟ್ಟರು. ಅವರು ೦೮.೦೯.೨೦೦೯ ಮಂಗಳವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಶಾಲಾ ಮುಖ್ಯೋಪಾಧ್ಯಾಯ ಗೋವಿಂದ ಭಟ್.ಪಿ ಅಧ್ಯಕ್ಷತೆ ವಹಿಸಿದ್ದರು. ನಾಲ್ಕನೇ ತರಗತಿ ವಿದ್ಯಾರ್ಥಿಗಳು ಯಕ್ಷಗಾನ ಕುರಿತಾದ ಸಂವಾದ ನಡೆಸಿದರು. ಶಿಕ್ಷಕಿ ಮಾಲತಿ ಎಂ. ಸ್ವಾಗತಿಸಿದರು. ವಿದ್ಯಾರ್ಥಿ ಸಂದೇಶ ರೈ ವಂದಿಸಿದರು.
07 September 2009
ಸುಧಾ ಪತ್ರಿಕೆಗೆ ನಮ್ಮ ನಮನಗಳು
ನೀರ್ಚಾಲಿನಲ್ಲಿ ಶಿಕ್ಷಕರ ದಿನಾಚರಣೆ
“ಅಧ್ಯಾಪಕರ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಿ, ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ಜನಸಾಮಾನ್ಯರ ಮನದಲ್ಲೂ ಅಚ್ಚಳಿಯದ ನೆನಪು ಉಳಿಸಿದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ನಾವು ಇಂದು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಸೂಕ್ತ ಕಿವಿ ಮಾತುಗಳನ್ನು ಹೇಳಿ ಅವರನ್ನು ತಿದ್ದಿ ತೀಡುವ ಅಧ್ಯಾಪಕರಿಗೆ ಗೌರವ ಸಲ್ಲಿಸುವುದು ನಾಳಿನ ಸತ್ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಉಪಯುಕ್ತವಾಗಿದೆ" ಎಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ದಿನಾಂಕ ೦೭.೦೯.೨೦೦೯ ಸೋಮವಾರದಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ನಿವೃತ್ತ ಮುಖ್ಯೋಪಾಧ್ಯಾಯ ಎಂ.ವಿ.ಗೋಪಾಲಕೃಷ್ಣ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್, ಹಿರಿಯ ಅಧ್ಯಾಪಕರಾದ ಕನ್ನೆಪ್ಪಾಡಿ ನಾರಾಯಣ ಭಟ್, ಭುವನೇಶ್ವರಿ ಹಾಗೂ ವಿದ್ಯಾರ್ಥಿಗಳ ಪರವಾಗಿ ಅವಿತೇಶ್.ಬಿ ಶುಭಾಶಯಗಳನ್ನು ಸಮರ್ಪಿಸಿದರು. ವಿದ್ಯಾರ್ಥಿಗಳಾದ ಮುರಳಿಕೃಷ್ಣ ಶರ್ಮ ಸ್ವಾಗತಿಸಿ ಲತಾಶಂಕರಿ.ಕೆ ವಂದಿಸಿದರು. ಚೈತ್ರಾ. ಟಿ. ಎಸ್ ಕಾರ್ಯಕ್ರಮ ನಿರೂಪಿಸಿದರು. ಜೀವನ್ ಕುಮಾರ್ ಪ್ರಾರ್ಥಿಸಿದರು.
29 August 2009
ಓಣಂ ಹಬ್ಬದ ಶುಭಾಶಯಗಳು
27 August 2009
ಕವನ - ಸಂಧ್ಯಾ ಸಮಯ :ಮಾನಸ. ಪಿ.ಯಸ್
ಸಂಜೆಯ ಸಮಯದಿ ಮುಳುಗುವ ಸೂರ್ಯನ
ಕಿರಣದ ಸೊಬಗನು ನೋಡಿದೆಯಾ
ಕಡಲಲಿ ನರ್ತನವಾಡುವ ಕಿರಣದ
ಅಲೆಗಳ ಅಂದವ ಸವಿಯುವೆಯಾ
ಮುಸ್ಸಂಜೆಯ ಸೊಬಗನು ಸವಿಯುವೆಯಾ
ಕೆಂಬಣ್ಣದ ಬಾನಲಿ ಹೊಳೆಯುವ ಮೇಘದಿ
ಹರಿಯುವ ರಕ್ತವ ನೋಡಿದೆಯಾ
ಸಂಜೆಯ ಕಂಪಲಿ ಮಕ್ಕಳ ಆಟದ
ಅಂದವ ನೀನು ಸವಿಯುವೆಯ
ಮುಸ್ಸಂಜೆಯ ಸೊಬಗನು ಸವಿಯುವೆಯಾ
ಚಿಲಿಪಿಲಿಗುಟ್ಟುವ ಹಕ್ಕಿಯು ತನ್ನಯ
ಗೂಡನು ಸೇರುವ ಸಂತಸ ಸವಿಯುವೆಯಾ
ಮೆಲ್ಲನೆ ತನ್ನಯ ಮರಿಗಳ ಮುದ್ದಿಸಿ
ಹಣ್ಣನು ಕೊಡುವುದ ನೋಡಿದೆಯಾ
ಮುಸ್ಸಂಜೆಯ ಸೊಬಗನು ಸವಿಯುವೆಯಾ
ತಣ್ಣನೆ ಗಾಳಿಯು ಬೀಸುತ ಮೆಲ್ಲಗೆ
ಕಂಪನು ತರುವುದ ಸವಿಯುವೆಯಾ
ಗಾಳಿಯ ರಭಸಕೆ ಮಾಮರ ಚಾಮರ
ಮಾಡುವ ನರ್ತನ ನೋಡಿದೆಯಾ
ಮುಸ್ಸಂಜೆಯ ಸೊಬಗನು ಸವಿಯುವೆಯಾ
21 August 2009
ಹೂ ರಂಗವಲ್ಲಿ
20 August 2009
ಹೊಸ ಪ್ರಯತ್ನದ ಕಡೆಗೆ...
19 August 2009
ಜಲಮಾಲಿನ್ಯ
ಒಂದು ಕಥೆ - ಸ್ವಾತಿ ಸಿ.ವಿ.
ಒಂದು ಊರಿನಲ್ಲಿ ರವಿ ಎಂಬ ಒಬ್ಬ ಹುಡುಗನಿದ್ದನು. ಅವನು ಕೆಟ್ಟವನಾಗಿದ್ದನು. ಸ್ನೇಹಾ ಅವನ ತಂಗಿಯಾಗಿದ್ದಳು. ರವಿ ಸ್ನೇಹಾಳಿಂದ ಒಂದು ವರ್ಷ ದೊಡ್ಡವನಾಗಿದ್ದನು. ಅವನು ೯ನೇ ತರಗತಿಯಲ್ಲೂ ಸ್ನೇಹಾ ೮ನೇ ತರಗತಿಯಲ್ಲೂ ಓದುತ್ತಿದ್ದರು. ರವಿ ಶಾಲೆಯಿಂದ ಬಂದ ನಂತರ ಆಟವಾಡಲು ಹೋಗುತ್ತಿದ್ದನು. ಆಗ ಸ್ನೇಹಾ ತನ್ನ ಶಾಲೆ ಕೆಲಸಗಳನ್ನು ಮಾಡುತ್ತಿದ್ದಳು. ಆಟ ಆಡಿ ಬಂದ ನಂತರ ಸ್ನೇಹಾಳಲ್ಲಿ ಅವನ ಶಾಲೆಕೆಲಸಗಳನ್ನು ಮಾಡಿಸುತ್ತಿದ್ದನು.
ಈ ವರ್ಷದ ಕಲಿಯುವಿಕೆಯಲ್ಲಿ ಸ್ನೇಹಾಳಿಗೆ ಪ್ರಥಮ ಸ್ಥಾನ ದೊರೆಯಿತು. ಆಗ ಅವಳ ತಂದೆ ತಾಯಿ ಬಹಳ ಖುಶಿಪಟ್ಟರು. ರವಿಗೆ ಬಹಳ ಬೇಸರವಾಯಿತು. ಅವನು ತಂದೆ ತಾಯಿಯರ ಬಳಿ ಹೋದಾಗ ಅವರು ಮುಖ ಎತ್ತಿ ಇವನನ್ನು ನೋಡುತ್ತಿರಲಿಲ್ಲ. ಒಂದು ದಿನ ರವಿ ಸ್ನೇಹಾಳಲ್ಲಿ ಈ ವಿಷಯದ ಬಗ್ಗೆ ಪ್ರಶ್ನಿಸಿದನು. ಆಗ ಅವಳು “ನೀನು ಕೂಡಾ ಕಲಿಯುವುದರಲ್ಲಿ ಪ್ರಥಮ ಸ್ಥಾನ ಪಡೆದುಕೊ, ಒಳ್ಳೆಯ ರೀತಿಯಲ್ಲಿ ನಡೆದುಕೊ” ಎಂದಳು. ಇದರಿಂದಾಗಿ ರವಿಯ ಮನಪರಿವರ್ತನೆಯಾಗಿ ನಂತರ ಒಳ್ಳೆಯ ವಿದ್ಯಾರ್ಥಿಯಾದನು. ಅದರಂತೆಯೇ ನಾವೂ ಒಳ್ಳೆಯ ವಿದ್ಯಾರ್ಥಿಯಾಗಿ ಎಲ್ಲರೊಡನೆ ಸ್ನೇಹದಿಂದಿರಬೇಕು.
15 August 2009
ನೀರ್ಚಾಲಿನಲ್ಲಿ ಸ್ವಾತಂತ್ರ್ಯೋತ್ಸವ
“ಮಹಾಪುರುಷರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ೬೩ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ನಾವು ಆ ಮಹಾನ್ ತ್ಯಾಗಿಗಳ ಬಲಿದಾನವನ್ನು ನೆನಪಿಸಿಕೊಳ್ಳಬೇಕು. ಬಡವರ ಸೇವೆ, ಪರೋಪಕಾರ, ಅಹಿಂಸೆ, ಸತ್ಯ, ಶಾಂತಿ ನಮ್ಮ ಮಂತ್ರವಾಗಬೇಕು. ಆ ಮೂಲಕ ನಮ್ಮ ದೇಶದ ಉದ್ಧಾರ ಆಗಬೇಕು" ಎಂದು ನಿವೃತ್ತ ಮುಖ್ಯೋಪಾಧ್ಯಾಯ ಕಾನ ಈಶ್ವರ ಭಟ್ ಹೇಳಿದರು. ಅವರು ೧೫.೦೮.೨೦೦೯ ಶನಿವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 14 August 2009
ಲೋಕಕಲ್ಯಾಣಕ್ಕಾಗಿ ಕೃಷ್ಣಾವತಾರ: ಸಿ.ಎಚ್.ರಾಮ ಭಟ್

13 August 2009
ಕವಿತೆ - ಕೃಷಿ
-ಸೀಮಾ ಎಂ.ಬಿ.
ಧರೆಯ ಮನುಜರೆಲ್ಲ ಬನ್ನಿ
ಹೊಲದಕಡೆಗೆ ಹೋಗುವ
ಮಳೆಯ ಸಮಯದಲ್ಲಿ ಬೆಳೆವ
ಕೃಷಿಗೆ ನಾವು ತೊಡಗುವ
ಎತ್ತುಗಳನು ನೊಗಕೆ ಬಗೆದು
ನೇಗಿಲುಗಳನು ಒತ್ತಿ ಹಿಡಿದು
ಗದ್ದೆಗಳನು ಉತ್ತು ಬಿತ್ತಿ
ಕೃಷಿಯ ನಾವು ಮಾಡುವ
ಮುಂಜಾನೆ ಹೊಲಕೆ ಹೋಗಿ
ಪೈರು ಭತ್ತ ಬೆಳೆಸುವ
ಸಂಜೆ ತನಕ ಕೆಲಸ ಮಾಡಿ
ಊರಿಗನ್ನ ನೀಡುವ
ಒಣಗಿ ಇರುವ ಭೂಮಿಯನ್ನು
ಹಚ್ಚ ಹಸಿರು ಮಾಡುವ
ನಮ್ಮ ಮುಂದಿನ ಜೀವನಕ್ಕಾಗಿ
ಕೃಷಿಯ ನಾವು ಬೆಳೆಸುವ.
11 August 2009
ಶ್ರೀಕೃಷ್ಣ ಜಯಂತಿ ಉತ್ಸವ - ಬನ್ನಿ
ಮಹಾಜನ ವಿದ್ಯಾಭಿವರ್ಧಕ ಸಂಘದ ಆಶ್ರಯದಲ್ಲಿ ನಮ್ಮ ಶಾಲೆಯಲ್ಲಿ ಶ್ರೀಕೃಷ್ಣ ಜಯಂತಿ ಉತ್ಸವವು ಆಗಸ್ಟ್ ೧೩ರಂದು ಜರಗಲಿದೆ. ಆ ಪ್ರಯುಕ್ತ ಅಪರಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ರಾಮ ಭಟ್ ಸಿ.ಎಚ್ ಅಧ್ಯಕ್ಷತೆ ವಹಿಸಲಿದ್ದಾರೆ. ಮನರಂಜನಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ದಿವಾಣ ಶಿವಶಂಕರ ಭಟ್ ದಿಗ್ದರ್ಶನದಲ್ಲಿ“ಶ್ರೀಕೃಷ್ಣ ಲೀಲೆ" ಎಂಬ ಯಕ್ಷಗಾನ ಬಯಲಾಟ ಜರಗಲಿದೆ. ಬನ್ನಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
ಎರಡು ಕವನಗಳು
ತುಂತುರು ಮಳೆ ಹನಿ
- ಮಾನಸ ಪಿ.ಎಸ್
ತುಂತುರು ಮಳೆ ಹನಿ ಬೀಳುತಿದೆ
ತರತರ ಶಬ್ದವು ಕೇಳುತಿದೆ
ಗಾಳಿಯು ಜೋರು ಬೀಸುತಿದೆ
ತೆಂಗು ಕಂಗು ಬಾಗುತಿದೆ
ಗುಡು ಗುಡು ಗುಡುಗು ಗುಡುಗುತಿದೆ
ಫಳ ಫಳ ಮಿಂಚು ಮಿಂಚುತಿದೆ
ಮಳೆಯದು ಜೋರು ಬರುತಲಿದೆ
ಭೂಮಿಗೆ ತಂಪನು ತರುತಲಿದೆ
ನಕ್ಷತ್ರ
ಫಳ ಫಳ ಮಿನುಗುವ ನಕ್ಷತ್ರ
ಬಾನಲಿ ನಗುತಿಹ ನಕ್ಷತ್ರ
ಚಂದ್ರನ ಬಳಿಯಲಿ ನಗುತಲಿ ನಿಂತಿಹ
ಬೆಳ್ಳಿಯ ಬಣ್ಣದ ನಕ್ಷತ್ರ
ರಾತ್ರಿಲಿ ಕಂಡು ಬೆಳಗಲಿ ಕಾಣದೆ
ಆಟವನಾಡುವ ನಕ್ಷತ್ರ
ಮೆಲ್ಲನೆ ಮಕ್ಕಳ ಮನಸನು ಸೆಳೆಯುತ
ಅಂದದ ಚಂದದ ನಕ್ಷತ್ರ
ಬಾನಲಿ ಮೋಡಗಳೆಡೆಯಲಿ ಅಡಗುವ
ಬಿಳಿ ಬಣ್ಣದ ಅಂದದ ನಕ್ಷತ್ರ
ನನ್ನಯ ಮುದ್ದಿನ ನಕ್ಷತ್ರ
08 August 2009
07 August 2009
06 August 2009
03 August 2009
31 July 2009
ಚಿತ್ರ - ವಿಜೇಶ್. ಬಿ
28 July 2009
26 July 2009
22 July 2009
ಮನೋರಮಾ ನ್ಯೂಸ್ ಮತ್ತು ನಮ್ಮ ಬೇವಿನ ಮರ
16 July 2009
ಕುಂಭ ದ್ರೋಣ ಮಳೆಗೆ ಕಹಿಬೇವಿನ ಮರ ಧರಾಶಾಯಿ...
15 July 2009
ಇಕೋ ಕ್ಲಬ್ ಉದ್ಘಾಟನೆ
“ ನಮ್ಮ ಪರಿಸರವನ್ನು ಯಾವತ್ತೂ ಶುಚಿಯಾಗಿ ಇರಿಸಿಕೊಳ್ಳಬೇಕು. ಆ ಮೂಲಕ ಸ್ವಚ್ಚ ವಾತಾವರಣದ ನಿರ್ಮಾಣವಾಗಬೇಕು. ಶುದ್ಧ ಗಾಳಿ ನಮ್ಮ ಉಸಿರಾಗಬೇಕು. ಆರೋಗ್ಯದ ದೃಷ್ಟಿಯಿಂದ ಮಹಾಮಾರಿಗಳಾದ ಡೆಂಗ್ಯು, ಮಲೇರಿಯಾ, ಹಂದಿ ಜ್ವರದಂತಹ ಖಾಯಿಲೆಗಳನ್ನು ನಾವು ಹೊಡೆದೋಡಿಸಬೇಕು"ಎಂದು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ೧೦.೦೭.೨೦೦೯ ಶುಕ್ರವಾರದಂದು ಆರೋಗ್ಯ ಮತ್ತು ಪರಿಸರ ಕ್ಲಬ್ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ಹಿರಿಯ ಅಧ್ಯಾಪಿಕೆ ಎ.ಭುವನೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಎಂ.ಸೂರ್ಯನಾರಾಯಣ ಸ್ವಾಗತಿಸಿ, ಎಂ.ಕೆ.ಶಿವಪ್ರಕಾಶ್ ವಂದಿಸಿದರು. ವಿದ್ಯಾರ್ಥಿ ಅನುತೇಜ್ ಕಾರ್ಯಕ್ರಮ ನಿರೂಪಿಸಿದರು.ಚಿತ್ರ - ಅನುತೇಜ್
ಕ್ಷಮೆ ಇರಲಿ, ಕೆಲ ದಿನಗಳು ಅನಿವಾರ್ಯವಾಗಿ ನೆಟ್ ಲೋಕದಿಂದ ಹೊರಗಿರಬೇಕಾಗಿ ಬಂತು, ಮಳೆಗಾಲದ ಅಬ್ಬರಕ್ಕೆ ನಮ್ಮ ಬ್ರಾಡ್ ಬ್ಯಾಂಡ್ ಸತ್ತು ಮಲಗಿತ್ತು, ಒಂದು ವಾರ. ಈಗ ಮತ್ತೆ ಎದ್ದು ಬಂದಿದ್ದೇವೆ, ಅನುತೇಜ್ ಬಿಡಿಸಿದ ಚಿತ್ರದೊಂದಿಗೆ. ಸಾಧ್ಯವಾದಷ್ಟು ಅಕ್ಷರ ತಪ್ಪುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ, ಆದರೂ ಕೆಲವೊಮ್ಮೆ ತಪ್ಪುಗಳು ನುಸುಳಿಬಿಡುತ್ತವೆ. ನಿಮ್ಮ ಪ್ರೋತ್ಸಾಹ ಇರಲಿ, ಸದಾ....


























